Advertisement

ವಿಜಯದಶಮಿಯಲ್ಲಿ ಸಂಗೀತ ರಸಾಸ್ವಾದನೆ 

06:00 AM Nov 23, 2018 | Team Udayavani |

ರವಿಕಿರಣ್‌ ಜನಸಮ್ಮೊದಿನಿ ರಾಗದಲ್ಲಿ ಬಸವಣ್ಣನವರ ವಚನದೊಂದಿಗೆ ಈ ಗಾಯನ ವಿರಮಿಸಿತು. ನವ ರಾತ್ರಿಯ ಸಲುವಾಗಿ ದೇವಿಯ ಕೃತಿಗಳನ್ನು ಆಯ್ದುಕೊಂಡದ್ದಲ್ಲದೆ, ಕರ್ನಾಟಕ ಸಂಗೀತಕ್ಕೆ ಸಾಮ್ಯತೆಯಿರುವ ರಾಗ ಗಳನ್ನು ಆರಿಸಿಕೊಂಡದ್ದೂ ವಿಶೇಷವಾಗಿತ್ತು.

Advertisement

ಪರ್ಕಳದ ಸರಿಗಮ ಭಾರತಿಯಲ್ಲಿ ಈ ಸಲದ ವಿಜಯದಶಮಿಯ ಸಂಗೀತ ಹಬ್ಬದಲ್ಲಿ ಹಳೆ ವಿದ್ಯಾರ್ಥಿನಿ ಕು| ಸಂಸ್ಕೃತಿ, ಬೆಂಗಳೂರು ಇವರ ಸಂಗೀತ ಕಾರ್ಯಕ್ರಮದ ಬಳಿಕ ಸಂಗೀತ ಶಿಕ್ಷಕಿ ಸ್ವರ್ಣಾ ಎನ್‌. ಭಟ್‌ ಅವರು ಹಾಡುಗಾರಿಕೆಯನ್ನು ನಡೆಸಿ ಕೊಟ್ಟರು. ನವರಾಗ ಮಾಲಿಕಾ ವರ್ಣದ ನಂತರ ಹಂಸಧ್ವನಿಯ ವರವಲ್ಲಭ ರಮಣವನ್ನು ಹಾಡಿದರು. ಮುಂದೆ “ದುರ್ಗಾದೇವೀ ದುರಿತ ನಿವಾರಿಣಿ’ಯ ನಂತರ ಆಲಾಪನೆ, ಸ್ವರ ಕಲ್ಪನೆಗಳೊಂದಿಗೆ ಶ್ರೀ ಸರಸ್ವತೀ (ಆರಭಿ), ಶಂಭೋ ಮಹಾದೇವ ( ಪಂತುವರಾಳಿ)ವನ್ನು ಪ್ರಸ್ತುತಿ ಪಡಿಸಿದರು. ಮುಂದೆ ಪ್ರಧಾನ ರಾಗವಾಗಿ ಕೀರವಾಣಿಯನ್ನು ಆರಿಸಿಕೊಂಡು ವರವೀಣಾಪಾಣಿಯನ್ನು$ ನೆರವಲ್‌ ಮತ್ತು ಸ್ವರಗಳಿಂದ ವಿಸ್ತರಿಸಿದರು. ಹಂಸಾನಂದಿ ರಾಗದ ತಿಲ್ಲಾನದೊಂದಿಗೆ ಕಛೇರಿಯನ್ನು ಸಮಾಪ್ತಿಗೊಳಿಸಿದರು. ಪಕ್ಕವಾದ್ಯದಲ್ಲಿ ವಸಂತಿ ರಾಮ ಭಟ್‌ ವಯೊಲಿನ್‌ ಹಾಗೂ ಡಾ| ಬಾಲಚಂದ್ರ ಆಚಾರ್‌ ಮೃದಂಗ ಸಹಕಾರವನ್ನಿತ್ತರು. 

ಮುಂದಿನ ಭಾಗದಲ್ಲಿ ಹಿಂದುಸ್ಥಾನಿ ಗಾಯನವನ್ನು ಉಣಬಡಿಸಿದವರು ಪಂ| ರವಿಕಿರಣ್‌. ಆಹಿರ್‌ ಭೈರವ್‌ ರಾಗವನ್ನು ಆರಿಸಿಕೊಂಡು ಅಪ್ಯಾಯಮಾನವಾಗಿ ಆವರಿಸಿಕೊಂಡು ಆಲಾಪ್‌ನೊಂದಿಗೆ ವಿಲಂಬಿತ್‌ ಏಕ್‌ ತಾಲ್‌ನಲ್ಲಿ “ತುಮ್‌ ಹೋ ಮಾತಾ ದಯಾನಿ ಭವಾನಿ’ ಹಾಗೂ ಧೃತ್‌ ಏಕ್‌ ತಾಲ್‌ನಲ್ಲಿ “ಮಾ ಶಾರದೇ ಜಗಜ್ಜನನೀ’ ಎಂಬ ತಾನೇ ರಚಿಸಿದ‌ ಬಂದಿಶ್‌ಗಳನ್ನು ಪ್ರಸ್ತುತಪಡಿಸಿದರು. ಮುಂದೆ ಹಂಸಧ್ವನಿ ರಾಗ್‌ನ ಆಲಾಪ್‌ನೊಂದಿಗೆ “ಮಾತಾ ರಾಜೇಶ್ವರೀ ಶುಭಾಂಗೀ ‘  ರಚನೆಯನ್ನು ನಿರೂಪಿಸಿದರು. ಕನಕದಾಸರ ಕೀರ್ತನೆ “ತೊರೆದುಜೀವಿಸಬಹುದೆ’ ಮಧುವಂತಿಯ ಆದ್ರìತೆಯಲ್ಲಿ ಮನಮುಟ್ಟಿತು. ರಂಜಕವಾದ ಜನಸಮ್ಮೊದಿನಿ ರಾಗದಲ್ಲಿ ಬಸವಣ್ಣನವರ ವಚನ ದೊಂದಿಗೆ ಈ ಗಾಯನ ವಿರಮಿಸಿತು. ನವ ರಾತ್ರಿಯ ಸಲುವಾಗಿ ದೇವಿಯ ಕೃತಿಗಳನ್ನು ಆಯ್ದುಕೊಂಡದ್ದಲ್ಲದೆ, ಕರ್ನಾಟಕ ಸಂಗೀತಕ್ಕೆ ಸಾಮ್ಯತೆಯಿರುವ ರಾಗ ಗಳನ್ನು ಆರಿಸಿಕೊಂಡದ್ದೂ ವಿಶೇಷವಾಗಿತ್ತು. ಶಶಿಕಿರಣ್‌ ತಬ್ಲಾದಲ್ಲಿ, ಗೌರವ್‌ ನಾಯಕ್‌ ಹಾರ್ಮೋನಿಯಂನಲ್ಲಿ, ತಂಬೂರ ಮತ್ತು ಸಹಗಾಯನದಲ್ಲಿ ಚೈತನ್ಯ ಜಿ., ಸಂಧ್ಯಾ ಪಿ.ಆರ್‌. ಸಾಥ್‌ ನೀಡಿದರು. 

 ಮಧ್ಯಾಹ್ನದ ನಂತರ ಪುಟಾಣಿ ಕಲಾವಿದರಿಗೆ ವೇದಿಕೆ ಒದಗಿಸಲಾಯಿತು. ಕು| ಗಾಥಾ, ಮಾ| ಪ್ರಮಥ್‌ ಭಾಗವತ್‌, ಮಾ| ಚಿನ್ಮಯ ಕೃಷ್ಣ , ಮಾ| ಚೈತನ್ಯ ಹಾಗೂ ಮಾ| ವರ್ಧನ್‌ ಶಿವತ್ತಾಯ, ಮಾ| ಅನಿಕೇತ್‌ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ವಯೊಲಿನ್‌ನಲ್ಲಿ ಕು| ಅಖೀಲಾ ಕೈಂತಜೆ, ಅನಘಾ ಹೆಬ್ಟಾರ್‌, ಮಾ| ಪ್ರಮಥ್‌ ಭಾಗವತ್‌, ವೈಭವ್‌ ಪೈ, ಅನಿಕೇತ್‌, ಸುದರ್ಶನ್‌ ಕೈಂತಜೆ, ಸುಮೇಧ ಅಮೈ , ವಸಂತಿ ರಾಮ ಭಟ್‌, ಮೃದಂಗದಲ್ಲಿ ಅವಿನಾಶ್‌ ಚಣಿಲ, ದಾಶರಥಿ, ಡಾ| ಬಾಲಚಂದ್ರ ಆಚಾರ್‌, ಪವನ್‌ ಮಾಧವ್‌ ಸಹಕರಿಸಿದರು. 

ಮುಂದೆ ತ್ಯಾಗರಾಜರ ಪಂಚರತ್ನ ಕೃತಿಗಳ ಹಾಗೂ ಮುತ್ತು ಸ್ವಾಮಿ ದೀಕ್ಷಿತರ ನವಾವರಣ ಕೃತಿಗಳ ಗೋಷ್ಠಿ ಗಾಯನ ನೆರವೇರಿತು. ವೇಣುಗೋಪಾಲ್‌ ಶ್ಯಾನುಭೋಗ್‌, ವಸಂತಿ ರಾಮ ಭಟ್‌ , ವಯೊಲಿನ್‌ನಲ್ಲಿ ಪವನ್‌ ಮಾಧವ್‌, ದಾಶರಥಿ,ಮೃದಂಗದಲ್ಲಿ ಅವಿನಾಶ್‌ ಸಹಕಾರವನ್ನಿತ್ತರು. 

Advertisement

ಅನಂತರದ ಕಛೇರಿಯನ್ನು ನಡೆಸಿಕೊಟ್ಟವರು ಚೆನ್ನೈಯ ವಿ| ಸಾಕೇತರಾಮನ್‌. ನಳಿನಕಾಂತಿಯ ವರ್ಣದ ಆಕರ್ಷಕ ಪ್ರಸ್ತುತಿಯಿಂದ ಕಾರ್ಯಕ್ರಮ ಶುರುವಾಯಿತು. ಮಲಯ ಮಾರುತದ ಮನಮುಟ್ಟುವ ಆಲಾಪನೆ, ಸ್ವರ ಕಲ್ಪನೆಗಳೊಂದಿಗೆ “ಸ್ಮರಣೆಯೊಂದೇ ಸಾಲದೇ’ ದಾಸರ ಕೀರ್ತನೆಯನ್ನು ಮನೋಜ್ಞವಾಗಿ ಹಾಡಲಾಯಿತು. ಮುಂದೆ ನಾಸಿಕಾಭೂಷಣಿ ರಾಗದ ಆಲಾಪನೆಯನ್ನು ಮಾಡಿದ ರೀತಿ ಮನಮುಟ್ಟಿತು. ಆನಂದ ಭೈರವಿಯ ಸಾಂಪ್ರದಾಯಿಕವಾದ ಆಲಾಪನೆಯೊಂದಿಗೆ ಅಪರೂಪದ ಕೃತಿ “ನೀ ಮದಿ ಚಲ್ಲಗ’ವನ್ನು ಮುಂದಿಟ್ಟರು. ಬೃಂದಾವನಿ ಸಾರಂಗದಲ್ಲಿ ಪುರಂದರದಾಸರ “ಇದು ಭಾಗ್ಯ ಇದು ಭಾಗ್ಯವಯ್ನಾ’ವನ್ನು ಹಾಡಿದ ಬಳಿಕ ಪ್ರಧಾನ ರಾಗವಾಗಿ ಪೂರ್ವಿಕಲ್ಯಾಣಿಯನ್ನು ಆರಿಸಿಕೊಂಡು ದೀಕ್ಷಿತರ “ಮೀನಾಕ್ಷಿ ಮೀ ಮುದಂ ದೇಹಿ’ಯನ್ನು ಹಾಡಿದರು. ಮಧುರಾಪುರಿ ನಿಲಯೇಯಲ್ಲಿ ರಾಗದ ಪ್ರಮುಖ ಸಂಚಾರಗಳನ್ನು ಎತ್ತಿ ಹಿಡಿಯುವ ರೀತಿಯಲ್ಲಿ ನೆರವಲ್‌ ಹಾಗೂ ಕಲ್ಪನಾ ಸ್ವರಗಳನ್ನು ಪೋಣಿಸಿದರು. ಬಾರೋ ಕೃಷ್ಣಯ್ನಾ, ತಿಲ್ಲಾನಗಳೊಂದಿಗೆ ಈ ಕಛೇರಿ ಕೊನೆಗೊಂಡಿತು. ವಯೊಲಿನ್‌ನಲ್ಲಿ ವಿಠಲರಂಗನ್‌ ,ಮೃದಂಗದಲ್ಲಿ ಸುನಾದ ಕೃಷ್ಣ ಅಮೈ ಮತ್ತು ಮೋರ್ಸಿಂಗ್‌ನಲ್ಲಿ ಪಯ್ಯನೂರ್‌ ಗೋವಿಂದ ಪ್ರಸಾದ್‌ ಸಹಕರಿಸಿದರು. 

 ವಿದ್ಯಾಲಕ್ಷ್ಮೀ ಕಡಿಯಾಳಿ 

Advertisement

Udayavani is now on Telegram. Click here to join our channel and stay updated with the latest news.

Next