Advertisement

ನಕುಲ್‌ ಕೇರ್‌ ಆಫ್ ಅರ್ಜುನ್‌

11:34 AM Feb 23, 2018 | |

ಚಿತ್ರರಂಗಕ್ಕೆ ಬರಬೇಕಾದರೆ ಯಾರಾದರೊಬ್ಬರೂ ಬೆಂಬಲಕ್ಕೆ ಇದ್ದರೆ ಹೊಸಬರಿಗೆ ಸಹಾಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಮಾರ್ಗದರ್ಶನದ ಜೊತೆಗೆ ಚಿತ್ರರಂಗದ ಬಗ್ಗೆ ಮಾಹಿತಿ ಕೂಡಾ ನೀಡುತ್ತಾರೆ. ಚಿತ್ರರಂಗದಲ್ಲಿ ಬಿಝಿ ಇರುವ ಅನೇಕರು ತಮ್ಮ ಪರಿಚಯದವರನ್ನು, ಸ್ನೇಹಿತರನ್ನು ಚಿತ್ರರಂಗಕ್ಕೆ ಕರೆತರುತ್ತಿದ್ದಾರೆ.

Advertisement

ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯಾ ಕೂಡಾ ಪರಿಚಯದ ಹುಡುಗನೊಬ್ಬನನ್ನು ಚಿತ್ರರಂಗಕ್ಕೆ ಕರೆತಂದಿದ್ದಾರೆ. ಅವರೇ ನಕುಲ್‌. “ಪ್ರೀತಿಯ ರಾಯಭಾರಿ’ ಎಂಬ ಸಿನಿಮಾವೊಂದು ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಗೆ ರೆಡಿಯಾಗಿದ್ದು, ಮಾರ್ಚ್‌ 2 ರಂದು ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಹೀರೋ ಆಗಿ ನಟಿಸಿದವರೇ ನಕುಲ್‌.

ನಕುಲ್‌ಗೆ ಇದು ಮೊದಲ ಸಿನಿಮಾ. ಅರ್ಜುನ್‌ ಜನ್ಯಾ ಅವರು ನಕುಲ್‌ ಅವರ ಫ್ಯಾಮಿಲಿ ಫ್ರೆಂಡ್‌ ಅಂತೆ. ಅದೇ ಕಾರಣದಿಂದ ನಕುಲ್‌ಗೆ ಸಾಕಷ್ಟು ಬೆಂಬಲ ನೀಡಿದ್ದಾರಂತೆ ಅರ್ಜುನ್‌ ಜನ್ಯಾ. ಹಾಗಾಗಿ, ನಕುಲ್‌, ಅರ್ಜುನ್‌ ಜನ್ಯಾ ಅವರ ಸಹಾಯವನ್ನು ನೆನಪಿಸಿಕೊಳ್ಳುತ್ತಾರೆ. ಕ್ಯಾಮರಾ ಮುಂದೆ ನಿಲ್ಲುವ ಮೊದಲು ನಕುಲ್‌ ಚೆನ್ನೈನಲ್ಲಿ ಒಂದು ವರ್ಷಗಳ ಕಾಲ ನಟನೆ, ಫೈಟ್‌, ಡ್ಯಾನ್ಸ್‌ ತರಬೇತಿ ಪಡೆದರಂತೆ.

“ಪ್ರೀತಿಯ ರಾಯಭಾರಿ’ ಸಿನಿಮಾ ನೈಜ ಘಟನೆಯನ್ನಾಧರಿಸಿ ಮಾಡಿದ್ದರಿಂದ ಆ ಪಾತ್ರಕ್ಕಾಗಿ ವಿಶೇಷವಾಗಿ ತಯಾರಾ ನಕುಲ್‌ ಕ್ಯಾಮರಾ ಮುಂದೆ ಅದು ಸಹಾಯವಾಯಿತಂತೆ. “ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಈಗಾಗಲೇ ಸಿನಿಮಾ ನೋಡಿರುವ ಸ್ನೇಹಿತರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರದ ಹಿಂದಿ ಡಬ್ಬಿಂಗ್‌ ರೈಟ್ಸ್‌ ಕೂಡಾ ಒಳ್ಳೆಯ ಬೆಲೆಗೆ ಮಾರಾಟವಾಗಿದೆ’ ಎಂದು ಖುಷಿಯಿಂದ ಹೇಳುತ್ತಾರೆ ನಕುಲ್‌.

Advertisement

Udayavani is now on Telegram. Click here to join our channel and stay updated with the latest news.

Next