Advertisement

“ನಟಸಾರ್ವಭೌಮ’ನ ಓಟ ಜೋರು

05:46 AM Feb 12, 2019 | Team Udayavani |

ಕಳೆದ ವಾರ ತೆರೆಕಂಡಿರುವ ಪುನೀತ್‌ರಾಜಕುಮಾರ್‌ ಅವರ “ನಟಸಾರ್ವಭೌಮ’ ಚಿತ್ರ ದಿನದಿಂದ ದಿನಕ್ಕೆ ಅಭಿಮಾನಿಗಳನ್ನು ತನ್ನತ್ತ ಸೆಳೆಯುತ್ತಾ ಸಾಗುತ್ತಿದೆ. ಈ ಮೂಲಕ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಖುಷಿಯಾಗಿದ್ದಾರೆ. ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡುವ ರಾಕ್‌ಲೈನ್‌ ವೆಂಕಟೇಶ್‌, “ಸಿನಿಮಾ ಬಿಡುಗಡೆಗೆ ಮುನ್ನ ನಾವೇನು ಅಂದುಕೊಂಡಿದ್ದೆವೋ ಅದರಂತೆ ಚಿತ್ರಕ್ಕೆ ಪ್ರತಿಕ್ರಿಯೆ ಸಿಗುತ್ತಿದೆ. ದಿನದಿಂದ ದಿನಕ್ಕೆ ಚಿತ್ರ ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ.

Advertisement

ಆರಂಭದಲ್ಲಿ ಅಭಿಮಾನಿಗಳು, ಮಾಸ್‌ ಪ್ರಿಯರು ಸಿನಿಮಾ ನೋಡಿ ಖುಷಿಪಟ್ಟರೆ ಈಗ ಫ್ಯಾಮಿಲಿ ಆಡಿಯನ್ಸ್‌ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಚಿತ್ರದ ಪ್ರತಿ ಅಂಶಗಳನ್ನು ಅವರು ಇಷ್ಟಪಡುತ್ತಿದ್ದಾರೆ. ಒಂದು ಸಿನಿಮಾದ ಗೆಲುವಿನಲ್ಲಿ ಫ್ಯಾಮಿಲಿ ಆಡಿಯನ್ಸ್‌ ಪಾತ್ರ ಪ್ರಮುಖವಾಗಿರುತ್ತದೆ. ಆ ನಿಟ್ಟಿನಲ್ಲಿ “ನಟಸಾರ್ವಭೌಮ’ ಫ್ಯಾಮಿಲಿ ಮಂದಿಯನ್ನು ಖುಷಿಪಡಿಸುವಲ್ಲಿ ಯಶಸ್ವಿಯಾಗಿದ್ದಾನೆ’ ಎನ್ನುವುದು ರಾಕ್‌ಲೈನ್‌ ವೆಂಕಟೇಶ್‌ ಮಾತು.

ರಾಕ್‌ಲೈನ್‌ ವೆಂಕಟೇಶ್‌ ಈ ಹಿಂದೆ ಪುನೀತ್‌ ರಾಜಕುಮಾರ್‌ ಜೊತೆ “ಅಜಯ್‌’ ಸಿನಿಮಾ ಮಾಡಿದ್ದರು. ಆ ನಂತರ ಅವರಿಬ್ಬರು ಸಿನಿಮಾ ಮಾಡುವ ಬಗ್ಗೆ ಸುದ್ದಿ ಹರಿದಾಡುತ್ತಿದ್ದರೂ ಮಾಡಿರಲಿಲ್ಲ. ಈಗ “ನಟಸಾರ್ವಭೌಮ’ ಮೂಲಕ ಒಂದಾಗಿದ್ದಾರೆ. “ನನಗೆ ಈ ಕಥೆ ಕೇಳಿದಾಗಲೇ ತುಂಬಾ ಇಷ್ಟವಾಯಿತು. ಏಕೆಂದರೆ ಕಥೆಯಲ್ಲಿ ಎಲ್ಲಾ ವರ್ಗದವರು ಇಷ್ಟಪಡುವ ಅಂಶಗಳಿವೆ. ಆ್ಯಕ್ಷನ್‌, ಕಾಮಿಡಿ, ಸೆಂಟಿಮೆಂಟ್‌, ಹಾರರ್‌, ಲವ್‌ … ಹೀಗೆ ಎಲ್ಲಾ ಅಂಶಗಳನ್ನು ಹೊಂದಿರುವ ಕಥೆಯಾದ್ದರಿಂದ ನನಗೆ ಈ ಸಿನಿಮಾವನ್ನು ಜನ ಇಷ್ಟಪಡುತ್ತಾರೆಂಬ ವಿಶ್ವಾಸವಿತ್ತು.

ಅದರಂತೆ ಈಗ ಸಿನಿಮಾಕ್ಕೆ ಎಲ್ಲೆಡೆಯಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಈಗಾಗಲೇ ವಿದೇಶಗಳಲ್ಲೂ ಚಿತ್ರ ಬಿಡುಗಡೆಯಾಗಿದ್ದು, ಅಲ್ಲಿನ ಪ್ರೇಕ್ಷಕರು ಕೂಡಾ ಸಿನಿಮಾವನ್ನು ಇಷ್ಟಪಡುತ್ತಿದ್ದಾರೆ’ ಎನ್ನುತ್ತಾರೆ ರಾಕ್‌ಲೈನ್‌ ವೆಂಕಟೇಶ್‌. ಪವನ್‌ ಒಡೆಯರ್‌ ನಿರ್ದೇಶಿಸಿರುವ ಈ ಚಿತ್ರದಲ್ಲಿ ಪುನೀತ್‌ರಾಜಕುಮಾರ್‌, ರಚಿತಾ ರಾಮ್‌, ಅನುಪಮಾ, ಬಿ.ಸರೋಜಾದೇವಿ, ರವಿಶಂಕರ್‌ ಸೇರಿದಂತೆ ಅನೇಕರು ನಟಿಸಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next