Advertisement

ನರೇಗಾದಲ್ಲಿ ಹಳ್ಳಿಗಳ ಅಭಿವೃದ್ದಿಪಡಿಸಿಕೊಳ್ಳಿ : ಶಾಸಕ ಮಂಜುನಾಥ್

10:43 PM Jun 09, 2021 | Team Udayavani |

ಹುಣಸೂರು: ಕೊರೋನಾದಿಂದಾಗಿ ಸದ್ಯದ ಪರಿಸ್ಥಿತಿಯಲ್ಲಿ ಸರಕಾರದಿಂದ ಅನುದಾನ ಬಿಡುಗಡೆಗೆ ಹಿನ್ನಡೆಯಾಗಿದ್ದು, ಗ್ರಾಮ ಪಂಚಾಯ್ತಿಗಳಿಗೆ ನರೇಗಾ ಯೋಜನೆಯಲ್ಲಿ ಕಾಮಗಾರಿಗಳು ಕೈಗೊಂಡಲ್ಲಿ ಜನರಿಗೆ ಉದ್ಯೋಗದ ಜೊತೆಗೆ ಪರೋಕ್ಷವಾಗಿ ಹಳ್ಳಿಗಳ ಅಭಿವೃದ್ದಿಯಾಗಲಿದ್ದು, ಜನಪ್ರತಿನಿಧಿಗಳ ಈ ಬಗ್ಗೆ ಚಿಂತಿಸಿ, ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕೆಂದು  ಶಾಸಕ ಎಚ್.ಪಿ.ಮಂಜುನಾಥ್ ಸೂಚಿಸಿದರು.

Advertisement

ತಾಲೂಕಿನ ಹನಗೋಡು, ದೊಡ್ಡಹೆಜ್ಜೂರು, ಕಿರಂಗೂರು ಗ್ರಾ.ಪಂ.ಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು ಹಾಗೂ ಪಂಚಾಯ್ತಿಗಳಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾರ್ಯಗಳನ್ನು ಪರಾಮರ್ಶಿಸಿ ಮಾತನಾಡಿದ ಶಾಸಕರು ಕೊರೊನಾದಿಂದಾಗಿ ಸರಕಾರದಿಂದ ಅನುದಾನ ಬರುವುದು ಕಷ್ಟಕರ, ಹೀಗಾಗಿ ಉದ್ಯೋಗ ಖಾತರಿಯೇ ಆಸರೆಯಾಗಿದ್ದು, ಸರಕಾರದ ಮಹತ್ವಾಕಾಂಕ್ಷೆಯ ಜಲಶಕ್ತಿ ಮರುಹೂರಣ ಕಾಮಗಾರಿಗೆ ಹೆಚ್ಚು ಆದ್ಯತೆ ನೀಡಿ. ಕೆರೆ, ಕಲ್ಯಾಣಿ, ರಸ್ತೆ, ಕೃಷಿಗೆ ಅನುಕೂಲವಾಗುವಂತಹ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಿರೆಂದು ಸಲಹೆ ನೀಡಿ, ತಾಲೂಕಿನ ಅರ್ದಕ್ಕೂ ಹೆಚ್ಚು ಗ್ರಾ.ಪಂ.ಗಳು ೫೦ಲಕ್ಷದಿಂದ ಒಂದು ಕೋಟಿವರೆಗೆ ನರೇಗಾ ಯೋಜನೆಯಡಿ ಅನುದಾನ ಖರ್ಚು ಮಾಡಿವೆ. ಆದರೆ ಹನಗೋಡು ಭಾಗದಲ್ಲಿ ಅಷ್ಟಾಗಿ ಕಾಮಗಾರಿ ಆಗಿಲ್ಲ. ಗ್ರಾ.ಪಂ.ಗಳ ಸದಸ್ಯರೊಳಗಿನ ಬಿನ್ನಾಭಿಪ್ರಾಯ ಬದಿಗೊತ್ತಿ, ಸಮನ್ವಯತೆಯಿಂದ ಕಾಮಗಾರಿ ನಡೆಯುವಂತೆ ಕ್ರಮವಹಿಸಬೇಕು. ಇನ್ನು ಪಿಡಿಓಗಳು ಕಾಮಗಾರಿ ಅನುಷ್ಟಾನದಲ್ಲಿ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು ಬದ್ದತೆಯಿಂದ ಕೆಲಸ ಮಾಡಬೇಕೆಂದು ಸೂಚಿಸಿದರು.

ಜಲಶಕ್ತಿ ಯೋಜನೆಯಡಿ ಅಂತರ್ಜಲ ವೃದ್ದಿಗೆ ನರೇಗಾದಲ್ಲಿ ಶೇ.65ರಷ್ಟು ಪ್ರಗತಿ ಸಾಧಿಸಿದರೆ ಶೇ.35ರಷ್ಟು ರಸ್ತೆ ಅಭಿವೃದ್ದಿ ಕಾಮಗಾರಿ ನಡೆಸಬಹುದಾಗಿದೆ.  ನರೇಗಾ ಯೋಜನೆಯಡಿ ಎಷ್ಟು ಬೇಕಾದರೂ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ ಎಂದು  ತಾ.ಪಂ.ಇ.ಓ.ಗಿರೀಶ್ ತಿಳಿಸಿದರು.

ಕೊರೊನಾ ನಿಯಂತ್ರಣಕ್ಕೆ ಶ್ರಮಿಸಿ:

ಎಲ್ಲೆಡೆ ಆಶಾ-ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಕೊರೊನಾ ತಡೆಗಟ್ಟುವಲ್ಲಿ ಆಗಿರುವ ಪ್ರಗತಿ ಬಗ್ಗೆ ಚರ್ಚಿಸಿದ ಶಾಸಕರು ನಿಮ್ಮೆಲ್ಲರ ಸಹಕಾರದಿಂದ ಕೊರೊನಾ ನಿಯಂತ್ರಣಗೊಳ್ಳುತ್ತಿದೆ ಎಂದು ಪ್ರಶಂಸಿಸಿ, ದೊಡ್ಡಹೆಜ್ಜೂರು ಪಂಚಾಯ್ತಿಯಲ್ಲಿ ಹೆಚ್ಚಿನ ಮಹಿಳೆಯರಲ್ಲಿ ಕೊರೊನಾ  ಪಾಸಿಟೀವ್ ಪ್ರಕರಣಗಳು ಹೆಚ್ಚಿರುವುದು ಆತಂಕಕಾರಿ ಎಂದಾಗ ಈ ಭಾಗಕ್ಕೆ ಸಂಘಗಳಿಗೆ ಸಾಲ ನೀಡಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ಪ್ರತಿನಿಧಿಗಳು ಹೆಚ್ಚು ಬರುತ್ತಿರುವುದರಿಂದ ಹೆಚ್ಚುತ್ತಿದೆ ಎಂದು ಗ್ರಾಮಸ್ಥರು ದೂರಿದರು.

Advertisement

ತಹಸೀಲ್ದಾರ್ ಬಸವರಾಜು ಸೋಂಕಿತರು ಹೆಚ್ಚಿರುವ ಗ್ರಾಮಗಳಲ್ಲಿ ಹೆಚ್ಚು ಪರೀಕ್ಷೆ ನಡೆಸುವ ಮೂಲಕ ನಿಯಂತ್ರಣಗೊಳಿಸಬೇಕು. ಸೋಂಕಿರು ಹೆಚ್ಚಿರುವ ಮುದಗನೂರು, ಕೊಳವಿಗೆಯನ್ನು ಸೀಲ್‌ ಡೌನ್ ಮಾಡಬೇಕು,  ಹನಗೋಡು ಆಸ್ಪತ್ರೆಯಲ್ಲಿ ಹೆಚ್ಚಿನ ಪರೀಕ್ಷೆ ನಡೆಯುತ್ತಿಲ್ಲ, ನಾಳೆಯಿಂದಲೇ ಇಲ್ಲಿ ಕನಿಷ್ಟ ನೂರು ಮಂದಿಯ ಪರೀಕ್ಷೆ ನಡೆಸಬೇಕು. ಜೊತೆಗೆ ಎಲ್ಲ ವ್ಯಾಪಾರಸ್ಥರನ್ನು ಕಡ್ಡಾಯವಾಗಿ ತಪಾಸಣೆಗೊಳಪಡಿಸಬೇಕೆಂದು ಡಾ.ಜೋಗೇಂದ್ರನಾಥರಿಗೆ ಸೂಚಿಸಿದರು.

ಅಂಗನವಾಡಿ ಕಟ್ಟಡಕ್ಕೆ ಬೇಡಿಕೆ:

ದೊಡ್ಡಹೆಜ್ಜೂರಿನ ಎರಡೂ ಹಾಗೂ ಮಾದಹಳ್ಳಿಯ ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ. ಮಕ್ಕಳು ಹೆಚ್ಚಿದ್ದರೂ ಇನ್ನೂ ಮಿನಿ ಅಂಗನವಾಡಿಯೇ ಆಗಿದ್ದು. ಈ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಬೇಕೆಂದು ಕಾರ್ಯಕರ್ತೆಯರು ಶಾಸಕರಲ್ಲಿ ಭೇಡಿಕೆ ಇಟ್ಟರು.  ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕರು ಭರವಸೆ ಇತ್ತರು.

ಹನಗೋಡು ಆಸ್ಪತ್ರೆಗೆ ಆಂಬುಲೆನ್ಸ್:

ಹನಗೋಡು ಆಸ್ಪತ್ರೆಗೆ ಹೆಚ್ಚು ರೋಗಿಗಳ ಬರುವುದರಿಂದ ಅವರ ಅನುಕೂಲಕ್ಕಾಗಿ ಶಾಸಕರ ನಿಧಿಯಿಂದ ಸುಸಜ್ಜಿತ ಆಂಬುಲೆನ್ಸ್ ನೀಡಲಾಗುವುದು. ಇದರ ನಿರ್ವಹಣೆಯನ್ನು ಆಸ್ಪತ್ರೆಯ ರಕ್ಷಾಸಮಿತಿ ನಿರ್ವಹಿಸುವಂತೆ ವೈದ್ಯರಿಗೆ ಸೂಚಿಸಿದರು.

ಈ ವೇಳೆ ಹನಗೋಡು ಗ್ರಾ.ಪಂ.ಅಧ್ಯಕ್ಷೆ ನೂರ್‌ಜಹಾನ್, ಉಪಾಧ್ಯಕ್ಷೆ ಪವಿತ್ರ, ಕಿರಂಗೂರು ಗ್ರಾ.ಪಂ.ಅಧ್ಯಕ್ಷೆ ನಿರ್ವಾಣಿ, ದೊಡ್ಡಹೆಜ್ಜೂರು ಗ್ರಾ.ಪಂ.ಅಧ್ಯಕ್ಷ ಶಿವಶಂಕರ್, ಉಪಾಧ್ಯಕ್ಷೆ ಅಂಬಿಕಾ, ಪಿಡಿಓಗಳಾದ ನಾಗೇಂದ್ರಕುಮಾರ್, ಶ್ರೀದೇವಿ, ಮಂಜುನಾಥ್, ಎಪಿಎಂಸಿ ಅಧ್ಯಕ್ಷ ಮುದಗನೂರುಸುಭಾಷ್, ಗ್ರಾಮಲೆಕ್ಕಿಗ ಮಹದೇವ್ ಸೇರಿದಂತೆ ಗ್ರಾ.ಪಂ.ಸದಸ್ಯರುಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next