Advertisement

ಪ್ರವಾಹದ ಭೀತಿಯಲ್ಲಿ ನಂಜನಗೂಡು

11:20 AM Aug 17, 2018 | Team Udayavani |

ನಂಜನಗೂಡು: ಕೇರಳದಲ್ಲಿ ವರುಣನ ಭೋರ್ಗರೆರಕ್ಕೆ ಕಾವೇರಿ ಕಣಿವೆಯಲ್ಲೂ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ದಕ್ಷಿಣ ಕಾಶಿ ನಂಜನಗೂಡಿ ಮತ್ತೆ ಪ್ರವಾಹ ಭೀತಿ ಆವರಿಸಿಕೊಂಡಿದೆ. ಗುರುವಾರ ಮಧ್ಯಾಹ್ನ ಕಬಿನಿ ಜಲಾಶಯದಿಂದ 70 ಸಾವಿರಕ್ಕೂ ಹೆಚ್ಚು ನೀರು ಹೊರ ಬಿಡಲಾಗುತ್ತಿದೆ.

Advertisement

ಆರು ದಿನಗಳ ಹಿಂದೆಯಷ್ಟೇ ಪ್ರವಾಹ ಮುಳುಗಡೆಯಿಂದ ಚೇತರಿಸಿಕೊಳ್ಳುತ್ತಿದ್ದ ನಂಜನಗೂಡಿನ ನದಿದಡದಲ್ಲಿರುವ ಶ್ರೀಕಂಠೇಶ್ವರ ದೇವಾಲಯ ಆವರಣ, ಕಪಿಲಾ ಸ್ನಾನಘಟ್ಟ, ತೋಪಿನ ಬೀದಿ, ಸರಸ್ವತಿ ಕಾಲೋನಿ, ರಾಜಾಜಿ ಕಾಲೋನಿ, ಹಳ್ಳದಕೇರಿ ಗ್ರಾಮಾಂತರದ ಹೆಜ್ಜಿಗೆ ತೊರೆಮಾವು, ಬೊಕ್ಕಳ್ಳಿ ಕುಳ್ಳಂಕನ ಹುಂಡಿ, ಕತ್ಯಾಡಿಪುರ, ಸುತ್ತೂರು ಸೇರಿದಂತೆ ನದಿ ತೀರದ ಗ್ರಾಮಗಳು ಮತ್ತೆ ಪ್ರವಾಹಕ್ಕೆ ಒಳಗಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ. 

ಶ್ರೀಕಂಠೇಶ್ವರ ದೇವಳದ ದಾಸೋಹ ಭವನದಲ್ಲಿದ್ದ ಪ್ರವಾಹ ಸಂತ್ರಸ್ತರು ಇನ್ನೇನು ಮನೆಗೆ ಹಿಂತಿರುಗಬೇಕೆನ್ನುವ ಸಮಯದಲ್ಲಿ ಮತ್ತೆ ಕಪಿಲಾ ನದಿಗೆ 70 ಸಾವಿರಕ್ಕೂ ಹೆಚ್ಚು ಕ್ಯೂಸೆಕ್‌ ನೀರು ಬಿಡಲಾಗಿದೆ. ಪ್ರವಾಹ ಸಂತ್ರಸ್ತರು ಮತ್ತೆ ಅಲ್ಲಿಯೇ ಉಳಿದು ಕಾದು ನೋಡುವಂತಾಗಿದೆ.

ಮಳೆ ಇಲ್ಲದ ಪ್ರವಾಹ: ಕಳೆದ ವಾರ ನೀರು ಬಿಟ್ಟಾಗ ಜಲಾಶಯದ ಕೆಳಭಾಗದಲ್ಲೆಲ್ಲೂ ಮಳೆ ಇರಲಿಲ್ಲ. ಆದರೆ ಈಗ ಹಾಗಲ್ಲ. ನದಿಪಾತ್ರದ ನಂಜನಗೂಡು, ಹೆಗ್ಗಡದೇವನ ಕೋಟೆ, ಗುಂಡ್ಲುಪೇಟೆ ತಾಲೂಕಿನ ಅನೇಕ ಪ್ರದೇಶಗಳಲ್ಲಿ ಈಗ ಧಾರಾಕಾರ ಮಳೆ ಸುರಿಯುತ್ತಿದೆ. ಆ ನೀರು ಕಬಿನಿ ಒಡಲು ಸೇರಿದರೆ ಆಕೆಯ ರೌದ್ರನರ್ತನ ಇನ್ನೆಷ್ಟು ಭಯಾನಕವಾದೀತು ಎಂಬುದು ನದಿತೀರದ ಗ್ರಾಮಸ್ಥರ ಆತಂಕವಾಗಿದೆ.

ಮುನ್ನೆಚ್ಚರಿಕೆ: ಕಬಿನಿಯಲ್ಲಿ ಹೊರ ಬಿಟ್ಟಿರುವ ಅಧಿಕ ನೀರು ಹಾಗೂ ಸುರಿಯುತ್ತಿರುವ ಧಾರಾಕಾರ ಮಳೆ, ಪ್ರವಾಹ ಬಂದರೂ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತಾಲೂಕು ಆಡಳಿತ ಕೈಗೊಂಡಿದೆ. ಕಬಿನಿ ಜಲಾಶಯದಿಂದ ಮತ್ತೆ ಭಾರೀ ಪ್ರಮಾಣದ ನೀರು ಹೊರ ಬಿಡುತ್ತಿರುವ ವಿಷಯ ತಿಳಿದ ಕೂಡಲೇ ಕಂದಾಯ ಮತ್ತು ಪೊಲೀಸ್‌ ಇಲಾಖೆ ನೇತೃತ್ವದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮುನ್ನೆಚ್ಚರಕಾ ಕ್ರಮ ಕೈಗೊಳ್ಳಲು ನಾವೆಲ್ಲ ಸಜ್ಜಾಗಿದ್ದೇವೆ ಎಂದು ತಹಶೀಲ್ದಾರ್‌ ದಯಾನಂದ್‌ ಹೇಳಿದರು.

Advertisement

ಬೊಕ್ಕಳ್ಳಿ ಸಂತ್ರಸ್ತರ ಶಿಬಿರ ಮುಂದುವರಿಕೆ: ಕಳೆದ ವಾರ ಪ್ರವಾಹದ ವೇಳೆ ಇಲ್ಲಿನ ಸರ್ಕಾರಿ ಶಾಲೆಯಲ್ಲಿ  ಪ್ರಾರಂಭಿಸಿದ್ದ ಸಂತ್ರಸ್ತರ ಶಿಬಿರ ಮತ್ತೆ ಮುಂದುವರಿಸಲಾಗಿದೆ. ಪ್ರವಾಹ ನಿರಾಶ್ರಿತರು ಮಂಗಳವಾರ ಹಾಗೂ ಬುಧವಾರ  ರಾತ್ರಿ ಮನೆಗೆ ತೆರಳಿದ್ದರು. ಇಂದಿನಿಂದ ಮತ್ತೆ ಪ್ರವಾಹ ಮರುಕಳಿಸುತ್ತಿರುವ ಕಾರಣ ಅವರಿಗೆ ಶಾಲೆಯಲ್ಲೆ ಮಲಗಲು ತಿಳಿಸಲಾಗಿದೆ. ಹಾಗೆಯೇ ತಾತ್ಕಾಲಿಕ ಆರೋಗ್ಯ ಕೇಂದ್ರದ ಸೇವೆಯೂ ಮುಂದುವರಿಯಲಿದೆ ಎಂದು ಉಪ ತಹಶೀಲ್ದಾರ್‌ ಬಾಲಸುಬ್ರಹ್ಮಣ್ಯ ತಿಳಿಸಿದ್ದಾರೆ.

ಸಂಚಾರ ಸ್ಥಗಿತ: ಮೈಸೂರು ನಗರಕ್ಕೆ ಕೇವಲ 24 ಕಿಲೋ ಮೀಟರ್‌ ದೂರದಲ್ಲಿರುವ ನಂಜನಗೂಡು ಈಗ ಮತ್ತೆ ಪ್ರವಾಹಕ್ಕೆ ಸಿಲುಕುವ ಭೀತಿ ಇದೆ. ಗುರುವಾರ ಮಧ್ಯಾಹ್ನ ಕಬಿನಿ ಜಲಾಶಯದಿಂದ ಅಧಿಕ ನೀರು ಹೊರ ಬಿಟ್ಟಿರುವ ಕಾರಣ ಮತ್ತೆ ಮೈಸೂರು-ನಂಜನಗೂಡಿನ ರಾಷ್ಟ್ರೀಯ ಹೆದ್ದಾರಿ 766 ಮಲ್ಲನಮೂಲೆ ಬಳಿ ಜಲಾವೃತಗೊಳ್ಳುವುದರಿಂದ ಸಂಚಾರ ಸ್ಥಗಿತಗೊಳಿಸಿದೆ.

ಭೇಟಿ ನೀಡದ ಜನಪ್ರತಿನಿಧಿಗಳು: ತಾಲೂಕಿನ ಸಹಸ್ರಾರು ಎಕರೆ ಕೃಷಿ ಭೂಮಿ ನೀರಿನಲ್ಲಿ ಮುಳುಗಿ ಬೆಳೆಹಾನಿಯಾಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಆಥವಾ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳಾರೂ ಆಗಮಿಸಿಲ್ಲ ಎಂದು ಪ್ರವಾಹ ಪೀಡಿತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next