Advertisement

ಮುಂಬಯಿ  ವಿಶ್ವವಿದ್ಯಾಲಯ ಕನ್ನಡ ವಿಭಾಗ: ಕುವೆಂಪು ದತ್ತಿನಿಧಿ ಸ್ಥಾಪನೆ

04:21 PM Apr 10, 2018 | |

ಮುಂಬಯಿ: ಮುಂಬಯಿಯಲ್ಲಿನ ಕನ್ನಡಿಗರು ಶತ ಸಾಧಕರು. ಇಲ್ಲಿನ ಜನತೆಯ ಮನೋಧೈರ್ಯ, ಸ್ಥೈರ್ಯ, ಕ್ರೀಯಾಶೀಲತೆ ಅನನ್ಯವಾಗಿದೆ. ನಾಡಿನ ಸಮಸ್ತರಿಗೆ ಇಲ್ಲಿನ ಕನ್ನಡಿಗರು  ಆದರ್ಶಪ್ರಾಯರು. ಮುಂಬಯಿ ಕನ್ನಡಿಗರ ಪ್ರೇಮ ಕನ್ನಡ ಮರೆಯದಂತೆ ಮಾಡಿದೆ. ತಮ್ಮ ದೈನಂದಿನ ಯಾಂತ್ರಿಕ ಜೀವನದ ಮಧ್ಯೆಯೂ ಮಾತೃ ಭಾಷೆ, ಸಂಸ್ಕೃತಿ, ಮರೆಯದೆ ಬೆಳೆಸಿದವರು. ಕನ್ನಡಿಗರು ಹಲವು ರೀತಿಯ ದಾನ ಶೂರರೂ ಹೌದು. ಭವಿಷ್ಯದಲ್ಲೂ ನಮ್ಮ ಸಂಸ್ಕೃತಿ ನಮ್ಮದಾಗಿಸಬೇಕು. ಕನ್ನಡಿಗರ ಸಾಧನೆಗಳನ್ನು ವಿಶ್ಲೇಷಿ  ದಾಖಲಿಸಿದ ಡಾ| ಪೂರ್ಣಿಮಾ ಅವರ ಸಾಧನೆ ಶ್ರೇಷ್ಠವಾದುದು. ಅವರನ್ನು ಸಮಸ್ತ ಜನತೆಯ ಪರವಾಗಿ ಅಭಿನಂದಿಸುವೆ ಎಂದು ಸರ್ವೋತ್ಛ ನ್ಯಾಯಲಯದ ನಿವೃತ್ತ ನ್ಯಾಯಾಧೀಶ ಜಸ್ಟೀಸ್‌ ಬಿ. ಎನ್‌. ಶ್ರೀಕೃಷ್ಣ  ತಿಳಿಸಿದರು.

Advertisement

ಎ. 7 ರಂದು ಸಾಂತಾಕ್ರೂಜ್‌ ಪೂರ್ವದ ಕಲೀನಾ ಕ್ಯಾಂಪಸ್‌ನ ವಿದ್ಯಾನಗರಿ ಅಲ್ಲಿನ ಕವಿವರ್ಯ ಡಾ| ಕುಸುಮಾಗ್ರಜ ಮರಾಠಿ ಭಾಷಾ ಭವನದ ಸಭಾಂಗಣದಲ್ಲಿ ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವು ಆಯೋಜಿಸಿದ್ದ ಜಾನಪದ ಸಂಭ್ರಮದ ಮಧ್ಯಾಂತರದಲ್ಲಿ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಅವರ ಪಿಎಚ್‌ಡಿ ಮಹಾ ಪ್ರಬಂಧ “ಮುಂಬಯಿ  ಕನ್ನಡಿಗರ ಸಿದ್ಧಿ ಸಾಧನೆಗಳು’ ಕೃತಿ ಬಿಡುಗಡೆಗೊಳಿಸಿ ಜಸ್ಟೀಸ್‌ ಶ್ರೀಕೃಷ್ಣ  ಮಾತನಾಡಿದರು.
ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಿವೃತ್ತ ಪೊಲೀಸ್‌ ಅಧಿಕಾರಿ ಪ್ರಕಾಶ್‌ ಬಿ.ಭಂಡಾರಿ, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಆರ್ಥಿಕ ತಜ್ಞ ಡಾ| ಆರ್‌. ಕೆ. ಶೆಟ್ಟಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ಸಮಾಜ ಸೇವಕ ಮುದ್ರಾಡಿ ದಿವಾಕರ ಶೆಟ್ಟಿ,  ಸುಧಾಕರ್‌ ಶೆಟ್ಟಿ ಮತ್ತು ಕು| ಸ್ವೀಕೃತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಕರ್ನಾಟಕ ಸಂಘ ಮುಂಬಯಿ ಗೌರವ  ಪ್ರಧಾನ  ಕಾರ್ಯದರ್ಶಿ ಡಾ|  ಭರತ್‌ಕುಮಾರ್‌ ಪೊಲಿಪು  ಕೃತಿ ಪರಿಚಯಿಸಿದರು.

ಇದೇ ಸಂದರ್ಭದಲ್ಲಿ ಮಿತ್ರ ಮಂಡಳಿ ಮುಲುಂಡ್‌ ಸಂಸ್ಥೆ ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿಸಿ “ಮಹಾಕವಿ ಕುವೆಂಪು ದತ್ತಿನಿಧಿ’ ಯನ್ನು ಮುಂಬಯಿ ವಿಶ್ವವಿದ್ಯಾಲಯಕ್ಕೆ ಅರ್ಪಿಸಿದರು. ಮಿತ್ರ ಮಂಡಳಿ ಮುಲುಂಡ್‌ನ‌ ಸಂಘಟಕ, ಕನ್ನಡ ಸೇನಾನಿ, ಎಸ್‌. ಕೆ. ಸುಂದರ್‌ ಮತ್ತು ಜಯರಾಮ್‌ ಮೂಲ್ಯ ಅವರು ದತ್ತಿನಿಧಿ ಮೊತ್ತವನ್ನು ಡಾ| ಜಿ. ಎನ್‌. ಉಪಾಧ್ಯರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಡಾ| ಪೂರ್ಣಿಮಾ ಶೆಟ್ಟಿ ಅವರು ಗುರುವರ್ಯರಾದ ಡಾ| ಜಿ. ಎನ್‌. ಉಪಾಧ್ಯ ಅವರಿಗೆ ಗುರುವಂದನೆಗೈದು ಗೌರವಿಸಿದರು. ಅತಿಥಿ-ಗಣ್ಯರು ಡಾ| ಪೂರ್ಣಿಮಾ ಸುಧಾಕರ್‌ ಶೆಟ್ಟಿ ದಂಪತಿಯನ್ನು ಸಮ್ಮಾನಿಸಿ ಅಭಿನಂದಿಸಿದರು. ಬಳಿಕ ನಡೆದ  ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಶ್ಯಾಮಲಾ ಪ್ರಕಾಶ್‌ ಅವರಿಗೆ ಪಿಎಚ್‌ಡಿ,  ತೆರೆ ಸರೋಜಿನಿ ಭಾಸ್ಕರ್‌, ಎಚ್‌. ಪಿ. ಶೀಲಾ  ಅವರಿಗೆ ಎಂ. ಫಿಲ್‌, ಜ್ಯೋತಿಶ್ರೀ  ಬೆಂಗಳೂರು, ಅನಿತಾ ಶೆಟ್ಟಿ, ಕುಮುದಾ ಆಳ್ವ, ಹೇಮಲತಾ ಎಸ್‌. ಅಮೀನ್‌ ಇವರಿಗೆ ಎಂಎ ಪದವಿ ಪ್ರದಾನ ಮಾಡಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ವಿಭಾಗ ಮುಂಬಯಿ ವಿವಿಯ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಇವರು ಮಾತನಾಡಿ, ವಲಸೆಹೋದ ಕನ್ನಡಿಗರಲ್ಲಿ ಮುಂಬಯಿ ಕನ್ನಡಿಗರ ಸಾಧನೆ ವಿಶಿಷ್ಟ ಮತ್ತು ವಿಶೇಷವಾದುದು. ಇಲ್ಲಿನ ಕನ್ನಡಿಗರು ಮಹಾನ್‌ ಸಂಘಟಕರು. ಕನ್ನಡದ ಅದ್ಬುತವಾದ ಸಾಧನೆ ಮಾಡಿದ್ದಾರೆ. ಕರ್ನಾಟಕದ ರಾಜಧಾನಿ ಬೆಂಗಳೂರು ಬಿಟ್ಟರೆ ಅತೀ ಹೆಚ್ಚು ಕನ್ನಡಿಗರಿರುವ ಪ್ರಾಂತ್ಯವೇ ಮುಂಬಯಿ ಆಗಿದೆ. ಅಂತೆಯೇ ಕನ್ನಡದ ಕೈಂಕರ್ಯ ನಡೆಸುವ ಇಲ್ಲಿನ ಕನ್ನಡಿಗರು ಅಪ್ಪಟ ಕನ್ನಡಾಭಿಮಾನಿಗಳು. ಇಲ್ಲಿನ ಕ್ರೀಯಾಪದಗಳೇ ನಮ್ಮ ಸಾಧನೆಗೆ ಕೈಗನ್ನಡಿಯಾಗಿದೆ. ಸಮಸ್ತ ಕನ್ನಡಿಗರು ಮಾಡಿರುವ ದಾಖಲೆಗಳನ್ನು ದಾಖಲಿಸುವ, ವಿವರಿಸುವ, ವಿಶ್ಲೇಸುವ ಎಲ್ಲಾ ಕೆಲಸವನ್ನು ಡಾ| ಪೂರ್ಣಿಮಾ ಶೆಟ್ಟಿ ತನ್ನ ಈ ಕೃತಿಯಲ್ಲಿ ಮಾಡಿ ಅದ್ಭುತ ಸಾಧನೆ ಮಾಡಿದ್ದಾರೆ ಎಂದು ನುಡಿದು ಅಭಿನಂದಿಸಿದರು. ಆರ್‌. ಕೆ. ಶೆಟ್ಟಿ ಇವರು ಮಾತನಾಡಿ ಡಾ| ಪೂರ್ಣಿಮಾ ಅವರು  ಸಹೃದಯಿ. ಸರಳ ವ್ಯಕ್ತಿತ್ವವುಳ್ಳ ಸಾಧಕಿ. ಅವರು ಸಾರ್ವಜನಿಕ ಸಮ್ಮಾನಕ್ಕೆ ಅರ್ಹರು ಎಂದರು.

Advertisement

ಡಾ| ಪೂರ್ಣಿಮಾ ಶೆಟ್ಟಿ ಇವರು ಮಾತನಾಡಿ, ನನ್ನ ಮೂರು ವರ್ಷದ ಅವಿರತ ಪರಿಶ್ರಮದ ಫಲ ಇಂದು ಕೃತಿರೂಪ ತಾಳಿ ಲೋಕಾರ್ಪಣೆಗೊಂಡಿದೆ. ನನ್ನ ಗುರುವರ್ಯ ಡಾ| ಜಿ. ಎನ್‌. ಉಪಾಧ್ಯ ಅವರ ಪ್ರೀತಿ ವಿಶ್ವಾಸದ ಭರವಸೆ, ಸಹಯೋಗ ಈ ಕೃತಿಯ ಬೆನ್ನುಲುಬಾಗಿದೆ. ಅವರ ಪ್ರೋತ್ಸಹದಿಂದ ನನ್ನ ಆಶಯದ ವಿದ್ಯೆಯ ಪಥ ಬದಲಾಯಿಸಿತು. ನನ್ನ ಕೈಯ ಅಕ್ಷರಗಳು ಬರವಣಿಗೆಯಾಗಿ ಪುಸ್ತಕ ರೂಪ ತಾಳುವಂತಾಯಿತು. ಅಲ್ಲದೆ ನನ್ನ ಪತಿ, ಸುಪುತ್ರಿ ಹಾಗು ತಾಯಿ-ತಂದೆ ಅವರ ಮಾತ್ರವಲ್ಲದೆ ಗಂಡನ ಮನೆಮಂದಿ, ಪರಿವಾರದ ಅನ್ಯೋನ್ಯ ಒಲುಮೆ, ಸಂಪೂರ್ಣ ಸಹಕಾರ ನನಗೆ ಪ್ರೇರಣೆಯಾಗಿದೆ. ಇದರಿಂದ ಮಹಿಳಾ ಸ್ವಾತಂತ್ರÂ ಮೌಲ್ಯ ಪಡೆದಂತಾಗಿದೆ.  ಮುಂಬಯಿಗರ ಅತೀ ಹೆಚ್ಚು ಪ್ರೀತಿ ಗಳಿಸಿದ ನಾನು ಭಾಗ್ಯವಂತಳೇ ಸರಿ ಎಂದ‌ು ನುಡಿದರು. ಸುಶೀಲಾ ಎಸ್‌. ದೇವಾಡಿಗ ಸ್ವಾಗತಗೀತೆ ಹಾಡಿದರು. ನಳಿನಾ ಪ್ರಸಾದ್‌ ಸ್ವಾಗತಿಸಿ ಅತಿಥಿಗಳನ್ನು ಪರಿಚುಸಿ ಕಾರ್ಯಕ್ರಮ ನಿರೂಪಿಸಿದರು.  ಸೋಮಶೇಖರ ಮಾಲ್ತಿ ಪಾಟೀಲ್‌ ವಂದಿಸಿದರು.  

ಪೂರ್ಣಿಮ ಅವರ ಕೃತಿ ಕನ್ನಡಿಗರ ಸಿದ್ಧಿ ಸಾಧನೆಗಳ ಎಲ್ಲಾ ವಿಷಯಗಳನ್ನು  ಹೊಂದಿದಂತಿದೆ. ಅವರು ಚಿಣ್ಣರ ಬಿಂಬದ ಆಧಾರ ಸ್ತಂಭದಂತಿದ್ದು ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗವೂ ನಮ್ಮ ಚಿಣ್ಣರಿಗೆ  ಮಾರ್ಗದರ್ಶಕವಾಗಿದೆ. ನಮ್ಮ ಚಿಣ್ಣರ ವಿಷಯ ಶಕ್ತಿಯೂ ಈ ಕೃತಿಯಲ್ಲಿ ಸೇರಿದೆ.
-ಪ್ರಕಾಶ್‌ ಭಂಡಾರಿ, ಚಿಣ್ಣರ ಬಿಂಬದ ರೂವಾರಿ

ಇಷ್ಟೊಂದು ದೊಡ್ಡ ವಿಶಿಷ್ಟ ಕೃತಿ ನಿರ್ಮಾಣ ಸುಲಭವಲ್ಲ. ಸುಮಾರು 512 ಪುಟಗಳ ಪುಸ್ತಕ ಬರೆಯುವುದು ತುಂಬಾ ಕಷ್ಟಕರ. ಇಂತಹ ಮುಂಬಯಿ ಕನ್ನಡಿಗರ ಬದುಕು ಹೊರ ತಂದಿರುವುದು ಪೂರ್ಣಿಮಾರ ಸಾಧನೆ ಅಪೂರ್ವವಾಗಿದೆ. ಅವರ ಸಾಧನೆ ನಿಜಕ್ಕೂ ಅಭಿನಂದನೀಯ. 
-ನಿತ್ಯಾನಂದ ಡಿ. ಕೋಟ್ಯಾನ್‌, ಅಧ್ಯಕ್ಷರು, ಬಿಲ್ಲವರ ಅಸೋಸಿಯೇಶನ್‌ ಮುಂಬಯಿ 

ನನ್ನ ಆಪ್ತಮಿತ್ರ ಅಭಿನಂದನ ಗ್ರಂಥದ ಹಿಂದೆ ಡಾ| ಜಿ. ಎನ್‌. ಉಪಾಧ್ಯ ಮತ್ತು ಪೂರ್ಣಿಮಾ ಅವರ ಶ್ರಮ ಅಪಾರವಾದದ್ದು. ಆಪ್ತಮಿತ್ರ ಕೃತಿಯಿಂದಾಗಿ ಪೂರ್ಣಿಮಾರ ಈ ಕೃತಿ ಪ್ರಕಟವಾಗಲು ತಡವಾಯಿತೋ ಏನೋ.  ಮುಂಬಯಿ ಕನ್ನಡಿಗರ ಬದುಕು ಹರಸುವುದು ಸುಲಭ ಸಾಧ್ಯವಲ್ಲ. ಹುಡಿಕಿ, ಬಾಚಿದಷ್ಟು ವಿಸ್ತಾರವಾದ ಕ್ಷೇತ್ರ ಮುಂಬಯಿ ಕನ್ನಡಿಗರದ್ದಾಗಿದೆ. ಅಂತಹ ಸಾಧನೆಗೈದು ಪೂರ್ಣಿಮಾ ಈ ಕೃತಿ ರಚಿಸಿದ್ದು, ಇದು ಸಮಗ್ರ  ಮುಂಬಯಿಗರೆಲ್ಲರ ಕೊಡುಗೆಯಾಗಬೇಕು.
-ಚಂದ್ರಶೇಖರ ಪಾಲೆತ್ತಾಡಿ, ಅಧ್ಯಕ್ಷರು, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ 

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next