Advertisement

ನಕ್ಸಲ್‌ ಹೊಂಚು ದಾಳಿಗಳು ನಡೆಯಬಹುದು: ಎದೆಗುಂದದು ಸಿಆರ್‌ಪಿಎಫ್ 

01:27 PM Apr 27, 2017 | Team Udayavani |

ಛತ್ತೀಸ್‌ಗಢದ ದುರ್ಗಮ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ ನಡೆಯುತ್ತಿರುವುದನ್ನು ನಕ್ಸಲರು ಸಹಿಸುತ್ತಿಲ್ಲ. ಸುಕ್ಮಾದಲ್ಲಿ ನಡೆದದ್ದು ಒಂದು ಹೊಂಚು ದಾಳಿ;  ಜಾಣತನದ್ದು, ಗೆರಿಲ್ಲಾ ಮಾದರಿಯದ್ದು. ಅದರಲ್ಲಿ ನಕ್ಸಲರು ಸುಧಾರಿತ ಸ್ಫೋಟಕಗಳನ್ನು ಬಳಸಿರಲಿಲ್ಲ. ಇದು ನಕ್ಸಲರ ಹತಾಶೆಯ ಸಂಕೇತವಾಗಿದೆ. ಸೋಲುತ್ತಿರುವ ಅವರು ಇನ್ನು  ಮುಂದೆಯೂ ಇಂತಹ ಆಕ್ರಮಣಗಳನ್ನು ಹೆಚ್ಚು ಹೆಚ್ಚು ನಡೆಸಬಹುದು. ಆದರೆ ಸಿಆರ್‌ಪಿಎಫ್ ಅಸಾಮಾನ್ಯ ಸ್ಥೈರ್ಯವನ್ನು ಹೊಂದಿದೆ. ನೋಡುತ್ತಿರಿ, ಅದು ಬಹಳ ಬೇಗನೆ ತಿರುಗೇಟು ನೀಡುತ್ತದೆ.

Advertisement

ಛತ್ತೀಸ್‌ಗಢದ ಸುಕ್ಮಾದಲ್ಲಿ ನಕ್ಸಲರು ನಡೆಸಿದ ಸಿಆರ್‌ಪಿಎಫ್ ಯೋಧರ ಕ್ರೂರ ಹತ್ಯೆಗೆ ದೇಶಕ್ಕೆ ದೇಶವೇ ಬೆಚ್ಚಿಬಿದ್ದಿದೆ. ಯೋಧರು ಹೇಗೆ ಅವರ ಕೈಗೆ ಸಿಕ್ಕಿಬಿದ್ದರು ಅನ್ನುವುದು ಎಲ್ಲರ ಪ್ರಶ್ನೆ. ನಕ್ಸಲರ ಪ್ರಾಬಲ್ಯವಿರುವ ಪ್ರದೇಶದೊಳಕ್ಕೆ ಪ್ರವೇಶಿಸುವಾಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸದಿರುವುದು ಇತ್ಯಾದಿ ಏನಾದರೂ ಲೋಪವಾಗಿತ್ತೇ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಸಿಆರ್‌ಪಿಎಫ್ ಯೋಧರ ನಕ್ಸಲರ ದಾಳಿ ಹೆಚ್ಚುತ್ತಿದೆಯಲ್ಲ ಎಂಬುದು ಇನ್ನೊಂದು ಪ್ರಶ್ನೆ. 

ಇಲ್ಲೊಂದು ಗಮನಿಸಬೇಕಾದ ಅಂಶವಿದೆ. ಬಸ್ತಾರ್‌ ಸುಕ್ಮಾದಂತಹ ನಕ್ಸಲ್‌ ಪ್ರಾಬಲ್ಯವಿರುವ ಪ್ರದೇಶದಲ್ಲಿ ಅವರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಬಹುದೊಡ್ಡ ಪಡೆ ಸಿಆರ್‌ಪಿಎಫ್. ಹೀಗಾಗಿ ಸಹಜವಾಗಿ ನಕ್ಸಲರ ಗುರಿ ಸಿಆರ್‌ಪಿಎಫ್ ಆಗಿದೆ. ಛತ್ತೀಸ್‌ಗಢದ ನಕ್ಸಲ್‌ ಪ್ರಾಬಲ್ಯವಿರುವ ಪ್ರದೇಶದಲ್ಲಿ ಸಿಆರ್‌ಪಿಎಫ್ ಈಗ ರಸ್ತೆ ನಿರ್ಮಾಣ ಕಾಮಗಾರಿಯ ಹೊಣೆ ಹೊತ್ತಿದೆ. ಮಾವೊವಾದಿಗಳ ಅಸ್ತಿತ್ವಕ್ಕೆ ಈ ರಸ್ತೆ ನಿರ್ಮಾಣ ಬಹಳ ದೊಡ್ಡ ಸವಾಲು. ಯಾಕೆಂದರೆ, ರಸ್ತೆ ನಿರ್ಮಾಣವಾದರೆ ಆಸ್ಪತ್ರೆ, ಶಾಲೆಗಳು, ಬ್ಲಾಕ್‌ ಡೆವಲಪ್‌ಮೆಂಟ್‌ ಕಚೇರಿ ಇವೆಲ್ಲವೂ ಜನರಿಗೆ ಹತ್ತಿರವಾಗುತ್ತವೆ. ಈಗ ಜನರು 20 ಕಿ. ಮೀ. ದೂರದಲ್ಲಿರುವ ಈ ಮೂಲಭೂತ ಸೌಲಭ್ಯಗಳನ್ನು ತಲುಪಲು ಪರದಾಡುತ್ತಿದ್ದಾರೆ. ರಸ್ತೆ ನಿರ್ಮಾಣವಾದರೆ ಅದು ಸುಲಭವಾಗುತ್ತದೆ. ಇದು ನಕ್ಸಲರಿಗೆ ಬೇಕಾಗಿಲ್ಲ. ಜನರು ಬಡವರಾಗಿರುವುದು, ಯಾವುದೇ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವುದರ ಮೇಲೆ ಅವರ ಅಸ್ತಿತ್ವ ನಿಂತಿದೆ. ಇಷ್ಟು ಮಾತ್ರ ಅಲ್ಲ, ರಸ್ತೆ ನಿರ್ಮಾಣವಾದರೆ ಭದ್ರತಾ ಪಡೆಗಳಿಗೆ ದುರ್ಗಮ ಪ್ರದೇಶಗಳನ್ನು ತಲುಪುವುದು ಸುಲಭ. ಈ ಎಲ್ಲ ಕಾರಣಗಳಿಂದ ನಕ್ಸಲರು ರಸ್ತೆ ಕಾಮಗಾರಿಯನ್ನು ಮತ್ತು ಅದನ್ನು ನಡೆಸುತ್ತಿರುವ ಸಿಆರ್‌ಪಿಎಫ್ ಅನ್ನು ಶತಾಯಗತಾಯ ಕಾರ್ಯವಿಮುಖಗೊಳಿಸಲು ಪ್ರಯತ್ನಿಸುತ್ತಿದ್ದಾರೆ. 

ನಿಮಗೊಂದು ವಿಷಯ ತಿಳಿದಿರಲಿ. ಮಾರ್ಚ್‌ 11ರಂದು ನಕ್ಸಲರು 12 ಮಂದಿ ಸಿಆರ್‌ಪಿಎಫ್ ಜವಾನರನ್ನು ಹತ್ಯೆಗೈದರು, ಎಪ್ರಿಲ್‌ 24ರಂದು 25 ಮಂದಿಯನ್ನು ಕೊಂದರು. ಇವು ಮಾಧ್ಯಮಗಳ ಮೂಲಕ ಎಲ್ಲರ ಗಮನಕ್ಕೆ ಬಂದ ದಾಳಿಗಳು. ಆದರೆ ಕಳೆದ ಒಂದೂವರೆ ವರ್ಷದಲ್ಲಿ ಇಂತಹ ಲೆಕ್ಕವಿಲ್ಲದಷ್ಟು ನಕ್ಸಲ್‌ ದಾಳಿಗಳು ನಡೆದಿವೆ, ಪ್ರತಿಯೊಂದರಲ್ಲೂ ಒಬ್ಬಿಬ್ಬರು ಯೋಧರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಸಣ್ಣದಾದ್ದರಿಂದ ಮಾಧ್ಯಮಗಳಿಗೆ ಅವು ದೊಡ್ಡ ಸುದ್ದಿಯಾಗಿಲ್ಲ. ಜಾಗರ್‌ಗುಂಡ – ದೊರ್ನಾಪಾಲ್‌ ರಸ್ತೆಯಲ್ಲೊಮ್ಮೆ ಸಂಚರಿಸಿ ನೋಡಿದರೆ ನಕ್ಸಲರ ಸುಧಾರಿತ ಸ್ಫೋಟಕಗಳು ಮತ್ತು ಸ್ನೆ„ಪರ್‌ ಬಂದೂಕು ದಾಳಿಗಳಿಂದ ಸಿಆರ್‌ಪಿಎಫ್ ಅನುಭವಿಸಿದ ಹಾನಿ ಅರ್ಥವಾಗುತ್ತದೆ. ನಕ್ಸಲರ ದಾಳಿಯ ಪ್ರಮುಖ ಗುರಿ ಸಿಆರ್‌ಪಿಎಫ್, ಯಾಕೆಂದರೆ ಅದುವೇ ಇಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿರುವ ಅತಿದೊಡ್ಡ ಭದ್ರತಾ ಪಡೆ. 

ನಕ್ಸಲರು ಹತಾಶರಾಗಿದ್ದಾರೆ
ಭಾರತದಲ್ಲಿ ನಕ್ಸಲರು ಸೋಲುತ್ತಿರುವ ಯುದ್ಧದಲ್ಲಿ ಹೋರಾಡುತ್ತಿದ್ದಾರೆ. ಅವರ ಹತಾಶ, ಹೇಡಿತನದ ಹೊಂಚು ದಾಳಿಗಳೇ ಅವರ ಸ್ಥಿತಿಯನ್ನು ಹೇಳುತ್ತವೆ. ನಕ್ಸಲ್‌ ವಿರೋಧಿ ಹೋರಾಟದ ಗ್ರಾಫ್ ಪರಿಶೀಲಿಸಿದರೆ, ಸಿಆರ್‌ಪಿಎಫ್ ಯಶಸ್ಸಿನ ರೇಖೆ ನಿಧಾನವಾಗಿ ಆದರೆ ಸ್ಥಿರವಾಗಿ ಮೇಲ್ಮುಖೀಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸಾವುನೋವಿಗೀಡಾದ ಯೋಧರ ಸಂಖ್ಯೆ ಶೇ.42ರಷ್ಟು ಕಡಿಮೆ. ಇದು ಸಿಆರ್‌ಪಿಎಫ್ ಪಾಲಿಗೆ ಸಮಾಧಾನಕರ ಅಂಕಿಅಂಶ. ಸದಾ ಗಮನದಲ್ಲಿ ಇಟ್ಟುಕೊಂಡು ಎಚ್ಚರಿಕೆಯಿಂದ ಇರಬೇಕಾದ ಒಂದೇ ಒಂದು ಅಂಶವೆಂದರೆ, ಆರುತ್ತಿರುವ ದೀಪ ತುಂಬಾ ಪ್ರಜ್ವಲಿಸುತ್ತದೆ ಎಂಬ ವಿಚಾರ. ಮೊನ್ನೆಯಂತಹ ನಕ್ಸಲ್‌ ದಾಳಿಗಳು ಇನ್ನುಮೇಲೆ ಆಗಾಗ ನಡೆಯಬಹುದು. ಅದಕ್ಕೆ ನಾವು ಸಿದ್ಧರಾಗಿರಬೇಕು. ತಮ್ಮ ಬಲ ಉಡುಗುತ್ತಿರುವುದರಿಂದ ಹತಾಶರಾಗಿರುವ ನಕ್ಸಲರು ಸುಧಾರಿತ ಸ್ಫೋಟಕಗಳನ್ನು ಬಳಸಿ ಇನ್ನಷ್ಟು ಹೊಂಚು ದಾಳಿಗಳನ್ನು ನಡೆಸಬಹುದು. ಎಪ್ರಿಲ್‌ 24ರ ದಾಳಿ ಅವರ ಹತಾಶೆಯ ಪ್ರತೀಕವೆಂಬುದಕ್ಕೆ ಇನ್ನೂ ಒಂದು ಸಾಕ್ಷಿಯಿದೆ – ಆ ದಾಳಿಯಲ್ಲಿ ಅವರು ಸುಧಾರಿತ ಸ್ಫೋಟಕಗಳನ್ನು ಉಪಯೋಗಿಸಿರಲಿಲ್ಲ. ಅದು ಹೊಂಚುಹಾಕಿದ, ಜಾಣತನದ ಮುಗಿಬೀಳುವಿಕೆಯಾಗಿತ್ತು. ಅಂತಹ ದಾಳಿಗಳ ಬಗ್ಗೆ ಎಚ್ಚರದಿಂದ ಇರಬೇಕು. 

Advertisement

ಸಾಮಾನ್ಯವಾಗಿ ಇಂತಹ ದಾಳಿಗಳು ನಡೆದಾಗ ಯೋಧರ ಸ್ಥೈರ್ಯ ಕುಸಿಯಬಹುದು. ಆದರೆ, ಸಿಆರ್‌ಪಿಎಫ್ ಇಂಥದ್ದರಿಂದೆಲ್ಲ ಎದೆಗೆಡುವಂತಹ ಪಡೆಯಲ್ಲ. ನೋಡುತ್ತಿರಿ, ಅದು ತಿರುಗೇಟನ್ನು ಬಹಳ ಬೇಗನೆ ನೀಡುತ್ತದೆ. ಇಂತಹ ದಾಳಿಗಳು ಈ ಹಿಂದೆಯೂ ನಡೆದಿವೆ, ಇನ್ನು ಮುಂದೆಯೂ ನಡೆಯಬಹುದು. ಸಿಆರ್‌ಪಿಎಫ್ನಲ್ಲಿ ಅತ್ಯುತ್ತಮ ಕರ್ತವ್ಯಬದ್ಧ ಕಮಾಂಡರ್‌ಗಳು ಮತ್ತು ಯೋಧರಿದ್ದಾರೆ, ಅವರು ನಕ್ಸಲರ ವಿರುದ್ಧ ಕಾರ್ಯಾಚರಣೆಯನ್ನು ಗುರಿ ಮುಟ್ಟಿಸುತ್ತಾರೆ ಎನ್ನುವ ವಿಶ್ವಾಸ ನಮಗಿದೆ. 

ದೊಡ್ಡ ಸಂಖ್ಯೆಯಲ್ಲಿಲ್ಲ
ಸಿಆರ್‌ಪಿಎಫ್ನಂತಹ ವ್ಯವಸ್ಥಿತ, ಸಾಂಸ್ಥಿಕ ಪಡೆಯ ಮೇಲೆ ಸುಕ್ಮಾದಲ್ಲಿ ನಕ್ಸಲರು ಆಗಾಗ ದಾಳಿ ನಡೆಸಿ ಅಪಾರ ಸಾವುನೋವಿಗೆ ಕಾರಣರಾಗಿದ್ದಾರೆ. ಅಲ್ಲಿ ನಕ್ಸಲರ ಬಲ ಯಾಕೆ ಹೆಚ್ಚು ಅನ್ನುವ ಪ್ರಶ್ನೆ ಅನೇಕರಲ್ಲಿದೆ. ಒಂದು ನೆನಪಿಡಿ, ದಂಗೆಕೋರ ನಕ್ಸಲರದ್ದು ಸಾವಿರಗಟ್ಟಲೆ ಜನರುಳ್ಳ ವ್ಯವಸ್ಥಿತ ಸೇನಾ ಸಮೂಹವಲ್ಲ. ಅವರು ಈ ಭಾಗದ ನೂರಾರು ಗ್ರಾಮಗಳಲ್ಲಿ ಹರಿದು ಹಂಚಿಹೋಗಿದ್ದಾರೆ. ನೂರುಗಟ್ಟಲೆ ಸಂಖ್ಯೆಯಲ್ಲಿ ಕ್ಷಿಪ್ರವಾಗಿ ಒಗ್ಗೂಡುತ್ತಾರೆ. ತಮ್ಮ ಬೆಟಾಲಿಯನ್‌ ಎಂದು ಅವರು ಕರೆದುಕೊಂಡರೂ ನಿಜವಾಗಿ ಅವರು ಅಷ್ಟು ಸಂಖ್ಯೆಯಲ್ಲಿಲ್ಲ. ಒಂದು ಪ್ಲಟೂನ್‌ ಅಥವಾ ಒಂದು ಕಂಪೆನಿಯಷ್ಟು ನಕ್ಸಲರು ಮಾತ್ರ ಇರುತ್ತಾರೆ. ಮೊನ್ನೆ ಸುಕಾ¾ದಲ್ಲಿ ನಡೆದಂತಹ ದಾಳಿಯ ಸಂದರ್ಭದಲ್ಲಿ ಹತ್ತಿರದ ಎರಡು – ಮೂರು ಹಳ್ಳಿಗಳಲ್ಲಿ ನೆಲೆಸಿರುವ 100-200 ಅಥವಾ ಗರಿಷ್ಟ 300 ಸಂಖ್ಯೆಯಲ್ಲಿ ತಮ್ಮವರನ್ನು ಒಗ್ಗೂಡಿಸಿಕೊಂಡು ಆಕ್ರಮಣ ನಡೆಸುತ್ತಾರೆ. ಇವರಲ್ಲಿ ಎಲ್ಲರ ಕೈಯಲ್ಲೂ ಅಪಾಯಕಾರಿ ಆಯುಧಗಳಿರುವುದಿಲ್ಲ. 

ಸಿಆರ್‌ಪಿಎಫ್ ಬಲಪಡಿಸಿ
ಛತ್ತೀಸ್‌ಗಢ ರಾಜ್ಯವೊಂದರಲ್ಲೇ ಬಿಎಸ್‌ಎಫ್, ಸಿಆರ್‌ಪಿಎಫ್, ಐಆರ್‌ಬಿಯಂತಹ ಕೇಂದ್ರೀಯ ಸಶಸ್ತ್ರ ಪಡೆಗಳ 45 ಬೆಟಾಲಿಯನ್‌ಗಳಿವೆ. ರಾಜ್ಯಗಳಿಗೆ ಅಗತ್ಯವಿದ್ದರೆ ಹೆಚ್ಚುವರಿ ಅರೆಸೇನಾಪಡೆಗಳನ್ನು ರವಾನಿಸುವುದಾಗಿ ಗೃಹ ಸಚಿವಾಲಯ ಆಗೀಗ ಹೇಳುತ್ತದೆ. ಆದರೆ ಮಾವೊವಾದಿ ಸಮಸ್ಯೆ ಇನ್ನಷ್ಟು ರಾಜ್ಯಗಳಿಗೆ ವಿಸ್ತರಿಸಿದಾಗ ಏನು ಮಾಡಬೇಕು? ಪಡೆಗಳನ್ನು ನಿಯೋಜಿಸಿದಷ್ಟಕ್ಕೆ ಗೃಹ ಸಚಿವಾಲಯದ ಕೆಲಸ ಮುಗಿಯಿತೇ? ನಕ್ಸಲ್‌ನಂತಹ ಆಂತರಿಕ ಭದ್ರತಾ ಸಮಸ್ಯೆಗಳ ವಿರುದ್ಧ ಕಾರ್ಯಾಚರಿಸುವ ಮುಖ್ಯ ಪಡೆ ಸಿಆರ್‌ಪಿಎಫ್ ಆದ್ದರಿಂದ ಈಗ ಹೈದರಾಬಾದ್‌ನಲ್ಲಿರುವ ಪೊಲೀಸ್‌ ಅಕಾಡೆಮಿಯನ್ನು ಸುಕಾ¾, ಬಸ್ತಾರ್‌ನಂತಹ ನಕ್ಸಲ್‌ ಪ್ರಾಬಲ್ಯವಿರುವ ಪ್ರದೇಶಕ್ಕೆ ಸ್ಥಳಾಂತರಿಸುವುದು ಒಳ್ಳೆಯದು. ಪೊಲೀಸ್‌ ಅಕಾಡೆಮಿಯನ್ನು ಬಸ್ತಾರ್‌ಗೆ ಮತ್ತು ಐಎಎಸ್‌ ಅಕಾಡೆಮಿಯನ್ನು ಕಾಶ್ಮೀರ ಕಣಿವೆಗೆ ಸ್ಥಳಾಂತರಿಸಿದರೆ ಆಂತರಿಕ ದಂಗೆಯ ಅನೇಕ ಸಮಸ್ಯೆಗಳು ಸುಲಭವಾಗಿ ಬಗೆಹರಿದಾವು. 

ಮಾಧ್ಯಮಗಳು ಮತ್ತು ಅಧಿಕಾರಸ್ಥರು ಗಮನಿಸಲು ಮರೆತ ಇನ್ನೂ ಒಂದು ವಿಚಾರವಿದೆ. ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್ನ ಕೆಲವೇ ಅಧಿಕಾರಿಗಳು ಉನ್ನತ ಸ್ಥಾನಗಳಿಗೆ ಭಡ್ತಿ ಪಡೆಯುತ್ತಾರೆ. ಪ್ರಮುಖ ಹುದ್ದೆಗಳಲ್ಲಿ ಸಿಆರ್‌ಪಿಎಫ್ ಯೋಧರ ಕಾರ್ಯಾಚರಣೆಯ ಸನ್ನಿವೇಶ, ಸಮಸ್ಯೆಗಳ ಅರಿವೇ ಇಲ್ಲದ  ಅಧಿಕಾರಿಗಳಿರುತ್ತಾರೆ. ಸಿಆರ್‌ಪಿಎಫ್ ಯೋಧರ ನಿಯೋಜನೆ, ತರಬೇತಿ ಮತ್ತು ಶಸ್ತ್ರಾಸ್ತ್ರ ಒದಗಣೆಯಲ್ಲಿ ಕೊರತೆ ಉಂಟಾಗುವುದಕ್ಕೆ ಇದು ಬಹಳ ದೊಡ್ಡ ಕಾರಣ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಗೃಹ ಸಚಿವಾಲಯ ಈ ವಿಚಾರದಲ್ಲಿ ತತ್‌ಕ್ಷಣ ಕ್ರಮ ಕೈಗೊಳ್ಳಬೇಕು. ಸಿಆರ್‌ಪಿಎಫ್ ಮಹಾನಿರ್ದೇಶಕ ಹುದ್ದೆಗೇರುವವರು ಅದರ ತಳಮಟ್ಟದ ಕಾರ್ಯಾಚರಣೆಯ ಅನುಭವ ಉಳ್ಳವರಾಗಿರಬೇಕು. ಮಾವೊವಾದಿ ಸಿದ್ಧಾಂತದ ಮಿದುಳು ಬೀಜಿಂಗ್‌ನಲ್ಲಿದೆ. ಚೀನ ಮತ್ತು ಪಾಕಿಸ್ಥಾನಗಳೆರಡರಿಂದಲೂ ಅವರಿಗೆ ಶಸ್ತ್ರಾಸ್ತ್ರ ಮತ್ತು ಬೆಂಬಲವಿದೆ. ಶಸ್ತ್ರಸಜ್ಜಿತ ನಕ್ಸಲ್‌ ಹೋರಾಟಗಾರರು ಭೂಗತರಾಗಿದ್ದು ಕಾರ್ಯಾಚರಿಸುತ್ತಿದ್ದರೆ ಅವರ ಬಹಿರಂಗ ಮುಖಗಳು ಬುದ್ಧಿಜೀವಿಗಳು, ವಿಚಾರವಾದಿಗಳ ಸೋಗು ಹಾಕಿಕೊಂಡು ದಿಲ್ಲಿಯಲ್ಲೇ ವಿಚಾರಸಂಕಿರಣ, ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಅವರು ಮಾವೊವಾದಿಗಳೇ, ಅವರನ್ನೂ ಹಾಗೆ  ಪರಿಗಣಿಸಬೇಕು.

ಕೆ. ವಿಜಯಕುಮಾರ್‌, ಮಾಜಿ ಸಿಆರ್‌ಪಿಎಫ್ ಮಹಾನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next