Advertisement

ನಂಜನಗೂಡು-ನಿಲಾಂಬೂರು ರೈಲು: ಹಠ ಬಿಡದ ಕೇರಳ

11:50 AM Aug 20, 2017 | |

ಮೈಸೂರು: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಹಾಗೂ ವೈನಾಡು ವನ್ಯಜೀವಿ ವಲಯದ ಕೋರ್‌ ವಲಯವನ್ನು ವಿಭಜಿಸುತ್ತದೆ ಎಂಬ ಕಾರಣಕ್ಕೆ ತಿರಸ್ಕರಿಸಲ್ಪಟ್ಟಿರುವ ನಂಜನಗೂಡು- ನಿಲಾಂಬೂರು ರೈಲು ಮಾರ್ಗ ನಿರ್ಮಾಣಕ್ಕೆ ಕೇರಳ ಸರ್ಕಾರ ಇನ್ನಿಲ್ಲದ ಪ್ರಯತ್ನವನ್ನು ಮುಂದುವರಿಸಿದೆ. ಕಳೆದ ಏಳೆಂಟು ವರ್ಷಗಳಿಂದ ಪದೇ ಪದೆ ಕರ್ನಾಟಕದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರಾಜಕೀಯ ಒತ್ತಡ ಹೇರುತ್ತಾ ಬಂದಿರುವ ಕೇರಳ ಮುಖ್ಯಮಂತ್ರಿ, ನ್ಯಾಯಾಲಯದ ಆದೇಶದ ನಂತರವೂ ತನ್ನ ಪ್ರಯತ್ನವನ್ನು ಕೈಬಿಟ್ಟಿಲ್ಲ.

Advertisement

ನಂಜನಗೂಡು- ನಿಲಾಂಬೂರು ನಡುವಿನ 236 ಕಿ.ಮೀ. ರೈಲ್ವೆ ಮಾರ್ಗ ಅನುಷ್ಠಾನಗೊಂಡರೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ವೈನಾಡ್‌ ವನ್ಯಜೀವಿ ಧಾಮದ ಕೋರ್‌ ವಲಯದ ಮೂಲಕ ಹಾದು ಹೋಗುತ್ತದೆ. ಆ ಮೂಲಕ ಅತ್ಯಂತ ಅಮೂಲ್ಯವಾದ ಎರಡು ವನ್ಯಜೀವಿ ಆವಾಸ ಸ್ಥಾನಗಳನ್ನು ವಿ¸‌ಜಿಸುತ್ತದೆ. ಪ್ರಸ್ತಾಪಿತ ರೈಲ್ವೆ ಮಾರ್ಗವು ಸುಮಾರು 14 ಕಿ.ಮೀ. ದೂರದ ಬಂಡೀಪುರದ ಅರಣ್ಯವನ್ನೇ ತುಂಡರಿಸಿಬಿಡುತ್ತದೆ. ಇದೇ ಕಾರಣಕ್ಕೆ ರೈಲ್ವೆ ಇಲಾಖೆ ಹಾಗೂ ಕೇರಳ ಹೈಕೋರ್ಟ್‌ ಈ ಯೋಜನೆ ಕಾರ್ಯಸಾಧುವಲ್ಲ ಎಂದು ತಿರಸ್ಕರಿಸಿವೆ. ಆದರೂ ಕೇರಳ ಸರ್ಕಾರ ಹಠಕ್ಕೆ ಬಿದ್ದಂತೆ ತನ್ನ ಪ್ರಯತ್ನದಿಂದ ಹಿಂದೆ ಸರಿಯುತ್ತಿಲ್ಲ.

ರಾಷ್ಟ್ರೀಯ ಹಿತಾಸಕ್ತಿಗೆ ಮಾರಕ: ಎಟ್‌ ಪಿಟಿಷನ್‌ ಸಂಖ್ಯೆ 34464/2011 ಮತ್ತು 609/2012 ಈ ಎರಡು ಮೊಕದ್ದಮೆಗಳ ಸಂಬಂಧ 2013ರ ಪೆಬ್ರವರಿ 13ರಂದು ಆದೇಶ ಹೊರಡಿಸಿದ ಕೇರಳ ಹೈಕೋರ್ಟ್‌, ನ್ಯಾಯಾಲಯಗಳು, ಆಡಳಿತ ವರ್ಗ ಮತ್ತು ರಾಜಕೀಯ ನಾಯಕರುಗಳು ರೈಲ್ವೆ ಆಡಳಿತವನ್ನು ನಿರ್ದಿಷ್ಟ ರಾಜ್ಯ ಅಥವಾ ದೇಶದ ಸೀಮಿತ ಭಾಗದಲ್ಲಿ ರೈಲು ಯೋಜನೆ ಅಭಿವೃದ್ಧಿಪಡಿಸಲು ಒತ್ತಾಯಿಸುವ ಪ್ರವೃತ್ತಿಯನ್ನು ಬಿಡಬೇಕು. ಪ್ರಾದೇಶಿಕ ಹಿತಾಸಕ್ತಿಗಳನ್ನು ಉತ್ತೇಜಿಸುವ ಅಥವಾ ಅಂತಹ ಯಾವುದೇ ಪ್ರಯತ್ನವು ರಾಷ್ಟ್ರೀಯ ಹಿತಾಸಕ್ತಿಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿದೆ.

ಅಧಿಕಾರಿಗಳ ಸಭೆ: ನ್ಯಾಯಾಲಯದ ಈ ಆದೇಶದ ನಡುವೆಯೂ ಪ್ರಸ್ತಾಪಿತ ರೈಲು ಮಾರ್ಗಕ್ಕೆ ಅನುಮತಿ ನೀಡಲು ಕರ್ನಾಟಕ ಸರ್ಕಾರವನ್ನು ಒತ್ತಾಯಿಸುವ ಸಲುವಾಗಿ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಉನ್ನತಮಟ್ಟದ ಅಧಿಕಾರಿಗಳ ಸಭೆಯನ್ನು ಕಳೆದ ಕೆಲ ತಿಂಗಳುಗಳ ಹಿಂದೆ ಬೆಂಗಳೂರಿನಲ್ಲಿ ನಡೆಸಲಾಗಿದೆ.

ಮೂಲಸೌಕರ್ಯಗಳ ಅಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಬೆಯಲ್ಲಿ ದೆಹಲಿ ಮೆಟ್ರೋ ರೈಲು ನಿಗಮದ ಪ್ರಧಾನ ಸಲಹೆಗಾರ ಡಾ.ಇ.ಶ್ರೀಧರನ್‌, ಪ್ರಧಾನ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಕೆ.ಎಸ್‌.ಸುಗಾರ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಸಂರಕ್ಷಣೆ) ಅನೂರ್‌ ರೆಡ್ಡಿ ಮತ್ತಿತರೆ ಅಧಿಕಾರಿಗಳು ಭಾಗವಹಿಸಿದ್ದರು.

Advertisement

ಈ ಯೋಜನೆ ಅನುಷ್ಠಾನದಿಂದಾಗುವ ದುಷ್ಪರಿಣಾಮಗಳನ್ನು ಆಧರಿಸಿ ಕರ್ನಾಟಕದ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸಿದ್ದರೂ ಡಾ.ಇ.ಶ್ರೀಧರನ್‌ ಅವರು ಯೋಜನೆಯ ಕಾರ್ಯ ಸಾಧ್ಯತೆಯ ಅಧ್ಯಯನ ಕೈಗೊಳ್ಳಲು ಅನುಮತಿ ನೀಡುವಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಆದರೆ, ಅವರು ಈ ರೀತಿ ಒತ್ತಡ ಹೇರುವುದು ರಿಟ್‌ ಪಿಟಿಷನ್‌ ಸಂಖ್ಯೆ 34464/ 2011ರ ಮೊಕದ್ದಮೆಯಲ್ಲಿ 2013ರಲ್ಲಿ ಕೇರಳ ಹೈಕೋರ್ಟ್‌ ನೀಡಿದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ.

ನ್ಯಾಯಾಲಯಕ್ಕೆ ಹೇಳಿ: ಮುಂಬರುವ ದಿನಗಳಲ್ಲಿ ಇಂತಹ ಸಭೆಗಳನ್ನು ನಡೆಸುವುದು ಅಥವಾ ಯೋಜನೆಗೆ ಉತ್ತೇಜಿಸುವ ಕಾರ್ಯವನ್ನೂ ಮಾಡಬಾರದು. ಹಾಗೆ ಮಾಡಿದಲ್ಲಿ ನ್ಯಾಯಾಂಗ ನಿಂದನೆಗೆ ಗುರಿಯಾಗಬೇಕಾಗುತ್ತದೆ. ಈ ವಿಚಾರದಲ್ಲಿ ಡಾ.ಇ.ಶ್ರೀಧರನ್‌ ಅವರಿಂದ ಒತ್ತಡ ಬಂದಲ್ಲಿ ಕರ್ನಾಟಕ ಸರ್ಕಾರದ ಅಧಿಕಾರಿಗಳು ನ್ಯಾಯಾಲಯದ ಗಮನಕ್ಕೆ ತರುವುದು ಸೂಕ್ತ ಎಂದು ಪರಿಸರ ಹಾಗೂ ವನ್ಯಜೀವಿ ಪ್ರೇಮಿಗಳು ತಾಕೀತು ಮಾಡುತ್ತಾರೆ.

ಅಪಾಯದ ಹಾದಿ: ಈ ರೈಲ್ವೆ ಮಾರ್ಗಕ್ಕೆ ಅನುಮತಿ ನೀಡಿದರೆ ವನ್ಯಜೀವಿ ಆವಾಸ ಸ್ಥಾನಗಳನ್ನು ವಿ¸‌ಜಿಸುವುದಲ್ಲದೆ, ವನ್ಯಪ್ರಾಣಿಗಳ ಸಾವಿಗೂ ಕಾರಣವಾಗುತ್ತದೆ. ಪಶ್ಚಿಮಬಂಗಾಳ, ಅಸ್ಸಾಂ, ಒಡಿಶಾ, ಉತ್ತರಾಖಂಡ, ತಮಿಳುನಾಡು ರಾಜ್ಯಗಳಲ್ಲಿ ರೈಲಿಗೆ ಸಿಲುಕಿ ಆನೆಗಳು ಸಾವನ್ನಪ್ಪುವುದು ಆಗಾಗ್ಗೆ ವರದಿಯಾಗುತ್ತಿದೆ. ಈ ರಾಜ್ಯಗಳಲ್ಲಿ 2012ರಿಂದ ಈವರೆಗೆ 51 ಆನೆಗಳು ಈ ರೀತಿ ಅಸ್ವಾಭಾವಿಕವಾಗಿ ಸಾವನ್ನಪ್ಪಿವೆ. ಈ ಸಾಲಿಗೆ ದೇಶದಲ್ಲೇ ಅತಿಹೆಚ್ಚು ಆನೆಗಳ ಸಾಂಧ್ರತೆಯನ್ನು ಹೊಂದಿರುವ ಬಂಡೀಪುರ ಅರಣ್ಯ ಪ್ರದೇಶವು ಸೇರಬೇಕೆ ಎಂದು ವನ್ಯಜೀವಿ ಪ್ರೇಮಿಗಳು ಪ್ರಶ್ನಿಸುತ್ತಾರೆ.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next