Advertisement

Mysuru Dasara ಗಜಪಯಣಕ್ಕೆ ಕ್ಷಣಗಣನೆ: ನಾಗರಹೊಳೆ ಹೆಬ್ಬಾಗಿಲಲ್ಲಿ ಸಕಲ ಸಿದ್ದತೆ

10:04 AM Aug 31, 2023 | Team Udayavani |

ಹುಣಸೂರು: ವಿಶ್ವ ವಿಖ್ಯಾತ ಮೈಸೂರು ದಸರಾಗೆ ಮುನ್ನುಡಿಯಾಗಿರುವ ಗಜಪಯಣಕ್ಕೆ ನಾಗರಹೊಳೆ ಉದ್ಯಾನದ ಹೆಬ್ಬಾಗಿಲು ವೀರನಹೊಸಹಳ್ಳಿ ಬಳಿ ಸೆ.1ರ ಶುಕ್ರವಾರದಂದು ಚಾಲನೆ ದೊರೆಯಲಿದ್ದು, ಅರಣ್ಯ ಇಲಾಖೆ ಪೂರ್ವ ಸಿದ್ದತೆ ನಡೆಸಿದೆ.

Advertisement

ಗಜಪಯಣದ ಸಿದ್ದತೆ ಕುರಿತು ಮೈಸೂರು ವಿಭಾಗದ ಡಿಸಿಎಫ್ ಸೌರಬ್‌ಕುಮಾರ್ ಉದಯವಾಣಿಗೆ ಮಾಹಿತಿ ನೀಡಿದರು.
ಈ ಬಾರಿ ಗಜಪಯಣ ವಿಜೃಂಭಿಸಲು ವಿಭಿನ್ನ, ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಜಂಗಲ್ ಇನ್ ರೆಸಾರ್ಟ್ ಬಳಿ ಈ ಬಾರಿ ಗಣ್ಯರು ಸೇರಿದಂತೆ ಸುಮಾರು ಎರಡು ಸಾವಿರ ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಿದ್ದು, ಮಳೆ ನೀರು ರಕ್ಷಕ ಜರ್ಮನ್ ಟೆಂಟ್‌ನ ಬೃಹತ್ ಪೆಂಡಾಲ್ ಹಾಕಲಾಗಿದೆ. ರಸ್ತೆಯ ಇಕ್ಕೆಲಗಳಲ್ಲೂ ಗಿಡಗುಂಟೆಗಳನ್ನು ತೆರವುಗೊಳಿಸಲಾಗಿದೆ. ಸುಮಾರು ಮೂರು ಸಾವಿರ ಮಂದಿಗೆ ಹಾಗೂ ಗಣ್ಯರಿಗೆ ನಾಗಾಪುರ ಆಶ್ರಮ ಶಾಲೆಯಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದ್ದು, ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಳ್ಳುವಂತೆ ವ್ಯಾಪಕ ಪ್ರಚಾರ ಮಾಡಲಾಗಿದೆ ಎಂದರು.

ಬೆಳಗ್ಗೆ 10ಕ್ಕೆ ಗಜಪಯಣ:
ಸೆ.1ರ ಶುಕ್ರವಾರ ಬೆಳಗ್ಗೆ 9.45ರಿಂದ 10-15ರೊಳಗೆ ಸಂಪ್ರದಾಯದಂತೆ ಅರಮನೆ ಪುರೋಹಿತ ಪ್ರಹಲ್ಲಾದರಾವ್ ಮತ್ತವರ ತಂಡ ವೀರನಹೊಸಹಳ್ಳಿ ಗೇಟ್ ಬಳಿಯ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಗಜಪಡೆಗೆ ಪೂಜೆ ಸಲ್ಲಿಸುವರು. ನಂತರ ಅತಿಥಿಗಳು ಗಜಪಡೆಗೆ ಪುಷ್ಪಾರ್ಚನೆ ನೆರವೇರಿಸಿ ಪಯಣಕ್ಕೆ ಚಾಲನೆ ದೊರೆಯಲಿದೆ. ಮೊದಲ ತಂಡದಲ್ಲಿ ಕ್ಯಾಪ್ಟನ್ ಖ್ಯಾತಿಯ ಅಭಿಮನ್ಯು ನೇತ್ರತ್ವದ ಒಂಬತ್ತು ಆನೆಗಳು ಪಾಲ್ಗೊಳ್ಳುತ್ತಿವೆ ಎಂದರು.

ಕಲಾ ತಂಡಗಳ ವೈಭವ:
ಗಜಪಡೆಯ ಮುಂದೆ ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ ಕುಣಿತ, ಪೂಜಾ ಕುಣಿತ, ಪಟಕುಣಿತ, ಗೊರವರ ಕುಣಿತ, ಗುರುಪುರ ಟಿಬೇಟಿಯನ್ ಶಾಲಾ ಮಕ್ಕಳ ನೃತ್ಯ, ಆದಿವಾಸಿ ಮಕ್ಕಳ ನೃತ್ಯ ಸೇರಿದಂತೆ ಹತ್ತಕ್ಕೂ ಹೆಚ್ಚು ಕಲಾ ತಂಡಗಳು ಗಜಪಡೆಯ ಮುಂದೆ ಪ್ರದರ್ಶನ ನೀಡಲಿದೆ.

ವೇದಿಕೆ ಸಮಾರಂಭ:
ಗಜಪಯಣ ಆರಂಭದ ನಂತರ ವೇದಿಕೆ ಸಮಾರಂಭ ಶಾಸಕ ಜಿ.ಡಿ.ಹರೀಶ್‌ಗೌಡರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪರ ಸಮ್ಮುಖದಲ್ಲಿ ಅರಣ್ಯ ಸಚಿವ ಈಶ್ವರಖಂಡ್ರೆ ದಸರಾ ಆನೆಗಳ ಪಟ್ಟಿ ಹಾಗೂ ಕಿರು ಪುಸ್ತಕ ಬಿಡುಗಡೆ ಮಾಡುವರು.

Advertisement

ಸಚಿವರ ದಂಡು:
ಉಸ್ತುವಾರಿ ಸಚಿವ, ಅರಣ್ಯ ಸಚಿವ ಸೇರಿದಂತೆ ಪಶುಸಂಗೋಪನಾ ಇಲಾಖೆ ಸಚಿವ ಕೆ.ವೆಂಕಟೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್‌ತಂಗಡಗಿ, ಸಂಸದ ಪ್ರತಾಪಸಿಂಹ, ಮೇಯರ್ ಶಿವಕುಮಾರ್, ದೊಡ್ಡಹೆಜ್ಜೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾಲೋಕೇಶ್ ಸೇರಿದಂತೆ ಜಿಲ್ಲೆಯ ಶಾಸಕರು ಹಾಗೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಈ ನಾಡ ಹಬ್ಬದ ಸಂಭ್ರಮದಲ್ಲಿ ಈ ಭಾಗದ ಜನರು ಭಾಗವಹಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: Verdict: ತಂಗಿಯ ಮೇಲೆ ಅತ್ಯಾಚಾರ: ರಕ್ಷಾ ಬಂಧನ ದಿನದಂದೇ 20 ವರ್ಷ ಜೈಲು ಶಿಕ್ಷೆಗೊಳಗಾದ ಅಣ್ಣ

ಮೊದಲ ತಂಡದಲ್ಲಿ ಅಭಿಮನ್ಯು ಸೇರಿದಂತೆ 9 ಆನೆಗಳು
ಹುಣಸೂರು: ಮೈಸೂರಿನ ಸುಂದರ ದಸರಾದ ಗಜಪಯಣದ ಮೊದಲ ತಂಡದಲ್ಲಿ ಅಂಬಾರಿ ಹೊರುವ ಬಲಭೀಮ ಅಭಿಮನ್ಯು ಹಾಗೂ ಎರಡು ಹೆಣ್ಣಾನೆಗಳು ಸೇರಿದಂತೆ 9 ಆನೆಗಳ ತಂಡ ಸೆ.1ರಂದು ಮೈಸೂರಿನತ್ತ ಪಯಣ ಬೆಳೆಸಲಿವೆ.

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು, ಭೀಮ, ಮಹೇಂದ್ರ, ಬಳ್ಳೆ ಆನೆ ಶಿಬಿರದ ಅರ್ಜುನ, ಭೀಮನಕಟ್ಟೆ ಆನೆ ಶಿಬಿರದ ವರಲಕ್ಷ್ಮಿ, ಕೊಡಗಿನ ಮಡಿಕೇರಿ ವಿಭಾಗದ ದುಬಾರೆ ಶಿಬಿರದ ಧನಂಜಯ, ಗೋಪಿ ಹಾಗೂ ಹೆಣ್ಣಾನೆ ವಿಜಯ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಮಾಪುರ ಆನೆ ಶಿಬಿರದ ಪಾರ್ಥಸಾರಥಿ ಆನೆಗಳು ಬಾಗವಹಿಸಲಿವೆ.

ಎರಡನೇ ತಂಡದಲ್ಲಿ ತಡರಳುವ ಐದು ಆನೆಗಳ ಮಾಹಿತಿ ಸೆ.10 ರ ನಂತರ ಲಭ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next