Advertisement

ಬಂಜಾರರಿಗೆ ಬದುಕು ಕೊಟ್ಟ  ಉದ್ಯೋಗ ಖಾತ್ರಿ

09:42 AM May 15, 2021 | Team Udayavani |

ವಾಡಿ: ಹೆಚ್ಚಾಗಿ ಬಂಜಾರಾ ಸಮುದಾಯ ವಾಸವಿರುವ ಗುಡ್ಡಗಾಡು ಪ್ರದೇಶದಲ್ಲಿ ಯಾಗಾಪುರ ಗ್ರಾಪಂ ಆಡಳಿತ ಕಾರ್ಯ ನಿರ್ವಹಿಸುತ್ತಿದೆ. ಸಣ್ಣ-ಸಣ್ಣ ತಾಂಡಾಗಳನ್ನು ನಿರ್ಮಿಸಿಕೊಂಡು ನೆಲೆಸಿರುವ ಲಂಬಾಣಿ ಕುಟುಂಬಗಳು ಎತ್ತರದ ಗುಡ್ಡಗಳನ್ನೇ ಕೊರೆದು ಹಸನು ಮಾಡಿ, ಬೀಜ ಬಿತ್ತಿ ಬೆವರು ಸುರಿಸುತ್ತಾರೆ.

Advertisement

ಕಲ್ಲು-ಮುಳ್ಳುಗಳನ್ನು ಹಸನುಮಾಡಿ ರಸ್ತೆಯಾಗಿಸುತ್ತಾರೆ. ಕೃಷಿಗೆ ಬೇಸಿಗೆ ರಜೆ ಘೋಷಿಸಿ, ಉದ್ಯೋಗ ಖಾತ್ರಿ ಕೆಲಸಕ್ಕೆ ಅಣಿಯಾಗುತ್ತಾರೆ. ಪ್ರತೀತಿಯಂತೆ ಪ್ರಸಕ್ತ ಸಾಲಿನ ಉದ್ಯೋಗ ಖಾತ್ರಿ ಯೋಜನೆಗೂ ಕಾರ್ಮಿಕರು ಶಕ್ತಿ ತುಂಬಿದ್ದು, ಹೂಳೆತ್ತುವ ಮೂಲಕ ಬೆಳಗೇರಾ ಕೆರೆ ಚೇತರಿಕೆ ಕಾಣುವಂತೆ ಮಾಡಿದ್ದಾರೆ.

ಚಿತ್ತಾಪುರ ತಾಲೂಕಿನ ಮತ್ತು ಕಲಬುರಗಿ ಜಿಲ್ಲೆ ಕಟ್ಟಕಡೆಯ ಗ್ರಾಮವೇ ಈ ಯಾಗಾಪುರ ಗ್ರಾಪಂ. ಬೆಳಗೇರಾ, ಯಾಗಾಪುರ ಮತ್ತು ಶಿವನಗರ ಕಂದಾಯ ಗ್ರಾಮಗಳು ಸೇರಿದಂತೆ ಒಟ್ಟು ಹನ್ನೊಂದು ತಾಂಡಾಗಳ ಕೂಲಿ ಕಾರ್ಮಿಕರು ಉದ್ಯೋಗ ಖಾತ್ರಿ ಕೆಲಸ ನೆಚ್ಚಿಕೊಂಡಿದ್ದಾರೆ.

2103 ಮಂದಿಗೆ ಜಾಬ್‌ ಕಾರ್ಡ್‌ ವಿತರಿಸಲಾಗಿದ್ದು,1650 ಮಂದಿ ಕಾರ್ಮಿಕರುನಿತ್ಯ ಕೂಲಿಗೆ ಹಾಜ ರಾಗುತ್ತಿದ್ದಾರೆ. ಕೊರೊನಾ  ಕಠಿಣ ನಿರ್ಬಂಧದ ಫಜೀತಿಗೆಸಿಲುಕಿ ಮುಂಬೈ ಹಾಗೂ ಪುಣೆ ವಲಸಿಗರು ಸಾವಿರಾರು ಸಂಖ್ಯೆಯಲ್ಲಿ ತಾಂಡಾಗಳಿಗೆ ಮರಳಿದ್ದಾರೆ. ಇವರೆಲ್ಲರಿಗೂ ಮಹಾತ್ಮ ಗಾಂಧಿ  ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕೈಹಿಡಿದಿದೆ.

ಬೆಳಗಾಗೆದ್ದು ಗುದ್ದಲಿ ಸಲಿಕೆ ಬುಟ್ಟಿ ಹೊತ್ತು ಅಡವಿಯತ್ತ ಹೊರಡುವ ಕೂಲಿ ಕಾರ್ಮಿಕರ ಸೈನ್ಯ, ಮಧ್ಯಾಹ್ನದ ವರೆಗೂ ಬೆವರು ಸುರಿಸಿ ದಿನದ  ಗಂಜಿ ಗಟ್ಟಿಗೊಳಿಸಿಕೊಳ್ಳುತ್ತದೆ. ಸದ್ಯ ಈ ಕಾರ್ಮಿಕರು ಬೆಳಗೇರಾ ಕೆರೆ ಅಂಗಳದಲ್ಲಿ ಜಮಾಯಿಸಿ ಹೂಳೆತ್ತುತ್ತಿದ್ದಾರೆ. ಹೂಳು ತುಂಬಿ ಹಾಳಾಗಿದ್ದ ಕೆರೆಯೀಗ ಜೀವ ಜಲದಿಂದ ಕಂಗೊಳಿಸುತ್ತಿದೆ. ಜಲಚರಗಳು, ಪ್ರಾಣಿ, ಪಕ್ಷಿಗಳು ನೀರು ಕುಡಿದು ಬಾಯಾರಿಕೆ ನೀಗಿಸಿಕೊಳ್ಳುತ್ತಿವೆ. ಹೂಳು ತುಂಬಿದ ನಾಲಾಗಳೂ ಶುಚಿಯಾಗುತ್ತಿವೆ.

Advertisement

ಹೊಲಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ಸಸಿ ನೆಡುವ ಕಾರ್ಯ ಭರದಿಂದ ಸಾಗಿದೆ. ಉದ್ಯೋಗ ಖಾತ್ರಿಗಾಗಿ ಕೋಟ್ಯಂತರ ರೂ. ಅನುದಾನ ಗ್ರಾಪಂಗೆ ಹರಿದು ಬಂದಿದ್ದು, ಸಾವಿರಾರು ಮಂದಿಕಾರ್ಮಿಕರು ಪ್ರತಿದಿನ ತವರೂರಲ್ಲೇ ಕೂಲಿ ಕೆಲಸ ಪಡೆದು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಉದ್ಯೋಗ ಖಾತ್ರಿ ಮುಖ್ಯ ಉದ್ದೇಶವೇಮಣ್ಣು ಮತ್ತು ಜಲಸಂರಕ್ಷಣೆ. ಹೀಗಾಗಿ ಬದು ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲು ಯೋಚಿಸಿದ್ದೇವೆ. ದಂಡೋತಿಯಲ್ಲಿ ಹೊಸ ಕೆರೆ ನಿರ್ಮಾಣಕ್ಕೆ ಮತ್ತುಮೊಗಲಾ ಗ್ರಾಮದಲ್ಲಿ ನೀರಿನ ತೊಟ್ಟಿ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದೇನೆ. ಕೆಲಸದ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದಎಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಮಾಸ್ಕ್, ಸ್ಯಾನಿಟೈಸರ್‌ ವಿತರಿಸಿದ್ದೇವೆ. ಕಠಿಣ ನಿರ್ಬಂಧ ವಿಧಿಸಿದ ದಿನಗಳಲ್ಲಿ ಗ್ರಾಮೀಣ ಜನರ ಬದುಕಿಗೆಖಾತ್ರಿ ಉದ್ಯೋಗ ಆಸರೆಯಾಗಿದೆ. ಸರ್ಕಾರದ ಆದೇಶದಿಂದ ಒಂದು ವಾರ ಸ್ಥಗಿತವಾಗಿದ್ದ ಕೆಲಸ ಸೋಮವಾರದಿಂದ ಮತ್ತೆ ಶುರುವಾಗಲಿದೆ.- ನೀಲಗಂಗಾ ಬಬಲಾದ, ತಾಪಂ ಇಒ, ಚಿತ್ತಾಪುರ,

ಗ್ರಾಮ ಪಂಚಾಯಿತಿ ಸದಸ್ಯರ ಸಹಕಾರದಿಂದಾಗಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಗೆ ತರಲು ಸಾಧ್ಯವಾಗಿದೆ. ಯಾರಿಗೂ ಕೆಲಸ ಇಲ್ಲ ಎನ್ನುತ್ತಿಲ್ಲ. ಕೇಳಿದಷ್ಟು ಮಂದಿಗೆ ಕೆಲಸ ಕೊಡುತ್ತಿದ್ದೇವೆ. ಇದರಿಂದ ಕೆರೆ ಹೂಳೆತ್ತುವ ಕಾರ್ಯ ಯಶಸ್ವಿಯಾಗಿ ಸಾಗಿದೆ. ನೀರಿಲ್ಲದ

ಕೆರೆಯಲ್ಲೀಗ ನೀರು ಕಾಣುತ್ತಿದೆ. ಕೆರೆ ಸುತ್ತಲ ಪರಿಸರ ಹಸಿರಿನಿಂದ ಕಂಗೊಳಿಸುತ್ತಿದೆ. ಬಹುತೇಕ ಬಡ ಕುಟುಂಬಗಳೇ ವಾಸವಿರುವ ತಾಂಡಾಗಳಲ್ಲಿ ಉದ್ಯೋಗ ಖಾತ್ರಿ ಕೆಲಸ ಕೈಗೆತ್ತಿಕೊಂಡಿದ್ದರಿಂದ ಆರ್ಥಿಕ ಚೇತರಿಕೆ ಕಂಡಿದೆ.ಮಲ್ಲಿಕಾರ್ಜುನ ಭೀಮನಳ್ಳಿ, ಪ್ರಭಾರಿ ಪಿಡಿಒ, ಯಾಗಾಪುರ

ಗ್ರಾಮೀಣ ಜನರಿಗೆ ಉದ್ಯೋಗ ಖಾತ್ರಿ ಯೋಜನೆ ಉಸಿರು ನೀಡಿದೆ. ಕೋವಿಡ್ ಸಂಕಷ್ಟದ ದಿನಗಳಲ್ಲಿ ಕೂಲಿ ಒದಗಿಸಲು ಯೋಜನೆ ಸಹಕಾರಿಯಾಗಿದೆ. ಪಂಚಾಯಿತಿ ವ್ಯಾಪ್ತಿಯ ಮೂರು ಕಂದಾಯ ಗ್ರಾಮ, ಹನ್ನೊಂದು ತಾಂಡಾಗಳಿವೆ. 2103 ಜನರಿಗೆ ಜಾಬ್‌ ಕಾರ್ಡ್‌ ಕೊಟ್ಟಿದ್ದೇವೆ. ಇದರಲ್ಲಿ ಪ್ರತಿದಿನ 1500ರಿಂದ1600 ಕಾರ್ಮಿಕರು ಕೆಲಸಕ್ಕೆ ಬರುತ್ತಿದ್ದಾರೆ.ಗಂಡು-ಹೆಣ್ಣು ಬೇಧವಿಲ್ಲದೆ ಪ್ರತಿಯೊಬ್ಬರಿಗೂ 289ರೂ. ಕೂಲಿ ನೀಡಲಾಗುತ್ತಿದೆ. ಮಹಾ ರಾಷ್ಟ್ರದಿಂದ ಮರಳಿ ಊರಿಗೆ ಬಂದಿರುವ ವಲಸೆ ಕಾರ್ಮಿಕರಿಗೂ ಕೆಲಸ ಕೊಡುತ್ತಿದ್ದೇವೆ.ಮದನ್‌ ಹೇಮ್ಲಾ ರಾಠೊಡ,ಅಧ್ಯಕ್ಷ, ಯಾಗಾಪುರ ಗ್ರಾಪಂ

 

ಮಡಿವಾಳಪ್ಪ ಹೇರೂರ

Advertisement

Udayavani is now on Telegram. Click here to join our channel and stay updated with the latest news.

Next