Advertisement

ಮರ್ಡರ್‌ ಮಿಸ್ಟ್ರಿ ಹೇಳೋಕೆ ಅಕ್ಷರಾ ಗೌಡ ರೆಡಿ

09:37 AM Sep 11, 2019 | Team Udayavani |

ಯೋಗರಾಜ್‌ ಭಟ್ಟರ “ಪಂಚತಂತ್ರ’ ಚಿತ್ರದ ಮೂಲಕ ಕನ್ನಡ ಸಿನಿಪ್ರಿಯರಿಗೆ ಹತ್ತಿರವಾಗಿದ್ದ ನಟಿ ಅಕ್ಷರಾ ಗೌಡ ಶೀಘ್ರದಲ್ಲಿಯೇ ಮರ್ಡರ್‌ ಮಿಸ್ಟ್ರಿಯೊಂದಿಗೆ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ಬೋಲ್ಡ್‌ ಬೆಡಗಿ ಅಕ್ಷರಾ ಗೌಡ, ಹೇಮಂತ್‌ ಹೆಗ್ಡೆ ನಿರ್ದೇಶನದ ಹೊಸಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಚಿತ್ರದಲ್ಲಿ ಗುರುನಂದನ್‌ ನಾಯಕನಾಗಿದ್ದು, ಅವರಿಗೆ ಜೋಡಿಯಾಗಿ ಅಕ್ಷರಾ ಗೌಡ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

Advertisement

ಸದ್ಯ ಇನ್ನು ಹೆಸರಿಡದ ಈ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇದೇ ತಿಂಗಳ ಅಂತ್ಯಕ್ಕೆ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನು ಚಿತ್ರತಂಡದ ಮೂಲಗಳ ಪ್ರಕಾರ ಅಕ್ಟೋಬರ್‌ ಎರಡನೇ ವಾರದಿಂದ ಚಿತ್ರದ ಚಿತ್ರೀಕರಣ ನಡೆಯಲಿದ್ದು, ಚಿತ್ರದ ಬಹುಭಾಗ ಚಿತ್ರೀಕರಣ ಬೆಂಗಳೂರು, ನಾರ್ವೆ ಸುತ್ತಮುತ್ತ ನಡೆಸಲು ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ.

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಹೇಮಂತ್‌ ಹೆಗ್ಡೆ, ಇದೊಂದು ಸಸ್ಪೆನ್ಸ್‌-ಮರ್ಡರ್‌ ಮಿಸ್ಟ್ರಿ ಚಿತ್ರ. ಇದರಲ್ಲಿ ಕಾಮಿಡಿ, ಥ್ರಿಲ್ಲರ್‌ ಹೀಗೆ ಹಲವು ಅಂಶಗಳು ಇರಲಿವೆ. ಕನ್ನಡದಲ್ಲಿ ಇಲ್ಲಿಯವರೆಗೂ ಯಾರೂ ಮುಟ್ಟದ ಎಲಿಮೆಂಟ್‌ ಒಂದನ್ನು ಇದರಲ್ಲಿ ಹೇಳಲು ಹೊರಟಿದ್ದೇವೆ. ಅದೇನು ಅನ್ನೋದನ್ನ ಚಿತ್ರದಲ್ಲೇ ನೋಡಬೇಕು. ಪದ್ಮಲತಾ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ಸದ್ಯ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರ ಅಂತಿಮ ಆಯ್ಕೆ ನಡೆಯುತ್ತಿದೆ.

ಶೀಘ್ರದಲ್ಲಿ ಚಿತ್ರತಂಡದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇವೆ ಎನ್ನುತ್ತಾರೆ. ಇನ್ನು ಕನ್ನಡದಲ್ಲಿ ಇತ್ತೀಚೆಗೆ ಹೊಸತರದ ಚಿತ್ರಗಳು ಮತ್ತು ಪಾತ್ರಗಳು ತಮ್ಮನ್ನು ಹುಡುಕಿಕೊಂಡು ಬರುತ್ತಿರುವುದರ ಬಗ್ಗೆ ನಟಿ ಅಕ್ಷರಾ ಗೌಡ ಕೂಡ ಫ‌ುಲ್‌ ಖುಷಿಯಾಗಿದ್ದಾರೆ. ಈ ಬಗ್ಗೆ ಮಾತನಾಡುವ ಅಕ್ಷರಾ ಗೌಡ “ಸದ್ಯ ಕನ್ನಡದಲ್ಲಿ ಹೊಸ ಸಬ್ಜೆಕ್ಟ್ ಚಿತ್ರಗಳಿಗೆ ಒಳ್ಳೆಯ ಆಫ‌ರ್ ಬರುತ್ತಿವೆ. ಈಗಾಗಲೇ ಹಲವು ಕಥೆಗಳನ್ನು ಕೇಳಿದ್ದೇನೆ.

ಅದರಲ್ಲಿ ಕೆಲವು ಕಥೆಗಳು ಇಷ್ಟವಾಗಿದ್ದು, ಅದರ ಬಗ್ಗೆ ಇನ್ನಷ್ಟೇ ನಿರ್ಧರಿಸಬೇಕಾಗಿದೆ. ಇನ್ನು ಹೇಮಂತ್‌ ಹೆಗ್ಡೆ ಅವರನ್ನು ನಾನು ಇಲ್ಲಿಯವರೆಗೆ ನಟನಾಗಿ ನೋಡಿದೆ. ಈಗ ಅವರ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಈಗಲೇ ಅವರ ಜೊತೆಗಿನ ಹೊಸ ಚಿತ್ರದ ಬಗ್ಗೆ ಹೆಚ್ಚೇನು ಮಾಹಿತಿ ಹೇಳಲಾರೆ. ಆದ್ರೆ ಚಿತ್ರದ ಕಥೆ ಮತ್ತು ನನ್ನ ಪಾತ್ರ ಎರಡೂ ತುಂಬ ವಿಭಿನ್ನವಾಗಿದೆ ಎಂದಷ್ಟೇ ಹೇಳಬಲ್ಲೆ’ ಎನ್ನುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next