Advertisement

ಪ್ರಾಚೀನ ಮಠ, ಅರ್ವಾಚೀನ ಪರಿಸರ, ನೈಸರ್ಗಿಕ ಬಣ್ಣ

12:12 AM Jun 18, 2020 | Sriram |

ಉಡುಪಿ: ಶ್ರೀಕೃಷ್ಣಮಠಕ್ಕೆ ಸುಮಾರು ಎಂಟು ಶತಮಾನಗಳ ಇತಿಹಾಸವಿದೆ. ಆದರೆ ಬ್ರಿಟಿಷರ ಆಡಳಿತಾವಧಿಯಿಂದಲೇ (1935ರಿಂದ) ಉಡುಪಿ ತಾಲೂಕು ಕೇಂದ್ರಕ್ಕೆ ನಗರಸಭೆ ಮಾನ್ಯತೆ ದೊರಕಿದೆ. 1960ರ ದಶಕದಲ್ಲಿ ನಗರಸಭೆ ಮಾನ್ಯತೆ ಹೋಗಿ ಪುರಸಭೆ ಮಾನ್ಯತೆ ಬಂದರೂ, 1995ರ ವೇಳೆ ಮತ್ತೆ ಅದೇ ನಗರ ಮಟ್ಟ ಬಂತು.

Advertisement

ಎಲ್ಲ ನಗರಗಳೂ ದಿನದಿಂದ ದಿನಕ್ಕೆ ತನ್ನ ನಗರತನವನ್ನು ಬೆಳೆಸಿಕೊಳ್ಳುತ್ತಲೇ ಇವೆ. ಇದರ ಪರಿಣಾಮ ಪರಿಸರ- ಪ್ರಕೃತಿಗೆ ಪೂರಕ, ನೈಸರ್ಗಿಕ ಇತ್ಯಾದಿ ಶಬ್ದಗಳು ನಿಘಂಟಿಗೆ ಸೇರುವ ಹಂತದಲ್ಲಿರುವಾಗ ಒಂದರ್ಥದಲ್ಲಿ ಎಲ್ಲರ ಬದುಕಿನಲ್ಲಿ ಇದರ ಸಹಾಯಕ್ಕೆ ಬಂದದ್ದು ಕೋವಿಡ್-19 ವೈರಸ್‌.

ಕೋವಿಡ್-19 ಕಾರಣದಿಂದ ಲಾಕ್‌ಡೌನ್‌ ಆಗಿರುವಾಗ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಅವಧಿಯಲ್ಲಿ ಬಾಕಿ ಉಳಿದ ಸುಣ್ಣಬಣ್ಣಕ್ಕೆ ಕಾಲಕೂಡಿ ಬಂದಿದೆ. ಜನವರಿಯಲ್ಲಿ ಬಣ್ಣ ಕೊಟ್ಟದ್ದು ಶ್ರೀಕೃಷ್ಣಮಠದ ಕನಕಗೋಪುರ, ಮಹಾದ್ವಾರಗೋಪುರ, ಉತ್ತರ ಭಾಗದ ಗೋಪುರಕ್ಕೆ ಮತ್ತು ಅದಮಾರು ಮಠಕ್ಕೆ ಮಾತ್ರ. ಈಗ ಶ್ರೀಕೃಷ್ಣಮಠದ ಭೋಜನಶಾಲೆ, ಬಡಗುಮಾಳಿಗೆ, ರಾಜಾಂಗಣ ಸಭಾಭವನದ ವೇದಿಕೆಗಳಿಗೆ ನೈಸರ್ಗಿಕ ಬಣ್ಣ ಕೊಡುವ ಕೆಲಸ ನಡೆಯುತ್ತಿದೆ.

ಇಲ್ಲಿ ಕೇವಲ ಮಣ್ಣು, ಸೆಗಣಿ, ಗೋಪಿಚಂದನ, ಗೋಂದು, ಅಂಟನ್ನು ಬಳಸಲಾಗುತ್ತಿದೆ. 3:2ರ ಪ್ರಮಾಣದಲ್ಲಿ ಮಣ್ಣು ಮತ್ತು ಸೆಗಣಿ ಬಳಸಲಾಗುತ್ತದೆ. ಗೋಪಿಚಂದನ, ಅಂಟು, ಗೋಂದಿನ ಪ್ರಮಾಣ ಬಹಳ ಕಡಿಮೆ. ಆಧುನಿಕ ಪೇಂಟಿನಲ್ಲಿ ಜಿಂಕ್‌ ಪ್ರಧಾನ ವಾಗಿರಲಿದ್ದು ಇಲ್ಲಿ ಮಣ್ಣು ಅದರ ಪಾತ್ರ ವಹಿಸುತ್ತದೆ. ಉತ್ತಮ ಗುಣಮಟ್ಟದ ಎರಡು ಟೆಂಪೋ ಕೆಮ್ಮಣ್ಣನ್ನು (ಕೆಂಪು ಮಣ್ಣು) ಅದಮಾರು ಮೂಲ ಮಠದ ಸುತ್ತಮುತ್ತದಿಂದ ತರಿಸಲಾಗಿದೆ. ಮಠದಲ್ಲಿಯೇ ಇರುವ ದೇಸೀ ತಳಿಯ ದನಗಳ ಒಂದು ಟೆಂಪೋ ಸೆಗಣಿ (ಗೋಮಯ) ಸಂಗ್ರಹಿಸಿ ಬಣ್ಣ ತಯಾರಿಸಲಾಗಿದೆ. ಮಣ್ಣಿನಲ್ಲಿರುವ ಸಣ್ಣ ಕಲ್ಲು, ಕಸಗಳನ್ನು ತೆಗೆದು ಶುದ್ಧೀಕರಿಸಿ ಗೋಮಯ, ಗೋಂದು, ಅಂಟು, ಗೋಪಿಯನ್ನು 200 ಲೀ. ಬ್ಯಾರೆಲ್‌ನಲ್ಲಿ ಮಿಶ್ರಣ ಮಾಡಿ ಅದರಿಂದ ತಯಾರಾದ ಬಣ್ಣವನ್ನು ಸ್ಥಳೀಯ ಕಾರ್ಮಿಕರು ಕೊಡುತ್ತಿದ್ದಾರೆ. ವಲಸೆ ಕಾರ್ಮಿಕರು ಊರಿಗೆ ಹೋದರೆಂಬ ಮಾತು ಕೇಳಿಬರುತ್ತಿರುವಾಗಲೇ ಸ್ಥಳೀಯ ಕಾರ್ಮಿಕರ ಕೊರತೆಯಾಗದಿರುವುದು ಕಂಡುಬರುತ್ತಿದೆ.

ಖರ್ಚೂ ಕಡಿಮೆ, ಆರೋಗ್ಯಕ್ಕೂ ಲಾಭ
ನೈಸರ್ಗಿಕ ಬಣ್ಣವೆಂದಾಕ್ಷಣ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಣ್ಣಗಳನ್ನು ಕೊಡಲೇ ಇಲ್ಲ ಎಂದರ್ಥವಲ್ಲ. ಎಲ್ಲಿ ಮಳೆ ನೀರು ಹೆಚ್ಚಾಗಿ ಬೀಳುತ್ತದೋ ಅಲ್ಲಿ ಮಣ್ಣು ತೋಯ್ದು ಹೋಗುವ ಕಾರಣ ಅಂತಹ ಕಡೆ ಮಾರುಕಟ್ಟೆ ಬಣ್ಣವನ್ನು ಕೊಡಲಾಗಿದೆ. ಎಲ್ಲಿ ಮಳೆ ನೀರು ಬೀಳುವುದಿಲ್ಲವೋ, ಎತ್ತರ ಪ್ರದೇಶವೋ ಅಲ್ಲಿ ನೈಸರ್ಗಿಕ ಬಣ್ಣ ಕೊಡಲಾಗುತ್ತಿದೆ. ಬಣ್ಣ ಕೊಡುವುದೆಂದರೆ ಇರುವ ಬಣ್ಣದ ಪದರದ ಮೇಲೆ ಇನ್ನೊಂದು ಪದರ ಕೊಡುವುದೆಂಬ ತಿಳಿವಳಿಕೆ ಇದೆ. ಇದು ಹಾಗಲ್ಲ. ಹಳೆಯ ಪದರಗಳನ್ನು ತೆಗೆದು ಹೊಸ ಪದರವನ್ನು ನೀಡಲಾಗುತ್ತಿದೆ. ಇದು ಆರೋಗ್ಯಕ್ಕೂ ಲಾಭ, ಖರ್ಚೂ ಕಡಿಮೆ, ಏನೇ ಖರ್ಚಿದ್ದರೂ ಅದು ಕೆಲಸದವರಿಗೆ ಮಾತ್ರ. ಕಲಾವಿದ ಪುರುಷೋತ್ತಮ ಅಡ್ವೆಯವರು ನವೀಕರಣ ಕೆಲಸಗಳಿಗೆ ಮಾರ್ಗದರ್ಶನ ಕೊಡುತ್ತಿದ್ದಾರೆ.

Advertisement

ಕಣ್ಮರೆಯ ಕಲೆ ಮೇಲೆ ಕಣ್ಣು
ಮಣ್ಣು, ಸೆಗಣಿ ಮಿಶ್ರಿತ ಬಣ್ಣವು ಹಳೆಯ ಶೈಲಿ, ಹಳೆಯ ಸಂಸ್ಕೃತಿ. ಹಿಂದೆ ಮನೆಗಳಲ್ಲಿ ಇಂತಹ ಗೋಡೆಗಳಿದ್ದವು, ಗೋಮಯದಿಂದ ಮಾಡಿದ ನೆಲಗಳು ಕಾಣುತ್ತಿದ್ದವು. ಮುಖ್ಯವಾದ ಸಂತೃಪ್ತಿ ಎಂದರೆ ಈಗಲೂ 28 ಕಾರ್ಮಿಕರು ನಿರಂತರವಾಗಿ ಕೆಲಸ ಮಾಡುತ್ತಿರುವುದು. ಕೊನೆಗೆ ಶ್ರೀಕೃಷ್ಣಮಠದ ಚಂದ್ರಶಾಲೆ, ಸೂರ್ಯಶಾಲೆಯ ಕೆಲಸ ಮಾಡುತ್ತೇವೆ.
-ಶ್ರೀಈಶಪ್ರಿಯತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಅದಮಾರು ಮಠ,
ಶ್ರೀಕೃಷ್ಣಮಠ, ಉಡುಪಿ

ಇದು ಸುಮಾರು ನಾಲ್ಕು ತಿಂಗಳ ಕೆಲಸ. 28 ಕೆಲಸದವರು ಇದ್ದಾರೆ. ಮಜೂರಿ ಸುಮಾರು 20 ಲ.ರೂ. ತಗಲುತ್ತದೆ.
-ಗೋವಿಂದರಾಜ್‌, ವ್ಯವಸ್ಥಾಪಕರು, ಶ್ರೀಕೃಷ್ಣಮಠ, ಉಡುಪಿ

ನಾನು ಇದೇ ಮೊದಲ ಬಾರಿಗೆ ಈ ನೈಸರ್ಗಿಕ ಬಣ್ಣವನ್ನು ಕೊಟ್ಟಿದ್ದೇನೆ. ಮಿತವ್ಯಯದಲ್ಲಿ ಬಣ್ಣ ಕೊಡಬೇಕೆನ್ನುವವರಿಗೆ ಇದೊಂದು ಉತ್ತಮ ಅವಕಾಶ.
-ರಮೇಶ್‌, ಬೈಲಕೆರೆ

ಮಾರುಕಟ್ಟೆಯಲ್ಲಿ ಸಿಗುವ ಪೇಂಟಿಂಗ್‌ ಕೈ, ಮೈಗೆ ತಾಗಿದರೆ ಅದನ್ನು ತೆಗೆಯುವುದು ಕಷ್ಟ. ಇದನ್ನು ಕೈಯಲ್ಲಿಯೇ ತಯಾರಿಸುತ್ತೇವೆ. ನಾವೆಲ್ಲರೂ ತುಂಬು ಉತ್ಸಾಹದಿಂದ ಕೆಲಸ ನಿರ್ವಹಿಸುತ್ತಿದ್ದೇವೆ.
-ವಿನ್ಸಿ, ಮಣಿಪಾಲ


Advertisement

Udayavani is now on Telegram. Click here to join our channel and stay updated with the latest news.

Next