Advertisement

ನಾಡಿಗೆ ದೊಡ್ಡದು ನಾಗರ ಪಂಚಮಿ

09:43 AM Aug 05, 2019 | Suhan S |

ಹಾವೇರಿ: ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ಉತ್ತರ ಕರ್ನಾಟಕದ ಹೆಬ್ಟಾಗಿಲು ಹಾವೇರಿಯಲ್ಲಿ ವಿಶಿಷ್ಟವಾಗಿ ಆಚರಿಸಲಾಗುತ್ತದೆ. ‘ಹೆಣ್ಮಕ್ಕಳ ಹಬ್ಬ’ ಎಂದು ಪ್ರಚಲಿತವಾಗಿರುವ ಈ ಹಬ್ಬ ಗ್ರಾಮೀಣ ಹುಡುಗರ ಅಪ್ಪಟ ಜಾನಪದ ಕ್ರೀಡೆಗಳ ಹಬ್ಬವೂ ಆಗಿ ಆಚರಿಸಲ್ಪಡುವುದು ಇನ್ನೊಂದು ವಿಶೇಷ.

Advertisement

ನಾಗರ ಪಂಚಮಿ ಹಬ್ಬದ ದಿನಗಳಂದು ಗ್ರಾಮೀಣ ಪ್ರದೇಶಗಳಲ್ಲಿ ಯುವಕರು ತಮ್ಮದೇ ಆದ ಗ್ರಾಮೀಣ ಕ್ರೀಡೆಗಳಲ್ಲಿ ತೊಡಗುವ ಮೂಲಕ ಹಬ್ಬಕ್ಕೆ ಕ್ರೀಡಾ ಮೆರಗು ನೀಡುತ್ತಾರೆ. ಈ ಹಬ್ಬದಲ್ಲಿ ವಿವಿಧ ರೀತಿಯ ಮೋಜಿನ, ಶಕ್ತಿ-ಯುಕ್ತಿ ಪ್ರದರ್ಶನದಂತಹ ಅಪ್ಪಟ ‘ಗ್ರಾಮೀಣ ಆಟ’ಗಳನ್ನು ಆಡುತ್ತಾರೆ.

ನಾಗರ ಪಂಚಮಿ ಹಬ್ಬ ಬಂತೆಂದರೆ ಸಾಕು, ಪ್ರತಿ ಹಳ್ಳಿ, ಪಟ್ಟಣಗಳ ಬಯಲು ಇಲ್ಲವೇ ರಸ್ತೆಗಳ ಪಕ್ಕ ಯುವಕರ ತಂಡಗಳು ಗುಂಪು ಗುಂಪಾಗಿ ನಿಂತಿರುವ ದೃಶ್ಯಗಳು ಸಾಮಾನ್ಯವಾಗಿ ಕಾಣ ಸಿಗುತ್ತವೆ. ನಿಂಬೆ ಹಣ್ಣು ಎಸೆತ, ಗೋಲಿ ಎಸೆತ, ಕಣ್ಣಿಗೆ ಬಟ್ಟೆ ಕಟ್ಟಿ ಮನೆ ಅಥವಾ ಪ್ರದೇಶ ಗುರುತಿಸುವಂತಹ ಒಂದಿಲ್ಲೊಂದು ಮೋಜಿನ ಆಟಗಳಲ್ಲಿ ನಿರತರಾಗಿರುವುದು ಕಂಡು ಬರುತ್ತದೆ.

ಲಿಂಬೆಹಣ್ಣು, ಗೋಲಿ ಆಟ: ಊರ ಮುಂದಿನ ಬಯಲಲ್ಲಿ ದುಂಡಿ ಕಲ್ಲುಗಳನ್ನು ಎತ್ತುವುದು, ಗಿಡ- ಮರಗಳಿಗೆ ಕಟ್ಟಿದ ಜೋಕಾಲಿ ಜೀಕುತ್ತಲೇ ಗಿಡಕ್ಕೆ ಕಟ್ಟಿದ ಕೊಬ್ಬರಿ ಬಟ್ಟಲು, ಹಣ ಇತ್ಯಾದಿಗಳನ್ನು ಕಿತ್ತು ತರುವುದು. ಏಣಿ ಜೋಕಾಲಿ ಏರುವಂತಹ ಶಕ್ತಿ-ಯುಕ್ತಿ ಆಟಗಳಲ್ಲಿ ಯುವಕರು ತೊಡಗಿರುವುದು ಸಾಮಾನ್ಯ ವಾಗಿರುತ್ತದೆ.

ಮೋಜಿನ ಆಟದಲ್ಲಿ ಬರುವ ನಿಂಬೆ ಹಣ್ಣು ಹಾಗೂ ಗೋಲಿ ಎಸೆತದದ ಆಟದಲ್ಲಿ ಏಳೆಂಟು ಅಡಿಗಳಲ್ಲಿ ಸುಣ್ಣದಿಂದ ಎರಡು ಗೆರೆಗಳನ್ನು ಹಾಕಿರುತ್ತಾರೆ. ಒಂದು ಗೆರೆಯ ಹಿಂದುಗಡೆ ತಂಬಿಗೆ ಇಲ್ಲವೇ ಕಿರಿದಾದ ಡಬ್ಬಿಯಂತಹ ವಸ್ತು ಇಡಲಾಗುತ್ತಿದೆ. ಇನ್ನೊಂದು ಗೆರೆಯ ತುದಿಯಲ್ಲಿ ನಿಂತು ತಂಬಿಗೆ ಇಲ್ಲವೇ ಡಬ್ಬಿಗೆ ನಿಂಬೆ ಹಣ್ಣು ಹಾಕಬೇಕು. ಅದಕ್ಕಾಗಿ ಮೂರು ಅವಕಾಶ ನೀಡಲಾಗುತ್ತದೆ. ಅಲ್ಲಿ ನಿಂತಿರುವ ಯುವಕರಲ್ಲಿ ಕೆಲವರು ಆ ತಂಬಿಗೆಯಲ್ಲಿ ನಿಂಬೆ ಹಣ್ಣು ಬೀಳುವುದಿಲ್ಲ ಎಂದುಕೊಂಡು ಹಣವನ್ನು ಬಾಜಿ ರೂಪದಲ್ಲಿ ಕಟ್ಟಿರುತ್ತಾರೆ. ನಿಂಬೆಹಣ್ಣು ಎಸೆಯುವ ವ್ಯಕ್ತಿ ಹಾಕುವಲ್ಲಿ ಯಶಸ್ವಿಯಾದರೆ, ಬಾಜಿಗೆ ಕಟ್ಟಿದ ಹಣ ಎಲ್ಲವೂ ಅವನಿಗೆ ಸೇರುತ್ತದೆ. ಹಾಕಲು ಸಾಧ್ಯವಾಗದ್ದಿದರೆ, ಕಟ್ಟಿಸಿಕೊಂಡ ಹಣಕ್ಕೆ ಪ್ರತಿಯಾಗಿ ಹಣ ನೀಡಬೇಕಾಗುತ್ತದೆ. ಗೋಲಿಗಳ ಎಸೆತ ಆಟವೂ ಇದೇ ನಿಯಮಾವಳಿ ಹೊಂದಿರುತ್ತದೆ.

Advertisement

ಇದೇ ರೀತಿ ಇಷ್ಟು ಎಸೆತಗಳಲ್ಲಿ ಈ ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ನಿಂಬೆ ಹಣ್ಣು ಎಸೆಯುವ ಷರತ್ತು ಹಾಕಲಾಗುತ್ತೆ. ನಿಗದಿತ ಎಸೆತಗಳಲ್ಲಿ ಗುರಿ ತಲುಪಿದರೆ ಬಹುಮಾನ ನೀಡಲಾಗುತ್ತದೆ. ಇಲ್ಲದಿದರೆ ಆತನೇ ಬೇರೆಯವರಿಗೆ ಬಹುಮಾನ ನೀಡಬೇಕಾಗುತ್ತದೆ.

ಕಣ್ಣು ಮುಚ್ಚಾಲೆ: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಊರಲ್ಲಿ ಇಂತವರ ಮನೆ ಇಲ್ಲವೇ ಈ ದೇವಸ್ಥಾನ ತಲುಪಬೇಕು ಎನ್ನುವ ಷರತ್ತು ಆಟದಲ್ಲಿರುತ್ತದೆ. ಯುವಕರ ಗುಂಪು ವ್ಯಕ್ತಿಯೊಬ್ಬನ ಕಣ್ಣಿಗೆ ಬಟ್ಟೆ ಕಟ್ಟಿ ತಾನು ನಿಂತ ಜಾಗದಿಂದಲೇ ಎರಡ್ಮೂರು ಸುತ್ತು ತಿರುಗಿಸಿ ಕೈ ಬಿಡಲಾಗುತ್ತದೆ. ಆತ ತನಗೆ ತಿಳಿಸಿದ ಮನೆ ಇಲ್ಲವೇ ದೇವಸ್ಥಾನ ಹುಡುಕುತ್ತ ಸಾಗಬೇಕು. ಆಗ ಉಳಿದ ಯುವಕರು ಉದ್ದೇಶಪೂರ್ವವಾಗಿಯೇ ಆತನನ್ನು ದಾರಿ ತಪ್ಪಿಸಲು ಅತ್ತಿತ್ತ ಹೋಗುವಂತೆ ಕೀಟಲೆ ಮಾಡುತ್ತಿರುತ್ತಾರೆ. ಇಲ್ಲಿವೂ ಕೂಡಾ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಾತ ಗುರಿ ಮುಟ್ಟಲು ಯಶಸ್ವಿಯಾದರೆ, ನಗದು ರೂಪದ ಬಹುಮಾನ ಪಡೆದುಕೊಳ್ಳಬಲ್ಲ.

ಕಲ್ಲು ಎತ್ತುವ ಆಟ: ಗ್ರಾಮೀಣ ಪ್ರದೇಶದ ಯುವಕರು ಹಬ್ಬ ಹರಿದಿನಗಳಲ್ಲಿ ದುಂಡಿ ಕಲ್ಲು ಎತ್ತುವಂತಹ ಕಸರತ್ತು ಮಾಡುತ್ತಾರೆ. ಸಂಪೂರ್ಣ ಶಕ್ತಿ ಆಧಾರಿತ ಈ ಆಟಕ್ಕೆ ಪಂಚಮಿ ಹಬ್ಬದಲ್ಲಿ ಇನ್ನಷ್ಟು ಮೆರಗು ಬಂದಿರುತ್ತದೆ. ಊರ ಮಧ್ಯದ ಬಯಲು ಜಾಗೆಯಲ್ಲಿ ವಿವಿಧ ಸೈಜಿನ (30 ಕೆಜಿಯಿಂದ 120 ಕೆಜಿವರೆಗೆ) ದುಂಡಿಗಲ್ಲುಗಳನ್ನು ಇಟ್ಟಿರುತ್ತಾರೆ. ಶಕ್ತಿಯುತ ಯುವಕರು ಒಂದೊಂದೇ ದುಂಡಿಕಲ್ಲು ಎತ್ತುತ್ತ ಸಾಗಬೇಕು. ಆತ ಎಷ್ಟು ಗಾತ್ರದ ದುಂಡಿಗಲ್ಲನ್ನು ಎತ್ತಲು ಯಶಸ್ವಿಯಾಗುತ್ತಾನೆಯೋ ಅದರ ಆಧಾರದ ಮೇಲೆ ಆತನಿಗೆ ನಗದು ಇಲ್ಲವೇ ವಸ್ತುಗಳ ರೂಪದಲ್ಲಿ ಬಹುಮಾನ ನೀಡಿದರೆ, ಎತ್ತಲು ಸಾಧ್ಯವಾಗದವರಿಗೆ ಸೇರಿದ ಜನರೇ ಕೀಟಲೆಯಿಂದ ಅಪಹಾಸ್ಯ ಮಾಡುವುದುಂಟು.

ಜೋಕಾಲಿ ಜೀಕಾಟ: ಊರ ಮುಂದಿನ ದೊಡ್ಡ ಗಿಡಗಳಿಗೆ ಬೃಹತ್‌ ಗಾತ್ರದ ಜೋಕಾಲಿ ಕಟ್ಟಲಾಗುತ್ತದೆ. ಜೋಕಾಲಿ ಜೀಕುವುದರ ಜತೆಗೆ ಕೆಲ ಕಸರತ್ತು ಮಾಡುವ ಆಟಗಳನ್ನು ಆಡಲಾಗುತ್ತದೆ. ಗಿಡದ ಒಂದು ಟೊಂಗೆಗೆ ಕಟ್ಟಿರುವ ಜೋಕಾಲಿ ಜೀಕುತ್ತಲೇ ಇನ್ನೊಂದು ಟೊಂಗೆಗೆ ಕಟ್ಟಿರುವ ಒಣಕೊಬ್ಬರಿ ಬಟ್ಟಲು, ಉಂಡಿ ಇಲ್ಲವೇ ಹಣ ಕಿತ್ತು ತರುವುದು ಅಥವಾ ಮುಟ್ಟಿ ಬರುವುದು ಜೋಕಾಲಿ ಜೀಕಾಟದ ಷರತ್ತಾಗಿರುತ್ತದೆ. ಅದರಲ್ಲಿ ಯಶಸ್ವಿಯಾಗುವ ಯುವಕರಿಗೆ ಮಾನ – ಸಮ್ಮಾನಗಳು ಇಲ್ಲವೇ ಗಿಡಕ್ಕೆ ಕಟ್ಟಿದ ವಸ್ತುಗಳು ಅವರದಾಗುತ್ತವೆ.

ಅದೇ ರೀತಿ ಯುವಕರ ಇಡೀ ದೇಹದ ನಿಯಂತ್ರಣ ಸಾಧಿಸಲು ಸಹಕಾರಿಯಾಗುವ ‘ಏಣಿ ಜೋಕಾಲಿ’ಯನ್ನು ಗಿಡ ಹಾಗೂ ನೆಲವನ್ನು ಸಂಪರ್ಕಿಸಿ ಕಟ್ಟಲಾಗುತ್ತದೆ. ಏಣಿ ರೂಪದಲ್ಲಿ ಇರುವ ಈ ಜೋಕಾಲಿಗೆ ಗಿಡ ಹಾಗೂ ನೆಲ ಭಾಗದಲ್ಲಿ ಒಂದು ಎಳೆಯ ಹಗ್ಗ ಕಟ್ಟಿರುತ್ತಾರೆ. ಮಧ್ಯದಲ್ಲಿ ಏಣಿಯಂತೆ ಹಲ್ಲುಗಳಿರುತ್ತವೆ. ಯಾವುದೇ ಆಧಾರ ಇಲ್ಲದೇ ಇದನ್ನು ಏರುವ ಮೂಲಕ ಗಿಡಕ್ಕೆ ಕಟ್ಟಿದ ವಸ್ತುಗಳನ್ನು ತರುವುದು ಈ ಆಟದ ನಿಯಮ. ಆದರೆ, ಎರಡೂ ಕಡೆಗಳಲ್ಲಿ ಒಂದೇ ಎಳೆಯ ಹಗ್ಗ ಇರುವುದರಿಂದ ಏಣಿ ಏರುವವನಿಗೆ ಬ್ಯಾಲನ್ಸ್‌ ಸಿಗುವುದು ಬಹಳ ಕಷ್ಟ. ಹೀಗಾಗಿ ಮಧ್ಯದಲ್ಲೇ ಜಾರಿ ಬೀಳುವವರ ಸಂಖ್ಯೆ ಹೆಚ್ಚು. ಈ ಆಟದಲ್ಲಿ ಗೆಲುವು ಸಾಧಿಸಿದವರಿಗೆ ನಗದು ಪುರಸ್ಕಾರ ನೀಡಲಾಗುತ್ತದೆ.

ಪಂಚಮಿ ಹಬ್ಬದಲ್ಲಿ ನಾನಾ ಬಗೆಯ ಉಂಡಿ, ಚಕ್ಕುಲಿ ತಿನ್ನುವುದರ ಜತೆಗೆ ಇಂತಹ ಮೋಜಿನ ಆಟಗಳು ಹಬ್ಬಕ್ಕೆ ಮತ್ತಷ್ಟು ಮೆರಗು ತಂದು ಹಬ್ಬದ ಸಂತಸವನ್ನು ಇಮ್ಮಡಿಗೊಳಿಸುತ್ತವೆ.

ಮಕ್ಕಳ ‘ಉಂಡಿ ಹಬ್ಬ’: ನಾಗರ ಪಂಚಮಿ ಹಬ್ಬವನ್ನು ಮೂರು ದಿನಗಳ ಹಬ್ಬವಾಗಿ ಇಲ್ಲಿ ಆಚರಿಸಲಾಗುತ್ತದೆ. ಮೊದಲ ದಿನ ರೊಟ್ಟಿ ಪಂಚಮಿ, ಎರಡನೇ ದಿನ ನಾಗರ ಪಂಚಮಿ, ಮೂರನೇ ದಿನ ಕರಿ ಪಂಚಮಿ ಎಂದು ಆಚರಿಸಲಾಗುತ್ತದೆ. ಸುಮಂಗಲೆಯರು ಹುತ್ತಕ್ಕೆ ಹಾಗೂ ನಾಗದೇವತೆ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಹಾಲೆರೆಯುವುದು ವಿಶೇಷ. ಗಂಡನ ಮನೆಯಿಂದ ತವರಿಗೆ ಬಂದ ಹೆಂಗಳೆಯರು ಹೊಸ ಸೀರೆಯುಟ್ಟು ಸಡಗರದಿಂದ ಪಂಚಮಿ ಹಬ್ಬ ಆರಿಸುತ್ತಾರೆ. ಮಕ್ಕಳು ಒಣ ಕೊಬ್ಬರಿ ಬಟ್ಟಲು ಆಟ ಆಡುತ್ತಲೇ ಜೋಕಾಲಿ ಆಡಿ ಸಂಭ್ರಮಿಸುತ್ತಾರೆ. ಶೇಂಗಾ ಉಂಡಿ, ಅಂಟಿನ ಉಂಡಿ, ಹಿಟ್ಟಿನ ಉಂಡಿ, ಬೆಲ್ಲದ ಉಂಡಿ, ಎಳ್ಳಿನ ಉಂಡಿ ಹೀಗೆ ವಿವಿಧ ಬಗೆಯ ಉಂಡಿ ಈ ಹಬ್ಬದ ವೈಶಿಷ್ಟ್ಯ ಖಾದ್ಯವಾಗಿದ್ದು ತಿಂಗಳಗಟ್ಟಲೆ ಈ ಉಂಡಿ ಮಕ್ಕಳ ಕೈಯಲ್ಲಿ ಅಂಟಿಕೊಂಡಿರುತ್ತದೆ. ಹೀಗಾಗಿ ಮಕ್ಕಳ ಬಾಯಲ್ಲಿ ಇದು ‘ಉಂಡಿ ಹಬ್ಬ’ ಎಂತಲೇ ಕರೆಸಿಕೊಳ್ಳುತ್ತದೆ.

 

•ಎಚ್.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next