Advertisement

Navaratri 2024:ಕರಾವಳಿಯ ನವದಿನದ ಸಂಭ್ರಮ-ಮಂಗಳೂರು ದಸರಾ’ ಒಂದು ವಿಶಿಷ್ಟ ಅನುಭೂತಿ

12:51 PM Oct 05, 2024 | Team Udayavani |

ದಸರಾ ಬಂತೆಂದರೆ ನಮ್ಮ ಇಡೀ ಮಂಗಳೂರು ಮಹಾನಗರವು “ಕೈಲಾಸವೇ ಧರೆಗಿಳಿದು ಬಂದಂತೆ’ ಸುಣ್ಣ-ಬಣ್ಣ, ವಿದ್ಯುತ್ತ್ ದೀಪಾಲಂಕಾರಗಳಿಂದ ಕಂಗೊಳಿಸಿ ಮದುಮಗಳಂತೆ ಶೃಂಗರಿಸಿ ನಾಡಿನ ಸಮಸ್ತ ಜನತೆಗೆ ಸ್ವಾಗತ-ಶುಭಾಶಯಗಳನ್ನು ಕೋರುತ್ತಿರುತ್ತದೆ. ಈ ಸಂದರ್ಭದಲ್ಲಿ ಮಾಡುವ ನಗರ ಪ್ರದಕ್ಷಿಣೆ ಪ್ರತಿಯೊಬ್ಬರ ಕಣ್ಮನಗಳೆರಡನ್ನೂ ತಣಿಸಿ ಮನಸ್ಸಿನಲ್ಲಿ ಪರಮಾನಂದದ ಅನುಭೂತಿಯನ್ನು ಮೂಡಿಸುತ್ತದೆ.

Advertisement

ಶೋಷಿತ ಸಮುದಾಯಗಳು ಸಮಾಜದಲ್ಲಿ ಅಸ್ತಿತ್ವದಲ್ಲಿದ್ದ ಅಸಮಾನತೆ, ಜಾತಿ, ಮತ, ಭೇದಗಳ ತಾರತಮ್ಯಗಳಿಂದ ಬಳಲಿ ಬಸವಳಿದು ಕುಗ್ಗಿ ಹೋಗಿದ್ದ ಕಾಲ ಘಟ್ಟದಲ್ಲಿ “ಒಂದೇ ಜಾತಿ, ಒಂದೇ ಮತ, ಒಂದೇ ದೇವರು’ ಎಂಬ ಮಹಾನ್‌ ಸಂದೇಶವನ್ನು ಜಗತ್ತಿಗೆ ಸಾರಿ, ಸಮಾಜದ ಶೋಷಿತ ವರ್ಗವನ್ನು ಕತ್ತಲೆಯಿಂದ ಬೆಳಕಿನೆಡೆಗೆ ಮುನ್ನಡೆಸಿ, ಇಡೀ ಶೋಷಿತ ಸಮುದಾಯಕ್ಕೆ ಅಧ್ಯಾತ್ಮಿಕತೆ ಮತ್ತು ಸಾತ್ವಿಕತೆಯ ನೆಲೆಯಲ್ಲಿ ಸ್ವಾಭಿಮಾನದ ಬದುಕನ್ನು ಕಲ್ಪಿಸಿ ಕೊಟ್ಟಂತಹ ಮಹಾನ್‌ ಸಂತರು, ಮಹಾನ್‌ ಕ್ರಾಂತಿಕಾರಿ ಸಮಾಜ ಸುಧಾರಕರು “ಬ್ರಹ್ಮಶ್ರೀ ನಾರಾಯಣ ಗುರು’ಗಳು.

ಬ್ರಹ್ಮಶ್ರೀ ನಾರಾಯಣ ಗುರುಗಳಿಂದ ಸ್ಥಾಪಿಸಲ್ಪಟ್ಟು ಪ್ರಸಿದ್ಧಿ ಪಡೆದಿರುವ ಹಲವಾರು ಕ್ಷೇತ್ರಗಳಲ್ಲಿ ಕುದ್ರೋಳಿ ಶ್ರೀ ಗೋಕರ್ಣಾಥೇಶ್ವರ ಕ್ಷೇತ್ರವೂ ಒಂದು. ಕಡಲ ನಗರಿಯಲ್ಲಿ ಹಚ್ಚ ಹಸುರುಗಳಿಂದ ಸದಾ ಕಂಗೊಳಿಸುತ್ತಿದ್ದ ಅಂದಿನ ಕುದ್ರೋಳಿ ಪರಿಸರದಲ್ಲಿ ಇಂತಹ ಪರಮ ಪವಿತ್ರ ಕ್ಷೇತ್ರವೊಂದು ಪ್ರತಿಷ್ಠಾಪಿಸಲ್ಪಟ್ಟಿರುವುದು ಪರಿಸರವಾಸಿಗಳ ಪಾಲಿಗೆ ದೊಡ್ಡ ಸೌಭಾಗ್ಯವೇ ಆಗಿದೆ. ಇಂತಹ ಒಂದು ಪವಿತ್ರ ಸಾನಿಧ್ಯ ಅನಂತರದ ದಿನಗಳಲ್ಲಿ ಜಿಲ್ಲೆಯ ಧೀಮಂತ ನೇತಾರರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಕಾಯಕಲ್ಪ ಪಡೆದು ಕ್ಷೇತ್ರದ ಕೀರ್ತಿ ಜಗದಗಲಕ್ಕೂ ವ್ಯಾಪಿಸಿತು.

ಇಂದು ಕುದ್ರೋಳಿ ಶ್ರೀ ಕ್ಷೇತ್ರ ಒಂದು ಪ್ರಸಿದ್ಧ ಪಾವನವಾದ ತೀರ್ಥ ಕ್ಷೇತ್ರವಾಗಿ, ಪ್ರವಾಸಿ ತಾಣವಾಗಿ ದೇಶ-ವಿದೇಶಗಳಿಂದ ಅಪಾರ ಸಂಖ್ಯೆಯ ಭಕ್ತರನ್ನುಆಕರ್ಷಿಸುತ್ತಿರುವ ಜತೆಯಲ್ಲಿ ಸಮಸ್ತ ಹಿಂದೂ ಸಮಾಜದ ಒಂದು ಪವಿತ್ರ ಶ್ರದ್ದಾ ಕೇಂದ್ರವಾಗಿ ಮತ್ತು ಶಕ್ತಿ ಕೇಂದ್ರವಾಗಿ ಈ ಪರಿಸರದಲ್ಲಿ ಕಂಗೊಳಿಸುತ್ತಿದೆ. ಪ್ರತೀ ವರ್ಷ ಶ್ರೀ ಕ್ಷೇತ್ರದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರಗುವ ಮಹಾ ಶಿವರಾತ್ರಿ ಉತ್ಸವ ಮತ್ತು”ಮಂಗಳೂರು ದಸರಾ’ ವೆಂದು ಪ್ರಸಿದ್ಧವಾಗಿರುವ ದಸರಾ ಮಹೋತ್ಸವವಂತೂ ಜಗದ್ವಿಖ್ಯಾತವಾಗಿದೆ. ಜಾತಿ-ಮತ-ಬೇಧವಿಲ್ಲದೆ ಲಕ್ಷಾಂತರ ಭಕ್ತರು ಸೇರುವ ಇಲ್ಲಿನ ಉತ್ಸವಗಳು ವಿರಾಟ್‌ ಹಿಂದೂ ಸಮಾಜದ ಉತ್ಸವವಾಗಿ ಅತ್ಯಂತ ಸಡಗರ ಸಂಭ್ರಮಗಳಿಂದ ಆಚರಿಸಲ್ಪಡುತ್ತಿದೆ.

Advertisement

ಇಂತಹ ಮಹಾನ್‌ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆದು ಅದ್ಭುತ ಯಶಸ್ಸನ್ನು ಪಡೆಯಲು ಕ್ಷೇತ್ರದ ಭಕ್ತಾಭಿಮಾನಿಗಳ ಸಹಕಾರದ ಜತೆಯಲ್ಲಿ ಆಡಳಿತ ಮಂಡಳಿಯ ಸಾರಥ್ಯದ ಅದ್ಭುತ ಯೋಚನೆ-ಯೋಜನೆಗಳು, ಸಂಘಟನ ಚತುರತೆ, ಪರಿಶ್ರಮದ ದುಡಿಮೆಗಳು ಕಾರಣವಾಗಿವೆ.

ದಸರಾ ಹಬ್ಬದ ಕೊನೆಯ ದಿನ ನಡೆಯುವ ಶಾರದಾ ಮಾತೆಯ ವೈಭವೋಪೇತ ಶೋಭಾ ಯಾತ್ರೆಯ ಸೊಬಗಿನ ಅ ಸುಂದರ ಕ್ಷಣಗಳು ಅವಿಸ್ಮರಣೀಯವಾದುದು. ನಮ್ಮ ರಾಜ್ಯದ ವಿಭಿನ್ನ ಭಾಗದ ಪಾರಂಪರಿಕ ಸಾಂಸ್ಕೃತಿಕ ಕಲೆಗಳ ಶ್ರೀಮಂತಿಕೆಯನ್ನು ಜನ ಸಾಮಾನ್ಯರಿಗೆ ಪರಿಚಯಿಸಿ ಕೊಡುತ್ತದೆ.

ರಸ್ತೆಯ ಇಕ್ಕೆಲಗಳಲ್ಲಿ ಸಾಲಾಗಿ ಸಾಗುವ ಬಣ್ಣ ಬಣ್ಣದ ರಂಗು ರಂಗಿನ ಅಲಂಕಾರಿಕ ಕೊಡೆಗಳು, ಅತ್ಯಂತ ಸುಂದರವಾಗಿ ವಿದ್ಯುತ್‌ ದೀಪಾಲಂಕಾರಗಳಿಂದ ಪ್ರಜ್ವಲಿಸುವ ಟ್ಯಾಬ್ಲೋಗಳು, ಅವುಗಳ ನಡುವೆ ವಿರಾಜಮಾನರಾಗಿ ಶೋಭಿಸುತ್ತಿರುವ ನವದುರ್ಗೆಯರ ಮೂರ್ತಿಗಳು, ದೀಪಾಲಂಕೃತ ಟ್ಯಾಬ್ಲೋಗಳಲ್ಲಿ ಹುಲಿ ವೇಷಗಳ ವಿಭಿನ್ನ ಶೈಲಿಯ ಕುಣಿತಗಳು, ಆ ಕುಣಿತಗಳ ವಿಭಿನ್ನ ಪಟ್ಟುಗಳಿಗೆ ಬೀಳುವ ತ್ರಾಸೆಯ ಪೆಟ್ಟುಗಳು,ಒಂದಕ್ಕಿಂತ ಇನ್ನೊಂದನ್ನು ಮೀರಿಸುತ್ತಾ ಹುಬ್ಬೇರಿಸಿ ನೋಡುವಂತಹ ದೃಶ್ಯ ರೂಪಕಗಳನ್ನೊಳಗೊಂಡ ಅತ್ಯದ್ಭುತ ಟ್ಯಾಬ್ಲೋಗಳು, ಹುಚ್ಚೆದ್ದು ಕುಣಿಯ ಬೇಕೆಂದೆನಿಸುವ ನಾಸಿಕ್‌ ಬ್ಯಾಂಡ್‌ ತಂಡಗಳ ಲಯಬದ್ದ ಬಡಿತಗಳು, ಮೈಸೂರು ಬ್ಯಾಂಡ್‌ ತಂಡದ ಇಂಪಾದ ಗಾನ ಲಹರಿ, ಡೊಳ್ಳು ಕುಣಿತ, ವೀರಗಾಸೆ, ಶಿವ ತಾಂಡವ ನೃತ್ಯ, ಕುಣಿತ ಭಜನೆ, ಮಹಿಳೆಯರ ಕುಣಿತ ಭಜನೆಗಳು, ಬಾಲಿಹುಡ್‌ ನಟ-ನಟಿಯರನ್ನು ಮೀರಿಸುವಂತೆ ಝಗಮಿಸುವ ವೇಷ – ಭೂಷಣ ತೊಟ್ಟು ಕಪ್ಪು ಕನ್ನಡಕ್ಕ ಧರಿಸಿ ಬ್ಯಾಂಡ್‌ ಮೇಳಕ್ಕೆ ಸರಿಯಾಗಿ ಕುಣಿಯುವ ವರ್ಣ ರಂಜಿತ “ಅನಾರ್ಕಲಿ’ ವೇಷದ ತಂಡ, ಅಬ್ಬರದ ಡಿಜೆ ಡಾನ್ಸ್‌ಗಳು, ಯಾತ್ರೆಯ ಉದ್ದಗಲಕ್ಕೂ ಪ್ರಸಿದ್ಧ ತಂಡಗಳಿಂದ ಅಲ್ಲಲ್ಲಿ ನಡೆಯುವ ಆರ್ಕೆಸ್ಟ್ರಾ, ಸಂಗೀತ ರಸ ಸಂಜೆ (ರಾತ್ರಿ) ಈ ಎಲ್ಲ ಕಾರ್ಯಕ್ರಮಗಳನ್ನು ನೋಡಲು ಕಣ್ಣುಗಳೆರಡೂ ಸಾಲದು.

ಉದ್ದಗಲಕ್ಕೂ ಕಾಣ ಸಿಗುವ ಸಂತೆ ಅಂಗಡಿಗಳು, ಚುರುಮುರಿ, ಪಾನಿಪುರಿ, ಐಸ್‌ಕ್ರೀಮ್‌ ಸ್ಟಾಲ್‌ಗ‌ಳು, ಜ್ಯೂಸ್‌ ಅಂಗಡಿಗಳು, ಯಾತ್ರೆಯ ಸಡಗರಕ್ಕೆ ಮತ್ತಷ್ಟು ಮೆರುಗನ್ನು ಒದಗಿಸುತ್ತದೆ. ಕಣ್ಣು ತಣಿಸುವ ಶೋಭಾಯಾತ್ರೆಯ ಮಧ್ಯೆ ಮನ ತಣಿಸುವ ಪಬ್ಟಾಸ್‌ ನವರ ಕೂಲ್‌ ಕೂಲ್‌ ಪ್ಯಾರಾಫಿಟ್‌, ಪಿರಮಿಸ್‌ ಐಸ್‌ಕ್ರೀಮ್‌ ಮತ್ತು ಸ್ವಾದಭರಿತ ಬಿಸಿಬಿಸಿ ಕಟ್ಲೆಟ್‌ಗಳ ಮೆಲ್ಲುವಿಕೆ, ಇವುಗಳೆಲ್ಲ ದಸರಾ ಹಬ್ಬದ ಶೋಭಾಯಾತ್ರೆಯಲ್ಲಿ ಉಲ್ಲಸಿತ ಮನಸುಗಳಲ್ಲಿ ಸ್ಫುಟವಾಗಿ ಉಳಿಯುವ ಸಿಹಿ ಸವಿಯಾದ ಸುಂದರ ನೆನಪುಗಳಾಗಿವೆ.

*ಸುರೇಶ್‌ ಬೋಳೂರು, ದುಬೈ

Advertisement

Udayavani is now on Telegram. Click here to join our channel and stay updated with the latest news.

Next