Advertisement

ಕೃಷಿತೋನಾಸ್ತಿ ದುರ್ಭಿಕ್ಷಂ ಮಾತು ಸತ್ಯವಾಗಲಿ

12:13 AM Dec 23, 2021 | Team Udayavani |

ಕೃಷಿ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಆಗದಿರುವುದೇ ರೈತರ ಈ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಹವಾಮಾನ ಮತ್ತು ಮಣ್ಣಿನ ಗುಣದಿಂದಾಗಿ ಇಳುವರಿಯಲ್ಲಿ ಊರಿನಿಂದ ಊರಿಗೆ ವ್ಯತ್ಯಾಸವಿರುತ್ತದೆ. ಪರಿಸರವನ್ನು ಹೊಂದಿಕೊಂಡು ಬೆಲೆಯನ್ನು ನಿರ್ಧರಿಸಬಹುದು. ಯಾವುದೇ ಕಾರಣಕ್ಕೂ ಉತ್ಪಾದನ ಖರ್ಚಿಗಿಂತ ಕಡಿಮೆ ಬೆಲೆಗೆ ಉತ್ಪನ್ನಗಳ ವ್ಯವಹಾರ ನಡೆಯುವಂತಿದ್ದರೆ ಅಂತಹ ಸಂದರ್ಭದಲ್ಲಿ ಸರಕಾರಗಳು ಮಧ್ಯಪ್ರವೇಶಿಸಿ ರೈತರನ್ನು ಕಾಪಾಡಬಹುದು.

Advertisement

ಇಂದು ಅಂದರೆ ಡಿ. 23ರಂದು ರಾಷ್ಟ್ರೀಯ ರೈತರ ದಿನ. ಈ ದಿನದಂದು ಎಲ್ಲರೂ ರೈತರ ಬಗ್ಗೆ ಒಂದಿಷ್ಟು ಅನುಕಂಪ, ಸಹಾನುಭೂತಿಯ ಮಾತುಗಳನ್ನಾಡು ವವರೇ. ಅಷ್ಟು ಮಾತ್ರವಲ್ಲದೆ ಸರಕಾರ ಕೂಡ ರೈತರಿಗಾಗಿ ಕೆಲವೊಂದು ಹೊಸ ಯೋಜನೆಗಳನ್ನು ಘೋಷಿಸಲು ಮರೆಯುವುದಿಲ್ಲ. ರೈತರೇ ದೇಶದ ಬೆನ್ನೆಲುಬು,ಅನ್ನದಾತ, 130 ಕೋಟಿ ಜನರ ಹೊಟ್ಟೆ ತುಂಬಿ ಸುವ ಜವಾಬ್ದಾರಿ ರೈತನಿಗೆ ಇದೆ. ಕೃಷಿತೋನಾಸ್ತಿ ದುರ್ಭಿಕ್ಷಂ ಮುಂತಾದ ಹೇಳಿಕೆಗಳು ಪುಂಖಾನು ಪುಂಖವಾಗಿ ಕೇಳಿಬರುತ್ತವೆ. ರೈತರ ದಿನದ ಹಿನ್ನೆಲೆಯಲ್ಲಿ ಸಭೆಗಳು, ಭಾಷಣಗಳು, ಕೆಲವು ಸಮ್ಮಾನಗಳು ನಡೆದು ರೈತರ ದಿನ ಮುಕ್ತಾಯವಾಗುತ್ತದೆ. ಮತ್ತೆ ರೈತರ ನೆನಪಾಗುವುದು ಮುಂದಿನ ವರ್ಷ ಮತ್ತೂಂದು ರೈತರ ದಿನ ಬಂದಾಗಲೇ.

40 ವರ್ಷಗಳ ಹಿಂದಿನಿಂದಲೇ ಕೃಷಿ ಅಭಿವೃದ್ಧಿಗಾಗಿ, ಕೃಷಿಕನ ಆದಾಯ ವೃದ್ಧಿಗಾಗಿ, ಅಧಿಕ ಇಳುವರಿಗಾಗಿ ರಾಸಾಯನಿಕ ಗೊಬ್ಬರಗಳನ್ನು, ಕೀಟನಾಶಕಗಳನ್ನು ರೈತರಿಗೆ ಪರಿಚಯಿಸಲಾಯಿತು. ಆರಂಭದಲ್ಲಿ ಇವು ಗಳನ್ನು ರೈತ ಒಪ್ಪಿಕೊಳ್ಳದಿದ್ದರೂ ಹಂತಹಂತವಾಗಿ ರಾಸಾಯನಿಕಗಳನ್ನು ನೆಚ್ಚಿಕೊಂಡು ಒಂದಷ್ಟು ಇಳುವರಿ ಯನ್ನು ಜಾಸ್ತಿ ಮಾಡಿಕೊಂಡ. ಇದಕ್ಕೆ ಪೂರಕವಾಗಿ ನೀರಾವರಿ ಅನುಕೂಲಗಳು ಸಾಕಷ್ಟು ದೊರೆಯಿತು. ಆದಾಯವೇನೋ ಹೆಚ್ಚಿದಂತೆ ಖರ್ಚು-ವೆಚ್ಚಗಳು ಜಾಸ್ತಿಯಾಗತೊಡಗಿದವು. ರಾಸಾಯನಿಕಗಳ ದುಷ್ಪರಿ ಣಾಮಗಳ ಬಗ್ಗೆ ಇಲ್ಲಿ ಉಲ್ಲೇಖೀಸದೆ ಇರುವುದೇ ಲೇಸು. ಅದೇ ವೇಳೆ ಪೇಟೆಗಳಲ್ಲಿ ಧಾರಾಳವಾಗಿ ಉದ್ಯೋಗಗಳು ಸೃಷ್ಟಿಯಾದವು. ಪೇಟೆಗಳು ಬೆಳೆ ದಂತೆ ಹಳ್ಳಿಯ ಕಾರ್ಮಿಕರು ಪೇಟೆಯ ಕಡೆಗೆ ವಲಸೆ ಹೋದರು. ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ ರೈತ ಮಾತ್ರ ಹಳ್ಳಿಯಲ್ಲಿ ಉಳಿದ. ಯಾಂತ್ರೀಕರಣಗೊಂಡು ಕೆಲಸ ಕಾರ್ಯಗಳು ಸುಲಭ ಎಂದು ಒಮ್ಮೆ ಅನಿಸಿದರೂ ಯಾಂತ್ರೀಕರಣದ ಖರ್ಚುವೆಚ್ಚಗಳು ಮಾತ್ರ ತುಂಬಾ ದುಬಾರಿ. ವಿದ್ಯುತ್‌ ಸಮಸ್ಯೆಯಂತೂ ಊಹನಾತೀತ. ಬೆಳೆ ಸಾಲ, ಕಡಿಮೆ ಬಡ್ಡಿಯ ಸಾಲ, ದೀರ್ಘಾವಧಿ ಸಾಲ ಮುಂತಾದವುಗಳ ಪರಿಣಾಮವಾಗಿ ಇಂದು ರೈತ ಮೇಲುನೋಟಕ್ಕೆ ಸುಭಿಕ್ಷನಂತೆ ಕಂಡರೂ ರೈತ ಅಂದಿಗಿಂತಲೂ ಇಂದು ಹೆಚ್ಚು ಸಾಲಗಾರನಾಗಿ¨ªಾನೆ. ಪೇಟೆಗಳಲ್ಲಿ ಎಲ್ಲ ವಸ್ತು ಗಳ ಬೆಲೆ ಏರಿಕೆಯಾಗಿದ್ದರೂ ರೈತನ ಬೆಳೆಗಳಿಗೆ ಯಾವಾ ಗಲೂ ಬೆಲೆ ಕಡಿಮೆಯೇ. ಸಹಜವಾಗಿ ಇದು ರೈತನ ಆದಾಯಕ್ಕೆ ಭಾರೀ ಹೊಡೆತವನ್ನು ನೀಡುತ್ತ ಬಂದಿದೆ.

40 ವರ್ಷಗಳ ಹಿಂದೆ ದಿನಗೂಲಿ ಗಂಡಾಳು ಮಜೂರಿ ಆರು ರೂ. ಗಳಾಗಿದ್ದರೆ ಇಂದು 500-600 ರೂ. ( 80ರಿಂದ 100 ಪಟ್ಟು ಜಾಸ್ತಿ). ಇನ್ನು ಹೆಣ್ಣಾಳಿನ ಮಜೂರಿ ಈ ಹಿಂದೆ 2 ರೂ.ಗಳಾಗಿದ್ದರೆ ಇಂದು 350-400 ರೂ. ( 170 ರಿಂದ 200 ಪಟ್ಟು ಜಾಸ್ತಿ). ಅದೇ 4 ದಶಕಗಳ ಹಿಂದೆ ಅಡಿಕೆ ಧಾರಣೆ ಕೆ.ಜಿ.ಗೆ 18 ರೂ. ಇದ್ದುದು ಇಂದು 500 ರೂ. (ಸುಮಾರು 80 ಪಟ್ಟು) ತೆಂಗಿನಕಾಯಿ ಬೆಲೆ 4-5ರೂ. ಇದ್ದುದು ಒಂದು ರೂ. ಮಟ್ಟಕ್ಕೆ ಕುಸಿದು ಇಂದು 13-14 ರೂ. ಸಿಗುತ್ತಿದೆ ( 3 ಪಟ್ಟು ಏರಿಕೆ).

ಹಿಂದೆ ಅಕ್ಕಿಯ ಕ್ರಯ 3 ರೂ. ಆಗಿದ್ದರೆ ಇಂದು ಅಂಗಡಿಯಲ್ಲಿ 50 ರೂ. ಆಸುಪಾಸು ಇದೆ. ರೈತನಿಗೆ ದೊರೆಯುವುದು ಅಬ್ಬಬ್ಟಾ ಅಂದರೆ 40 ರೂ. (ಕೇವಲ 13 ಪಟ್ಟು ಜಾಸ್ತಿ). ತರಕಾರಿಗಳ ಬೆಲೆಯೂ ಇದಕ್ಕೆ ಹೊರತಲ್ಲ. 1-2 ರೂ. ಗೆ ದೊರೆಯುತ್ತಿದ್ದುದು ಇಂದು 30-40 ರೂ. ಒಳಗೆ ದೊರೆಯುತ್ತದೆ. ಹಾಲು 2 ರೂ. ಇದ್ದುದು ಇಂದು 35 ರೂ.ಗಳು (17 ಪಟ್ಟು ಅಧಿಕ). ಇದು ನಮ್ಮ ಕರಾವಳಿ ಜಿಲ್ಲೆಗಳ ಪ್ರಮುಖ ಕೃಷಿ ಆದಾಯಗಳ ಒಂದು ಅಂದಾಜು ಧಾರಣೆ. ರಾಜ್ಯದ ಹೆಚ್ಚಿನೆಡೆಯಲ್ಲೂ ಆಹಾರ ಬೆಳೆಗಳೇ ಕೃಷಿ ಬೆಳೆಗಳೂ ಆದ ಕಾರಣ ಎಲ್ಲ ಕಡೆಯ ಪರಿಸ್ಥಿತಿಯೂ ಹೀಗೆಯೇ ಇದೆ. ಸದ್ಯದ ಮಟ್ಟಿಗೆ ಹೇಳುವುದಾದರೆ ಅಲ್ಪಸ್ವಲ್ಪವಾದರೂ ಜೀವ ಉಳಿಸಿಕೊಂಡಿರುವ ಬೆಳೆ ಎಂದರೆ ಅಡಿಕೆ ಮಾತ್ರ.

Advertisement

ಅನೇಕ ಕ್ಷೇತ್ರಗಳಲ್ಲಿ ಇಂದು ಆರ್ಥಿಕ ಮಟ್ಟ ಸುಭಿಕ್ಷವಾಗಿ ಇರುವ ಕಾರಣ, ರೈತರು ಇನ್ನು ಕೂಡ 40 ವರ್ಷಗಳ ಹಿಂದಿನ ಸ್ಥಿತಿಗಿಂತ ಮೇಲೆ ಏರದ ಕಾರಣ ಕೃಷಿಯಿಂದ ವಿಮುಖರಾಗುವವರ ಸಂಖ್ಯೆ ಹೆಚ್ಚತೊಡಗಿದೆ. ಅಧಿಕಾರಕ್ಕೆ ಬಂದ ಎಲ್ಲ ಸರಕಾರಗಳು ರೈತನನ್ನು ಸಾಲಗಾರನಾಗಿ ಮಾಡಿದ್ದು ವಿನಾ ಸಾಲಮುಕ್ತರಾಗಿಸುವತ್ತ ಯೋಚಿಸಿಯೇ ಇಲ್ಲ ಎಂಬುದು ಖೇದಕರ. “ಸಾಲ ಮಾಡಿಯಾದರೂ ತುಪ್ಪ ತಿನ್ನು’ ಎಂಬುದು ಗಾದೆ ಮಾತು.
ತುಪ್ಪ ತಿನ್ನುವ ಆಸೆಯಿಂದ ಸಾಲ ಮಾಡಿದ ರೈತ, ಸಾಲದ ಶೂಲದಿಂದ ಹೊರ ಬರಲು ಸಾಧ್ಯವಾಗದೆ ರೈತರು ಆತ್ಮಹತ್ಯೆಗೆ ಶರಣಾಗತೊಡಗಿದರು. ಕಳೆದ ಒಂದೆರಡು ದಶಕದ ಅವಧಿಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಅಂಕಿಅಂಶಗಳತ್ತ ಒಮ್ಮೆ ದೃಷ್ಟಿ ಹಾಯಿಸಿದಲ್ಲಿ ರೈತಾಪಿ ವರ್ಗ ಎಷ್ಟೊಂದು ಹತಾಶವಾಗಿದೆ ಎಂಬುದು ತಿಳಿಯುತ್ತದೆ.

ಇತ್ತೀಚಿನ ದಿನಗಳಲ್ಲಿ ಮಣ್ಣಿನೆಡೆಗೆ ಬರುವವರಸಂಖ್ಯೆ ಹೆಚ್ಚುತ್ತಿರುವುದು ಸಂತೋಷದ ಸಂಗತಿಯೇ ಆದರೂ ಇನ್ನಿತರ ಆದಾಯದ ಮೂಲಗಳಿಂದ ಜಾಗ ವನ್ನು ಖರೀದಿಸಿ ಕೃಷಿ ಆರಂಭಿಸಿರುತ್ತಾರೆ. ಅಂಥವರ ಆರ್ಥಿಕ ಸಾಮರ್ಥ್ಯದ ಮುಂದೆ ಸಾಂಪ್ರದಾಯಿಕ ಕೃಷಿಕನಿಗೆ ಖರ್ಚುವೆಚ್ಚಗಳನ್ನು ನಿಭಾಯಿಸಿಕೊಂಡು ಅಸ್ತಿತ್ವವನ್ನು ಉಳಿಸಿಕೊಳ್ಳುವುದೇ ಒಂದು ಸವಾಲು. ಈ ಕಾರಣದಿಂದ ಇಂದು ಸಾಂಪ್ರದಾಯಿಕ ರೈತನಿಗೆ ಕೃಷಿ ಜಾಗವೇನಾದರೂ ಬೇಕಿದ್ದರೆ ಖರೀದಿಸುವುದು ಅಸಾಧ್ಯವಾಗಿದೆ. ಇನ್ನು ಕೃಷಿಯಲ್ಲಿ ಅಲ್ಪಸ್ವಲ್ಪ ಲೆಕ್ಕಾಚಾರ ತಪ್ಪಿದರೂ ಜಾಗ ಮಾರಾಟ ಮಾಡಿ ಪೇಟೆ ಸೇರುವವರ ಸಂಖ್ಯೆಯೂ ದೊಡ್ಡಮಟ್ಟದಲ್ಲಿ ಇದೆ.
ಪರಿಹಾರೋಪಾಯಗಳು

ಆರ್ಥಿಕವಾಗಿ ರೈತ ಒಂದಷ್ಟು ಸದೃಢತೆ
ಸಾಧಿಸಲು ಆಗದಿದ್ದರೆ ಮುಂದೆ ಎಲ್ಲರೂ ಕೃಷಿಯಿಂದ ವಿಮುಖರಾಗಬಹುದು. ಅದರಲ್ಲಿಯೂ ಆಹಾರ ಬೆಳೆಗಳಿಂದ ಈಗಾಗಲೇ ವಿಮುಖರಾಗುವವರ ಸಂಖ್ಯೆ ಜಾಸ್ತಿ ಇದೆ.

ಕೃಷಿ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಆಗ ದಿರುವುದೇ ರೈತರ ಈ ಎಲ್ಲ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಹವಾಮಾನ ಮತ್ತು ಮಣ್ಣಿನ ಗುಣದಿಂದಾಗಿ ಇಳುವರಿಯಲ್ಲಿ ಊರಿನಿಂದ ಊರಿಗೆ ವ್ಯತ್ಯಾಸವಿರುತ್ತದೆ. ಪರಿಸರವನ್ನು ಹೊಂದಿಕೊಂಡು ಬೆಲೆಯನ್ನು ನಿರ್ಧರಿಸಬಹುದು. ಯಾವುದೇ ಕಾರಣಕ್ಕೂ ಉತ್ಪಾದನ ಖರ್ಚಿಗಿಂತ ಕಡಿಮೆ ಬೆಲೆಗೆ ಉತ್ಪನ್ನಗಳ ವ್ಯವಹಾರ ನಡೆಯುವಂತಿದ್ದರೆ ಅಂತಹ ಸಂದರ್ಭದಲ್ಲಿ ಸರಕಾರಗಳು ಮಧ್ಯಪ್ರವೇಶಿಸಿ ರೈತರನ್ನು ಕಾಪಾಡಬಹುದು. ಈ ವ್ಯವಸ್ಥೆ ಎಲ್ಲ ರೈತರಿಗೂ ಸಮಾನವಾಗಿ ಸಿಗುವುದರಿಂದ ಒಂದಷ್ಟು ನ್ಯಾಯ ದೊರೆಯ ಬಹುದು. ಬೇಕಾಬಿಟ್ಟಿ ಯೋಜನೆಗಳ ಬದಲಾಗಿ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿರ್ಧರಿಸಿ ಖರೀದಿಸುವ ವ್ಯವಸ್ಥೆಯನ್ನು ಸರಕಾರಗಳು ಮಾಡಿದರೆ ಕೃಷಿಕರ ಸಮಸ್ಯೆಗಳಿಗೆ ಭಾಗಶಃ ಪರಿಹಾರ ಸಿಗಬಹುದು. ಇನ್ನು ಆಹಾರ ಬೆಳೆ ಬೆಳೆಯುವ ಗ¨ªೆಗಳನ್ನು ತೋಟ ಗಳಾಗಿ, ನಿವೇಶನಗಳಾಗಿ ಪರಿವರ್ತಿಸದಂತೆ ಕಾನೂನಾ ತ್ಮಕ ಕ್ರಮಗಳನ್ನು ತೆಗೆದು ಕೊಳ್ಳದೇ ಇದ್ದಲ್ಲಿ ಮುಂದೆ ಗ¨ªೆಗಳನ್ನು ಫೋಟೋಗಳಲ್ಲಿ ಮಾತ್ರವೇ ಕಾಣಬೇಕಾದ ಪರಿಸ್ಥಿತಿ ಎದುರಾದರೆ ಅದರಲ್ಲಿ ಅಚ್ಚರಿಯೇನಿಲ್ಲ.

ಈ ವರ್ಷದ ರೈತ ದಿನವಾದರೂ ಕೃಷಿಕನ ನೆಮ್ಮದಿಯ ದಿನಗಳಿಗೆ ಆರಂಭದ ಮುಹೂರ್ತವಾಗಲಿ ಎಂಬ ಹಾರೈಕೆ ನಮ್ಮೆಲ್ಲರದು.ಕೃಷಿತೋನಾಸ್ತಿ ದುರ್ಭಿಕ್ಷಂ ಮಾತು ಸತ್ಯವಾಗಲಿ.

-ಎ.ಪಿ.ಸದಾಶಿವ ಮರಿಕೆ

Advertisement

Udayavani is now on Telegram. Click here to join our channel and stay updated with the latest news.

Next