Advertisement

ಕಾಂಗ್ರೆಸ್ಸನ್ನು ನಗೆಪಾಟಲಿಗೆ ಈಡಾಗಿಸಿದ ಸಿಧು!

12:02 AM Sep 20, 2021 | Team Udayavani |

ಕೆಲವು ವರ್ಷಗಳ ಹಿಂದೆ, ಕಾಮಿಡಿ ನೈಟ್ಸ್‌ ವಿತ್‌ ಕಪಿಲ್‌ ಎಂಬ ಮನೋರಂಜನ ಶೋನಲ್ಲಿ ಅತಿಥಿಯಾಗಿ ಕಾಣಿಸಿಕೊಂಡು, ಪ್ರತಿ ಯೊಂದು ಜೋಕ್‌ಗೂ ಗಹಗಹಿಸಿ ನಗುತ್ತಿದ್ದ ಮಾಜಿ ಕ್ರಿಕೆಟರ್‌-ಕಂ -ರಾಜಕೀಯ ವ್ಯಕ್ತಿ ನವಜೋತ್‌ ಸಿಂಗ್‌ ಸಿಧು, ಈಗ ಪಂಜಾಬ್‌ನಲ್ಲಿ ಕಾಂಗ್ರೆಸ್‌ನ  ಪರಿಸ್ಥಿತಿಯನ್ನು ನಗೆಪಾಟಲಿಗೆ ಈಡಾಗಿಸಿದ್ದಾರೆ.

Advertisement

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ವಿರುದ್ಧ ಮುಂದಿನ ಚುನಾವಣೆಯಲ್ಲಿ ರಣಕಹಳೆ ಮೊಳಗಿಸಲು ಕಾಂಗ್ರೆಸ್‌, ಸಮಾನ ಮನಸ್ಕ ಪಕ್ಷಗಳನ್ನೆಲ್ಲ ಒಗ್ಗೂಡಿಸಲು ಪ್ರಯತ್ನಿಸುತ್ತಿದೆ. ಆದರೆ ವಿವಿಧ ರಾಜ್ಯಗಳಲ್ಲಿ ಆ ಪಕ್ಷದ ಬೇರೇ ಗಟ್ಟಿಯಾಗಿಲ್ಲ ಎಂಬುದು ಪದೇ ಪದೆ ಸಾಬೀತಾಗುತ್ತಿದೆ. ಅದಕ್ಕೆ ತಾಜಾ ಉದಾಹರಣೆ, ಪಂಜಾಬ್‌ನಲ್ಲಿ ನಡೆದ ವಿದ್ಯಮಾನ.

ಪಂಜಾಬ್‌ ವಿವಾದದಲ್ಲಿ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಹಾಗೂ ನವಜೋತ್‌ ಸಿಂಗ್‌ ಸಿಧು ಎಂಬ ಎರಡು ಕೇಂದ್ರ ಬಿಂದು ಗಳಿವೆ. ಇಬ್ಬರದ್ದೂ ಒಂದೊಂದು ದಿಕ್ಕು, ಪರಸ್ಪರ ವೈರುಧ್ಯದ ವ್ಯಕ್ತಿತ್ವ.

ಮಾಜಿ ಸೇನಾಧಿಕಾರಿ ಎಂಬ ಹೆಗ್ಗಳಿಕೆ ಹೊಂದಿರುವ ಅಮ ರೀಂದರ್‌ ಸಿಂಗ್‌ಗೆ ಸುಮಾರು 40 ವರ್ಷಗಳ ರಾಜಕೀಯ ಅನುಭವವಿದೆ. ಸಾಲದ್ದಕ್ಕೆ ದಕ್ಷ ಆಡಳಿತಗಾರ ಎಂಬ ಹೆಸರೂ ಇದೆ. 2017ರಲ್ಲಿ ಅಧಿಕಾರಕ್ಕೆ ಬರುವ ಮುನ್ನವೂ ಸಿಎಂ ಆಗಿದ್ದ ಅವರು ಸಮರ್ಥ ಆಡಳಿತ ನೀಡಿದ್ದರು. ಹಾಗಾಗಿಯೇ 2007ರಿಂದ 2017ರ ವರೆಗೆ ಸತತ 10 ವರ್ಷಗಳ ಶಿರೋಮಣಿ ಅಕಾಲಿ ದಳದ ಆಡಳಿತ ಕೊನೆಗಾಣಿಸಿ, ತಮ್ಮ ಪಕ್ಷವನ್ನು ಪುನಃ ಅಧಿಕಾರಕ್ಕೆ ತರುವಲ್ಲಿ ಅವರು ಯಶಸ್ವಿಯಾಗಿದ್ದರು.

ಇಷ್ಟೆಲ್ಲ ಕ್ರೆಡಿಟ್ಸ್‌ ಹೊಂದಿದ್ದ ಅಮರೀಂದರ್‌ಗೆ ನಿಜಕ್ಕೂ ತೊಂದರೆ ಶುರುವಾಗಿದ್ದು 2017ರಲ್ಲಿ. ಅದೇ ವರ್ಷವೇ ನವಜೋತ್‌ ಸಿಂಗ್‌ ಸಿಧು ಕಾಂಗ್ರೆಸ್‌ಗೆ ಕಾಲಿಟ್ಟಿದ್ದು. ಅಂದು, ಕಾಂಗ್ರೆಸ್ಸಿನೊಳಗೆ ಬಲಗಾಲಿಟ್ಟು ಒಳಗೆ ಬಂದ ಸಿಧು, ಮುಂ ದೊಂದು ದಿನ ಈ ವ್ಯಕ್ತಿ ತಮ್ಮನ್ನು ಸಿಎಂ ಕಚೇರಿಯಿಂದ ಎಡ ಗಾಲಿಟ್ಟು ಹೊರಹೋಗುವಂತೆ ಮಾಡಿಯಾರು ಎಂಬ ಕಿಂಚಿತ್‌ ಅನುಮಾನ ಅಮರೀಂದರ್‌ ಅವರಿಗೆ ಕನಸಿನಲ್ಲೂ ಮೂಡಿರ ಲಿಕ್ಕಿಲ್ಲ. ಏಕೆಂದರೆ, ಆಗ ಹಾಗಿತ್ತು ಸಿಧು ಅವರ ನಡೆ-ನುಡಿ.

Advertisement

ಅದರಲ್ಲೂ ಸದಾ ಒಂದಿಲ್ಲೊಂದು ವಿವಾದ ಸೃಷ್ಟಿಸುತ್ತಾ, ಯಾರೇನೇ ಎಂದರೂ ಡೋಂಟ್‌ ಕೇರ್‌ ಎಂಬ ಮನಃಸ್ಥಿತಿ ಸಿಧು ಅವರದ್ದು. 2017ರಲ್ಲಿ ನಡೆದ ಚುನಾವಣೆಯ ಅನಂತರ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ, ತಮ್ಮನ್ನು  ಉಪ ಮುಖ್ಯ ಮಂತ್ರಿ ಮಾಡಲಾಗುತ್ತದೆ ಎಂಬ ಅದಮ್ಯ ಕನಸು ಕಂಡಿದ್ದ ನವಜೋತ್‌ ಸಿಂಗ್‌ ಸಿಧುಗೆ ಆ ಸ್ಥಾನವನ್ನು ಕಾಂಗ್ರೆಸ್‌ ನೀಡಲಿಲ್ಲ. ಇದನ್ನು ಸಂದ ರ್ಶನವೊಂದರಲ್ಲಿ ಹೇಳಿಕೊಂಡಿದ್ದರು ಸಿಧು. ಇದೇ ವಿಚಾರವೇ ಸಿಧು ಬೇಗುದಿಗೆ ಮೂಲ ಕಾರಣವಾಯಿತು.

ಅಮರೀಂದರ್‌ ಕೂಡ ಹಠವಾದಿ. ಅದಕ್ಕೂ ಮಿಗಿಲಾಗಿ ಅಪ್ಪಟ ಸ್ವಾಭಿಮಾನಿ. ರಾಜೀವ್‌ ಗಾಂಧಿಯವರ ಸಹಪಾಠಿ ಯಾಗಿ ದ್ದ ಕ್ಯಾ| ಅಮರೀಂದರ್‌, ಅದೇ ಹಿನ್ನೆಲೆಯಲ್ಲೇ 1980 ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಪಡೆದು, ಪಟಿಯಾಲಾ ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿದ್ದರು. ಆದರೆ ಇಂದಿರಾ ಗಾಂಧಿಯವರ ಆಪರೇಷನ್‌ ಬ್ಲೂ ಸ್ಟಾರ್‌ ಕಾರ್ಯಾಚರಣೆಯನ್ನು ವಿರೋ ಧಿಸಿ, ಸಂಸದ ಸ್ಥಾನಕ್ಕೆ ಹಾಗೂ ಕಾಂಗ್ರೆಸ್‌ಗೆ ರಾಜೀನಾಮೆ ಸಲ್ಲಿಸಿ ಶಿರೋಮಣಿ ಅಕಾಲಿದಳ ಸೇರಿದ್ದರು. ಆದರೆ 1992ರಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸಿಕೊಂಡು ಅಲ್ಲಿಂದಲೂ ಹೊರಬಂದು ಶಿರೋಮಣಿ ಅಕಾಲಿದಳ (ಪ್ಯಾಂಥಿಕ್‌) ಎಂಬ ಪಕ್ಷ ಕಟ್ಟಿದರು. 1998ರಲ್ಲಿ ಅದನ್ನು ಕಾಂಗ್ರೆಸ್ಸಿನೊಂದಿಗೆ ವಿಲೀನಗೊಳಿಸಿ, ಅದೇ ಪಕ್ಷದಲ್ಲಿ ಹಂತಹಂತವಾಗಿ ಬೆಳೆದರು.

ಇನ್ನು, ಸಿಧು ವಿಚಾರವನ್ನು ಕೆದಕಿದರೆ ಆರಂಭದಿಂದ ಇಲ್ಲಿ ಯ ವರೆಗೂ ಅವರದ್ದು ಬರೀ ವಿವಾದ. 1988ರಲ್ಲಿ ಕಾರ್‌ ಪಾರ್ಕಿಂಗ್  ಪ್ರಕರಣವೊಂದರಲ್ಲಿ 65 ವರ್ಷದ ಗುರ್ನಾಮ್‌ ಸಿಂಗ್‌ ಎಂಬವರಿಗೆ ಥಳಿಸಿದ್ದು ಭಾರೀ ವಿವಾದಕ್ಕೀಡಾಗಿತ್ತು. 1996ರಲ್ಲಿ ಕ್ರಿಕೆಟಿಗ ಅಜರುದ್ದೀನ್‌ ನೇತೃತ್ವದಲ್ಲಿ ಭಾರತ ತಂಡ, ಇಂಗ್ಲೆಂಡ್‌  ಪ್ರವಾಸ ಕೈಗೊಂಡಿದ್ದಾಗ, ಅಲ್ಲಿಯೂ ಅಜರು ದ್ದೀನ್‌ ಜತೆ ಕಿತ್ತಾಡಿಕೊಂಡು ಇಂಗ್ಲೆಂಡ್‌ನಿಂದ ಭಾರತಕ್ಕೆ ಹೇಳದೆ ಕೇಳದೆ ಹಿಂದಿರುಗಿದ್ದರು. 2015ರಲ್ಲಿ ಕ್ರಿಕೆಟ್‌ ವೀಕ್ಷಕ ವಿವ ರಣೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾಗ ಕಾಮೆಂಟರಿ ನೀಡುವ ವೇಳೆ ಅವಾಚ್ಯ ಶಬ್ದವನ್ನು ಪದೇ ಪದೆ ಬಳಸಿ ಆ ಹುದ್ದೆ ಕಳೆದುಕೊಂಡಿದ್ದರು.

ಇನ್ನು, “ದ ಕಪಿಲ್‌ ಶರ್ಮಾ ಶೋ’ ಎಂಬ ಹಾಸ್ಯಪ್ರಧಾನ ರಿಯಾ ಲಿಟಿ ಶೋನಲ್ಲಿ ಶಾಶ್ವತ ಅತಿಥಿಯಾಗಿದ್ದ ಸಿಧು ವಿರುದ್ಧ ಎಚ್‌.ಸಿ. ಅರೋರಾ ಎಂಬ ವಕೀಲರೊಬ್ಬರು ಆತ ಕೀಳು ದರ್ಜೆಯ ಜೋಕ್ಸ್‌ ಮಾಡುತ್ತಾನೆ ಎಂದು ನ್ಯಾಯಾಲಯದಲ್ಲಿ ಕೇಸ್‌ ದಾಖಲಿಸಿದ್ದರು.  2018ರಲ್ಲಿ, ಪಂಜಾಬ್‌ ಸಂಪುಟದಲ್ಲಿ ಸಚಿವರಾಗಿದ್ದಾಗ ಪಾಕಿಸ್ಥಾನದಲ್ಲಿ ಪ್ರಧಾನಿಯಾಗಿ ಇಮ್ರಾನ್‌ ಖಾನ್‌ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಅಮ ರೀಂದರ್‌ ವಿರೋ ಧದ ನಡು ವೆಯೂ ಹೋಗಿದ್ದಾಗ ಅಲ್ಲಿನ ಸೇನಾ ಮುಖ್ಯಸ್ಥ ಖಮರ್‌ ಜಾವೇದ್‌ ಬಾಜ್ವಾ ಅವರನ್ನು ಆಲಂಗಿಸಿಕೊಂಡು ವಿವಾದಕ್ಕೀಡಾಗಿದ್ದರು.

ಹೀಗೆ, ಹೋದ ಬಂದಲ್ಲೆಲ್ಲ ಇವರಿಬ್ಬರದ್ದೂ ವಿವಾದಗಳೇ. ಹಾಗಿರುವಾಗ, ಅಂಥ ಅಮರೀಂದರ್‌, ಇಂಥ ಸಿಧು ಅವರ ನಡುವಿನ ಕಂದಕವನ್ನು ಮುಚ್ಚಲು ಮಾಡಿದ ಯಾವ ಪ್ರಯತ್ನಗಳೂ ಸಫ‌ಲವಾಗಲಿಲ್ಲ.

ಪಂಜಾಬ್‌ ಕಾಂಗ್ರೆಸ್‌ನಲ್ಲಿ ಭಿನ್ನಮತ ಮೂಡುತ್ತಲೇ ಅತ್ತ ಆಮ್‌ ಆದ್ಮಿ ಪಾರ್ಟಿ (ಆಪ್‌) ಪಂಜಾಬ್‌ನಲ್ಲಿ ಭದ್ರವಾಗಿ ತಳವೂರಲು ರೂಪುರೇಷೆ ಸಿದ್ಧಪಡಿಸುತ್ತಿತ್ತು. ಹಾಗಾಗಿ, ಕಾಂಗ್ರೆಸ್‌ ನಲ್ಲಿ ಎದ್ದಿರುವ ಅಸಮಾಧಾನವನ್ನು ತಣ್ಣಗಾಗಿಸುವುದು ಹೈಕಮಾಂಡ್‌ಗೆ ಅನಿವಾರ್ಯವಾಗಿ ಪರಿಣಮಿಸಿತು.

ಪಂಜಾಬ್‌ನಲ್ಲಿ ಸರಕಾರ‌ ರಚನೆಯಾದಾಗ ಸಿಧು ಅವರನ್ನು ಪ್ರವಾ ಸೋದ್ಯಮ ಖಾತೆಯ ಸಚಿವರನ್ನಾಗಿಸಲಾಯಿತು. ಅಲ್ಲಿಯೂ ಸಮಾಧಾನಗೊಳ್ಳದ ಅವರು ಸರಕಾರ‌ದಿಂದ ಹೊರ ನಡೆದರು. ಸರಕಾರ‌ದಿಂದ ಹೊರಬಂದವರೇ ಬಹಿರಂಗವಾಗಿ ಅಮರೀಂದರ್‌ ಅವರನ್ನು ಟೀಕಿಸಲು ಶುರು ಮಾಡಿದರು.

ಮತ್ತೆ ಅವರ ಬಾಯಿ ಮುಚ್ಚಿಸಲು ನಿರ್ಧರಿಸಿದ ಹೈಕ ಮಾಂಡ್‌, ಅವರನ್ನು ಇತ್ತೀಚೆಗೆ ಪಂಜಾಬ್‌ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿತು. ಅಲ್ಲಿಂದ ಪಕ್ಷದ ಮೇಲೆ ಹಿಡಿತ ಸಾಧಿಸಿದ ಸಿಧು, ಒಂದಿಷ್ಟು ಶಾಸಕರನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡರು. ಅವರ ಕಡೆಯಿಂದಲೇ, ಒಂದೇ ತಿಂಗಳಲ್ಲಿ ಮೂರು ಬಾರಿ ಶಾಸ ಕರ ಸಭೆ ನಡೆಸಿ, ಕ್ಯಾ| ಅಮರೀಂದರ್‌ ವಿರುದ್ಧ ಅವಿಶ್ವಾಸದ ಕಹಳೆ ಮೊಳಗಿಸಿದರು. ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿಯವರನ್ನು ಭೇಟಿಯಾಗಿ ಅವರನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡರು.

ಈ ಎಲ್ಲ ನಡೆಗಳೇ ಕ್ಯಾಪ್ಟನ್‌ ಅಮರೀಂದರ್‌ ಸಿಂಗ್‌ ಅವರ ರಾಜೀನಾಮೆಗೆ ಕಾರಣವಾದವು ಎನ್ನುವುದೇನೋ ಸರಿ. ಆದರೆ ರಾಜೀ ನಾಮೆ ಅನಂತರ ಅಮರೀಂದರ್‌ ಎಂಬ ಬಲಿಷ್ಠ ನಾಯಕನ ಮುಂದಿನ ನಡೆಯೇನು ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತವೆ.

ಸಿಎಂ ಸ್ಥಾನ ತೊರೆದ ಅನಂತರ ವಿವಿಧ ಮಾಧ್ಯಮಗಳಿಗೆ ಅವರು ನೀಡಿರುವ ಸಂದರ್ಶನದಲ್ಲಿ ಅವರು ಬೇರೆಯದ್ದೇ ಧಾಟಿ ಯಲ್ಲಿ ಮಾತನಾಡಿದ್ದಾರೆ. ಸಿಧುರವರನ್ನು ಅಸಮರ್ಥ, ದೇಶ ವಿರೋಧಿ ಎಂದು ಜರೆದಿದ್ದಾರೆ. ಅವರಿಗೆ ಪಾಕಿಸ್ಥಾನದ ಪ್ರಧಾನಿ ಇಮ್ರಾನ್‌ ಖಾನ್‌ ಜತೆ ಸ್ನೇಹವಿದೆ, ಹಾಗಾಗಿ ಅವರು ಪಾಕ್‌ ಪರ ಎಂದಿದ್ದಾರೆ. ಅಲ್ಲದೆ, ಕಾಂಗ್ರೆಸ್‌ ಹೈಕಮಾಂಡ್‌ ತಮ್ಮನ್ನು ಪದೇ ಪದೆ ಅವಮಾನಿಸಿದ್ದನ್ನೂ ಉಲ್ಲೇಖೀಸಿದ್ದಾರೆ. ನನ್ನ ವಿರುದ್ಧ ಬಂಡಾಯವೆದ್ದವರು ವಾರಕ್ಕೆ ಮೂರು ಬಾರಿ ದಿಲ್ಲಿಗೆ ಹೋಗಿ ಪಕ್ಷದ ವರಿಷ್ಠರನ್ನು ಭೇಟಿಯಾದರು. ಆದರೆ ನಾನು ಅಂಥವನಲ್ಲ. ಆದರೂ ನನ್ನ ಸೌಜನ್ಯವನ್ನು ಹೈಕಮಾಂಡ್‌ ಅರ್ಥ ಮಾಡಿಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸಾಲದ್ದಕ್ಕೆ, ರಾಜ  ಕೀಯದಲ್ಲಿ ನನಗೆ ಅನೇಕ ಮಿತ್ರರಿದ್ದಾರೆ. ಅವರ ಜತೆ ಗೂಡಿ ನಾನು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದಾರೆ.

ಅವರ ಈ ಮಾತುಗಳು ಅವರು ಕಾಂಗ್ರೆಸ್‌ ತೊರೆಯ ಬಹುದು ಎಂಬ ಸುಳಿವು ಕೊಟ್ಟಿವೆ. ನಿಜಕ್ಕೂ ಹಾಗಾದರೆ, ಅಮ ರೀಂದರ್‌ ಅವರ ಮುಂದಿನ ನಡೆಯೇನು ಎಂಬುದು ಮುಂದಿ  ರುವ ಕುತೂಹಲ. ಅದರ ಜತೆಗೆ ಅವರು ಮುಂದೆ ಬಿಜೆಪಿಗೆ ಸೇರಲಿದ್ದಾರೆಯೇ ಎಂಬ ಗುಮಾನಿ ಯನ್ನೂ ಹುಟ್ಟುಹಾಕಿದೆ.

ಅವರು ಬಿಜೆಪಿಗೆ ಬಂದರೆ, ಪಂಜಾಬ್‌ನಲ್ಲಿ ಬಿಜೆಪಿ ಮೊದಲ ಬಾರಿಗೆ ಭದ್ರವಾಗಿ ತಳವೂರಲು ಒಬ್ಬ ಸಮ ರ್ಥ ನಾಯಕನನ್ನು ಕಂಡುಕೊಂಡ ಹಾಗಾಗುತ್ತದೆ. ಏಕೆಂದರೆ ಪಂಜಾಬ್‌ನಲ್ಲಿ ಈ ಹಿಂದೆ, ಶಿರೋಮಣಿ ಜತೆಗೆ ಸಮ್ಮಿಶ್ರ ಸರಕಾರ‌ ರೂಪಿಸಿದ್ದ ಬಿಜೆಪಿಗೆ ಈಗ ಆ ಪಕ್ಷ ತನ್ನ ನೇತೃತ್ವದ ಎನ್‌ಡಿಎಯಿಂದ ಹೊರಬಂದಿರುವುದರಿಂದ ಪಂಜಾಬ್‌ನಲ್ಲಿ ಸ್ಪರ್ಧಿ ಸಲು ಒಂದು ಶಕ್ತಿಯ ಆವಶ್ಯಕತೆಯಿದೆ. ಅಮರೀಂದರ್‌ ಒಬ್ಬ ಸ್ವತಂತ್ರ ಯೋಧ ಎಂದು ಖುದ್ದು ಮೋದಿಯವರೇ ಒಮ್ಮೆ ಹೊಗ ಳಿದ್ದರು. ಹಾಗಾಗಿ ಅವರ ಬಗ್ಗೆ ಬಿಜೆಪಿಗೆ ಒಂದು ಸಾಫ್ಟ್ ಕಾರ್ನರ್‌ ಇದೆ. ಹಾಗಾಗಿ ಅವರ ಸೇರ್ಪಡೆ, ಬಿಜೆಪಿಗೆ ಪ್ಲಸ್‌ ಪಾಯಿಂಟ್‌ ಆಗಬಹುದು. ಹಾಗೆಯೇ ರಾಷ್ಟ್ರೀ ಯತೆ ವಿಚಾ ರ ದಲ್ಲಿ ಅಮ ರೀಂದರ್‌ ಮತ್ತು ಬಿಜೆ ಪಿಯ ಸಿದ್ಧಾಂತ ಹೋಲಿ ಕೆಯೂ ಆಗು ತ್ತದೆ. ಸಾಲದಕ್ಕೆ ಪಂಜಾಬ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಲು ಯತ್ನಿಸುತ್ತಿರುವ ಆಮ್‌ ಆದ್ಮಿ ಪಾರ್ಟಿಗೂ ಹಿನ್ನಡೆ ಉಂಟುಮಾಡಲು ಸಾಧ್ಯ ವಾಗು ತ್ತದೆ. ಇವೆಲ್ಲ ಊಹಾ ಪೋಹಗಳಿಗೆ ಸದ್ಯದಲ್ಲೇ ಉತ್ತರ ಸಿಗಲಿದೆ.

 

-ಚೇತನ್‌ ಓ.ಆರ್‌.

Advertisement

Udayavani is now on Telegram. Click here to join our channel and stay updated with the latest news.

Next