Advertisement

ನೌಕಾಪಡೆ ಜಾಹೀರಾತು ಬದುಕು ತಿರುಗಿಸಿತು!

10:16 AM Jan 29, 2018 | Team Udayavani |

ಅಂದುಕೊಂಡ ಎರಡೂ ಮಾರ್ಗ ದೇಶ ಸೇವೆಯೇ. ಒಂದು ಪ್ರತ್ಯಕ್ಷ, ಮತ್ತೂಂದು ಪರೋಕ್ಷ. ಎಲ್ಲರಿಗೂ ಪ್ರತ್ಯಕ್ಷವಾಗಿ ದೇಶ ಸೇವೆಯ ಅವಕಾಶ ಸಿಗದು. ಆದರೆ ಇವರ ಅದೃಷ್ಟವೆಂಬುದು ಬಾಗಿಲ ಎದುರು ಬಂದು ಬಿದ್ದಿತ್ತು. ಖುಷಿಯ ಸಂಗತಿಯೆಂದರೆ ನಿರ್ಲಕ್ಷಿಸದೇ ಇವರು ಎತ್ತಿಕೊಂಡದ್ದು.

Advertisement

ಪುತ್ತೂರು: ಐಎಎಸ್‌ ಅಧಿಕಾರಿಯಾಗಬೇಕು ಎನ್ನುವ ಕನಸನ್ನು ಬಾಲ್ಯದಿಂದಲೇ ಕಾಣುತ್ತಿದ್ದರೂ ಆಗಿದ್ದು ನೌಕಾದಳದ ಅಧಿಕಾರಿ. ಈಗ ದೇಶಸೇವೆಯಲ್ಲೂ ಸಂಪೂರ್ಣ ತೃಪ್ತ. ಉನ್ನತ ಹುದ್ದೆಗೇರಿದ್ದಕ್ಕೆ ಅತೀವ ಹೆಮ್ಮೆ. ಇದು ಪುತ್ತೂರಿನ ಬನ್ನೂರು ನಂದಿಲ ನಿವಾಸಿ, ನೌಕಾದಳದ ಸಬ್‌ ಲೆಫ್ಟಿನೆಂಟ್‌ ಹಾಫೀಜ್‌ ಕೆ.ಎ. ಅವರ ಸ್ಫೂರ್ತಿ ಕಥೆ.

ದೇಶಸೇವೆಗೆ ನೆರವಾದ ಜಾಹೀರಾತು!


ಹಾಫೀಜ್‌ ನೌಕಾದಳ ಅಧಿಕಾರಿಯಾದ್ದರ ಹಿಂದಿನ ಕಾರಣ ಒಂದು ಜಾಹೀರಾತು. ಬಾಲ್ಯದಲ್ಲೇ ಎನ್‌ಸಿಸಿ, ಪೊಲೀಸ್‌ ಸಮವಸ್ತ್ರ ನೋಡಿ ಆಕರ್ಷಣೆಗೆ ಒಳಗಾಗುತ್ತಿದ್ದ ಹಾಫೀಜ್‌ ಅವರು, ಸಾಲ್ಮರ ಮೌಂಟನ್‌ ವ್ಯೂ, ಸುದಾನದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ, ದರ್ಬೆ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ, ಬೆಂಗಳೂರಿನ ಬಿಎಂಎಸ್‌ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ವಿಭಾಗದಲ್ಲಿ ಬಿ.ಇ. ಪದವಿಯನ್ನು ವಿಶಿಷ್ಟ ದರ್ಜೆಯಲ್ಲಿ ಪೂರೈಸಿದರು. ಆಗಲೇ ಅವರಿಗೆ ಐಎಎಸ್‌ ಅಧಿಕಾರಿಯಾಗುವ ಹಂಬಲ. ಉತ್ತಮ ಸಂಬಳದ ಕೆಲಸವನ್ನೂ ನಿರಾಕರಿಸಿ ಐಎಎಸ್‌ ತರಬೇತಿಗೆ ದಿಲ್ಲಿಯತ್ತ ಮುಖ ಮಾಡಿದರು. ಪ್ರಿಲಿಮ್ಸ್‌ಗೆ ಸಿದ್ಧತೆ ನಡೆಸುತ್ತಿದ್ದಾಗಲೇ ನೌಕಾದಳದ ಜಾಹೀರಾತು ಕಣ್ಣಿಗೆ ಬಿದ್ದಿತು. ತಡಮಾಡದೇ ಪರೀಕ್ಷೆ ಬರೆದು ಯಶಸ್ವಿಯಾದರು.

ವಿದ್ಯಾವಂತ ಕುಟುಂಬ


ಜಿಲ್ಲಾ ಆರೋಗ್ಯ ನಿವೃತ್ತ ಮೇಲ್ವಿಚಾರಕ ಕೆ. ಅಬೂಬಕ್ಕರ್‌ ಹಾಗೂ ಆಯಿಷಾ ದಂಪತಿಯ ಮೂವರು ಮಕ್ಕಳಲ್ಲಿ ಹಾಫೀಜ್‌ ಎರಡನೆಯವರು. ದೊಡ್ಡವರು ಹಾರೀಸ್‌ ಕೆ.ಎ. ಸೌದಿ ಅರೇಬಿಯಾದಲ್ಲಿ ಎಂಜಿನಿಯರ್‌. ಸಣ್ಣವರು ಹನೀಫ್ ಕೆ.ಎ. ಈಗಷ್ಟೇ ಪದವಿ ಮುಗಿಸಿ, ಇಂಟರ್ನ್ಶಿಪ್‌ ಮಾಡುತ್ತಿದ್ದಾರೆ. ಅಬೂಬಕ್ಕರ್‌ ಅವರು ಈಶ್ವರಮಂಗಲ ಮಧುರಾ ಎಜುಕೇಶನ್‌ ಇನ್‌ಸ್ಟಿಟ್ಯೂಟ್‌ನ ಸಂಚಾಲಕರೂ ಆಗಿದ್ದಾರೆ.

ಮಾರ್ಗದರ್ಶನದ ಕೊರತೆ
ಕರಾವಳಿಯಲ್ಲಿ ಉತ್ತಮ ಪ್ರತಿಭೆಗಳಿದ್ದಾರೆ. ಆದರೆ ಅವರಿಗೆ ಮಾಹಿತಿ, ಮಾರ್ಗದರ್ಶನದ ಕೊರತೆ ಇದೆ. ಆದ್ದರಿಂದ ಉತ್ತಮ ಅವಕಾಶ ಬಾಚಿಕೊಳ್ಳುವುದರಲ್ಲಿ ಎಡವುತ್ತಾರೆ. ಮಾಧ್ಯಮಗಳಲ್ಲಿ ಮತ್ತು ಶಾಲಾ- ಕಾಲೇಜು ಪಠ್ಯಗಳಲ್ಲಿ ಸೈನಿಕರ ಬಗ್ಗೆ ತಿಳಿ ಹೇಳುವ ಕೆಲಸ ಆಗಬೇಕು. ಆಗ ಯುವ ಜನರಿಗೆ ಸೇನೆಗೆ ಸೇರಲು ಪ್ರೇರಣೆ ಸಿಗುತ್ತದೆ. ದೇಶಕ್ಕಾಗಿ ಏನಾದರೂ ಮಾಡಬೇಕು ಎನ್ನುವ ಛಲ ಪ್ರತಿಯೊಬ್ಬರಲ್ಲೂ ಇರಬೇಕು ಎನ್ನುತ್ತಾರೆ ಹಾಫೀಜ್‌. 

Advertisement

ಶಿಸ್ತು.. ಶಿಸ್ತು..
ಸೇನೆ, ಶಿಸ್ತು ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಸೇನೆ ಯಲ್ಲಿ ಶಿಸ್ತು ಮುಖ್ಯ. ಜಾತಿ, ಮತ, ಭೇದವಿಲ್ಲದ ಪಾರದರ್ಶಕ ವ್ಯವಸ್ಥೆ ಇಲ್ಲಿದೆ. ಸೇನೆಗೆ ಆಯ್ಕೆ ಮಾಡುವ ಸಂದರ್ಭ ಪ್ರತಿಭೆಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಸೇನೆಯ ಒಳಗೂ ಅಷ್ಟೇ ಒಂದೇ ಕುಟುಂಬದ ಸದಸ್ಯರ ರೀತಿ ವಾತಾವರಣ ಇದೆ. ರಾಷ್ಟ್ರವನ್ನು ಕಾಯುತ್ತಿದ್ದೇವೆ ಎನ್ನುವುದೇ ಹೆಮ್ಮೆಯ ವಿಷಯ.

150 ಜನರಲ್ಲಿ ಆಯ್ಕೆಯಾಗಿದ್ದು ಒಬ್ಬರೇ!
ಸಂದರ್ಶನಕ್ಕೆ ಬಂದಿದ್ದ 150 ಮಂದಿಯಲ್ಲಿ ಆಯ್ಕೆಯಾದ ಏಕೈಕ ಅಭ್ಯರ್ಥಿ ಹಾಫೀಜ್‌. 2016 ಜೂನ್‌ನಲ್ಲಿ ನೌಕಾದಳದಲ್ಲಿ ಸಬ್‌ಲೆಫ್ಟಿನೆಂಟ್‌ ಗ್ರೂಪ್‌ -ಎ ಅಧಿಕಾರಿಯಾಗಿ ನೇಮಕಗೊಂಡರು. ಕಣ್ಣೂರಿನ ಎಜಿಮಲ ನೇವಲ್‌ ಅಕಾಡೆಮಿಯಲ್ಲಿ 6 ತಿಂಗಳ ತರಬೇತಿ ಮುಗಿಸಿ, ನೌಕಾದಳದ ಏವಿಯೇಷನ್‌ ಶಾಖೆಗೆ ನಿಯುಕ್ತಿಗೊಂಡರು. 2017 ಜೂನ್‌ನಿಂದ ಕೊಚ್ಚಿ ವಿಶ್ವವಿದ್ಯಾಲಯದಲ್ಲಿ ಎಂ.ಟೆಕ್‌. ಶಿಕ್ಷಣ ಆರಂಭಿಸಿದ್ದಾರೆ. 2018ರ ಜನವರಿಯಿಂದ ಬೀದರ್‌ ಏರ್‌ ಫೋರ್ಸ್‌ ಸ್ಟೇಷನ್‌ನಲ್ಲಿ ತರಬೇತಿಯನ್ನೂ ಪಡೆಯುತ್ತಿದ್ದಾರೆ. 

ಮುಳುಗು ತಜ್ಞರೊಂದಿಗೆ ಸಾಹಸ
ನೌಕಾದಳದ ಡೈವರ್ಸ್‌ (ಮುಳುಗು ತಜ್ಞರು)ಗಳ ಸಾಹಸಮಯ ಕಾರ್ಯಾಚರಣೆ ರೋಮಾಂಚಕ ಅನುಭವ. ಲಕ್ಷದ್ವೀಪಕ್ಕೆ ಒಖೀ ಚಂಡಮಾರುತ ಅಪ್ಪಳಿಸಿದ್ದಾಗ ರಕ್ಷಣಾ ಕಾರ್ಯಾಚರಣೆಗೆ ತೆರಳಲು ತರಬೇತಿಯಲ್ಲಿದ್ದ ನಮಗೂ ಅವಕಾಶ ಸಿಕ್ಕಿತ್ತು. ಇಡೀ ಬೋಟನ್ನೇ ಒಳಗೆಳೆದುಕೊಳ್ಳವಷ್ಟು ತೀವ್ರತೆಯ ಭಾರೀ ಅಲೆಗಳ ಮಧ್ಯೆ ಅನೇಕ ಮೀನುಗಾರರು ಸಣ್ಣ ಸಣ್ಣ ದ್ವೀಪಗಳಲ್ಲಿ ನಿಂತಿದ್ದರು. ಅವರನ್ನು ರಕ್ಷಿಸಲು ಸಮುದ್ರಕ್ಕೆ ಧುಮುಕಿದ ಮುಳುಗು ತಜ್ಞರು ಯಶಸ್ವಿಯಾಗಿ ಕಾರ್ಯಾಚರಣೆಗಳನ್ನು ನಡೆಸಿದರು. ಅವರಿಗೆ ಊಟೋಪಚಾರ, ಇತರ ನೆರವು ನೀಡುವ ಜವಾಬ್ದಾರಿ ನಮ್ಮ ಮೇಲಿತ್ತು. ಹಾಗೆಯೇ ಕೆಲ ಸಮಯ ಹಿಂದೆ ವಿಶಾಖಪಟ್ಟಣದಲ್ಲಿ ಹಡಗು ಮುಳುಗುವ ವೇಳೆ ಕೈಗೊಳ್ಳುವ ರಕ್ಷಣೆ ಬಗ್ಗೆ ಅಣಕು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದೆ. ಹಡಗಿನಿಂದ ಹಡಗಿಗೆ ಸಂಪರ್ಕ ಸಾಧಿಸುವ, ರಕ್ಷಿಸುವ ಕಾರ್ಯ ರೋಚಕವಾಗಿತ್ತು ಎನ್ನುತ್ತಾರೆ ಹಾಫೀಜ್‌.

ಹಾಫೀಜ್‌ಗೆ ಸಣ್ಣಂದಿನಿಂದಲೂ ದೇಶಭಕ್ತಿಯ ಪುಸ್ತಕ ಓದುವುದೆಂದರೆ ಬಲು ಇಷ್ಟ. ನನ್ನ ಮೂವರು ಮಕ್ಕಳಿಗೂ ದೇಶಭಕ್ತಿಯ ಬಗ್ಗೆ ಎಳವೆಯಿಂದಲೇ ತಿಳಿ ಹೇಳುತ್ತಾ ಬಂದಿದ್ದೇನೆ. ಇದೇ ಹಾಫೀಜ್‌ಗೂ ಪ್ರೇರಣೆಯಾಯಿತು. ಐಎಎಸ್‌ ಅಧಿಕಾರಿಯಾಗಬೇಕೆಂಬ ಕನಸು ನಮಗೂ ಇತ್ತು. ನೌಕಾಪಡೆಗೆ ಸೇರಿರುವುದು ಮತ್ತಷ್ಟು ಖುಷಿ ತಂದಿದೆ.
-ಕೆ. ಅಬೂಬಕ್ಕರ್‌, ಹಾಫೀಜ್‌ ತಂದೆ

– ಗಣೇಶ್‌ ಎನ್‌. ಕಲ್ಲರ್ಪೆ

►ಯೋಧ ನಮನ 1►ಕ್ಯಾಪ್ಟನ್‌ ರಾಧೇಶ್‌ಗೆ ಅಣ್ಣನೇ ಸ್ಫೂರ್ತಿ: //bit.ly/2noe3RR

►ಯೋಧ ನಮನ 2► ಕೈತುಂಬ ಸಂಬಳದ ಕೆಲಸಕ್ಕೇ ಗುಡ್‌ಬೈ!: //bit.ly/2ByAZCW

►ಯೋಧ ನಮನ 3►30ನೇ ವಯಸ್ಸಿಗೇ ಉಳಿದವರಿಗೆ ಸ್ಫೂರ್ತಿಯಾದ!: //bit.ly/2E0zx1y 
 

ಈ ಸರಣಿಯ ಮೂಲ ಉದ್ದೇಶ ಯುವಜನರಲ್ಲಿ ಮತ್ತು ನಾಗರಿಕರಲ್ಲಿ ಸೇನೆ ಕುರಿತು ಅರಿವು ಹಾಗೂ ಸದಭಿಪ್ರಾಯ ಮೂಡಿಸುವುದು. ಅದರಲ್ಲೂ ಯುವಜನರಿಗೆ ಸ್ಫೂರ್ತಿ ತುಂಬುವುದು. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಒಲವೂ ಸೇನೆಯ ಕಡೆಗೆ ಹೆಚ್ಚುತ್ತಿದೆ. ಯುವಜನರೂ ಹೆಚ್ಚಿನ ಒಲವು ತೋರುತ್ತಿದ್ದಾರೆ. ಆದ ಕಾರಣ, ನಮ್ಮ ಊರಿನ ಸೈನಿಕರನ್ನು ಎಲ್ಲರಿಗೂ ಪರಿಚಯಿಸುವುದು ಈ ಸರಣಿಯ ಧ್ಯೇಯ.

ನಿಮ್ಮ ಊರಿನಲ್ಲೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರ ಬಗ್ಗೆ ಮಾಹಿತಿ ಇದ್ದರೆ ನಮ್ಮ ವಾಟ್ಸಪ್‌ಗೆ ತಿಳಿಸಬಹುದು. ಹೆಸರು, ಊರು ಹಾಗೂ ಸಂಪರ್ಕ ಸಂಖ್ಯೆ ಕಡ್ಡಾಯವಾಗಿ ನಮ್ಮೊಂದಿಗೆ ಹಂಚಿಕೊಳ್ಳಿ. ನಮ್ಮ ವಾಟ್ಸಪ್‌ ಸಂಖ್ಯೆ 7618774529

Advertisement

Udayavani is now on Telegram. Click here to join our channel and stay updated with the latest news.

Next