Advertisement

ಮಂಗಳೂರು ರೈಲ್ವೇ ವಿಭಾಗ ರಚನೆಗೆ ನಳಿನ್‌ ಆಗ್ರಹ

01:00 AM Mar 15, 2020 | Sriram |

ಮಂಗಳೂರು: ಮಂಗಳೂರಿನಲ್ಲಿ ರೈಲು ಸೇವೆ 1907ರಲ್ಲಿ ಆರಂಭಗೊಂಡಿದ್ದು 111 ವರ್ಷಗಳ ಇತಿಹಾಸವಿದೆ. ಆದರೆ ಈ ಭಾಗದಲ್ಲಿ ರೈಲ್ವೇ ಸೇವೆ ಗಳನ್ನು ಅಭಿವೃದ್ಧಿಪಡಿಸಲು ಅನೇಕ ವಿಚಾರಗಳು ಸಮಸ್ಯೆಗಳನ್ನು ಸೃಷ್ಟಿಸಿವೆ. ಆದುದರಿಂದ ಮಂಗಳೂರಿಗೆ ಪ್ರತ್ಯೇಕ ರೈಲ್ವೇ ವಿಭಾಗ ನೀಡುವುದು ಅವಶ್ಯವಾಗಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಲೋಕಸಭೆಯಲ್ಲಿ ಆಗ್ರಹಿಸಿದ್ದಾರೆ.

Advertisement

ಲೋಕಸಭೆಯಲ್ಲಿ ಶುಕ್ರವಾರ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾಕಷ್ಟು ಸ್ಥಳಾವಕಾಶವಿರುವ ಮಂಗಳೂರು ಜಂಕ್ಷನ್‌ನಲ್ಲಿ ವಿಭಾಗೀಯ ಕೇಂದ್ರ ಕಚೇರಿ ನಿರ್ಮಿಸಬಹುದಾಗಿದೆ. ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣ ದಕ್ಷಿಣ ರೈಲ್ವೇಯ 7 ಕಿ.ಮೀ., ಕೊಂಕಣ ರೈಲ್ವೇಯ 18 ಕಿ.ಮೀ. ಮತ್ತು ನೈಋತ್ಯ ರೈಲ್ವೇಯ 6 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಹೀಗಾಗಿ ಕೊಂಕಣ ರೈಲ್ವೇಯ ಅಧೀನದಲ್ಲಿ ಪ್ರತ್ಯೇಕ ಮಂಗಳೂರು ವಿಭಾಗ ರಚಿಸಬೇಕು ಎಂದರು.

ವಿಶ್ವದರ್ಜೆ ನಿಲ್ದಾಣವಾಗಿಸಿ
ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ಹೊಸ ಕಟ್ಟಡ ನಿರ್ಮಿಸಿ ವಿಶ್ವದರ್ಜೆಯ ನಿಲ್ದಾಣವಾಗಿ ಅಭಿವೃದ್ಧಿಪಡಿಸಬೇಕು ಎಂದರು.

ಮಂಗಳೂರು-ಬೆಂಗಳೂರು ರೈಲುಮಾರ್ಗದ ಹಳಿ ದ್ವಿಗುಣ ಮತ್ತು ವಿದ್ಯುದೀಕರಣಗೊಳಿಸಬೇಕು. ಸುಬ್ರಹ್ಮಣ್ಯ ಮಾರ್ಗದಿಂದ ಮಂಗಳೂರು ವರೆಗೆ 8 ಕಡೆ ಮೇಲ್ಸೇತುವೆ ಅಥವಾ ಕೆಳಸೇತುವೆ ನಿರ್ಮಿಸಬೇಕು, ಮಂಗಳೂರಿನಿಂದ ಎಲ್ಲ ಜಿಲ್ಲಾ ಹಾಗೂ ರಾಜ್ಯಗಳ ಕೇಂದ್ರ ಸ್ಥಾನಗಳಲ್ಲಿ ರೈಲ್ವೇ ಸಂಪರ್ಕ ಕಲ್ಪಿಸಬೇಕು, ಮಂಗಳೂರು-ಬೀದರ್‌, ಮಂಗಳೂರು-ತಿರುಪತಿ ಹೊಸದಾಗಿ ರೈಲು ಸಂಚಾರ ಆರಂಭಿಸಬೇಕು, ಮಂಗಳೂರಿನಿಂದ ರಾಮೇಶ್ವರಕ್ಕೆ ನೇರ ರೈಲು ಸಂಚಾರ, ಮಂಗಳೂರು-ವಿಜಯಪುರ ರೈಲು ಅನ್ನು ಖಾಯಂಗೊಳಿಸಬೇಕು, ಮಂಗಳೂರು-ಮಡಂಗಾವ್‌ ರೈಲನ್ನು ಸೂಪರ್‌ಫಾಸ್ಟ್‌ ರೈಲು ಆಗಿ ಪರಿವರ್ತಿಸಬೇಕು ಹಾಗೂ ಥಾಣೆ ಅಥವಾ ಸಿಎಸ್‌ಟಿಗೆ ವಿಸ್ತರಿಸಬೇಕು ಮುಂತಾದ ಬೇಡಿಕೆಗಳನ್ನು ಅವರು ರೈಲ್ವೇ ಸಚಿವರಲ್ಲಿ ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next