Advertisement

Mysuru Dasara: ಜನಪದ ಸೊಗಡಿಗೆ ಮನಸೋತ ಯುವ ಸಮೂಹ

11:47 PM Oct 11, 2023 | Team Udayavani |

ಮೈಸೂರು: ಕಾರ್ಮೊಡದ ನಡುವೆಯೂ ಡೊಳ್ಳು ಕುಣಿತ, ವೀರಗಾಸೆ, ತಮಟೆ ಕುಣಿತ ಕನ್ನಡ ನಾಡಿನ‌ ಜನಪದ ಕಲೆಗೆ ಹಾಗೂ ಸಂಸ್ಕೃತಿಗೆ ಯುವ ಸಮೂಹ ಮೈಮರೆತು ಹೋಯಿತು.

Advertisement

ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಯುವ ಸಂಭ್ರಮದಲ್ಲಿ ಬುಧವಾರ ವಿವಿಧ ಜಿಲ್ಲೆಗಳ ಕಾಲೇಜಿನ ವಿದ್ಯಾರ್ಥಿಗಳು ಯುವ ಸಮೂಹವನ್ನು ಕುಣಿದು ಕುಪ್ಪಳಿಸುವಂತೆ ಹೆಜ್ಜೆ ಹಾಕಿದರು.

ಹುಣಸೂರಿನ ಗೌಡಗೆರೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ ಸೇರಿದಂತೆ ಜಾನಪದ ಕಲೆಯನ್ನು ನೆರೆದಿದ್ದ ಯುವ ಸಮೂಹಕ್ಕೆ ತಮ್ಮ ಮನಮೋಹಕ ನೃತ್ಯದ ಮೂಲಕ ಮನರಂಜಿಸಿದರು.

ಮೈಸೂರಿನ ಎ.ಟಿ.ಎಂ.ಇ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ತುಳುನಾಡಿನ ಯಕ್ಷಗಾನ ಕಲೆ, ಕರಾವಳಿಯ ಹುಲಿ ಕುಣಿತ, ಕೊಡಗಿನ ನೃತ್ಯ ಸೇರಿದಂತೆ ಕನ್ನಡ ನಾಡಿನ ವಿವಿಧ ಜಿಲ್ಲೆಗಳ ಸೊಬಗನ್ನು ನೃತ್ಯದ ಮೂಲಕ ರಂಜಿಸಿದರು.

Advertisement

ಇತ್ತೀಚೆಗೆ ಯುವ ಸಮೂಹ ಪುಸ್ತಕಗಳಿಗಿಂತ ಮೊಬೈಲ್ ಗೆ ಹೆಚ್ಚು ಆಕರ್ಷಿತರಾಗುತ್ತಿರುವುದರಿಂದ ಅದರಿಂದಾಗುತ್ತಿರುವ ಕೆಡಕುಗಳ ಬಗ್ಗೆ ಯುವ ಸಮೂಹಕ್ಕೆ ನೃತ್ಯದ ಮೂಲಕ ಸಂದೇಶವನ್ನು ಮೈಸೂರಿನ ಜೆ.ಎಸ್.ಎಸ್.ಪದವಿ ಕಾಲೇಜಿನ ವಿದ್ಯಾರ್ಥಿಗಳು ನೀಡಿದರು.

ನಾಗಮಂಗಲದ ಆದಿಚುಂಚನಗಿರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಡಾ.ಪುನೀತ್ ರಾಜ್ ಕುಮಾರ್ ಅವರ ಹುಡುಗರು ಚಿತ್ರದ ಎನ್ ಚೆಂದನೆ ಹುಡುಗಿ ಗಲ್ಲು ಗಲ್ಲು ಎನುತಾವು ಗೆಜ್ಜೆ , ರಾಜಕುಮಾರ ಚಿತ್ರದ ಬೊಂಬೆ ಹೆಳುತೈತೆ ಎಂಬ ಹಾಡಿಗೆ ಪುನೀತ್ ಭಾವ ಚಿತ್ರ ಹಿಡಿದು ನರ್ತಿಸುತ್ತಿದ್ದಂತೆ ನೆರೆದಿದ್ದ ಯುವ ಸಮೂಹದಲ್ಲಿ ಮಿಂಚಿನ ಸಂಚಾರವಾಯಿತು.

ಶ್ರೀರಂಗಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರೆಟ್ರೊ ಟು ಮೆಟ್ರೊ ಎಂಬ ಪರಿಕಲ್ಪನೆಯಡಿ ದರ್ಶನ್ ಚಿತ್ರಗಿತೆಗಳಿಗೆ ಹೆಜ್ಜೆ ಹಾಕಿದರೆ, ಮಹಾರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಗಳು ರೈತರ ಬಗ್ಗೆ ತಿಳಿಸಿದರು.

ಮಂಡ್ಯದ ಭಾರತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಮೋಘ ನೃತ್ಯ ಪ್ರದರ್ಶನದ ಮೂಲಕ ಪರಿಸರದ ಮಹತ್ವವನ್ನು ತಿಳಿಸಿದರು. ಡಾ.ಲೊಕೇಶ್ ಅವರು ಮಿಲನ ಚಿತ್ರದ ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ ಹಾಗೂ ಅಣ್ಣಾಬಾಂಡ್ ಚಿತ್ರದ ಕಾಣದಂತೆ ಮಾಯವಾದನು ನಮ್ಮ ಶಿವ ಎಂಬ ಗೀತೆಯನ್ನು ಹಾಡಿ ಯುವ ಸಮೂಹವನ್ನು ರಂಜಿಸಿದರು.

ಹುಣಸೂರಿನ ವಿ.ಎಸ್.ಎಸ್. ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಭಾರತದ ರಾಷ್ಟ್ರಧ್ವಜದ ಇತಿಹಾಸ ಬಗ್ಗೆ ಹಾಗೂ ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿರುವ ಬಗ್ಗೆ ಅದ್ಭುತವಾಗಿ ನರ್ತಿಸುವ ಮೂಲಕ ನೋಡುಗರ ಮುಂದೆ ಪ್ರದರ್ಶಿಸಿದರು. ದೇವಲಾಪುರದ ಜೆ.ಎಸ್.ಎಸ್.ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಟಿ.ನರಸೀಪುರದ ವಿದ್ಯೋದಯ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆಯ ಕಾಲೇಜಿನ ದೇಶದ ಯೋಧರ ಸಾಹಸವನ್ನು ಹಾಗೂ ರೈತರ ಶ್ರಮವನ್ನು ಹಾಗೂ ನಿಸ್ವಾರ್ಥ ಸೇವೆಯನ್ನು ನರ್ತಿಸುವ ಮೂಲಕ ಮನಮೋಹಕವಾಗಿ ಯುವ ಸಮೂಹಗಳ ಮುಂದೆ ಪ್ರದರ್ಶಿಸಿದರು.

ನಗರದ ಮಾತೃಮಂಡಳಿ ಶಿಶುವಿಕಾಸ ಕೇಂದ್ರದ ವಿಶೇಷ ಚೇತನ ಮಕ್ಕಳು ನವದುರ್ಗೆಯರ ಅವತಾರದ ಬಗ್ಗೆ ಸಭಿಕರ ಮುಂದೆ ಪ್ರದರ್ಶಿಸಿ ಎಲ್ಲರನ್ನು ಬೆರಗುಗೊಳಿಸಿದರು. ಹಾಸನ ಜಿಲ್ಲೆಯ ಹೊಳೆನರಸೀಪುರದ ಸರ್ಕರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಕರ್ನಾಟಕ ಜನಪದದ ಪರಂಪರೆ ಬಗ್ಗೆ ಹಾಗೂ ದೇಶಿ ಸಂಸ್ಕೃತಿಯ ಬಗ್ಗೆ ಜೋಗಿ ಚಿತ್ರದ ಏಳು ಮ್ಯಾಲೆರಿ ಎಂಬ ಹಾಡಿಗೆ ಹೆಜ್ಜೆ ಹಾಕಿ ನೆರೆದಿದ್ದ ಯುವ ಸಮೂಹವನ್ನು ಕುಣಿಯುವಂತೆ ಮಾಡಿದರು.

ನಂಜನಗೂಡಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶಿವನನ್ನೆ ಧರೆಗಿಳಿಸುವಂತೆ ಶಿವನ ಹಾಡುಗಳಿಗೆ ನಯನ ಮನೋಹರವಾಗಿ ನರ್ತಿಸುತಿದ್ದಂತೆ ಶಿಳ್ಳೆ ಚಪ್ಪಾಳೆ ಮುಗಿಲು ಮುಟ್ಟಿತು. ಗುಂಡ್ಲುಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕರ್ನಾಟಕವು ಎಲ್ಲ ಜನರು ಸಾಮರಸ್ಯದಿಂದ ಕೂಡಿರುವ ಬಗ್ಗೆ ಹಾಗೂ ಕಾಡಿನ ಮಹತ್ವವನ್ನು, ಕಾವೇರಿ ನದಿಯ ಅಗತ್ಯವನ್ನು ಅದ್ಭುತವಾಗಿ ತಿಳಿಸಿದರು.
ರಾಮನ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಝಾನ್ಸಿ ರಾಣಿ ಲಕ್ಷ್ಮಿಬಾಯಿಯ ಸಾಹಸದ ಬಗ್ಗೆ ಹಾಗೂ ಬ್ರಿಟಿಷರ ವಿರುದ್ಧ ಹೋರಾಡಿದ್ದರ ಬಗ್ಗೆ ನೃತ್ಯದ ಮೂಲಕ ಕಣ್ಣಮುಂದೆ ತಂದರು.

Advertisement

Udayavani is now on Telegram. Click here to join our channel and stay updated with the latest news.

Next