Advertisement

ನನ್ನ ಕನಸಿನ ಬೆಂಗಳೂರು ಅಭಿವೃದ್ಧಿಗೆ ಶ್ರಮಿಸುವುದೇ ಗುರಿ

12:27 PM Sep 29, 2018 | |

ಬೆಂಗಳೂರು: ರಾಜಧಾನಿ ಜನರ ಆರೋಗ್ಯ ಸಂರಕ್ಷಣೆ, ನಗರದ ಸೌಂದರ್ಯ ವೃದ್ಧಿ, ಸಮರ್ಪಕ ತ್ಯಾಜ್ಯ ವಿಲೇವಾರಿ, ಸಂಪನ್ಮೂಲ ಕ್ರೂಢೀಕರಣಕ್ಕೆ ಆದ್ಯತೆ ನೀಡುವ ಜತೆಗೆ ನಗರದ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ರೂಪಿಸಲು ನನ್ನ ಮೊದಲ ಆದ್ಯತೆ ಎಂದು ನೂತನ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಹೇಳಿದ್ದಾರೆ.

Advertisement

ನೂತನ ಮೇಯರ್‌ ಆಗಿ ಆಯ್ಕೆಯಾದ ನಂತರ “ಉದಯವಾಣಿ’ಗೆ ಸಂದರ್ಶನ ನೀಡಿದ ಮೇಯರ್‌ ಗಂಗಾಂಬಿಕೆ, ನನ್ನ ಅವಧಿಯಲ್ಲಿ ಕೈಗೊಂಡ ತೀರ್ಮಾನಗಳು ಹಾಗೂ ರೂಪಿಸುವ ಕಾರ್ಯಕ್ರಮಗಳನ್ನು ಒಂದೇ ವರ್ಷದಲ್ಲಿ ಜಾರಿಗೊಳಿಸುವ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದ್ದಾರೆ.

* ಮೇಯರ್‌ ಆಗ್ತೀನಿ ಅಂತ ಯಾವತ್ತಾದರೂ ಅನಿಸಿತ್ತೇ?
ಖಂಡಿತ ಕನಸಿನಲ್ಲಿಯೂ ನಾನು ಮೇಯರ್‌ ಆಗ್ತೀನಿ ಅಂತ ಅನಿಸಿರಲಿಲ್ಲ. ಆದರೆ, ಮೇಯರ್‌ ಆದವರು ನಗರದ ಅಭಿವೃದ್ಧಿ ಯಾವ ಯೋಜನೆಯನ್ನು ಯಾಕೆ ಜಾರಿಗೊಳಿಸಬಾರದು ಎಂಬ ಬಗ್ಗೆ ಸ್ಪಷ್ಟ ಪರಿಕಲ್ಪನೆ ಇತ್ತು. ಇದೀಗ ನಾನೇ ಮೇಯರ್‌ ಆಗಿದ್ದು, ನನ್ನ ಕನಸಿನ ಬೆಂಗಳೂರು ಅಭಿವೃದ್ಧಿಗೆ ಶ್ರಮಿಸುತ್ತೇನೆ.

* ರಾಜಧಾನಿ ಬೆಂಗಳೂರಿನ ಪ್ರಥಮ ಪ್ರಜೆಯಾಗಿ ನಿಮ್ಮ ಆದ್ಯತೆಗಳೇನು ?
ಬೆಂಗಳೂರನ್ನು ಸ್ವತ್ಛ ಹಾಗೂ ಸುಂದರ ನಗರವಾಗಿ ರೂಪಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಜತೆಗೆ ನಗರದಲ್ಲಿ ತ್ಯಾಜ್ಯ ವಿಲೇವಾರಿ ಪ್ರಮಾಣ ಹೆಚ್ಚಿಸುವ ಜತೆಗೆ, ನಗರದ ಜನತೆಗೆ ಉತ್ತಮ ಆರೋಗ್ಯ ಸೇವೆಗಳು ಲಭ್ಯವಾಗುವಂತೆ ಮಾಡುವ ಯೋಜನೆಗಳನ್ನು ರೂಪಿಸಲಾಗುವುದು. 

* ಪಾಲಿಕೆಯ ಆರ್ಥಿಕ ಸ್ಥಿತಿ ಸುಧಾರಣೆಗೆ ನಿಮ್ಮ ಯೋಜನೆಗಳೇನು?
ಆಸ್ತಿ ತೆರಿಗೆ ಸಂಗ್ರಹ ಹೆಚ್ಚಳ ಸೇರಿದಂತೆ ಪಾಲಿಕೆಗೆ ವಿವಿಧ ಮೂಲಗಳಿಂದ ಬರಬೇಕಾದ ಆದಾಯ ಕ್ರೋಢೀಕರಣಕ್ಕೆ ಮಹತ್ವ ನೀಡಲಾಗುವುದು. ಜತೆಗೆ ಆದಾಯ ಸೋರಿಕೆ ತಡೆಗೆ ವಿಶೇಷ ಕಾಳಜಿ ವಹಿಸುವ ಮೂಲಕ ತೆರಿಗೆ ಸಂಗ್ರಹಿಸಲಾಗುವುದು. ಇದರೊಂದಿಗೆ ಪಾಲಿಕೆಯ ಎಂಟೂ ವಲಯಗಳಲ್ಲಿ ತೆರಿಗೆ ಸಂಗ್ರಹ ಅಭಿಯಾನ ನಡೆಸಲಾಗುವುದು. 

Advertisement

* ಮೇಯರ್‌ ಆಗಿ ನಿಮ್ಮ ಮುಂದಿರುವ ಸವಾಲುಗಳೇನು?
ತ್ಯಾಜ್ಯ ವಿಲೇವಾರಿ ಹಾಗೂ ವಿಂಗಡಣೆ ನಗರದ ಪ್ರಮುಖ ಸಮಸ್ಯೆಗಳಾಗಿದ್ದು, ರಾಜಕಾಲುವೆಗಳ ಅಭಿವೃದ್ಧಿ, ರಸ್ತೆಗುಂಡಿ ಸಮಸ್ಯೆಗಳು ನನ್ನ ಮುಂದಿವೆ. ಗುಂಡಿ ದುರಸ್ತಿಗೆ ಈಗಾಗಲೇ ಕ್ರಮಕೈಗೊಂಡಿದ್ದು, ತ್ಯಾಜ್ಯ ವಿಲೇವಾರಿ ಹಾಗೂ ರಾಜಕಾಲುವೆಗಳ ಅಭಿವೃದ್ಧಿ ವಿಶೇಷ ಆದ್ಯತೆ ನೀಡಲಾಗುವುದು. ತ್ಯಾಜ್ಯ ವಿಂಗಡಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಸಹ  ಹಮ್ಮಿಕೊಳ್ಳಲಾಗುವುದು.

* ನಗರದ ಪರಿಸರ ರಕ್ಷಣೆಗೆ ನಿಮ್ಮ ಮುಂದಿರುವ ಯೋಜನೆಗಳೇನು?
ನಗರದಲ್ಲಿ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗಿರುವುದರಿಂದ ವಾಯುಮಾಲಿನ್ಯ ಹೆಚ್ಚಾಗಿದೆ. ಮಾಲಿನ್ಯ ನಿಯಂತ್ರಣಕ್ಕೆ ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಪಾಲಿಕೆಯಿಂದ ಹೆಚ್ಚಿನ ಗಿಡಿಗಳನ್ನು ನಡೆಸುವ ಮೂಲಕ ಪರಿಸರ ಪ್ರಮಾಣ ಹೆಚ್ಚಿಸಲಾಗುವುದು. 

* ಕಳೆದೆರಡು ವರ್ಷಗಳಿಂದ ರಾಜಕಾಲುವೆ ತೆರವು ಕಾರ್ಯ ಸ್ಥಗಿತಗೊಂಡಿದ್ದು, ನಿಮ್ಮ ಅವಧಿಯಲ್ಲಿ ಮುಂದುವರಿಯುತ್ತದೆಯೆ?
ಈಗಾಗಲೇ ಒತ್ತುವರಿಯನ್ನು ಗುರುತಿಸಲಾಗಿದ್ದು, ಸರ್ವೆ ನಡೆಸಿ ವರದಿ ನೀಡಿದ್ದಾರೆ. ಅದರಂತೆ ಈಗಾಗಲೇ ಹಲವು ಭಾಗಗಳಲ್ಲಿ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಅದನ್ನು ಮುಂದುವರಿಸಿಕೊಂಡು ಹೋಗಲಾಗುವುದು. 

* ಆರೋಗ್ಯ ಕ್ಷೇತ್ರಕ್ಕೆ ನಿಮ್ಮ ಕಾರ್ಯಕ್ರಮಗಳೇನು?
ಪಾಲಿಕೆಯಿಂದ ಹಾಗೂ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಅಡಿಯಲ್ಲಿ ಸಾಕಷ್ಟು ಅನುದಾನ ನೀಡಲಾಗಿದ್ದು, ಹಲವಾರು ಅತ್ಯಾಧುನಿಕ ಯಂತ್ರೋಪಕರಣಗಳನ್ನು ಖರೀದಿಸಲಾಗಿದೆ. ಆದರೆ, ಅವುಗಳ ಸಮರ್ಪಕ ಬಳಕೆಯಾಗುತ್ತಿಲ್ಲ ಎಂಬ ಆರೋಪವಿದ್ದು, ಕೂಡಲೇ ಎಲ್ಲ ಮುಖ್ಯ ಆರೋಗ್ಯಾಧಿಕಾರಿಗಳೊಂದಿಗೆ ಈ ಕುರಿತು ಸಭೆ ನಡೆಸಲಾಗುವುದು. 

* ನಿಮ್ಮ ಅವಧಿಯಲ್ಲಾದರೂ ಅನುದಾನ ಹಂಚಿಕೆ ತಾರತಮ್ಯ ನಿಲ್ಲುತ್ತಾ ?
ಚುನಾವಣೆ ಸಂದರ್ಭದಲ್ಲಿ ಮಾತ್ರ ಪಕ್ಷ ಬರುತ್ತವೆ. ಉಳಿದಂತೆ ಎಲ್ಲ 198 ಕ್ಷೇತ್ರಗಳ ಸದಸ್ಯರು ಒಂದು ಕುಟುಂಬದಂತೆ ಹೀಗಾಗಿ ನಗರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಯಾವುದೇ ತಾರತಮ್ಯವಿಲ್ಲದೆ ಅನುದಾನ ಹಂಚಿಕೆ ಮಾಡಲಾಗುವುದು. 

* ಅತಿಹೆಚ್ಚು ಸಂಖ್ಯೆಯ ಮಹಿಳಾ ಸದಸ್ಯರು ನಿಮ್ಮಿಂದ ಏನು ನಿರೀಕ್ಷೆ ಮಾಡಬಹುದು?
ಪಾಲಿಕೆಯ ಸಭೆಗಳಲ್ಲಿ ಮೊದಲ ಆದ್ಯತೆಯನ್ನು ನಾನು ಮಹಿಳೆಯರಿಗೆ ನೀಡುತ್ತೇನೆ. ಸಭೆಗಳಲ್ಲಿ ಮಾತನಾಡಲು ಹಿಂಜರಿಯುವ ಸದಸ್ಯರಿಗೆ ಧೈರ್ಯ ತುಂಬಿ ಮಾತನಾಡಲು ಪ್ರೇರೆಪಿಸಲಾಗುವುದು. 

ಮಾಸಿಕ ಸಭೆ ಇರುವುದು ಭಾಷಣ ಬಿಗಿಯಲಲ್ಲ! 
ಅಧಿಕಾರಿಗಳು ಜನರ ಜನಪ್ರತಿನಿಧಿಗಳ ಮಾತು ಕೇಳುವುದಿಲ್ಲ ಎಂಬ ಆರೋಪವಿದೆಯಲ್ಲಾ?
ಬಿಬಿಎಂಪಿ ಮಾಸಿಕ ಸಭೆಗಳು ಕೇವಲ ಭಾಷಣ ಬಿಗಿಯಲು ಸೀಮಿತವಾಗಬಾರದು. ಅದಕ್ಕಾಗಿಯೇ ಇನ್ನು ಮುಂದೆ ನನ್ನ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗಳಲ್ಲಿನ ತೆಗೆದುಕೊಂಡ ನಿರ್ಣಯಗಳ ಬಗ್ಗೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಪರಿಶೀಲನೆ ನಡೆಸಲಾಗುವುದು.

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next