Advertisement

ನಗರಸಭೆ ಆಸ್ತಿ ಅತಿಕ್ರಮಣ; ಕ್ರಮಕ್ಕೆ ಸೂಚನೆ

09:47 AM Jul 07, 2021 | Team Udayavani |

ಬನಹಟ್ಟಿ: ರಬಕವಿ-ಬನಹಟ್ಟಿ ನಗರಸಭೆಯ ಸಾಮಾನ್ಯ ಸಭೆ ನಗರಸಭೆ ಅಧ್ಯಕ್ಷ ಶ್ರೀಶೈಲ ಬೀಳಗಿ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

ಮಂಗಳವಾರ ರಾಮಪುರನ ನಗರಸಭೆ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಕಾಮಗಾರಿ ಟೆಂಡರ್‌ ಕರೆಯುವಲ್ಲಿ ತಾರತಮ್ಯ ಎಸಗುತ್ತಿದ್ದು, ಕೆಲವರ ಮಾತುಗಳಂತೆ ನಗರಸಭೆ ನಡೆಯುತ್ತಿದೆ ಎಂದು ಸದಸ್ಯರಾದ ಪ್ರಭಾಕರ ಮೊಳೇದ, ಸಂಜಯ ತೆಗ್ಗಿ, ಶಿವಾನಂದ ಬುದ್ನಿ, ಬಸು ಗುಡ್ಡೋಡಗಿ ಸಾಮೂಹಿಕವಾಗಿ ಆರೋಪಿಸಿದರು.

ಮನಬಂದಂತೆ ಕಾರ್ಯನಿರ್ವಹಿಸುವುದಾದರೆ ಸದಸ್ಯರ ಸಾಮಾನ್ಯ ಸಭೆಯಾದರೂ ಏಕೆ ಬೇಕೆಂದು ರಬಕವಿ-ಬನಹಟ್ಟಿ ನಗರಸಭೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆಯಿತು. ಕಳೆದ ವರ್ಷದಿಂದ ನಗರಸಭೆ ಅಧಿಧೀನದ 15 ವಾಣಿಜ್ಯ ಮಳಿಗೆಗಳಿಗೆ ಟೆಂಡರ್‌ ಏಕೆ ಕರೆದಿಲ್ಲ.

ಮೊದಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನಗರಸಭೆಗೆ ಮತ್ತಷ್ಟು ಹೊರೆಯಾಗುವಂತೆ ಅಧಿಕಾರಿಗಳೇ ಮಾಡಿದ್ದಾರೆಂದು ಸದಸ್ಯ ಯಲ್ಲಪ್ಪ ಕಟಗಿ ಆರೋಪಿಸಿದರು. ಈ ಕುರಿತು ಪ್ರಕ್ರಿಯೆ ನಡೆಯುತ್ತಿದ್ದು, ಕಂದಾಯ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಕಾರಣ ವಿಳಂಬವಾಗಿದೆ. ತಕ್ಷಣವೇ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಕಳಿಸಿ ಲೀಲಾವು ಮಾಡಲಾಗುವುದು ಎಂದು ಪೌರಾಯುಕ್ತ ಶ್ರೀನಿವಾಸ ಜಾಧವ ಹೇಳಿದರು.

ನೈರ್ಮಲ್ಯ ನಿರ್ವಹಣೆಗೆಂದು ಈಗಿರುವ 85 ಪೌರ ಕಾರ್ಮಿಕರಿಂದ ಸಾಧ್ಯವಾಗುತ್ತಿಲ್ಲ. ಎಲ್ಲ 31 ವಾರ್ಡ್‌ ಗಳಿಗೆ ಇನ್ನೂ 20 ಕಾರ್ಮಿಕರನ್ನು ಹೊಸದಾಗಿ ಪಡೆದುಕೊಳ್ಳುವಲ್ಲಿ ಸಭೆ ಅನುಮೋದಿಸಿತು. ಬಿಡಾಡಿ ದನಗಳ ರಕ್ಷಣೆಗೆ ರಬಕವಿ-ಬನಹಟ್ಟಿ ನಗರ ವ್ಯಾಪ್ತಿ ಗೋಮಾಳ ಜಾಗ ಪರಿಶೀಲಿಸುವಲ್ಲಿ ಸಭೆ ಮಹತ್ವದ ನಿರ್ಧಾರ ಪಡೆಯಿತು. ಅವಳಿ ನಗರಾದ್ಯಂತ ಉದ್ಯಾನವನ ಸೇರಿದಂತೆ ನಗರಸಭೆಯ ಅಂದಾಜು 133 ಆಸ್ತಿಗಳನ್ನು ಕಬ್ಜಾ ಮಾಡಿಕೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.

Advertisement

ನ್ಯಾಯಾಲಯದಲ್ಲಿರುವ ಪ್ರಕರಣಗಳಿಗೂ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲವೆಂಬ ಸದಸ್ಯರ ಗಂಭೀರ ಆರೋಪದ ಹಿನ್ನೆಲೆ ಈ ಕುರಿತು ಮಹತ್ವದ ಸಭೆ ಕರೆದು ಎಲ್ಲ ಆಸ್ತಿಗಳ ವಿವರ ಪಡೆದುಕೊಂಡು ನಗರಸಭೆ ಅಧೀನದಲ್ಲಿರಿಸುವಂತೆ ಚರ್ಚೆ ನಡೆಸಲು ಶಾಸಕ ಸಿದ್ದು ಸವದಿ ಸಲಹೆ ನೀಡಿದರು. ಅಲ್ಲದೆ ನಗರಸಭೆ ಆಸ್ತಿಗಳ ಪಟ್ಟಿ ತಯಾರಿಸಿ ಆಸ್ತಿ ಕಬಳಿಸದಂತೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ನಗರಸಭೆ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.

ಸದಸ್ಯರಿಗೆ ಕಿಮ್ಮತ್ತಿಲ್ಲ.: ರಸ್ತೆ ತೆರವುಗೊಳಿಸುವಂತೆ ಸದಸ್ಯರೆ ಅರ್ಜಿ ಕೊಟ್ಟು ಮೂರ್‍ನಾಲು ತಿಂಗಳಾದ್ರೂ ಕ್ರಮ ಕೈಗೊಂಡಿಲ್ಲ. ಸದಸ್ಯರಿಗೆ ನಗರಸಭೆಯಲ್ಲಿ ಗೌರವವಿಲ್ಲ ಎಂದರೆ ಜನಸಾಮಾನ್ಯರ ಗತಿ ಹೇಗೇ ಎಂದು ಸದಸ್ಯ ಯೂನಸ್‌ ಚೌಗಲಾ ಶಾಸಕ ಸಿದ್ದು ಸವದಿ ಅವರನ್ನು ಪ್ರಶ್ನಿಸಿದರು.

ಶಾಸಕ ಸಿದ್ದು ಸವದಿ ಮಾತನಾಡಿ, ನಗರಸಭೆ ಆಸ್ತಿಯನ್ನು ಯಾರೇ ಅತಿಕ್ರಮಣ ಮಾಡಿದರೂ ಬಿಡಬೇಡಿ. ಅಂತವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಿ ಎಂದು ಅಧಿ ಕಾರಿಗಳಿಗೆ ಸೂಚಿಸಿದರು. ಎಸ್‌ಎಫ್‌ಸಿ ಯೋಜನೆಯಡಿ ಅಭಿವೃದ್ಧಿಗೆ ಪೂರಕವಾಗಿ ಅನುದಾನ ದೊರಕುತ್ತಿಲ್ಲ. ಸರ್ಕಾರಕ್ಕೆ ಒತ್ತಡ ಹೇರಿ ಮೂಲಭೂತ ಸೌಲಭ್ಯಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚಳಗೊಳಿಸಲು ಸರ್ಕಾರವನ್ನು ಒತ್ತಾಯಿಸುವಂತೆ ಸವದಿ ಸೂಚಿಸಿದರು.

ನಗರದ ಹೃದಯಭಾಗದಲ್ಲಿರುವ ನಗರಸಭೆ ಕಚೇರಿ ಸುತ್ತ 10 ಎಕರೆ ಪ್ರದೇಶ ಹೊಂದಿರುವ ನಗರಸಭೆ ಆಸ್ತಿಯಲ್ಲಿ ಕೊಳಚೆ ಅಭಿವೃದ್ಧಿ ಕಚೇರಿಗೆ 1.5 ಎಕರೆ ಜಾಗೆ ನೀಡುವಲ್ಲಿ ಸಭೆ ತೀರ್ಮಾನಿಸುತ್ತಿದ್ದಂತೆ ಈಗಾಗಲೇ ಒತ್ತುವರಿ ಮಾಡಿಕೊಂಡಿರುವ 67 ಕುಟುಂಬಗಳಿಗೆ ಹಕ್ಕು ಪತ್ರದ ವ್ಯವಸ್ಥೆ ಕಲ್ಪಿಸಬೇಕೆಂದು ಸದಸ್ಯೆ ರೇಖಾ ರವಿ ಒತ್ತಾಯಿಸಿದರು. 2021 12ನೇ ಸಾಲಿನ ಸಂತೆ ಕರವು 20 ಲಕ್ಷ ರೂ.ಗಳಿಗೆ ಹರಾಜಾಗಿದ್ದು, ರಬಕವಿ-ಬನಹಟ್ಟಿ-ಹೊಸೂರ ಪಟ್ಟಣಗಳ ಪ್ರಮುಖ ಜಾತ್ರೆಗೆ ಇದು ಪರಿಗಣನೆಗಿಲ್ಲಂದು ಸಭೆ ತಿಳಿಸಿತು. ಆಸ್ತಿ ತೆರಿಗೆಯಲ್ಲಿ ಬದಲಾವಣೆ: ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ಉಪನೋಂದಣಿ ಇಲಾಖೆಯ 2018-19 ನೇ ಸಾಲಿನಲ್ಲಿ ನಿವೇಶನ ಖರೀದಿಯಲ್ಲಿ ಹೊಸ ದರದ ನಿಯಮದಂತೆ ಸ್ವಯಂ ಘೋಷಿತಆಸ್ತಿ ತೆರಿಗೆಯಲ್ಲಿಯೂ ಸಹಿತ ಈಗಿದ್ದ ತೆರಿಗೆಗೆಶೇ.0.5 ದಿಂದ 1.2 ವಸತಿ ನಿವೇಶನಕ್ಕೆ, ಖಾಲಿ ನಿವೇಶನಕ್ಕೆ ಶೇ.0.1 ರ ಬದಲಾಗಿ ಶೇ.0.2 ಹಾಗುವಾಣಿಜ್ಯ ತೆರಿಗೆಯನ್ನು ಶೇ. 0.7 ರಿಂದ 1.5 ವರೆಗೆ ವಿಸ್ತರಿಸಲಾಯಿತು.

ನಗರಸಭೆ ಉಪಾಧ್ಯಕ್ಷೆ ಬಾಳವ್ವ ಕಾಖಂಡಕಿ, ಪೌರಾಯುಕ್ತ ಶ್ರೀನಿವಾಸ ಜಾಧವ, ವ್ಯವಸ್ಥಾಪಕ ಬಿ. ಎಂ. ಡಾಂಗೆ, ಅಭಿನಂದನ ಸೋನಾರ, ಬಸವರಾಜಶರಣಪ್ಪನವರ, ಎಸ್‌. ಬಿ. ಕಲಬುರ್ಗಿ, ವೈಶಾಲಿ ಹಿಪ್ಪರಗಿ, ರಮೇಶ ಮಳ್ಳಿ, ಬಿ. ಎಸ್‌. ಮಠದ, ಮಹಾಲಿಂಗ ಮುಗಳಖೋಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next