Advertisement

ಸ್ವಚ್ಛ ಸರ್ವೇಕ್ಷಣೆ ಸ್ಪರ್ಧೆಯಲ್ಲಿ ನಗರಸಭೆ

09:41 AM Apr 26, 2022 | Team Udayavani |

ಪುತ್ತೂರು: ರಾಷ್ಟ್ರಮಟ್ಟದಲ್ಲಿ ಸ್ವಚ್ಛ ಸರ್ವೇಕ್ಷಣ ಅಭಿಯಾನ ನಡೆಯುತ್ತಿದ್ದು 2021-22ನೇ ಸಾಲಿನ ಪ್ರಶಸ್ತಿಗಾಗಿ ಪ.ಪಂ., ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಸೇರಿದಂತೆ ಪೌರಾಡಳಿತ ಸಂಸ್ಥೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸುತಿದ್ದು ಪುತ್ತೂರು ನಗರಸಭೆಯು ಅಖಾಡದಲ್ಲಿದೆ.

Advertisement

ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಖಾತೆ ಸಚಿವಾಲಯದ ನೇತೃತ್ವದಲ್ಲಿ ಈ ಸ್ಪರ್ಧೆ ಆಯೋಜನೆಗೊಂಡಿದೆ. ಈ ತನಕದ ಅಂಕಿ ಅಂಶದಲ್ಲಿ ದ.ಕ.ಜಿಲ್ಲೆಯಲ್ಲಿ ಪುತ್ತೂರು ನಗರಸಭೆ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಜನಮತ ಸಂಗ್ರಹದಲ್ಲಿ ಮಂಗಳೂರು ಮುಂಚೂಣಿಯಲ್ಲಿದ್ದು ಈ ಬಾರಿ ಪುತ್ತೂರಿಗೆ ಸ್ವಚ್ಛ ಸರ್ವೇಕ್ಷಣ-2022 ಪ್ರಶಸ್ತಿ ದೊರೆಯುವ ಬಗ್ಗೆ ನಿರೀಕ್ಷೆ ಹೊಂದಲಾಗಿದೆ.

ಅಭಿಯಾನದ ರೂಪ

ಸ್ವಚ್ಛ ಸರ್ವೇಕ್ಷಣೆ ಎಂಬುದು ವರ್ಷವಿಡೀ ನಡೆಯುವ ದಾಖಲೀಕರಣ. ಪ್ರತೀ ತಿಂಗಳು ಸರಕಾರ ಪೌರಾಡಳಿತ ಸಂಸ್ಥೆಗಳಿಂದ ಆನ್‌ ಲೈನ್ ವರದಿ ಪಡೆದುಕೊಳ್ಳುತ್ತದೆ. ಘನತ್ಯಾಜ್ಯ ವಿಲೇವಾರಿ, ಸಂಸ್ಕರಣೆ, ಪ್ಲಾಸ್ಟಿಕ್‌ ನಿರ್ಮೂಲನೆ, ಕಾರ್ಯಕ್ರಮದ ವಿವರ ಪಡೆಯಲಾಗುತ್ತದೆ. ಜಾಗೃತಿ ಈ ವರದಿಯ ಹೊರತಾಗಿಯೂ ಸರಕಾರದ ಏಜೆನ್ಸಿಯಿಂದ ಪ್ರತ್ಯೇಕ ಕ್ಷೇತ್ರ ಕಾರ್ಯ ನಡೆಯುತ್ತದೆ. ಡಂಪಿಂಗ್‌ ಯಾರ್ಡ್‌, ತ್ಯಾಜ್ಯ ಸಂಗ್ರಹ, ತ್ಯಾಜ್ಯ ಸಂಸ್ಕರಣೆ, ಪ್ಲಾಸ್ಟಿಕ್‌ ನಿರ್ಮೂಲನೆ ಇತ್ಯಾದಿಗಳನ್ನು ಅಧ್ಯಯನ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಲಿದೆ.

ಜನಮತ ಸಂಗ್ರಹ

Advertisement

ಸಾರ್ವಜನಿಕರು ವೆಬ್‌ಸೈಟ್‌ ಪ್ರವೇಶಿಸಿ ಪುತ್ತೂರಿನ ಪ್ರಗತಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರ ದಾಖಲಿಸಬಹುದು. ವೆಬ್‌ಸೈಟ್‌ನ ಆನ್‌ಲೈನ್‌ ಲಿಂಕ್‌ಗಳು, ಕ್ಯೂಆರ್‌ ಕೋಡ್‌ ಇದ್ದು ಸಾರ್ವಜನಿಕರು ಇದನ್ನು ಬಳಸಿ ಉತ್ತರ ದಾಖಲಿಸಲ ಅವಕಾಶ ಕಲ್ಪಿಸಲಾಗಿದೆ.

https://ss-cf.sbmurban. org/#/feedback ಇದು ವೆಬ್‌ ಸೈಟ್‌ ಆಗಿದೆ. ಮಾಸಿಕ ವರದಿ, ಕ್ಷೇತ್ರ ಕಾರ್ಯದ ವರದಿ ಮತ್ತು ಸಿಟಿಜನ್‌ ಫೀಡ್‌ಬ್ಯಾಕ್‌ ಈ ಮೂರು ಅಂಶಗಳನ್ನು ಕ್ರೋಢೀಕರಿಸಿದ ಬಳಿಕ ಕೇಂದ್ರ ಸರಕಾರ ಪ್ರಶಸ್ತಿ ಘೋಷಿಸಲಿದೆ.

ಪ್ರಶ್ನಾವಳಿಗಳಿಗೆ ಉತ್ತರಿಸಿ

ಕ್ಯೂಆರ್‌ ಕೋಡ್‌ಗೆ ಮೊಬೈಲ್‌ ಕೆಮರಾದ ಮೂಲಕ ವೆಬ್‌ ಪೇಜ್‌ ತೆರೆದುಕೊಳ್ಳುತ್ತದೆ. ಇದರಲ್ಲಿ ರಾಜ್ಯ, ಜಿಲ್ಲೆ ಪೌರಾಡಳಿತ ಸಂಸ್ಥೆ ಆಯ್ಕೆ ಮಾಡಿಕೊಂಡು ಬಳಿಕ ಸ್ವವಿವರ ದಾಖಲಿಸಿ, ಪ್ರಶ್ನಾವಳಿಗಳಿಗೆ ಉತ್ತರಿಸಿ, ಒಟಿಪಿ ನಮೂದಿಸಬೇಕು. ಅಲ್ಲಿಗೆ ಸಿಟಿಜನ್‌ ಫೀಡ್‌ಬ್ಯಾಕ್‌ ಪೂರ್ಣಗೊಳ್ಳುತ್ತದೆ. ವೋಟಿಂಗ್‌ ಮಾಡಲು ಎ.30 ಕೊನೆಯ ದಿನವಾಗಿದೆ.

ಅಭಿಪ್ರಾಯ ದಾಖಲಿಸಬಹುದು

ಸ್ವಚ್ಛ ಪುತ್ತೂರು ನಿರ್ಮಾಣಕ್ಕಾಗಿ ನಗರಸಭೆ ಮೂಲಕ ಹಲವು ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದಕ್ಕೆ ಸಾರ್ವಜನಿಕರ ಸಹಕಾರವು ಅತ್ಯಗತ್ಯ. ಈಗಾಗಲೇ ಶಾಶ್ವತ ಕ್ರಮಗಳ ಅನುಷ್ಠಾನ ಪ್ರಕ್ರಿಯೆ ಕೂಡ ಪ್ರಗತಿಯಲ್ಲಿದೆ. ಸ್ವಚ್ಛ ಸರ್ವೇಕ್ಷಣ ಮೂಲಕ ಜನರಿಗೆ ಅಭಿಪ್ರಾಯ ದಾಖಲಿಸಬಹುದು. – ಜೀವಂಧರ್‌ ಜೈನ್‌, ಅಧ್ಯಕ್ಷ, ನಗರಸಭೆ ಪುತ್ತೂರು

ದ್ವಿತೀಯ ಸ್ಥಾನದಲ್ಲಿದೆ

ಸ್ವಚ್ಛ ಸರ್ವೇಕ್ಷಣ 2022 ರ ಆಯ್ಕೆಗಾಗಿ ನಗರದಲ್ಲಿ ಆನ್‌ಲೈನ್‌ ಜನಮತ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಅದಕ್ಕಾಗಿ ಕ್ಯೂಆರ್‌ ಕೋಡ್‌ ಕೂಡ ಇದೆ. ಕೆಲವು ದಿನಗಳ ಹಿಂದಿನ ಅಂಕಿ ಅಂಶದ ಪ್ರಕಾರ ಪುತ್ತೂರು ನಗರಸಭೆ ದ್ವಿತೀಯ ಸ್ಥಾನದಲ್ಲಿದೆ. ಎ.30 ರ ತನಕ ವೋಟಿಂಗ್‌ ಮಾಡಲು ಅವಕಾಶ ಇದೆ. – ಮಧು ಎಸ್‌. ಮನೋಹರ್‌, ಪೌರಾಯುಕ್ತ ನಗರಸಭೆ ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next