Advertisement

ನವರಾತ್ರಿ: ಇಂದಿನ ಆರಾಧನೆ- ಸಕಲ ಸಿದ್ಧಿಗಳನ್ನು ಕರುಣಿಸುವ ದೇವಿ “ಕಾಲರಾತ್ರಿ”

12:47 AM Oct 21, 2023 | Team Udayavani |

ನವದುರ್ಗೆಯ ಏಳನೆಯ ಸ್ವರೂಪವೇ ಕಾಲರಾತ್ರಿ. ಸಪ್ತಮಿಯಂದು ಈ ದೇವಿಯ ರೂಪವನ್ನು ಆರಾಧಿಸುತ್ತಾರೆ.

Advertisement

ಏಕವೇಣೀ ಜಪಾಕರ್ಣಾಪೂರಾ ನಗ್ನಾ ಖರಸ್ಥಿತಾ
ಲಂಬೋಷ್ಟೀ ಕರ್ಣಿಕಾಕರ್ಣೇ ತೈಲಾಭ್ಯಕ್ತಶರೀರಿಣೀ |
ವಾಮಪಾದೋಲ್ಲಸಲ್ಲೋಹಲತಾ ಕಂಟಕಭೂಷಣಾ
ವರ್ಧನಮೂರ್ಧಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ||

“ಈ ದೇವಿಯ ಶರೀರವು ದಟ್ಟವಾದ ಕಪ್ಪು ಬಣ್ಣದಿಂದ ಕೂಡಿರುವುದು. ಆಕೆಯ ತಲೆಕೂದಲು ಹರಡಿಕೊಂಡಿದೆ. ಕತ್ತಿನಲ್ಲಿ ಮಿಂಚಿನಂತೆ ಹೊಳೆಯುವ ಮಾಲೆಯಿದೆ. ಮೂರು ಕಣ್ಣುಗಳನ್ನು ಹೊಂದಿರುವ ಈ ದೇವಿಯ ಉಚ್ಛ್ರಾಸ ನಿಃಶ್ವಾಸದಿಂದ ಅಗ್ನಿಯ ಭಯಂಕರ ಜ್ವಾಲೆಗಳು ಹೊರಸೂಸುತ್ತಿವೆ. ಈಕೆಯ ವಾಹನ ಕತ್ತೆ. ನಾಲ್ಕು ಭುಜಗಳಿರುವ ದೇವಿಯು ಮೇಲಕ್ಕೆ ಎತ್ತಿರುವ ಬಲಗೈಯಿಂದ ಅಭಯಮುದ್ರೆಯನ್ನು ತೋರುತ್ತಿದ್ದಾಳೆ. ಮೇಲಕ್ಕೆ ಎತ್ತಿರುವ ಎಡಗೈಯಲ್ಲಿ ಕಬ್ಬಿಣದ ಮುಳ್ಳು ಹಾಗೂ ಕೆಳ ಎಡಗೈಯಲ್ಲಿ ಖಡ್ಗವನ್ನು ಹಿಡಿದಿದ್ದಾಳೆ. ಕೆಳಗಿನ ಬಲಗೈಯಲ್ಲಿ ವರಮುದ್ರೆಯ ಮೂಲಕ ಭಕ್ತರಿಗೆ ಆಶೀರ್ವದಿಸುತ್ತಿದ್ದಾಳೆ.”

ಕಾಲರಾತ್ರಿಯ ಸ್ವರೂಪದ ಕುರಿತು ತಿಳಿದಾಗ ಅವಳ ಉಗ್ರರೂಪವನ್ನು ಕಂಡು ನಮಗೆ ಭಯವಾಗಬಹುದು, ವಿಚಿತ್ರವೆನಿಸಬಹುದು. ಆದರೆ ಇವಳು ಶುಭಫ‌ಲವನ್ನು ನೀಡುವವಳಾದ್ದರಿಂದ “ಶುಭಂಕರೀ’ ಎಂದೂ ಕರೆಯುತ್ತಾರೆ. ಭಕ್ತರಿಗೆ, ಸಜ್ಜನರಿಗೆ ಸದಾ ಒಳ್ಳೆಯದನ್ನು ಮಾಡುತ್ತಾ, ದುಷ್ಟ ಜನರನ್ನು ಈ ದೇವಿ ಶಿಕ್ಷಿಸುತ್ತಾಳೆ. ದೇವಿ ಕಾಲರಾತ್ರಿಯನ್ನು ಆರಾಧಿಸಿದರೆ, ಅಗ್ನಿಭಯ, ಶತ್ರುಭಯ, ಜಲಭಯ, ಗ್ರಹಗಳ ಬಾಧೆಗಳಿಂದ ಮುಕ್ತರಾಗುತ್ತಾರೆ.

ಸಪ್ತಮೀ ತಿಥಿಯ ರಾತ್ರಿಯನ್ನು ಕಾಳರಾತ್ರೀ ಎಂದೂ ಕರೆಯುತ್ತಾರೆ. ಮೈಸೂರಿನ ಅರಮನೆಯಲ್ಲಿ ಹಾಗೂ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅಂದು ರಾತ್ರಿ ವಿಶೇಷವಾಗಿ ದೇವಿಯನ್ನು ಪೂಜಿಸುವ ಸಂಪ್ರದಾಯ ಇಂದಿಗೂ ನಡೆದುಕೊಂಡು ಬರುತ್ತಿದೆ.

Advertisement

ಸಪ್ತಮೀ ತಿಥಿಯಂದು ನವರಾತ್ರಿಯ ಏಳನೇ ದಿವಸದಿಂದ ಈ ದೇವಿಯನ್ನು ಆರಾಧಿಸಲಾಗುತ್ತದೆ. ಅಂದು ಸಾಧಕನ ಮನಸ್ಸು ಸಹಸ್ರಾರ ಚಕ್ರದಲ್ಲಿ ಪ್ರತಿಷ್ಠಿತಗೊಳ್ಳುತ್ತದೆ. ಬ್ರಹ್ಮಾಂಡದ ಸಕಲ ಸಿದ್ಧಿಗಳೂ ಅವನಿಗೆ ದೊರೆಯುತ್ತವೆ. ಸಾಧಕನ ಮನಸ್ಸು ಮಾತೆಯ ಸ್ವರೂಪದಲ್ಲಿ ಸ್ಥಿರವಾಗುತ್ತದೆ.

~ ಸ್ವಾಮಿ ಶಾಂತಿವ್ರತಾನಂದಜೀ, ಅಧ್ಯಕ್ಷರು, ರಾಮಕೃಷ್ಣ ವೇದಾಂತ ಕೇಂದ್ರ, ಐರ್ಲೆಂಡ್‌

Advertisement

Udayavani is now on Telegram. Click here to join our channel and stay updated with the latest news.

Next