Advertisement

ಉಪ ಚುನಾವಣೆಯಲ್ಲಿ 50,000 ಮತಗಳ ಅಂತರದಲ್ಲಿ ಗೆಲುವು

11:51 AM Oct 31, 2020 | Suhan S |

ಬೆಂಗಳೂರು: ಉಪಚುನಾವಣೆ ನಡೆದಿರುವ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ 50,000 ಹಾಗೂ ಶಿರಾ ಕ್ಷೇತ್ರದಲ್ಲಿ 15,000ದಿಂದ 20,000 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷರಾದ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಭವಿಷ್ಯ ನುಡಿದರು.

Advertisement

ಬಿಜೆಪಿ ನಗರ ಕಚೇರಿಯಿಂದ ಶುಕ್ರವಾರ ವರ್ಚ್ಯುವಲ್‌ ಕಾರ್ಯಕ್ರಮದ ಮೂಲಕ ಕ್ಷೇತ್ರದ ಮತದಾರರು, ಪ್ರಮುಖರೊಂದಿಗೆ ಸಂವಾದ ನಡೆಸಿದ ಅವರು, ಕೋವಿಡ್‌ ಹಿನ್ನೆಲೆಯಲ್ಲಿ ಎಲ್ಲಾ ಮತದಾರರನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಾಗದ ಕಾರಣ ವಿಡಿಯೋ ಸಂವಾದದಮೂಲಕ ಪ್ರಚಾರ ನಡೆಸಿ ಮತಯಾಚಿಸಲಾಗುತ್ತಿದೆ. ಕಾಂಗ್ರೆಸ್‌ ಸೋಲಿನ ಭೀತಿಯಲ್ಲಿ ಜಾತಿ ರಾಜಕಾರಣ ಮಾಡುತ್ತಿದೆ. ಆದರೆ ಬಿಜೆಪಿ ಎಂದಿಗೂ ಜಾತಿ ರಾಜಕಾರಣ ಮಾಡುವುದಿಲ್ಲ. ಅಭಿವೃದ್ಧಿ ಮೂಲಕ ಮತ ಕೇಳುತ್ತೇವೆ. ಅಪಪ್ರಚಾರ ಮಾಡುವ, ಗಲಭೆ ಸೃಷ್ಟಿಸುವ ನೀಚ ರಾಜಕಾರಣಕ್ಕೆ ಅಂತ್ಯ ಹಾಡಬೇಕಿದೆ ಎಂದು ಹೇಳಿದರು.

ಡಿ.ಜೆ.ಹಳ್ಳಿ ಗಲಭೆ ಕಾಂಗ್ರೆಸ್‌ ಸೃಷ್ಟಿ: ಈ ಉಪಚುನಾವಣೆಯಲ್ಲಿ ಪಕ್ಷ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ಪ್ರಶ್ನೆಗಿಂತ ನಗರದ ಜನರ ಭವಿಷ್ಯದ ಪ್ರಶ್ನೆ ಮುಖ್ಯ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯಲ್ಲಿ ಗಲಭೆ ಸೃಷ್ಟಿಸಿ ದಲಿತ ಶಾಸಕನ ಮನೆಗೆ ಬೆಂಕಿ ಹಚ್ಚಲಾಯಿತು. ಈ ಗಲಭೆ ಸೃಷ್ಟಿ ಮಾಡಿದ್ದೇ ಕಾಂಗ್ರೆಸ್‌. ಕಾಂಗ್ರೆಸ್‌ ಸಂಪತ್‌ರಾಜ್‌ ಮೂಲಕ ಬೆಂಕಿ ಹಾಕಿಸಿತು. ಸಂಪತ್‌ರಾಜ್‌ ಆಸ್ಪತ್ರೆಯಿಂದ ಪರಾರಿಯಾಗಲು ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್‌ ಮೂಲ ಕಾರಣ ಎಂದು ಆರೋಪಿಸಿದರು.

ಈ ರೀತಿಯ ಗಲಭೆಗಳು ನಡೆಯಲಾರಂಭಿಸಿದರೆ ಜನರ ಸ್ಥಿತಿ ಏನಾಗಬಹುದು? ಬಿಜೆಪಿ ಸರ್ಕಾರ 2 ಗಂಟೆಯಲ್ಲಿ ಗಲಭೆಯನ್ನು ನಿಯಂತ್ರಿಸಿತು. ಒಂದೊಮ್ಮೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಿದ್ದರೆ ಇಡೀ ರಾಜ್ಯಕ್ಕೆ ಬೆಂಕಿ ಬೀಳುತ್ತಿತ್ತು. ತನ್ನ ಶಾಸಕನನ್ನೇ ರಕ್ಷಿಸಿಕೊಳ್ಳಲಾಗದ ಕಾಂಗ್ರೆಸ್‌ನಿಂದ ರಾಜರಾಜೇಶ್ವರಿ  ನಗರ ಕ್ಷೇತ್ರದ ಜನರ ರಕ್ಷಣೆ ಸಾಧ್ಯವೇ. ಮೂಲ ಸೌಕರ್ಯದ ಜತೆಗೆ ಕಾನೂನು ಮತ್ತು ಸುವ್ಯವಸ್ಥೆಯೂ ಮುಖ್ಯ. ಹೀಗಾಗಿ ಯೋಚಿಸಿ ಮತಹಾಕಿ ಎಂದು ಮನವಿ ಮಾಡಿದರು.

ಸಿದ್ದರಾಮಣ್ಣ ಮುಖ್ಯಮಂತ್ರಿಯಾಗಿದ್ದಾಗ ಶಾಸಕರೊಬ್ಬರು ಸದನದಲ್ಲಿ ಮಕ್ಕಳು ಮಾದಕ ವಸ್ತುಗಳಿಗೆ ದಾಸರಾಗುತ್ತಿರುವುದಾಗಿ ಕಣ್ಣೀರಿಟ್ಟರು. ಆಗ ಸಮಾಜವಾದಿ ಚಿಂತನೆಯ ಮಜಾವಾದಿ ಸಿದ್ದರಾಮಣ್ಣ ಮಾದಕ ವಸ್ತು ಮಾಫಿಯಾದೊಂದಿಗೆ ಕೈಜೋಡಿಸಿ ಒಬ್ಬರನ್ನೂ ಬಂಧಿಸಲಿಲ್ಲ. ಮಾದಕ ವಸ್ತು ಮಾರಾಟಗಾರರ ಹಣದಲ್ಲಿ ಕಾಂಗ್ರೆಸ್‌ ರಾಜಕಾರಣ ಮಾಡಿತ್ತು. ಆದರೆ ನಮ್ಮ ಯಡಿಯೂರಪ್ಪ ಸರ್ಕಾರ ಇಡೀ ರಾಜ್ಯದಲ್ಲಿ ಮಾದಕ ವಸ್ತು ಜಾಲಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಡ್ರಗ್ಸ್‌ ಮುಕ್ತ ಕರ್ನಾಟಕ ನಮ್ಮ ಗುರಿ. ರಾಜ್ಯ ಬಿಜೆಪಿ ಉಪಾಧ್ಯಕ್ಷ ಅರವಿಂದ ಲಿಂಬಾವಳಿ, ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲೆ ಅಧ್ಯಕ್ಷ ಮಂಜುನಾಥ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next