Advertisement

ಹೆಸರು ಪುಟ್ಟಪ್ಪ ಕನ್ನಡಿಗರಿಗೆ ದೊಡ್ಡಪ್ಪ

06:51 AM Jan 29, 2019 | Team Udayavani |

ದಾವಣಗೆರೆ: ಪತ್ರಿಕಾ ರಂಗಕ್ಕೆ ವಿಶಿಷ್ಟ ಕೊಡುಗೆ ನೀಡಿ, ಗಡಿ ನಾಡಿನಲ್ಲಿ ಕನ್ನಡವನ್ನು ಗಟ್ಟಿಗೊಳಿಸಿದ ಕೀರ್ತಿ ಶತಾಯುಷಿ ಪಾಟೀಲ್‌ ಪುಟ್ಟಪ್ಪ ಅವರದ್ದು. ಅಂಥವರನ್ನ ಗೌರವಿಸುವುದು ನಾಡಿನ ಇತಿಹಾಸ, ಸಂಸ್ಕೃತಿಯನ್ನೇ ಗೌರವಿಸಿದಂತೆ ಎಂದು ಗದುಗಿನ ತೋಂಟದಾರ್ಯ ಶ್ರೀ ಸಿದ್ದರಾಮ ಸ್ವಾಮೀಜಿ ಹೇಳಿದ್ದಾರೆ.

Advertisement

ಮೋತಿ ವೀರಪ್ಪ ಕಾಲೇಜಿನ ಆವರಣದಲ್ಲಿ ಸೋಮವಾರ ವಿಶ್ವಧರ್ಮ ಪ್ರವಚನ ಸಮಿತಿಯಿಂದ ವಿಶ್ವಧರ್ಮ ಭಾವೈಕ್ಯತಾ ಪ್ರವಚನ ಕಾರ್ಯಕ್ರಮದಲ್ಲಿ ಸಾಹಿತಿ ಪಾಟೀಲ್‌ ಪುಟ್ಟಪ್ಪನವರ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನಾಡಿನ ಪರಂಪರೆಯ ಇತಿಹಾಸವನ್ನೇ ಪಾಟೀಲ್‌ ಪುಟ್ಟಪ್ಪನವರು ಪರಿಚಯಿಸಿದ್ದಾರೆ. ಕರ್ನಾಟಕದಲ್ಲಿ ಅವರ ಬದುಕಿದ ನೂರು ವರ್ಷವೂ ಕೂಡ ಒಂದು ಇತಿಹಾಸವಾಗಿ ಉಳಿದಿದೆ. ಅವರು ಹೆಸರಿನಲ್ಲಿ ಪುಟ್ಟಪ್ಪ. ಆದರೆ, ಇಡೀ ನಾಡಿನ ಕನ್ನಡಿಗರಿಗೆ ದೊಡ್ಡಪ್ಪರಾಗಿದ್ದಾರೆ. ನಾಡಿನ ಪರಂಪರೆ, ಸಂಸ್ಕೃತಿ ಪರಿಚಯ ಮಾಡಿಕೊಡುವಲ್ಲಿ ಅದ್ಯಮ ಕೆಲಸ ಮಾಡಿದ್ದಾರೆ ಎಂದರು.

ಪ್ರಸ್ತುತ ದಿನಗಳಲ್ಲಿ ನಮ್ಮ ಕಣ್ಣ ಮುಂದೆ ನಾಡಿನ ಇತಿಹಾಸವನ್ನು ಎಳೆಎಳೆಯಾಗಿ ಬಿಚ್ಚಿಡಬಲ್ಲ ಏಕೈಕ ವ್ಯಕ್ತಿ ಯಾರಾದರೂ ಇದ್ದರೆ, ಅದು ಪಾಟೀಲ್‌ ಪುಟ್ಟಪ್ಪನವರು ಮಾತ್ರ ಎಂದು ಸ್ಮರಿಸಿಕೊಂಡರು.

ವೈದಿಕ ಧರ್ಮ ಅದು ಜನರನ್ನು ಬರೀ ಶೋಷಣೆ ಮಾಡುವ ಧರ್ಮವಾಗಿತ್ತು. ಅಲ್ಲಿ ಯಾವುದೇ ರೀತಿಯಲ್ಲೂ ಜನರಿಗೆ ಸಮಾನತೆ ಇರಲಿಲ್ಲ. ಆದರೆ, 12ನೇ ಶತಮಾನದಲ್ಲಿ ಬಸವಾದಿ ಶರಣರು ಸಮಾಜದಲ್ಲಿ ಲಿಂಗಭೇದ, ಶೋಷಣೆ, ಮೇಲು-ಕೀಳು ಎಲ್ಲವನ್ನೂ ಬುಡ ಸಮೇತ ಕಿತ್ತೆಸೆದು ಸಮಾನತೆಯ ತತ್ವದ ಮೂಲಕ ಇಡೀ ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶವನ್ನು ದೊರಕಿಸಿಕೊಟ್ಟಿದ್ದಾರೆ. ಅಂತಹ ಸಮಾನತೆ ತಂದುಕೊಟ್ಟ ಪ್ರತೀಕವಾದ ಧರ್ಮವೇ ಲಿಂಗಾಯಿತ ಧರ್ಮ ಎಂದರು.

ಲಿಂಗಾಯತ ಧರ್ಮ ಮಹಿಳೆಯರಿಗೆ ಸಮಾನತೆ, ಗೌರವ ತಂದುಕೊಟ್ಟಿದೆ. ಕಾಯಕ ತತ್ವದ ಮೂಲಕ ಸಮಾಜದಲ್ಲಿ ಹೊಸ ಪರಿವರ್ತನೆ ಉಂಟು ಮಾಡಿದಂತಹ ಶ್ರೇಷ್ಠ ಧರ್ಮವಾಗಿದೆ. ಶೋಷಿತ, ತಳಸಮುದಾಯದ ಜನರನ್ನೆಲ್ಲಾ ಒಟ್ಟುಗೂಡಿಸಿ ಸರ್ವರಿಗೂ ಸಮಾನತೆ ನೀಡುವ ಮೂಲಕ ಬೆಳೆದುಕೊಂಡ ಧರ್ಮವೇ ಲಿಂಗಾಯತ ಧರ್ಮ. ಆದರೆ, ಒಂದು ಕಾಲಕ್ಕೆ ಶೋಷಣೆಯ ಪ್ರತೀಕವಾಗಿದ್ದ ವೈದಿಕ ಧರ್ಮದ ಭಾಗವಾಗಿ ಬಂದಂತದ್ದು, ವೀರಶೈವವಾಗಿದೆ ಎಂದು ಹೇಳಿದರು.

Advertisement

ವೀರಶೈವ ಎಂಬ ಪದ ಇತಿಹಾಸದ ಪುಟಗಳಲ್ಲಿ ಎಲ್ಲೂ ಕೂಡ ಬಳಕೆಯಾಗಿಲ್ಲ. ಈ ಬಗ್ಗೆ ಸಾವಿರಾರು ಪುಟಗಳ ದಾಖಲೆಗಳನ್ನು ಬೇಕಾದರೂ ನೀಡಬಹುದಾಗಿದೆ. ಉಚ್ಚ ನ್ಯಾಯಾಲಯದ ನ್ಯಾಯಾಧೀಶ ನಾಗಮೋಹನ್‌ದಾಸ್‌ ಅವರು ಪ್ರತ್ಯೇಕ ಲಿಂಗಾಯತ ಧರ್ಮದ ಸ್ಥಾನಮಾನಕ್ಕೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಅವರು ಸುಮ್ಮನೆ ಪ್ರತ್ಯೇಕ ಧರ್ಮದ ಮಾನ್ಯತೆಗೆ ಮುಂದಾಗಿರಲಿಲ್ಲ. ಸ್ಪಷ್ಟವಾದ ಅಧ್ಯಯನ, ಆಧಾರವನ್ನು ಕ್ರೋಢಿಕರಣ ಮಾಡಿಕೊಂಡು ಈ ಕಾರ್ಯಕ್ಕೆ ಮುಂದಾದವರು. ಹಾಗಾಗಿ ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಲಿಂಗಾಯತ ಧರ್ಮವನ್ನು ಗುರ್ತಿಸುವಂತಾಗಬೇಕು ಎಂದರು.

ಹಿರಿಯ ಪತ್ರಕರ್ತ ನಾಡೋಜ ಪಾಟೀಲ್‌ ಪುಟ್ಟಪ್ಪ ಮಾತನಾಡಿ, ಲಿಂಗಾಯತ ಧರ್ಮದಲ್ಲಿ ದೊರೆಯುವ ಗೌರವ ಭಾವನೆ ಬೇರೆ ಧರ್ಮದಲ್ಲಿ ಇಲ್ಲ. ಆಗಂತ ಬೇರೆ ಧರ್ಮವನ್ನು ಅವಮಾನಿಸುತ್ತಿದ್ದೇನೆ ಅಂತಲ್ಲ ಎಂದ ಪಾಪುರವರು, ಇತ್ತೀಚೆಗೆ ಬಸವಣ್ಣನವರ ಬಗ್ಗೆ ಏನೇನೋ ಮಾತನಾಡಲಾಗುತ್ತಿದೆ. ಆದರೆ, ಬಸವಣ್ಣನವರಂತಹ ಪ್ರವಾದಿ ಈ ಜಗತ್ತಿನಲ್ಲಿ ಎಲ್ಲೂ ದೊರೆಯುವುದಿಲ್ಲ. ಬುದ್ಧ ಬಸವಣ್ಣನವರಿಗಿಂತಲೂ ದೊಡ್ಡವರಿರಬಹುದು. ಆದರೆ ಬುದ್ಧನಿಗಿಂತಲೂ ಬಸವಣ್ಣ ದೊಡ್ಡವರಾಗಿ ಕಂಡು ಬರುತ್ತಾರೆ ಎಂದು ಪ್ರತಿಪಾದಿಸಿದರು.

ಲಿಂಗಾಯತ ಧರ್ಮದ ಅನೇಕ ಮಠಗಳನ್ನು, ಸ್ವಾಮೀಜಿಗಳನ್ನು ನಾವು ನೋಡುತ್ತಿದ್ದೇವೆ. ಆದರೆ, ಅವರಲ್ಲಿ ಒಗ್ಗಟ್ಟು ಇಲ್ಲದಿರುವುದು ದುರ್ದೈವದ ಸಂಗತಿ ಎಂದರಲ್ಲದೇ, ನನಗೆ ಮಠಗಳ ಮೇಲೆ ಅಪಾರ ಪ್ರೀತಿ ಇದೆ. ಹೆಚ್ಚಾಗಿ ಮುರುಘಾ ಮಠದ ಭಕ್ತನಾಗಿದ್ದೇನೆ. ಜಯದೇವ ಜಗದ್ಗುರುಗಳ ಆಶೀರ್ವಾದ ನನ್ನ ಮೇಲೆ ಇದೆ. ಚಿತ್ರದುರ್ಗದ ಶಿವಮೂರ್ತಿ ಶರಣರೂ ಕೂಡ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರ ಬಗ್ಗೆ ವಿಶೇಷ ಗೌರವವಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಸ್ಪಿ ಆರ್‌. ಚೇತನ್‌ ಮಾತನಾಡಿ, 12ನೇ ಶತಮಾನದ ಬಸವಾದಿ ಶರಣರ ಆದರ್ಶ ಮಾರ್ಗದಲ್ಲಿ ನಡೆಯುತ್ತಿರುವುದರಿಂದಲೇ, ಭಾರತೀಯರನ್ನು ಇಂದು ಇಡೀ ವಿಶ್ವವೇ ಸಭ್ಯರು, ಸುಸಂಸ್ಕೃತರು ಎಂದು ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟರು.

ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಬೈಲೂರು ನಿಷ್ಕಲಮಠದ ಶ್ರೀ ನಿಜಗುಣ ಪ್ರಭು ತೋಂಟದಾರ್ಯ ಸ್ವಾಮೀಜಿ, ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೃಷ್ಣಪ್ಪ, ಎಚ್.ಎಂ. ಸ್ವಾಮೀಜಿ ಉಪಸ್ಥಿತರಿದ್ದರು. ಸುವರ್ಣ ಕೊಟ್ರೇಶ್‌ ಪ್ರಾರ್ಥಿಸಿದರು. ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಎಂ. ಶಿವಕುಮಾರ್‌ ಸ್ವಾಗತಿಸಿದರು.

ನಾ ದೊಡ್ಡವನಲ್ಲ, ನನ್ನಲ್ಲಿ ಇನ್ನೂ ಉತ್ಸಾಹ ಕುಂದಿಲ್ಲ, ನಾ ಇನ್ನೂ ಬೆಳೆಯಬೇಕಿದೆ. ನನ್ನ ಹೆಸರೇ ಪುಟ್ಟಪ್ಪ ಎಂದಾಗಿದ್ದು, ನಾ ಇನ್ನೂ ಸಣ್ಣವನು. ನನ್ನ ಗಂಟಲಿಗೆ ನೋವಾಗಿದ್ದರೂ ಕೂಡ ನಾ ಇನ್ನೂ ಸಿಂಹದಂತೆ ಘರ್ಜಿಸಬಲ್ಲೇ… ಎಂದು ಯುವಕರನ್ನೂ ನಾಚಿಸುವಂತೆ ನಾಡೋಜ ಪಾಟೀಲ ಪುಟ್ಟಪ್ಪ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next