Advertisement

ಕೃಷಿ ವಿವಿ ಜೋಳ ಸಂಶೋಧನಾ ವಿಭಾಗಕ್ಕೆ ರಾಷ್ಟ್ರಮಟ್ಟದ ಪ್ರಶಸಿ

12:06 PM Jun 30, 2020 | Suhan S |

ಧಾರವಾಡ: ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ಜೋಳ ಸಂಶೋಧನಾ ವಿಭಾಗಕ್ಕೆ ದೇಶದ ಅತ್ಯುತ್ತಮ ಸಂಶೋಧನಾ ಕೇಂದ್ರ ಎಂಬ ಪ್ರಶಸ್ತಿ ಗರಿ ಲಭಿಸಿದೆ. 2017-2020ರ ಅವಧಿಗೆ “ದೇಶದ ಅತ್ಯುತ್ತಮ ಸಂಶೋಧನಾ ಕೇಂದ್ರ’ ಎಂದು ಪ್ರಶಸ್ತಿಗೆ ಆಯ್ಕೆಯಾಗಿದ್ದು, 50ನೇ ಅಖೀಲ ಭಾರತ ಸಂಶೋಧನಾ ಕಾರ್ಯಾಗಾರದಲ್ಲಿ ಪ್ರಕಟಿಸಲಾಗಿದೆ.

Advertisement

ದೇಶದ ಒಟ್ಟಾರೆ ಜೋಳದ ಅಭಿವೃದ್ಧಿಯಲ್ಲಿನ ಕೊಡುಗೆ ಗಮನಿಸಿ ಪ್ರಶಸ್ತಿ ನೀಡಲಾಗಿದೆ. 1969ರಲ್ಲಿ ಈ ಕೇಂದ್ರ ಕಾರ್ಯಾರಂಭ ಮಾಡಿದ್ದು, ಸುವರ್ಣ ಸಂಭ್ರಮದ ವರ್ಷಾಚರಣೆ ಸಂದರ್ಭದಲ್ಲಿ ಪ್ರಶಸ್ತಿ ಬಂದಿದ್ದು ವಿಶೇಷವಾಗಿದೆ ಎಂದು ಕುಲಪತಿ ಡಾ|ಮಹಾದೇವ ಚೆಟ್ಟಿ ತಿಳಿಸಿದ್ದಾರೆ.

ಈ ಕೇಂದ್ರವು ಮುಂಗಾರು ಜೋಳದಲ್ಲಿ ಇಲ್ಲಿಯವರೆಗೆ 4 ಹೈ ಬ್ರೀಡ್‌ ಮತ್ತು 7 ಸುಧಾರಿತ ತಳಿಗಳನ್ನೂ, ಹಿಂಗಾರು ಜೋಳದಲ್ಲಿ 2 ಹೈಬ್ರಿಡ್‌ ಮತ್ತು 3 ಸುಧಾರಿತ ತಳಿಗಳನ್ನೂ ಅಭಿವೃದ್ಧಿಪಡಿಸಿ ರೈತರಿಗೆ ಬಿಡುಗಡೆ ಮಾಡಿದೆ. ಜೊತೆಗೆ ಅನೇಕ ಬೆಳೆ ಉತ್ಪಾದನೆ ಹಾಗೂ ಸಸ್ಯ ಸಂರಕ್ಷಣಾ ತಂತ್ರಜ್ಞಾನಗಳನ್ನು ಶಿಫಾರಸು ಮಾಡಲಾಗಿದೆ. ಇದಲ್ಲದೇ ಕೇಂದ್ರವು ಅಭಿವೃದ್ಧಿಪಡಿಸಿದ

ಬೇಗನೆ ಮಾಗುವ ಮುಂಗಾರು ಜೋಳದ ಹೈಬ್ರೀಡ್‌ ತಳಿ ಎಸ್‌ಪಿಎಚ್‌-1883ನ್ನು ರಾಷ್ಟ್ರಮಟ್ಟದಲ್ಲಿ ಬಿಡುಗಡೆ ಮಾಡಲಾಗಿದೆ. ಈ ತಳಿಯನ್ನು ಡಾ| ಎನ್‌.ಈ. ಹನುಮರಟ್ಟಿ ಹಾಗೂ ಡಾ|ಎಸ್‌.ಟಿ.ಕಜ್ಜಿಡೋಣಿ ಅವರು ಡಾ|ವಿ.ಎಸ್‌. ಕುಬಸದ, ಡಾ|ಟಿ.ಟಿ. ಬಂಡಿವಡ್ಡರ, ಡಾ|ಎಸ್‌.ಎನ್‌. ಚಟ್ಟಣ್ಣವರ, ಡಾ|ಎಚ್‌.ಎಂ. ಶೈಲಾ ಅವರ ಸಹಾಯದೊಂದಿಗೆ ಅಭಿವೃದ್ಧಿಪಡಿಸಿದ್ದಾರೆ. ಈ ಹೈಬ್ರಿàಡ್‌ ತಳಿಯ ಬೀಜಗಳನ್ನು ಅಭಿವೃದ್ಧಿಪಡಿಸಿ 2021ನೇ ಮುಂಗಾರಿಗೆ ಪ್ರಾಯೋಗಿಕವಾಗಿ ಬೆಳೆಯಲು ರೈತರಿಗೆ ಒದಗಿಸಲು ಯೋಚಿಸಲಾಗಿದೆ. ಇದೇ ಕೇಂದ್ರದಿಂದ ಬಿಡುಗಡೆ ಮಾಡಿರುವ ಎಸ್‌ಪಿವಿ-2217 ತಳಿಯು ಬೆಳಗಾವಿ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಸಾಕಷ್ಟು ಜನಪ್ರಿಯವಾಗಿದ್ದು, ಹೆಚ್ಚಿನ ಕಾಳು ಮತ್ತು ಮೇವಿನ ಇಳುವರಿ ನೀಡುತ್ತದೆ ಎಂದು ಕೃಷಿ ವಿವಿ ವಿಸ್ತರಣಾ ನಿರ್ದೇಶಕ ರಮೇಶಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next