Advertisement

ಮುರುಘಾ ಶ್ರೀಗಳೊಂದಿಗೆ ಮಠದಲ್ಲಿ ಸ್ಥಳ ಮಹಜರು; ಮಠದ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್

09:51 PM Sep 04, 2022 | Team Udayavani |

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಪೊಲೀಸ್‌ ವಿಚಾರಣೆ ಎದುರಿಸುತ್ತಿರುವ ಮುರುಘಾ ಮಠದ ಡಾ|ಶಿವಮೂರ್ತಿ ಮುರುಘಾ ಶರಣರನ್ನು ಭಾನುವಾರ ಮಠಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಲಾಯಿತು.

Advertisement

ಬಿಗಿ ಭದ್ರತೆಯಲ್ಲಿ ಮಧ್ಯಾಹ್ನ 12 ಗಂಟೆಗೆ ಮಠಕ್ಕೆ ಕರೆದೊಯ್ದ ಪೊಲೀಸರು, ಮಧ್ಯಾಹ್ನ 2.30ರವರೆಗೆ ಸತತ ಎರಡೂವರೆ ಗಂಟೆಗಳ ಕಾಲ ಸ್ಥಳ ಮಹಜರು ನಡೆಸಿದ್ದಾರೆ. ಗುರುವಾರ ರಾತ್ರಿ ಬಂಧಿತರಾಗಿದ್ದ ಶ್ರೀಗಳು, ಮೂರು ದಿನಗಳ ನಂತರ ಮಹಜರಿಗಾಗಿ ಮಠಕ್ಕೆ ಕರೆದೊಯ್ಯುವ ಹಿನ್ನೆಲೆಯಲ್ಲಿ ಮಠದ ಸುತ್ತಲೂ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಮಾಧ್ಯಮದವರನ್ನು ಮಠದ ಮುಖ್ಯ ದ್ವಾರದ ಬಳಿಯೇ ತಡೆದಿದ್ದ ಪೊಲೀಸರು, ಶ್ರೀಗಳ ಮುಖ ಕಾಣದಂತೆ ಅವರನ್ನು ಕರೆತಂದ ಪೊಲೀಸ್‌ ವಾಹನದ ಸುತ್ತಲೂ ಬಟ್ಟೆಯಿಂದ ಮುಚ್ಚಲಾಗಿತ್ತು. ಮುಂಭಾಗದಲ್ಲಿ ಪೊಲೀಸ್‌ ಸಿಬ್ಬಂದಿ ನಿಂತು ಶ್ರೀಗಳು ಕಾಣದಂತೆ ಮರೆಮಾಡಿಕೊಂಡು ಮಠದಿಂದ ವಾಪಸ್‌ ಡಿವೈಎಸ್‌ಪಿ ಕಚೇರಿಗೆ ಕರೆತಂದರು.

ಮಠದಲ್ಲಿ ಮಹಜರು ನಡೆಸಿ ಡಿವೈಎಸ್ಪಿ ಕಚೇರಿಗೆ ಮರಳಿದ ನಂತರ ಕೆಲ ಹೊತ್ತು ಶ್ರೀಗಳು ವಿಶ್ರಾಂತಿ ಪಡೆದಿದ್ದಾರೆ. ನಂತರ ಪೊಲೀಸರ ತನಿಖೆ ಮುಂದುವರಿದಿದೆ ಎನ್ನಲಾಗಿದೆ.

ಮಹಜರು ನಡೆಸುವ ವೇಳೆ ಸ್ವಾಮೀಜಿ ವಾಸ್ತವ್ಯ ಮಾಡುವ ಕೊಠಡಿಯಲ್ಲಿ ಪೊಲೀಸರು ಶೋಧ ನಡೆಸಿದರು. ಈ ವೇಳೆ ತನಿಖೆಗೆ ಸಂಬಂಧಪಟ್ಟ ಕೆಲ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸ್‌ಪಿ ಕೆ.ಪರಶುರಾಮ್‌ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿನಿಯರು ವಾಸಿಸುವ ವಿದ್ಯಾರ್ಥಿ ನಿಲಯದಲ್ಲಿ ಈಗಾಗಲೇ ಸ್ಥಳ ಮಹಜರು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Advertisement

ಇಂದು ಶ್ರೀಗಳು ನ್ಯಾಯಾಲಯಕ್ಕೆ
ಪ್ರಕರಣದ ತನಿಖೆಗಾಗಿ ಸೆ.5 ಸೋಮವಾರ ಬೆಳಗ್ಗೆ 11 ಗಂಟೆವರೆಗೆ ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು.

ಸೋಮವಾರ ಬೆಳಗ್ಗೆ 11 ಗಂಟೆಗೆ ಈ ಅವಧಿ ಮುಕ್ತಾಯವಾಗುತ್ತಿದ್ದು, ಮಹಜರು ಮೂಲಕ ಬಹುತೇಕ ತನಿಖೆಯೂ ಮುಗಿದಂತಾಗಿದೆ. ಹೀಗಾಗಿ ಪೊಲೀಸರು ಶ್ರೀಗಳನ್ನು ನ್ಯಾಯಾಂಗದ ವಶಕ್ಕೆ ಒಪ್ಪಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಅಥವಾ ವಿಚಾರಣೆ ಬಾಕಿಯಿದ್ದಲ್ಲಿ ಪೊಲೀಸ್‌ ಕಸ್ಟಡಿ ಅವಧಿ ವಿಸ್ತರಣೆಗೆ ಮನವಿ ಮಾಡಿಕೊಳ್ಳಬಹುದು.

ಒಟ್ಟಾರೆ ಸೋಮವಾರ ಪೊಲೀಸ್‌ ಕಸ್ಟಡಿಯಿಂದ ನ್ಯಾಯಾಲಯದ ಮೂಲಕ ನ್ಯಾಯಾಂಗದ ವಶಕ್ಕೆ ಒಪ್ಪಿಸಲಿದ್ದಾರೆ.

ಸೆ.7ಕ್ಕೆ ಜಾಮೀನು ಅರ್ಜಿ ವಿಚಾರಣೆ: ಜಾಮೀನು ಕೋರಿ ಡಾ|ಶಿವಮೂರ್ತಿ ಮುರುಘಾ ಶರಣರು ಶನಿವಾರ ಸಲ್ಲಿಸಿರುವ ಜಾಮೀನು ಅರ್ಜಿ ಸೆ.7ರಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಸರ್ಕಾರಿ ಅಭಿಯೋಜಕರು ತಕರಾರು ಆಕ್ಷೇಪಣೆ ಸಲ್ಲಿಸಿದ ನಂತರ ಶ್ರೀಗಳ ಜಾಮೀನು ಕುರಿತ ವಿಚಾರಣೆ ಆರಂಭವಾಗಲಿದೆ.

ವರದಿ ಸಲ್ಲಿಸಲು ಆಯೋಗ ಸೂಚನೆ
ಡಾ|ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾಗಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ಪ್ರತಿಬಂಧಕ ಅ ಧಿನಿಯಮದಡಿ ತೆಗೆದುಕೊಂಡಿರುವ ಕ್ರಮಗಳ ಕುರಿತು ವಿವರವಾದ ವರದಿ ಸಲ್ಲಿಸಲು ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಆಯೋಗ ಸೂಚಿಸಿದೆ. ಈ ಬಗ್ಗೆ ಜಿಲ್ಲಾ ಧಿಕಾರಿ ಕವಿತಾ ಎಸ್‌.ಮನ್ನಿಕೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಕೆ.ಪರಶುರಾಮ್‌ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅ ಧಿಕಾರಿ ಮಮತಾ ಅವರಿಗೆ ಆಯೋಗದ ಕಾರ್ಯದರ್ಶಿ ನೋಟಿಸ್‌ ಜಾರಿ ಮಾಡಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ ಬಾಲಕಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಮುರುಘಾ ಶರಣರ ವಿರುದ್ಧ ದೂರು ದಾಖಲಾಗಿರುವುದಾಗಿ ವರದಿಯಾಗಿದೆ. ಇದು ಬಾಲಕಿಯ ಭವಿಷ್ಯದ ಮೇಲೆ ಪರಿಣಾಮ ಬೀರಲಿದ್ದು, ಈ ಕುರಿತು ವಿವರವಾದ ವರದಿ ನೀಡಿ ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ.

ಇಂದು ಸಾಮೂಹಿಕ ಕಲ್ಯಾಣ ಮಹೋತ್ಸವ
ಪೋಕ್ಸೋ ಕಾಯ್ದೆ ಅಡಿ ಶ್ರೀಗಳು ವಿಚಾರಣೆ ಎದುರಿಸುತ್ತಿರುವಾಗಲೇ ಇತ್ತ ಮುರುಘಾ ಮಠದಲ್ಲಿ ಪ್ರತಿ ತಿಂಗಳು ನಡೆಯುವ ಸಾಮೂಹಿಕ ಕಲ್ಯಾಣ ಮಹೋತ್ಸವಕ್ಕೆ ಸಿದ್ಧತೆ ನಡೆದಿದೆ. ಈಗಾಗಲೇ 7 ಜೋಡಿಗಳು ವಿವಾಹವಾಗಲು ಹೆಸರು ನೋಂದಾಯಿಸಿವೆ.

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ, ಎಸ್‌ಜೆಎಂ ಶಾಂತಿ ಮತ್ತು ಪಗ್ರತಿ ಫೌಂಡೇಶನ್‌ ಸಹಯೋಗದಲ್ಲಿ 32ನೇ ವರ್ಷದ 9ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ನಡೆಯಲಿದೆ. ಮುರುಘಾ ಮಠದ ಅನುಭವ ಮಂಟಪದಲ್ಲಿ ಬೆಳಗ್ಗೆ 10.30ಕ್ಕೆ ಕಲ್ಯಾಣ ಮಹೋತ್ಸವ ಆರಂಭವಾಗಲಿದ್ದು, ಹೆಬ್ಟಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ನೇತೃತ್ವ ವಹಿಸಿಕೊಳ್ಳಲಿದ್ದಾರೆ. ಗುರುಮಠಕಲ್‌ ಶಾಖಾ ಮಠದ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿಗಳು ಗೌರವ ಉಪಸ್ಥಿತಿ ವಹಿಸಲಿದ್ದು, ಜಿಪಂ ಮಾಜಿ ಉಪಾಧ್ಯಕ್ಷ ಎಂ.ಟಿ. ಮಲ್ಲಿಕಾರ್ಜುನಸ್ವಾಮಿ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಕಾರ್ಯಕಾರಿ ಸಮಿತಿ ಸದಸ್ಯರಾದ ಎಸ್‌.ಷಣ್ಮುಖಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕಳೆದ 32 ವರ್ಷಗಳಿಂದ ಪ್ರತಿ ತಿಂಗಳು 5ನೇ ತಾರೀಖೀನಂದು ಒಂದು ತಿಂಗಳೂ ತಪ್ಪದಂತೆ ಮಠದಲ್ಲಿ ಸಾಮೂಹಿಕ ಕಲ್ಯಾಣ ಮಹೋತ್ಸವ ನಡೆಯುತ್ತಿದೆ. 5ನೇ ತಾರೀಖೀನಂದು ಅಮಾವಾಸ್ಯೆ, ಹುಣ್ಣಿಮೆ, ಗ್ರಹಣ, ಆಷಾಢ ಮಾಸ ಹೀಗೆ ಏನೇ ಇದ್ದರೂ ಮಠದಲ್ಲಿ ಮದುವೆ ಮಾತ್ರ ನಿಂತಿಲ್ಲ. ಕೆಲವೊಮ್ಮ ಮುರುಘಾ ಶರಣರು ಕಾರ್ಯದೊತ್ತಡದಲ್ಲಿ ಹೊರಗೆ ಹೋಗಿದ್ದಾಗಲೂ ಶಾಖಾ ಮಠದ ಶ್ರೀಗಳ, ಮಠದ ಸಿಬ್ಬಂದಿ ವಚನ ಮಾಂಗಲ್ಯ ಮಾದರಿಯಲ್ಲಿ ಮದುವೆ ಮಾಡಿಸುವುದು ಇಲ್ಲಿನ ಪದ್ಧತಿ. ಆದರೆ, ಈ ಮಾಸದ ಮದುವೆ ಸಂದರ್ಭದಲ್ಲಿ ಮಠದ ಪೀಠಾ ಧಿಪತಿಗಳು ಪೊಲೀಸ್‌ ವಶದಲ್ಲಿದ್ದು ಮಠದಲ್ಲಿ ಮೌನದ ವಾತಾವರಣ ಇದೆ. ಆದರೂ, ಸಾಮೂಹಿಕ ಕಲ್ಯಾಣ ಮಹೋತ್ಸವಕ್ಕೆ ಬ್ರೇಕ್‌ ಬೀಳದಂತೆ ಸಮಾರಂಭ ನಡೆಸುತ್ತಿರುವುದು ವಿಶೇಷವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next