Advertisement

ಮೋದಿ ಸಾಧನೆ ಹೇಳಲು ಒಂದಿನ ಸಾಲದು

03:30 PM Apr 22, 2019 | pallavi |

ಹಾನಗಲ್ಲ: ದೇಶದ ರಾಜಕೀಯ ಇತಿಹಾಸದಲ್ಲಿ ಭಾರತವನ್ನು ವಿಶ್ವದೆದುರು ತಲೆ ಎತ್ತಿ ನಿಲ್ಲುವಂತೆ ಮಾಡುವ ಶಕ್ತಿ ನರೇಂದ್ರ ಮೋದಿ ಅವರಲ್ಲಿ ಮಾತ್ರ ಇದೆ ಎಂದು ಶಾಸಕ ಸಿ.ಎಂ.ಉದಾಸಿ ಹೇಳಿದರು.

Advertisement

ರವಿವಾರ ಹಾನಗಲ್ಲ ತಾಲೂಕಿನ ತಿಳವಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಬೃಹತ್‌ ರೋಡ್‌ ಶೋ ನಡೆಸಿ, ನಂತರ ಮತದಾರರನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಕೇವಲ ಮೋದಿ ತೋರಿಸಿ ಮತ ಕೇಳುತ್ತಿಲ್ಲ; ಮೋದಿ ದೇಶಕ್ಕೆ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಮತ ಕೊಡಿ ಎಂದು ಚುನಾವಣೆ ಎದುರಿಸುತ್ತಿದ್ದೇವೆ. ಮೋದಿಯವರ ಸಾಧನೆ ಹೇಳಲು ಒಂದು ದಿನ ಸಾಲದು. ಒಂದಲ್ಲ ಎರಡಲ್ಲ ನೂರಾರು ಯೋಜನೆಗಳನ್ನು ಜಾರಿಗೆ ತಂದು ದೇಶದ ಪ್ರತಿಯೊಂದು ಕುಟುಂಬ ಒಂದಿಲ್ಲೊಂದು ಯೋಜನೆಯಲ್ಲಿ ಫಲಾನುಭವಿಯನ್ನಾಗಿಸಿದೆ ಎಂದರು.

ಮೋದಿ ಸರಕಾರ ಸಣ್ಣ ವ್ಯಾಪಾರಸ್ಥರಿಗೆ ವಿದ್ಯಾವಂತರಿಗೆ ಉತೇಜನ ನೀಡಲು ಮುದ್ರಾ ಯೋಜನೆಯಡಿ 50 ಸಾವಿರದಿಂದ 10 ಲಕ್ಷ ರೂ. ವರೆಗೆ ಸಾಲ ನೀಡಿ ಸ್ವಾವಲಂಬಿ ಜೀವನ ನಡೆಸಲು ನೆರವಾಗಿದೆ. ಈ ಯೋಜನೆಯಡಿ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 70 ಸಾವಿರ ತರುಣರು ಸಾಲ ಪಡೆದು ಸ್ವಯಂ ಉದ್ಯೋಗ ಮಾಡುತ್ತಿದ್ದಾರೆ. ಮಾರಣಾಂತಿಕ ರೋಗ ಬಂದಾಗ ಬಡವರಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ಎಷ್ಟೋ ಕುಟುಂಬಗಳು ಬೀದಿ ಪಾಲಾಗುತ್ತಿದ್ದವು. ಅದನ್ನು ತಪ್ಪಿಸಲು ಆಯುಷ್ಮಾನ ಭಾರತ ಯೋಜನೆಯಡಿ 5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಬಡ ಕುಟುಂಬಗಳ ನೆರವಿಗೆ ಬಂದಿದ್ದಾರೆ.

ಇದರೊಂದಿಗೆ ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ಯುವಕರಿಗೆ ಉದ್ಯೋಗ ಸೃಷ್ಟಿ, ಡಿಜಿಟಲ್ ಇಂಡಿಯಾ, ಜನಧನ್‌ ಖಾತೆ ತೆರೆದು ಮಧ್ಯವರ್ತಿಗಳ ಹಾವಳಿಗೆ ಕಡಿವಾಣ, ಮಹಿಳಾ ಸಬಲೀಕರಣ ಹೆಚ್ಚಿಸಿದ್ದು, ದೇಶದ ಕಟ್ಟಕಡೆ ಹಳ್ಳಿಗಳಿಗೂ ವಿದ್ಯುತ್‌ ಸಂಪರ್ಕ, ನರೆಗಾ ಉದ್ಯೋಗ ಖಾತ್ರಿ ಯೋಜನೆಯನ್ನು ಮತ್ತಷ್ಟು ವಿಸ್ತರಿಸಿದ್ದು, ಕೃಷಿಗೆ ವಿಶೇಷ ಯೋಜನೆ ಜಾರಿ, ದೀನ ದಯಾಳ್‌ ಉಪಾಧ್ಯಾಯ ಗ್ರಾಮ ಜ್ಯೋತಿ, ಸ್ವಚ್ಛ ಭಾರತ ಯೋಜನೆಯಡಿ ಶೌಚಾಲಯಗಳ ನಿರ್ಮಾಣ ಇಂತಹ ನೂರಾರು ಯೋಜನೆಗಳು ಮೋದಿ ಮಾಡಿದ ಸಾಧನೆಯಲ್ಲವೇ? ಅಪಪ್ರಚಾರ ಮಾಡುವವರಿಗೆ ಮತದಾರಪ್ರಭು ಪ್ರಶ್ನಿಸುವ ಅವಶ್ಯಕತೆ ಇದೆ ಎಂದರು.

ಎಚ್.ಕೆ. ಪಾಟೀಲ ನೀರಾವರಿ ಸಚಿವರಿದ್ದಾಗ ಬ್ಯಾತನಾಳ ಶೇಷಗಿರಿ ಮಧ್ಯೆ ಡ್ಯಾಂ ನಿರ್ಮಿಸಿ ತಾಲೂಕಿನ ತಿಳವಳ್ಳಿ ಸೇರಿದಂತೆ 30ಕ್ಕೂ ಅಧಿಕ ಹಳ್ಳಿಗಳನ್ನು ಮುಳಗಡೆ ಮಾಡುವ ಕಾರ್ಯಕ್ಕೆ ಕೈ ಹಾಕಿದ್ದರು. ಆದರೆ, ನಾನು ನನ್ನ ಅಧಿಕಾರಾವಧಿಯಲ್ಲಿ ತಿಳವಳ್ಳಿ ಗ್ರಾಮಕ್ಕೆ 110 ಕೆವಿ ವಿದ್ಯುತ್‌ ಪ್ರಸರಣ ಕೇಂದ್ರ, ಕಾಲೇಜುಗಳನ್ನು ಸ್ಥಾಪಿಸಿ ಯಾವ ಗ್ರಮವೂ ಮುಳುಗಡೆಯಾಗದಂತೆ ತಡೆದಿರುವೆ. ತಾಲೂಕಿನಲ್ಲಿ ನೀರಾವರಿ ಯೋಜನೆಗಳು ಸಾಕಾರಗೊಂಡಿದ್ದು ಬೊಮ್ಮಾಯಿ ಅವರು ನೀರಾವರಿ ಮಂತ್ರಿಯಾಗಿದ್ದಾಗ ಎಂಬುದು ನಿಮಗೆಲ್ಲ ಗೊತ್ತಿದೆ ಎಂದರು.

Advertisement

ಬಿಜೆಪಿ ಸರಕಾರದ ಅವಧಿಯಲ್ಲಿ ಬಾಳಂಬೀಡ ಏತ ನೀರಾವರಿಗೆ 180 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿಲಾಗಿತ್ತು. ಆದರೆ, ಮುಂದೆ ಬಂದ ಕಾಂಗ್ರೆಸ್‌ ಸರಕಾರ ಈ ಯೋಜನೆ ಸಾಕಾರಗೊಳಿಸಲೇ ಇಲ್ಲ. ಈಗ ಈ ಯೋಜನೆಗೆ 400 ಕೋಟಿ ವೆಚ್ಚ ತಗುಲಲಿದೆ. ಇದರೊಂದಿಗೆ ಇನ್ನೂ ನಾಲ್ಕು ಯೋಜನೆಗಳು ಜಾರಿಯಾಗಬೇಕಿದ್ದು, 1000 ಕೋಟಿ ರೂ. ಅನುದಾನ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಇಷ್ಟೆಲ್ಲ ಕೆಲಸ ಕಾರ್ಯಗಳು ಕಣ್ಣ ಮುಂದೆ ಇದ್ದರೂ ಕಾಂಗ್ರೆಸ್ಸಿಗರೂ ಕೇವಲ ಅಪಪ್ರಚಾರ ಮಾಡುತ್ತಿರುವುದು ಅವರ ದೌರ್ಬಲ್ಯವನ್ನು ತೋರಿಸುತ್ತದೆ ಎಂದು ದೂರಿದರು.

ಮಾಜಿ ಸಂಸದ ಕುನ್ನೂರ, ಭೋಜರಾಜ ಕರೂದಿ, ಬಿ.ಎಸ್‌.ಅಕ್ಕಿವಳ್ಳಿ, ಚಂದ್ರಪ್ಪ ಜಾಲಗಾರ, ಕೃಷ್ಣ ಈಳಿಗೇರ, ಶಿವಲಿಂಗಪ್ಪ ತಲ್ಲೂರ, ಗಣೇಶಪ್ಪ ಕೋಡಿಗಳ್ಳಿ, ಶಿವಯೋಗಿ ಒಡೆಯರ, ಗುತ್ತೆಪ್ಪ ಬಾರ್ಕಿ, ಮಾಲತೇಶ ಒಡೆಯರ, ಹನುಂತಪ್ಪ ಶಿರಾಳಕೊಪ್ಪ, ಬಸವರಾಜ ನರೇಂದ್ರ, ಅಪ್ಪು ಶೆಟ್ಟರ, ಮಾರುತಿ ಈಳಿಗೇರ ಸೇರಿದಂತೆ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next