Advertisement

ಸಂಗೀತವೆನ್ನುವುದು ನಿಂತ ನೀರಲ್ಲ…ಸಂಗೀತವೆಂಬುದು ಗಂಧರ್ವ ವಿದ್ಯೆ…

03:33 PM Sep 29, 2021 | Team Udayavani |

ಮಲಯ ಮಾರುತ ಚಿತ್ರದ ‘ಎಲ್ಲೆಲ್ಲೂ ‌ಸಂಗೀತವೇ’ ಎಂಬ ಹಾಡನ್ನು ಆಸ್ವಾದಿಸುವಾಗ ನಮ್ಮ ದಿನಚರಿಯಲ್ಲಿ ಸಂಗೀತ ಎಷ್ಟು ಮಹತ್ವ ಪಡೆದಿದೆ ಎಂದು ಗಮನಿಸಿದೆ. ಏಕೆಂದರೆ ಬೆಳಗಿನ ಜಾವದಲ್ಲಿ ಹಕ್ಕಿಗಳ‌ ಚಿಲಿಪಿಲಿ ಸದ್ದು, ರಸ್ತೆಯ ಸಮೀಪದ ಮನೆಗಳಿಗೆ ಹಾಲು ಹಾಕುವವರ, ಹೂ ಮಾರುವವರ ಒಂದೇ ರಾಗದ ಧ್ವನಿ, ಬೀದಿಯ ಯಾವುದೋ ಒಂದು ಮೂಲೆಯಿಂದ ಎಂ.ಎಸ್.ಸುಬ್ಬಲಕ್ಷ್ಮಿ ಸುಪ್ರಭಾತ, ಆಗ ತಾನೆ ವಾಕಿಂಗ್ ಮುಗಿಸಿ ಭೇಟಿಯಾದವರ ಮುಂಜಾನೆ ಮಾತು, ಈ ಎಲ್ಲಾ ಸದ್ದಿಗೂ ತನ್ನದೇ ಆದ ರೂಪವಿದೆ. ನಾವು ಗಮನಿಸಿದಂತೆ ಇವುಗಳ ನಿಖರತೆ ನಮಗೆ ಸಮೀಪವಾಗುತ್ತದೆ.

Advertisement

ಸಂಗೀತ ಮನಸ್ಸು ಹಗುರಾಗಿಸುವ ಸಾಧನವಾಗಿ, ಎಷ್ಟೋ ಕಷ್ಟಗಳನ್ನು ನಿಭಾಯಿಸಲು ಸಾಮರ್ಥ್ಯ ತುಂಬುವ ಚೈತನ್ಯವಾಗಿ, ಕೆಲವರಿಗೆ ಸಮಯ ಹರಣದ ವಸ್ತುವಾಗಿ, ಹಲವರಿಗೆ ಜೀವನದ ಪರಮ ಗುರಿಯಾಗಿ, ಜೀವನವೇ ಆಗಿದೆ. ನಮ್ಮ ಭಾರತೀಯ ಸಂಗೀತದ ಹಿನ್ನೆಲೆ ಹುಡುಕುತ್ತಾ ಹೋದಂತ್ತೆಲ್ಲಾ ಹಲವು ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬರುತ್ತದೆ.

ಸುಮಾರು 12-13ನೇ ಶತಮಾನಗಳ ತನಕ ಭಾರತೀಯ ಸಂಗೀತ ಏಕರೂಪವಾಗಿತ್ತು, ನಂತರ ಮಹಮ್ಮದೀಯರ ಆಕ್ರಮಣದ ನಂತರ ಬಂದ ಪರ್ಶಿಯನ್ ಹಾಗೂ ಇತರ ದೇಶಗಳ ಸಂಗೀತದ ಪ್ರಭಾವದಿಂದ ಎರಡು ಭಾಗವಾಗಿ ಅಂದರೆ, ಉತ್ತರ ಮತ್ತು ದಕ್ಷಿಣ (ಕರ್ನಾಟಕ ಹಾಗೂ ಹಿಂದೂಸ್ಥಾನಿ) ಸಂಗೀತ ಪದ್ಧತಿಗಳಾಗಿ ವಿಭಜನೆಯಾಯಿತು. ಇದನ್ನು ಸಂಗೀತ ಶಾಸ್ತ್ರ ಗ್ರಂಥಗಳಲ್ಲಿ ನಾವು ಗುರುತಿಸಬಹುದು. ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತವು ‘ಕರ್ನಾಟಕ ಸಂಗೀತ’ವೆಂಬ ಹೆಸರಿನಲ್ಲಿ ಪ್ರಖ್ಯಾತವಾಗಿರುವುದನ್ನು ನಾವು ಕಾಣಬಹುದು. ಕರ್ನಾಟಕ ಸಂಗೀತವು ಕರ್ನಾಟಕವೊಂದೇ ಅಲ್ಲದೆ, ಬೇರೆ ರಾಜ್ಯಗಳಲ್ಲೂ ಇಲ್ಲಿಗಿಂತ ಹೆಚ್ಚಾಗಿಯೇ ರೂಢಿಯಲ್ಲಿದೆ.

ಸುಪ್ರಸಿದ್ಧರೆನಿಸಿದ ಬಹಳಷ್ಟು ಕರ್ನಾಟಕ ಸಂಗೀತಗಾರರು ತಮಿಳರು ಅಥವಾ ತೆಲುಗರು. ತ್ಯಾಗರಾಜರು ಹಾಗೂ ಮೊದಲಾದ ಕರ್ನಾಟಕ ತ್ರಿಮೂರ್ತಿಗಳನ್ನೊಳಗೊಂಡು ಬಹಳಷ್ಟು ಜನ ವಾಗ್ಗೇಯಕಾರರು ಕನ್ನಡಿಗರಲ್ಲ. ಕರ್ನಾಟಕ ಸಂಗೀತವೆಂಬ ಹೆಸರು ನಮ್ಮ ಸಂಗೀತಕ್ಕೆ ಬಹಳ ಹಳೆಯ ಹೆಸರಲ್ಲ. ಅದು ಸುಮಾರಾಗಿ ಪ್ರಚಾರಕ್ಕೆ ಬಂದು ಒಂದೂವರೆ ಶತಮಾನ ಆಗಿರಬಹುದು. ಕರ್ನಾಟಕ ಸಂಗೀತದ ಪಿತಾಮಹರೆಂದು ಪುರಂದರ ದಾಸರ ಹೆಸರು ದಾಖಲಾಗಿರುವುದೂ ಸಹ 1904ರಲ್ಲಿ ಪ್ರಕಟವಾದ, ಸುಬ್ಬರಾಮ ದೀಕ್ಷಿತರ ಸಂಗೀತ ಸಂಪ್ರದಾಯ ಪ್ರದರ್ಶಿನಿಯಲ್ಲಿದೆ.

ಸಂಗೀತವೆನ್ನುವುದು ನಿಂತ ನೀರಲ್ಲ, ಹರಿವ ನದಿಯಂತೆ. ಅಲ್ಲಲ್ಲಿ ಹೊಸ ಸಂಪ್ರದಾಯದ ನದಿಗಳು ಅದಕ್ಕೆ ಸೇರುತ್ತಿರುವುದುಂಟು. ಹಾಗಾಗಿ ಶಾಸ್ತ್ರಜ್ಞರು, ಆಗಿಂದಾಗ್ಗೆ ಅವರ ಕಾಲದ ಸಂಗೀತ ಹೇಗಿತ್ತೆಂಬುದನ್ನು ದಾಖಲಿಸದಿದ್ದರೆ, ಈ ಸಂಗೀತವೆಂಬ ಹೊನಲಿನ ಹರಿವನ್ನು ಗುರುತಿಸುವುದು ಸಾಧ್ಯವಾಗುತ್ತಿರಲಿಲ್ಲ. ಇನ್ನು ಉತ್ತರ ಭಾರತ ಪದ್ಧತಿಯನ್ನು ‘ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ’ ಎನ್ನುತ್ತೇವೆ. ಈ ಪದ್ಧತಿ ಉತ್ತರ ಭಾರತದಲ್ಲಿ ಹೆಚ್ಚಿನ ಪ್ರಾಶಸ್ತ್ಯ ಪಡೆದಿದೆ. ಹಿಂದೂಸ್ಥಾನಿ ಸಂಗೀತದಲ್ಲಿ ‘ಗಾಯನ’ ಪ್ರಮುಖ ಪಾತ್ರವಹಿಸುತ್ತದೆ. ಕರ್ನಾಟಕ ಸಂಗೀತದಲ್ಲಿ ಸ್ವರ, ರಾಗ, ತಾಳಗಳಿಗೆ ಪ್ರಾಮುಖ್ಯತೆಯನ್ನು ನೀಡಿದರೆ, ಭಾವ, ಆಲಾಪ, ಪಕ್ಕ ವಾದ್ಯಗಳಿಗೆ ಹಿಂದೂಸ್ಥಾನಿ ಸಂಗೀತದಲ್ಲಿ ಆದ್ಯತೆ.

Advertisement

ಹಿಂದೂಸ್ಥಾನಿ ಸಂಗೀತದಲ್ಲಿ ಖಯಾಲ್, ಗಜ಼ಲ್ ನಂತಹ ರಚನೆಗಳನ್ನು ಕಾಣಬಹುದು. ಇವು ಗಾಯಕನ ಸ್ವಂತ ರಚನೆಯು ಸಹ ಆಗಿರಬಹುದು. ತಾನ್ ಸೇನ್, ಅಕ್ಬರ್ ಅಲಿ‌ಖಾನ್, ಬಿಸ್ಮಿಲ್ಲಾ ಖಾನ್, ಜ಼ಾಕಿರ್ ಹುಸ್ಸೇನ್ , ರವಿಶಂಕರ್ ಪ್ರಸಾದ್, ಹರಿಪ್ರಸಾದ್ ಚೌರಾಸಿ ಹೀಗೆ ಹಲವರು ಹಿಂದೂಸ್ಥಾನಿ ಸಂಗೀತದ ಮೇರು ವ್ಯಕ್ತಿತ್ವಗಳು.

ಸಂಗೀತವೆಂಬ ಗಂಧರ್ವ ವಿದ್ಯೆಯು ನಮ್ಮ ಮನೆ ಮನಗಳಲ್ಲಿ ಸದಾ ಒಂದಿಲ್ಲೊಂದು ರೀತಿಯಲ್ಲಿ ಸನ್ನಿಹಿತವಾಗಿದೆ. ಸಂಗೀತಾಸಕ್ತರು ಅದನ್ನು ಗುರುತಿಸಿ ಆರಾಧಿಸುತ್ತಾರೆ. ಹೀಗೆ ನಮ್ಮ ಸಂಗೀತ ಪಯಣ ದಿನ ಕಳೆದಂತೆ ಎತ್ತರದ ಸ್ಥಾನಕ್ಕೆ ತಲುಪುತ್ತಲೇ ಇದೆ. ಸಂಗೀತವನ್ನು ರಾಗಬದ್ಧವಾಗಿ ಹಾಡಲು ಬರುವವರು, ಬಾರದೆ ಇರುವವರು, ಸಂಗೀತದ ಬಗ್ಗೆ ತಿಳಿದವರು, ತಿಳಿಯದೆ ಇರುವವರು, ಹೀಗೆ ಎಲ್ಲರೂ ಸಂಗೀತ ಪ್ರಿಯರೇ. ತಮಗಾಗುವ ದುಃಖ, ನೋವು, ಸಂತೋಷ ಇದೆಲ್ಲವನ್ನು ಅನುಭವಿಸುವಾಗ ಸಂಗೀತವನ್ನು ಕೇಳುವವರೇ, ಹಾಡುವವರೇ.

ಶ್ರೀರಕ್ಷಾ

ಎಸ್ ಡಿಎಂ ಕಾಲೇಜು, ಉಜಿರೆ       

Advertisement

Udayavani is now on Telegram. Click here to join our channel and stay updated with the latest news.

Next