Advertisement

ತುಂಬಿ ತುಳುಕುತ್ತಿದೆ ಪ್ರಗತಿಯ ಕೊಡ : ಖಾನಾಪುರ ತಾಲೂಕಿನ ಮಾದರಿ ಗ್ರಾಪಂ

01:47 PM Mar 24, 2021 | Team Udayavani |

ಬೆಳಗಾವಿ: ಪಶ್ವಿ‌ಮ ಘಟ್ಟದ ಸೆರಗಿನಲ್ಲಿರುವ ಖಾನಾಪುರ ತಾಲೂಕಿನ ನಂದಗಡ ಗಾತ್ರದಲ್ಲಿ ಸಣ್ಣ ಗ್ರಾಮ.ಆದರೆ ಸಾಧನೆಯಲ್ಲಿ ಬಹಳ ದೊಡ್ಡದು. ಸರ್ಕಾರದಯೋಜನೆಗಳನ್ನು ಯಾವ ರೀತಿ ಪರಿಣಾಮಕಾರಿಯಾಗಿಜಾರಿ ಮಾಡಬಹುದು. ಗ್ರಾಮದ ಜನರನ್ನು ಅಭಿವೃದ್ಧಿಕಾರ್ಯಗಳಲ್ಲಿ ತೊಡಗಿಸಿಕೊಂಡು ಹೇಗೆ ಯಶಸ್ಸು ಸಾಧಿಸಬಹುದು ಎಂಬುದನ್ನು ನಂದಗಡ ಗ್ರಾಪಂ ಮಾಡಿ ತೋರಿಸಿದೆ.

Advertisement

ನಂದಗಡ ಗ್ರಾಪಂ ಕಚೇರಿ ಮತ್ತು ಆಡಳಿತ ವ್ಯವಸ್ಥೆ ನೋಡಿದರೆ ಗ್ರಾಪಂಗಳ ಬಗ್ಗೆ ಇರುವ ಕಲ್ಪನೆಯೇ ಬದಲಾಗುತ್ತದೆ. ಈ ಪಂಚಾಯಿತಿ ಪ್ರಗತಿಯಜತೆಗೆ ತನ್ನ ಆಡಳಿತ ವೈಖರಿಗೂ ಆಧುನಿಕತೆ ಸ್ಪರ್ಶ ನೀಡಿದೆ. ಪಂಚಾಯತಿ ಆವರಣದಲ್ಲಿ ಮುಖ್ಯ ಕಟ್ಟಡ, ನೀರು ಶುದ್ಧೀಕರಣ ಘಟಕ, ರಾಜೀವ್‌ ಗಾಂಧಿ ಸೇವಾ ಕೇಂದ್ರ, ಬಾಪೂಜಿ ಸೇವಾ ಕೇಂದ್ರ, ವಾಹನಗಳ ನಿಲುಗಡೆಗೆಜಾಗವಿದೆ. ಇದಲ್ಲದೆ ಪಂಚಾಯಿತಿಯಿಂದ ದೇವಸ್ಥಾನ, ಸಮುದಾಯ ಭವನ, ಜಿಮ್‌, ಮಿನಿ ಬಸ್‌ ನಿಲ್ದಾಣ, ಅಧ್ಯಕ್ಷ, ಉಪಾಧ್ಯಕ್ಷರಿಗೆ ಪ್ರತ್ಯೇಕ ಕೊಠಡಿ, ಅತ್ಯಾಧುನಿಕ ಪೀಠೊಪಕರಣ ಅಳವಡಿಕೆ, ಹವಾನಿಯಂತ್ರಿತ ಸಭಾಂಗಣ ಸೌಲಭ್ಯ ಕಲ್ಪಿಸಲಾಗಿದೆ.

ವಾಕಿಟಾಕಿ ಸೌಲಭ್ಯ: ಅರಣ್ಯ ಪ್ರದೇಶವಾಗಿರುವದರಿಂದ ಇಲ್ಲಿ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಇದೆ. ಇದಕ್ಕೂ ಪರಿಹಾರ ಕಂಡುಕೊಂಡಿರುವ ನಂದಗಡ ಗ್ರಾಪಂಸಾರ್ವಜನಿಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲು ತನ್ನ ಸಿಬ್ಬಂದಿಗೆ ವಾಕಿಟಾಕಿಗಳನ್ನು ಕೊಡಿದೆ. 9,500 ಜನಸಂಖ್ಯೆ ಇದ್ದು, 23 ವಾರ್ಡ್‌ಗಳಿವೆ. ಜನರಿಗೆ ಮೂಲ ಸೌಕರ್ಯಒದಗಿಸುವ ಕಾರ್ಯಕ್ಕೆ ಸಮಸ್ಯೆ ಬರಬಾರದು ಎಂದುಪಂಚಾಯಿತಿಯಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಜನರು ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆಗಳನ್ನುತಿಳಿಸಿದ ನಂತರ ಸ್ಪಂದಿಸಲು ಅಗತ್ಯ ಸಿಬ್ಬಂದಿ ವಾಕಿಟಾಕಿಬಳಸುತ್ತಿದ್ದಾರೆ. ಗ್ರಾಮದ 25 ಕಿಮೀ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯದ ತಲಾ 10 ಸಾವಿರ ರೂ.ಗಳ ಐದು ವಾಕಿಟಾಕಿಗಳನ್ನು ಪಂಚಾಯಿತಿಯ ಸ್ವಂತಸಂಪನ್ಮೂಲದಲ್ಲಿ ಖರೀದಿಸಿರುವುದು ವಿಶೇಷ.

ಕಟ್ಟಿಗೆ ಬ್ಯಾಂಕ್‌: ಸುತ್ತಲೂ ಕಾಡಿದ್ದರೂ ಖಾನಾಪುರ ತಾಲೂಕಿನಲ್ಲಿ ಕಟ್ಟಿಗೆ ಕೊರತೆ ಇದೆ. ಮರ ಕಡಿಯಲು ಅರಣ್ಯ ಇಲಾಖೆ ಅನುಮತಿ ಪಡೆಯಬೇಕು.ಇದರಿಂದ ಅಂತ್ಯಕ್ರಿಯೆ ವೇಳೆ ಜನರು ಪರದಾಡುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಂದಗಡ ಪಂಚಾಯಿತಿಯಲ್ಲಿ ಕಟ್ಟಿಗೆ ಬ್ಯಾಂಕ್‌ ಮಾಡಲಾಗಿದ್ದು, ಜನರಿಗೆ ಕಟ್ಟಿಗೆ ಒದಗಿಸಲಾಗುತ್ತಿದೆ.

ಈ ಯೋಜನೆ ರಾಜ್ಯದಲ್ಲೇ ಮೊದಲು ಎಂಬುದು ವಿಶೇಷ. ಗ್ರಾಮದಲ್ಲಿ ಯಾರಾದರೂ ನಿಧನರಾದರೆ ಅಂತ್ಯಕ್ರಿಯೆಗಾಗಿ ಕಟ್ಟಿಗೆ ಹೊಂದಿಸುವುದು ಬಹಳ ಕಷ್ಟದ ಕೆಲಸ. ಇಂತಹ ಸಂದರ್ಭದಲ್ಲಿ ನೆರವಾಗಲು ಸ್ಮಶಾನದಬಳಿಗೇ ಕಟ್ಟಿಗೆ ಪೂರೈಸುವ ಮುಕ್ತಿ ಹೆಸರಿನ ಯೋಜನೆಜಾರಿಗೊಳಿಸಲಾಗಿದೆ. ಶುದ್ಧ ನೀರು ಪೂರೈಕೆ, ತ್ಯಾಜ್ಯನಿರ್ವಹಣೆ, ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಗಳಲ್ಲಿಮಾದರಿಯಾಗಿದೆ. 60 ಲಕ್ಷ ವೆಚ್ಚದಲ್ಲಿ ಘನತ್ಯಾಜ್ಯವಿಲೇವಾರಿ ಘಟಕ ನಿರ್ಮಿಸಲಾಗಿದೆ. ಸುಮಾರು1850 ಮನೆಗಳಿರುವ ಗ್ರಾಮ ಬಯಲು ಬಹಿರ್ದೆಸೆ ಮುಕ್ತವಾಗಿದೆ. ಅಂತೆಯೇ 2018-19ರಲ್ಲಿ ನಂದಗಡಕ್ಕೆ ಗಾಂಧಿ ಗ್ರಾಮ ಪುರಸ್ಕಾರ ಸಹ ದೊರೆತಿರುವುದು ಹೆಮ್ಮೆಯ ಸಂಗತಿ.

Advertisement

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಿರ್ದೇಶನದಂತೆ ಸ್ವತ್ಛ ಭಾರತ ಅಭಿಯಾನದಲ್ಲಿಆಯ್ಕೆಯಾಗಿರುವ ನಂದಗಡದ ತ್ಯಾಜ್ಯನಿರ್ವಹಣೆ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.ತ್ಯಾಜ್ಯವು ಇಲ್ಲಿ ಕೆಲಸಕ್ಕೆ ಬಾರದ ಕಸದ ಬದಲಾಗಿ ಸಂಪನ್ಮೂಲವಾಗಿದೆ. ಗ್ರಾಮದ ಪ್ರತಿ ಮನೆಗೆತಲಾ ಎರಡೆರಡು ಬಕೆಟ್‌ಗಳನ್ನು ನೀಡಿ ಅದರಲ್ಲಿ ಹಸಿ ಹಾಗೂ ಒಣ ಕಸ ವಿಂಗಡಿಸಿ ಸಂಗ್ರಹಿಸಲಾಗುತ್ತಿದೆ. ನಂತರ ಹಸ ಕಸದಿಂದಗೊಬ್ಬರ ತಯಾರು ಮಾಡಲಾಗುತ್ತಿದೆ ಎನ್ನುತ್ತಾರೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೆ.ಎಸ್‌. ಗಣೇಶ್‌.

ಗ್ರಾಮದಲ್ಲಿನ 532 ವಿದ್ಯುತ್‌ ಕಂಬಗಳಲ್ಲಿಸಾಂಪ್ರದಾಯಿಕ ಬಲ್ಬ್ ಗಳ ಬದಲಿಗೆ ಇಂಧನ ಮಿತವ್ಯಯದ ಎಲ್‌ಇಡಿ ಬಲ್ಬ್ ಅಳವಡಿಸಲಾಗಿದೆ. 13 ವಿದ್ಯುತ್‌ ಮೀಟರ್‌ಗಳಿಗೆ ಸ್ವಯಂ ಚಾಲಿತ ಟೈಮರ್‌ ಅಳವಡಿಸಲಾಗಿದೆ. ನರೇಗಾ ಯೋಜನೆಯಡಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಡಿಜಿಟಲ್‌ ಲೈಬ್ರರಿ ನಿರ್ಮಾಣವಾಗಿದೆ. ಅಂತರ್ಜಾಲ ಸಂಪರ್ಕವಿರುವ ಐದು ಕಂಪ್ಯೂಟರ್‌ಗಳಿವೆ. ಅಂತರ್ಜಾಲ ಸೇವೆಉಚಿತ. ಇದರಿಂದ ವಿದ್ಯಾರ್ಥಿಗಳು, ಶಿಕ್ಷಕರುಹಾಗೂ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ಅನುಕೂಲವಾಗಿದೆ. ಪಂಚಾಯತ್‌ನ ಎಲ್ಲ ವ್ಯವಹಾರವೂ ಗಣಕೀಕೃತವಾಗಿದೆ.

ಪಂಚಾಯಿತಿಯಲ್ಲಿ ನಗದು ರಹಿತ ವಹಿವಾಟು  ಆರಂಭಿಸಲಾಗಿದೆ. ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಐಡಿ ಕಾರ್ಡ್‌ ವಿತರಿಸಲಾಗಿದೆ.ಅಂಗನವಾಡಿಗಳಿಗೆ ಹೊಸ ರೂಪ ನೀಡಲಾಗಿದೆ.63 ಗಲ್ಲಿಗಳಲ್ಲಿ ನಾಮಫಲಕ ಅಳವಡಿಸಲಾಗಿದೆ.ಸರ್ಕಾರದ ಯೋಜನೆಗಳನ್ನು ಯಾವ ರೀತಿ ಸದುಪಯೋಗ ಪಡಿಸಿಕೊಳ್ಳಬಹುದು ಎಂಬುದರ ಬಗ್ಗೆ ಜನರಿಗೆ ತಿಳಿವಳಿಕೆ ನೀಡಲಾಗುತ್ತದೆ. ಕೆ.ಎಸ್‌ ಗಣೇಶ, ಗ್ರಾಪಂ ಅಭಿವೃದ್ಧಿ ಅಧಿಕಾರಿ, ನಂದಗಡ

 

ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next