Advertisement

ಅಪಘಾತ ವಲಯವಾಗುತ್ತಿರುವ ಮುಳ್ಳಿಕಟ್ಟೆ ಜಂಕ್ಷನ್‌

11:43 PM Mar 02, 2020 | Sriram |

ಹೆಮ್ಮಾಡಿ: ಕುಂದಾಪುರ – ಬೈಂದೂರು ರಾಷ್ಟ್ರೀಯ ಹೆದ್ದಾರಿ 66 ರ ಮುಳ್ಳಿಕಟ್ಟೆ ಜಂಕ್ಷನ್‌ ದಿನೇ ದಿನೇ ಅಪಾಯಕಾರಿಯಾಗಿ ಮಾರ್ಪಟ್ಟಿದ್ದು, ಇಲ್ಲಿ ಸಮರ್ಪಕವಾದ ರಸ್ತೆ ಸುರಕ್ಷಿತ ಕ್ರಮಗಳಿಲ್ಲದೆ ಆಗಾಗ ಅಪಘಾತಗಳು ಸಂಭವಿಸುತ್ತಲೇ ಇದೆ. ಹೆದ್ದಾರಿ ಕಾಮಗಾರಿ ಆರಂಭವಾದ ಬಳಿಕ ಇದೇ ಜಂಕ್ಷನ್‌ನಲ್ಲಿ 3 ಮಂದಿ ಅಸುನೀಗಿರುವುದೇ ಇದಕ್ಕೆ ಸಾಕ್ಷಿ.

Advertisement

ಕುಂದಾಪುರ, ಬೈಂದೂರು, ಗಂಗೊಳ್ಳಿ ಹಾಗೂ ನಾಡ ಗುಡ್ಡೆಯಂಗಡಿ – ಆಲೂರು – ಹಕ್ಲಾಡಿ ಹೀಗೆ ನಾಲ್ಕು ಕಡೆಗಳ ರಸ್ತೆಗಳು ಮುಳ್ಳಿಕಟ್ಟೆಯ ಜಂಕ್ಷನ್‌ನಲ್ಲಿ ಸಂಧಿಸುತ್ತದೆ. ಆದರೆ ಇಲ್ಲಿ ಬ್ಯಾರಿಕೇಡ್‌ ಒಂದನ್ನು ಅಳವಡಿಸಿದ್ದು ಬಿಟ್ಟರೆ ಬೇರೆ ಯಾವುದೇ ಸುರಕ್ಷಿತ ಕ್ರಮಗಳನ್ನು ಕೈಗೊಂಡಿಲ್ಲ.

ರಸ್ತೆ ದಾಟುವುದೇ ಸಮಸ್ಯೆ
ಮುಳ್ಳಿಕಟ್ಟೆ ಜಂಕ್ಷನ್‌ನಲ್ಲಿ ವಾಹನಗಳು ರಸ್ತೆಗಳ ಎರಡು ಕಡೆಗಳಿಂದಲೂ ನಿರಂತರವಾಗಿ ಸಂಚರಿಸುತ್ತಲೇ ಇರುವುದರಿಂದ ಇಲ್ಲಿ ಪಾದಚಾರಿಗಳು ಒಂದು ಕಡೆಯಿಂದ ಮತ್ತೂಂದು ಕಡೆಗೆ ರಸ್ತೆ ದಾಟುವುದೇ ಒಂದು ದೊಡ್ಡ ಸಾಹಸ. ಇಲ್ಲಿ ಬಸ್‌ಗಳಲ್ಲಿ ಸಂಚರಿಸುವ ಶಾಲಾ- ಕಾಲೇಜು ಮಕ್ಕಳಿದ್ದು, ಬೆಳಗ್ಗೆ ಮತ್ತು ಸಂಜೆ ವೇಳೆ ಅವರಿಗೆ ಸಮಸ್ಯೆಯಾಗುತ್ತಿದೆ. ಈ ಜಂಕ್ಷನ್‌ ಪ್ರದೇಶ ಯಾವಾಗಲೂ ಜನದಟ್ಟಣೆಯಿಂದ ಕೂಡಿದ್ದು, ಪಾದಚಾರಿಗಳು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲಿ ಯಾವುದೇ ಸೂಚನಾ ಫಲಕ, ಸಿಗ್ನಲ್‌ ಲೈಟ್‌ ಅಳವಡಿಸಿಲ್ಲ.

ಬಸ್‌ ನಿಲ್ದಾಣವಿಲ್ಲ
ಆಲೂರು, ನಾಡಾ-ಪಡುಕೋಣೆ, ನೂಜಾಡಿ, ಹಕ್ಲಾಡಿ ಮೊದಲಾದೆಡೆಯಿಂದ ಬರುವ ಬಸ್‌ ಮತ್ತಿತರ ವಾಹನಗಳು ಮುಳ್ಳಿಕಟ್ಟೆ ಜಂಕ್ಷನ್‌ ಮೂಲಕ ಕುಂದಾಪುರಕ್ಕೆ ನಿತ್ಯ ಸಂಚರಿಸುತ್ತವೆ. ಗುಜ್ಜಾಡಿ – ನಾಯಕವಾಡಿ, ಗಂಗೊಳ್ಳಿ ಮೊದಲಾದೆಡೆಯಿಂದ ಹತ್ತಾರು ಬಸ್‌ಗಳು ಸಂಚರಿಸುತ್ತವೆ. ಆದರೆ ಇಲ್ಲಿ ಬಸ್‌ ನಿಲ್ದಾಣವಿಲ್ಲ. ಜನರು ಸುಡು ಬಿಸಿಲಿನಲ್ಲಿಯೇ ನಿಂತು ಕೊಳ್ಳಬೇಕಾದ ಸ್ಥಿತಿಯಿದೆ. ಇಲ್ಲಿ ಸರ್ವಿಸ್‌ ರಸ್ತೆಯೂ ನಿರ್ಮಾಣವಾಗದೇ ಇರುವುದರಿಂದ ಬಸ್‌ಗಳು ಹೆದ್ದಾರಿಯಲ್ಲಿಯೇ ನಿಲ್ಲಿಸಿ, ಜನರನ್ನು ಹತ್ತಿಸಿ, ಇಳಿಸಬೇಕಾಗಿದೆ.

ಹರಸಾಹಸ
ಇನ್ನು ಮುಳ್ಳಿಕಟ್ಟೆ – ಆಲೂರು – ಹಕ್ಲಾಡಿ ಕಡೆ ಯಿಂದ ಗಂಗೊಳ್ಳಿ ಕಡೆಗೆ ವಾಹನ ದಟ್ಟಣೆ ಹೆಚ್ಚಿ ರುವ ಸಂದರ್ಭಗಳಲ್ಲಿ ಸಂಚರಿಸಬೇಕಾದರೆ ದೊಡ್ಡ ಸಾಹಸವೇ ಮಾಡಬೇಕು. ಮುಳ್ಳಿ ಕಟ್ಟೆಯಿಂದ ಹೆದ್ದಾರಿಗೆ ಸಂಪರ್ಕಿಸುವ ರಸ್ತೆಯು ಕೆಳ ಮಟ್ಟದಲ್ಲಿದೆ. ಆ ಕಡೆಯಿಂದ ಬರುವವರಿಗೆ ಹೆದ್ದಾರಿಯಲ್ಲಿ ಸಂಚರಿಸುತ್ತಿರುವ ವಾಹನಗಳು ತಿಳಿಯದ ಸ್ಥಿತಿ ಇಲ್ಲಿದೆ.

Advertisement

3 ಮಂದಿ ದುರ್ಮರಣ
ಇದೇ ಮುಳ್ಳಿಕಟ್ಟೆ ಜಂಕ್ಷನ್‌ನಲ್ಲಿ ಕಳೆದ 3 ವರ್ಷಗಳಲ್ಲಿ ರಸ್ತೆ ಅಪಘಾತದಲ್ಲಿ 3 ಮಂದಿ ಮೃತಪಟ್ಟಿದ್ದಾರೆ. 2017 ರ ಡಿಸೆಂಬರ್‌ನಲ್ಲಿ ಪಾದಚಾರಿಗೆ ಟೆಂಪೋ ಢಿಕ್ಕಿಯಾಗಿ ಸಾವನ್ನಪ್ಪಿದ್ದರೆ, 2019ರ ನವೆಂಬರ್‌ನಲ್ಲಿ ಟಿಟಿ ವಾಹನವು ಆಲೂರು ಕಡೆಯಿಂದ ಗಂಗೊಳ್ಳಿ ಕಡೆಗೆ ಸಂಚರಿಸುತ್ತಿದ್ದ ಬೈಕ್‌ಗೆ ಢಿಕ್ಕಿಯಾದ ಪರಿಣಾಮ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅದಕ್ಕೂ ಹಿಂದೆ ಅಂದರೆ 2015 ರಲ್ಲಿ ಕಾರು – ಲಾರಿ – ಟೆಂಪೋ ಮಧ್ಯೆ ಸರಣಿ ಅಪಘಾತದಲ್ಲಿ ಟೆಂಪೋ ಚಾಲಕ ಗಂಭೀರ ಗಾಯಗೊಂಡಿದ್ದರು. ಇನ್ನು ಈ ಜಂಕ್ಷನ್‌ನಲ್ಲಿ ಆಗಾಗ ಅಪಘಾತಗಳು ನಡೆಯುತ್ತಲೇ ಇರುತ್ತದೆ.

ಅಪಘಾತ ವಲಯ
ಹೆದ್ದಾರಿ ಕಾಮಗಾರಿ ಆರಂಭವಾದ ಬಳಿಕ ಇಲ್ಲಿ ರಸ್ತೆ ಸುರಕ್ಷಿತ ಕ್ರಮಗಳಿಲ್ಲದೆ ಸ್ಥಳೀಯರಿಗೆ ತುಂಬಾ ತೊಂದರೆಯಾಗುತ್ತಿದೆ. 4 ಕಡೆಗಳಿಂದ ವಾಹನಗಳು ಹಾದು ಹೋಗುವ ಜಂಕ್ಷನ್‌ ಆಗಿದ್ದರೂ ಬೀದಿ ದೀಪಗಳಿಲ್ಲ. ಟೋಲ್‌ ಆರಂಭವಾದರೂ, ಇಲ್ಲಿ ಮಾತ್ರ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಅದಕ್ಕಿಂತಲೂ ಪ್ರಮುಖವಾಗಿ ಆಲೂರು, ಹಕ್ಲಾಡಿ, ಹೊಸಾಡು ಕಡೆಗಳಿಂದ ಬರುವ ವಾಹನಗಳು ಗಂಗೊಳ್ಳಿಗೆ ತೆರಳಬೇಕಾದರೆ ಭಾರೀ ಸಮಸ್ಯೆಯಾಗುತ್ತಿದೆ. ಇದೊಂದು ರೀತಿಯಲ್ಲಿ “ಐಆರ್‌ಬಿ ಪ್ರಾಯೋಜಿತ ಅಪಘಾತ ವಲಯ’ವಾಗಿ ಮಾರ್ಪಟ್ಟಿದೆ.
– ಅನಂತ್‌ ಮೋವಾಡಿ,
ಮಾಜಿ ಜಿ.ಪಂ. ಸದಸ್ಯರು, ಸ್ಥಳೀಯರು

ಗಮನಕ್ಕೆ ಬಂದಿದೆ
ಮುಳ್ಳಿಕಟ್ಟೆ ಜಂಕ್ಷನ್‌ನಲ್ಲಿ ಆಗುತ್ತಿರುವ ಅಪಘಾತಗಳ ಬಗ್ಗೆ ಗಮನಕ್ಕೆ ಬಂದಿದ್ದು, ಅಪಾಯಕಾರಿ ವಲಯ ಎಂದು ಪರಿಗಣಿಸಲಾಗಿದೆ. ಈ ಬಗ್ಗೆ ಸ್ಥಳೀಯ ಪಂಚಾಯತ್‌ನವರು ನನಗೆ ಇಲ್ಲಿ ಜನರು, ವಾಹನ ಸವಾರರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪತ್ರವನ್ನು ಸಲ್ಲಿಸಲಿ. ಅದನ್ನು ಕೂಡಲೇ ಕಾಮಗಾರಿ ನಿರ್ವಹಿಸುತ್ತಿರುವ ಐಆರ್‌ಬಿ ಗಮನಕ್ಕೂ ತಂದು, ಸೂಕ್ತ ಕ್ರಮಕೈಗೊಳ್ಳಲು ಸೂಚಿಸಲಾಗುವುದು.
– ಹರಿರಾಂ ಶಂಕರ್‌, ಎಎಸ್‌ಪಿ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next