Advertisement

ರಾಗ ಅನುರಾಗ ನಗೆಕಾರ ಮಿತ್ರನ ಕನಸು ನನಸಾದ ಕ್ಷಣ…

02:10 PM Sep 16, 2017 | |

ಹಾಸ್ಯನಟ ಮಿತ್ರ ಸದಾ ಹೊಸತೇನನ್ನೋ ಮಾಡಲು ಸದಾ ಮುಂದು. ಕನ್ನಡ ಚಿತ್ರಗಳಲ್ಲಿ ನಟಿಸುತ್ತಲೇ, ಕನ್ನಡಿಗರ ಮನಸ್ಸು ಗೆದ್ದು ಅನೇಕ ಮನರಂಜನೆ ಕಾರ್ಯಕ್ರಮ ಕೊಡುತ್ತಿರುವ ಮಿತ್ರ, ತಮ್ಮದೇ ಆದ ಮಿತ್ರ ಎಂಟರ್‌ಟೈನ್‌ಮೆಂಟ್‌ ಸಿನಿ ಕ್ರಿಯೇಷನ್‌ ಬ್ಯಾನರ್‌ವೊಂದನ್ನು ಹುಟ್ಟುಹಾಕಿ, ಚೊಚ್ಚಲ ನಿರ್ಮಾಣದ “ರಾಗ’ ಚಿತ್ರವನ್ನು ಈಗಾಗಲೇ ಮುಗಿಸಿದ್ದು, ಸಿನಿಮಾ ರಿಲೀಸ್‌ ಮಾಡಲು ತಯಾರಿ ನಡೆಸಿದ್ದಾರೆ. ಪಿ.ಸಿ.ಶೇಖರ್‌ ನಿರ್ದೇಶನದ ಈ ಚಿತ್ರದಲ್ಲಿ ಎಲ್ಲವೂ ಹೊಸತು. ಅನೇಕ ಹೊಸ ವಿಷಯಗಳಿಂದಲೇ ಕೂಡಿರುವ ಈ ಸಿನಿಮಾದ ಪೋಸ್ಟರ್ ಈಗಾಗಲೇ ಸುದ್ದಿ ಮಾಡಿದೆ. ರಿಲೀಸ್‌ ಆಗಿರುವ ಟ್ರೇಲರ್‌ ಕೂಡ ನಿರೀಕ್ಷೆ ಹೆಚ್ಚಿಸಿದೆ. ಕನ್ನಡಕ್ಕೆ ಹೊಸತನದ ಚಿತ್ರ ಕಟ್ಟಿಕೊಟ್ಟಿರುವ ಮಿತ್ರ ತಮ್ಮ ಕನಸಿನ “ರಾಗ’ ಕುರಿತು “ರೂಪತಾರಾ’ ಜತೆ ಮಾತಾಡಿದ್ದಾರೆ.

Advertisement

ನಿರ್ಮಾಣಕ್ಕೆ ಕಥೆಯೇ ಕಾರಣ
“ನನಗೆ ಒಳ್ಳೆಯ ಚಿತ್ರ ನಿರ್ಮಾಣ ಮಾಡಬೇಕು. ಅಂತಹ ಸಿನಿಮಾ ಮೂಲಕವೇ ನನ್ನ ಬ್ಯಾನರ್‌ ಶುರುಮಾಡಬೇಕು ಎಂಬ ಆಸೆ ಇಟ್ಟುಕೊಂಡಿದ್ದೆ. ಒಮ್ಮೆ, ನಿರ್ದೇಶಕ ಪಿ.ಸಿ. ಶೇಖರ್‌ ಬಂದು ಒಂದು ಕಥೆ ಇದೆ, ನೀವು ನಟಿಸಬೇಕು. ನಾನು ನಿರ್ಮಾಣ ಮಾಡ್ತೀನಿ ಅಂತ ಹೇಳಿದರು. ಕೊನೆಗೆ ಅದ್ಭುತ ಎನಿಸುವಂತಹ ಕಥೆ ಹೇಳಿದರು. ಆ ಕಥೆಯನ್ನು ಅವರು ತಮಿಳು ನಟ ವಿಕ್ರಮ್‌ಗೆ 2002 ರಲ್ಲೇ ಮಾಡಬೇಕು ಅಂತ ನಿರ್ಧರಿಸಿದ್ದರಂತೆ ಶೇಖರ್‌. ಆದರೆ, ವಿಕ್ರಮ್‌ ಜತೆ ಆ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಕೊನೆಗೆ ಇಬ್ಬರೂ ಬಿಜಿಯಾದರು. ಎಲ್ಲೋ ಒಂದು ಕಡೆ ಆ ಕಥೆ ಮಾಡಲೇಬೇಕು ಅನ್ನುವ ಹಠ ಶೇಖರ್‌ಗಿತ್ತು. ಆದರೆ, ಯಾರ ಕೈಯಲ್ಲಿ ಆ ಸಿನಿಮಾ ಮಾಡಿಸಬೇಕು ಅಂತ ಯೋಚಿಸುತ್ತಿದ್ದಾಗಲೇ, ಅವರಿಗೆ ನಾನು ನೆನಪಾಗಿ, ನನ್ನ ಬಳಿ ಬಂದರು. ಅವರು ಮಾಡಿಕೊಂಡ ಕಥೆಗೆ ಹೀರೋ ಮೆಟಿರೀಯಲ್‌ ಆಗಿರದ. ಡಿಗ್ಲಾಮ್‌ ಇರುವಂತಹ ನಟ ಬೇಕಿತ್ತು. ಒಮ್ಮೆ ಕಥೆ ಹೇಳಿದರು. ನಾನು ಕೇಳಿದ ಕೂಡಲೇ ಖುಷಿಯಾದೆ. ಅಡ್ವಾನ್ಸ್‌ ಕೊಡೋಕೆ ಬಂದ್ರು. ಆಗ ನಾನೇ ಅವರಿಗೆ ಅಡ್ವಾನ್ಸ್‌ ಕೊಟ್ಟು, ನಾನೇ ಈ ಚಿತ್ರ ನಿರ್ಮಾಣ ಮಾಡ್ತೀನಿ ಅಂತ ಹೇಳಿದೆ. ನೀವು ಅಂದುಕೊಂಡಂತೆಯೇ ಚಿತ್ರ ಮಾಡ್ತೀನಿ ಅಂತ ಮಾತು ಕೊಟ್ಟೆ. ನನ್ನ ಹೊಸ ಬ್ಯಾನರ್‌ ಲಾಂಚ್‌ಗೆ ಇದಕ್ಕಿಂತ ಒಳ್ಳೆಯ ಕಥೆ ಸಿಗಲಿಕ್ಕಿಲ್ಲ ಅಂತ ನಿರ್ಮಾಣ ಮಾಡಿದೆ. ಅದಾದ ಬಳಿಕ ಟೆಕ್ನೀಷಿಯನ್‌ ಆಯ್ಕೆ ನಡೆಯಿತು. ಅದೂ ಕೂಡ ಕಥೆಯ ಹಾಗೆ ಪವರ್‌ಫ‌ುಲ್‌ ಆಗಿಯೇ ಇತ್ತು.

ಇದು ರೆಟ್ರೋ ಶೈಲಿಯ ಸಿನಿಮಾ. ಇಬ್ಬರು ಅಂಧರಿಗೆ ಸಂಬಂಧಿಸಿದ ಕಥೆ. 1970-80 ರ ದಶಕದಲ್ಲಿ ನಡೆಯೋ ಕಥೆ ಇದಾಗಿದ್ದರಿಂದ ಎಲ್ಲವೂ ಆಗಿನ ಕಾಲಕ್ಕೆ ತಕ್ಕಂತೆಯೇ ಇರಬೇಕು ಎಂಬ ಕಾರಣಕ್ಕೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ, ಅದರಂತೆಯೇ ಸಿನಿಮಾ ಮಾಡಲಾಗಿದೆ. ಚಿತ್ರ ನೋಡಿದವರಿಗೆ ಅದು ಹೊಸದೊಂದು ಊರೇ ಅನ್ನುವಷ್ಟರ ಮಟ್ಟಿಗೆ ಸೆಟ್‌ ಹಾಕಿ ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ  19 ದೊಡ್ಡ ಸೆಟ್‌ಗಳು ಮೂರು ಸಣ್ಣ ಸೆಟ್‌ಗಳನ್ನು ಹಾಕಿರುವುದು ಹೈಲೆಟ್‌. ಆ ಕಾಲದ್ದೇ ಎನಿಸವ ಆಸ್ಪತ್ರೆ, ಇಂಟೀರಿಯರ್‌, ರಸ್ತೆ, ಮನೆ, ಮಾರ್ಕೆಟ್‌, ಪಾರ್ಕ್‌, ವಠಾರಗಳು, ಕಾಣ ಸಿಗುವ ರಿಚ್‌ ಹೌಸ್‌, ಬೀದಿ ಬದಿಯ ಎಸ್‌ಟಿಡಿ ಬೂತ್‌ ಹೀಗೆ ಎಲ್ಲವನ್ನೂ ವಿಶೇಷ ಸೆಟ್‌ ಹಾಕಿಯೇ ಸಿನಿಮಾ ಚಿತ್ರೀಕರಿಸಲಾಗಿದೆ. ಇಲ್ಲಿ ಇನ್ನೊಂದು ವಿಶೇಷವೆಂದರೆ, ಚಿತ್ರಕ್ಕೆ ಗುಣ ಎಂಬ ಆರ್ಟ್‌ ಡಿಸೈನರ್‌ ಕೆಲಸ ಮಾಡಿದ್ದಾರೆ. ಮೂಲರ್ತ ಪೇಂಟಿಂಗ್‌ ಆರ್ಟಿಸ್ಟ್‌ ಆಗಿರುವ ಅವರು, ಸಿನಿಮಾ ಕಥೆಗೆ ಪೂರಕವಾಗಿರುವಂತೆಯೇ ಸೆಟ್‌ ಹಾಕಿದ್ದಾರೆ. ಅದೇ ಚಿತ್ರದ ಆಕರ್ಷಣೆ’ ಎನ್ನುತ್ತಾರೆ ಮಿತ್ರ.

ಹೊಸ ಪ್ರಯೋಗದತ್ತ...
ಚಿತ್ರದಲ್ಲಿ ಇನ್ನೊಂದು ಮುಖ್ಯ ಆಕರ್ಷನೆ ಎಂದರೆ, ಅದು ಕ್ಯಾಮೆರಾಮೆನ್‌ ವೈದಿ ಅವರು. ದೊಡ್ಡ ದೊಡ್ಡ ಸ್ಟಾರ್‌ ಸಿನಿಮಾಗಳಿಗೆ ಕ್ಯಾಮೆರಾ ಹಿಡಿದಿದ್ದ ವೈದಿ, ಈ ಚಿತ್ರದ ಕಣ್ಣಾಗಿದ್ದಾರೆ. ಬೇಸಿಕಲಿ ವೈದಿಗೆ ಆರ್ಟ್‌ ಬಗ್ಗೆ ಗೊತ್ತಿರುವುದರಿಂದ, ಪ್ರತಿಯೊಂದು ದೃಶ್ಯವನ್ನು ಅದ್ಭುತವಾಗಿ ಸೆರೆಹಿಡಿಸಿದ್ದಾರೆ. ಸಿನಿಮಾ ಕಥೆ ಓಕೆ ಆದಾಗ, ತಂಡದ ಹತ್ತು ಮಂದಿ ಕುಳಿತು ಪ್ಲಾನ್‌ ಮಾಡಿ ಮೊದಲಿಗೆ ಒಂದು ಸ್ಟೋರಿ ಬೋರ್ಡ್‌ ಮಾಡಿಕೊಂಡು, ಕೆಲ ವಿಷಯಗಳನ್ನು ರೀಸರ್ಚ್‌ ಮಾಡಿ,ಆ ಕಾಲದ ವೇಷಭೂಷಣ ಸೇರಿದಂತೆ, ಒಟ್ಟಾರೆಯಾಗಿ ಹೊಸ ಪ್ರಪಂಚ ಕಟ್ಟಬೇಕು. ಅದು ಯಾವ ಊರು ಆಂತಾನೂ ಗೊತ್ತಾಗಬಾರದು. ಒಂದು ಕಾಲ್ಪನಿಕ ಜಗತ್ತು ಸೃಷ್ಟಿ ಮಾಡಿದೆವು. ಎಲ್ಲೂ ಕೂಡ ರೆಫ‌ರೆನ್ಸ್‌ ಇರದ ಒಂದು ಹೊಸ ಲೋಕದಲ್ಲಿ ಇಬ್ಬರು ಅಂಧರ ಪ್ರೇಮ ದೃಶ್ಯಕಾವ್ಯ ಅದ್ಭುತವಾಗಿ ಮೂಡಿಬಂದಿದೆ ಎಂದು ವಿವರ ಕೊಡುತ್ತಾರೆ ಮಿತ್ರ. 

ಇಷ್ಟಕ್ಕೂ ನಾನು ನಿರ್ಮಾಣಕ್ಕೆ ಇಳಿಯಲು ಕಾರಣ, ನಿರ್ದೇಶಕರ ಕಥೆ. ಕೇವಲ ಎರಡೇ ಎರಡು ಪ್ರಮುಖ ಪಾತ್ರಗಳ ನಡುವಿನ ಭಾವನೆಗಳ ತಾಕಲಾಟ ಇರುವಂಥ ಕಥೆಯಲ್ಲಿ ಎಲ್ಲವೂ ಅಡಗಿದೆ. ಇದೊಂದು ವಿಭಿನ್ನ ಪ್ರಯತ್ನ ಮತ್ತು ಪ್ರಯೋಗಾತ್ಮಕ ಸಿನಿಮಾ. ಒಳ್ಳೆಯ ತಂತ್ರಜ್ಞರ ತಂಡ ಜತೆಯಲ್ಲಿದೆ. ಇಲ್ಲಿ “ರಾಗ’ ಅಂದರೆ, ಎಲ್ಲೆಡೆ ಇರುವಂಥದ್ದು. ಮನುಷ್ಯನ ಭಾವನೆಗಳಲ್ಲೂ ರಾಗ ಅನ್ನೋದಿದೆ. ಮಾತಾಡುವುದರಲ್ಲೂ ರಾಗವಿದೆ. ನೋಟದಲ್ಲೂ ರಾಗವಿದೆ. ಎಲ್ಲೋ ಒಂದು ಕಡೆ ಮಿಸ್‌ ಆಗಿರುವಂತಹ ಆ “ರಾಗ’ದ ಹುಡುಕಾಟವೇ ಚಿತ್ರದ ತಿರುಳು’ ಅನ್ನುತ್ತಾರೆ ಮಿತ್ರ.

Advertisement

ಭಾವನೆಗಳ ತೊಳಲಾಟದ ನಡುವೆ…
ಚಿತ್ರದಲ್ಲಿ ಹಲವು ಪ್ರಮುಖಗಳಿವೆ. ಒಂದು ಕ್ಯಾಮೆರಾಮೆನ್‌ ವೈದಿ. ಇನ್ನೊಂದು ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ. ಮಗದೊಂದು ನಿರ್ದೇಶಕ ಶೇಖರ್‌. ಉಳಿದಂತೆ ನಾನು ಮತ್ತು ನಟಿ ಭಾಮ.ಇದರ ಜತೆಯಲ್ಲಿ ಒಳ್ಳೆಯ ತಾಂತ್ರಿಕತೆಯ ತಂಡ ಜತೆಗಿದೆ. ಇಲ್ಲಿ ಇಬ್ಬರ ಅಂಧರ ಪ್ರೀತಿ, ಭಾವನಾತ್ಮಕ ಸಂಬಂಧ, ತೊಳಲಾಟ ಎಲ್ಲವೂ ಇದೆ. ನಾನಾಗಲಿ, ನಟಿ ಭಾವನವಾಗಲಿ, ನಟಿಸಿಲ್ಲ. ನಾವೇ ಪಾತ್ರಗಲಾಗಿದ್ದೇವೆ. ಆ ಪಾತ್ರಕ್ಕಾಗ, ಹಲವು ವೈದ್ಯರನ್ನು ಭೇಟಿ ಮಾಡಿದ್ದು ಇದೆ. ಅಂಧರ ಜತೆ ಮಾತಾಡಿ, ಅವರ ಹಾವಭಾವ ನೋಡಿಕೊಂಡು ಪಾತ್ರಕ್ಕೆ  ಬೇಕಾದ ತಯಾರಿ ಮಾಡಿಕೊಂಡಿದ್ದೂ ಉಂಟು. ಮೂರು ವರ್ಷದ ಬಾಲ್ಯದಲ್ಲಿರುವಾಗಲೇ ದೃಷ್ಟಿ ಕಳಕೊಂಡವರ ವ್ಯಥೆ, ಕಥೆ ಇಲ್ಲಿ ಹೇಳಲಾಗಿದೆ. ಚಿತ್ರದಲ್ಲಿ ಅವಿನಾಶ್‌, ರಮೇಶ್‌ ಭಟ್‌, ಜೈ ಜಗದೀಶ್‌, ತಬಲಾನಾಣಿ, ಕಡ್ಡಿಪುಡಿ, ರೂಪಿಕಾ, ಚಂದನ್‌ ಶರ್ಮ ಸೇರಿದಂತೆ ಹಲವರು ನಟಿಸಿದ್ದಾರೆ. ಇಲ್ಲಿ ಪ್ರತಿಯೊಂದು ಪಾತ್ರಗಳ ಮಾತುಗಳು ನೇರವಾಗಿವೆ. ಎಲ್ಲೂ ಅದು ನಾಟಕೀಯ ಎನಿಸುವುದಿಲ್ಲ. ಸಚಿನ್‌ ತಂಬಾ ಚೆನ್ನಾಗಿಯೆ ಸಂಭಾಷಣೆ ಬರೆದಿದ್ದಾರೆ.  ಒಟ್ಟು 56 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಒಂದು ಮಾಂಟೇಜ್‌ ಸಾಂಗ್‌ ಇದೆ. ಹಾಗಂತ ಇಲ್ಲಿ ರೆಗ್ಯುಲರ್‌ ಪ್ಯಾಟ್ರನ್‌ನಲ್ಲಿ ಹಾಡುಗಳಿಲ್ಲ. ಇಲ್ಲಿ ಹೀರೋ ಹಿಂದೆ ನಾಯಕಿ ಕುಣಿದಾಡುವುದಿಲ್ಲ. ಯಾರೂ ಮರ ಸುತ್ತೋದಿಲ್ಲ. ವಿನಾಕಾರಣ ಬಿಲ್ಡಪ್ಸ್‌ ಇಲ್ಲವೇ ಇಲ್ಲ. ಟ್ರೆಡಿಷನಲ್‌ ಮೇಕಿಂಗ್‌ ಪ್ಯಾಟ್ರನ್‌ ಸಿನಿಮಾದಲ್ಲಿದೆ. 

ಶಿವಣ್ಣ ಪೋಸ್ಟರ್‌ ಲಾಂಚ್‌ -ಕಿಚ್ಚನ ವಾಯ್ಸ
ಚಿತ್ರಕ್ಕೆ ನಟಿ ಭಾಮಾ ಅವರು ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಈ ಸಿನಿಮಾ ಮೂಲಕ ಅವರಿಗೆ ಹೊಸ ಇಮೇಜ್‌ ಸಿಗಲಿದೆ. ನನಗೂ ಕೂಡ ಕಾಮಿಡಿ ಇಮೇಜ್‌ ಆಚೆ ಹೋಗಿ, ಒಂದು ಪಾತ್ರವಾಗಿ ನಿಲ್ಲುತ್ತೇನೆ ಎಂಬ ವಿಶ್ವಾಸವಿದೆ. ಈಗಾಗಲೇ ಚಿತ್ರದ ಫ‌ಸ್ಟ್‌ಲುಕ್‌ ಅನ್ನು ಶಿವರಾಜ್‌ಕುಮಾರ್‌ ಬಿಡುಗಡೆ ಮಾಡಿ ಹರಸಿದ್ದರು. ಆಗಲೇ ಚಿತ್ರದ ಪೋಸ್ಟರ್‌ ನೋಡಿ ಎಲ್ಲರೂ ಮೆಚ್ಚುಗೆ ಪಟ್ಟಿದ್ದರು. ಅದಾದ ಮೇಲೆ, ಚಿತ್ರದ ಟ್ರೇಲರ್‌ಗೆ ಸುದೀಪ್‌ ಧ್ವನಿ ಕೊಟ್ಟು ಶುಭಾಶಯ ಹೇಳಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಅಂಧರ ಪಾತ್ರ ಮಾಡಿರುವ ಚಿತ್ರಕ್ಕೆ ಸುದೀಪ್‌ ದನಿ ಬೇಕಿತ್ತು. ಅದರಲ್ಲೂ ಅಂಧರ ಬಗ್ಗೆ ಅಭಿಮಾನವಿರುವ ಸುದೀಪ್‌ ಬಳಿಯೇ ಟ್ರೇಲರ್‌ಗೆ ಧ್ವನಿ ಪಡೆದುಕೊಳ್ಳಬೇಕು ಎಂಬ ಆಸೆ ಇತ್ತು. ಕೇಳಿದ ಕೂಡಲೇ ಸುದೀಪ್‌ ನೀಡಿದ್ದಾರೆ. ದರ್ಶನ್‌ ಕೂಡ ಚಿತ್ರದ ಟ್ರೇಲರ್‌ ಲಾಂಚ್‌ ಮಾಡಿ ಶುಭಹಾರೈಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಾರ್ಚ್‌ನಲ್ಲಿ ‘ರಾಗ’ ಚಿತ್ರವನ್ನು ತೆರೆಗೆ ತರುತ್ತೇನೆ ಎಂದು ಹೇಳುತ್ತಾರೆ ಮಿತ್ರ.

Advertisement

Udayavani is now on Telegram. Click here to join our channel and stay updated with the latest news.

Next