Advertisement

ಮೂಲ್ಕಿ ನಗರ ಪಂಚಾಯತ್‌ : 30 ಲಕ್ಷ ರೂ. ಮಿಗತೆ ಬಜೆಟ್‌

11:29 PM Feb 24, 2021 | Team Udayavani |

ಮೂಲ್ಕಿ: ಇಲ್ಲಿನ ನಗರ ಪಂಚಾಯತ್‌ನ 2021-22ನೇ ಸಾಲಿನ ವಾರ್ಷಿಕ ಮುಂಗಡ ಪತ್ರವನ್ನು ನಗರ ಪಂಚಾಯತ್‌ ಅಧ್ಯಕ್ಷ ಸುಭಾಷ್‌ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಬುಧ ವಾರ ನಡೆದ ಮಾಸಿಕ ಸಭೆಯಲ್ಲಿ ಮುಖ್ಯಾಧಿಕಾರಿ ಪಿ. ಚಂದ್ರ ಪೂಜಾರಿ ಅವರು ಮಂಡಿಸಿದರು.

Advertisement

ನಗರ ಪಂಚಾಯತ್‌ನ 2.33 ಕೋ.ರೂ. ಸ್ವಂತ ಆದಾಯ, ಕೇಂದ್ರ ಸರಕಾರದ 1.75 ಕೋ.ರೂ. ಅನುದಾನ ಮತ್ತು ಎಸ್‌.ಎಫ್‌.ಸಿ. ಮುಕ್ತ ನಿಧಿ ಸಹಿತ ರಾಜ್ಯ ಸರಕಾರದ ಇತರ ಅನುದಾನಗಳು ಸೇರಿ 2.32 ಕೋ.ರೂ. ಅನುದಾನ , ಕೇಂದ್ರ ಸರಕಾರದ 1.80 ಕೋ.ರೂ. ಅನುದಾನವನ್ನು ನಿರೀಕ್ಷೆಯಲ್ಲಿಟ್ಟುಕೊಂಡು ಮುಂದಿನ ಸಾಲಿನ ವಿವಿಧ ಯೋಜನೆಗಳಿಗೆ ಸುಮಾರು 11.81 ಕೋ.ರೂ. ಗಾತ್ರದ ಯೋಜನೆಯಲ್ಲಿ ಬಜೆಟ್‌ಅನ್ನು ಮಂಡಿಸಲಾಯಿತು. ನಗರ ಪಂಚಾಯತ್‌ 30 ಲಕ್ಷ ರೂ. ಮಿಗತೆಯನ್ನು ಹೊಂದಿದೆ.

ಮೂಲ ಸೌಲಭ್ಯಕ್ಕೆ ಒತ್ತು
ಈ ಬಜೆಟ್‌ನಿಂದ ಮೂಲ್ಕಿ ನಗರದ ಪ್ರತಿಯೊಂದು ಗ್ರಾಮೀಣ ಪ್ರದೇಶಗಳಿಗೆ ರಸ್ತೆ ಸಂಪರ್ಕ, ನಳ್ಳಿನೀರು ಮತ್ತು ದಾರಿ ದೀಪದ ವ್ಯವಸ್ಥೆ, ಶೇ.24.10 ನಿಧಿಯಡಿ ಪರಿಶಿಷ್ಠ ಜಾತಿ ಮತ್ತು ಪಂಗಡದವರಿಗೆ 4.50 ಲಕ್ಷ ರೂ. ಸಹಾಯ ಧನ, ದಾರಿ ದೀಪ ಖರೀದಿಗೆ 5 ಲಕ್ಷ ರೂ. ನಳ್ಳಿನೀರು ಸಾಮಗ್ರಿ ಮತ್ತು ನೀರು ಸರಬರಾಜು ಹೊರಗುತ್ತಿಗೆ ನಿರ್ವಹಣೆಗೆ 21 ಲಕ್ಷ ರೂ. , ಖಾಯಂ ಸಿಬಂದಿಗೆ ನಿರೀಕ್ಷಿತ ಅನುದಾನದಲ್ಲಿ 60 ಲಕ್ಷ ರೂ. ಹಾಗೂ ಸರಕಾರಿ ತೆರಿಗೆ ಮತ್ತು ಸೆಸ್‌ಗಳ ಪಾವತಿಗಾಗಿ 58 ಲಕ್ಷ ರೂ. ಮೊತ್ತವನ್ನು ಕಾದಿರಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ವಾಹನ ಖರೀದಿ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕಾಗಿ ಒಟ್ಟು 16 ಲಕ್ಷ ರೂ.,ಚರಂಡಿ ನಿರ್ಮಾಣ ಹಾಗೂ ಸರಕಾರದ ಸೂಚನೆಯಂತೆ ವಾಹನ ದಟ್ಟನೆ ಕಡಿಮೆ ಮಾಡುವ ಯೋಜನೆಗೆ,ಉದ್ಯಾನ ವನ, ಹೊಸ ರಸ್ತೆ ನಿರ್ಮಾಣ, ಮಕ್ಕಳ ಪಾರ್ಕ್‌ ನಿರ್ಮಾಣ ಮುಂತಾದವು ಗ ಳಿ ಗೆ ಮುಂಗಡ ಪತ್ರದಲ್ಲಿ ಹೆಚ್ಚಿನ ಒಲವು ತೋರಿಸಲಾಗಿದೆ.

ಸಹಕಾರಕ್ಕೆ ವಿನಂತಿ
ಸಭೆಯಲ್ಲಿ ಮಾತನಾಡಿದ ಮುಖ್ಯಾಧಿಕಾರಿ ಪಿ. ಚಂದ್ರ ಪೂಜಾರಿಯವರು ಮುಂದಿನ ಅವಧಿಯಲ್ಲಿ ಸದಸ್ಯರೆಲ್ಲರೂ ಮುಂಗಡ ಪತ್ರದಲ್ಲಿ ತೋರಿಸಲಾದ ಎಲ್ಲ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಲು ಸಹರಿಸುವಂತೆ ಕೋರಿದರು.

ಸ್ಥಾಯೀ ಸಮಿತಿ ಸದಸ್ಯರ ಆಯ್ಕೆ
ಕಳೆದ ಸಭೆಯಲ್ಲಿ ಮುಂದೂಡಲಾದ ಸ್ಥಾಯೀ ಸಮಿತಿ ಸದಸ್ಯರ ಆಯ್ಕೆಯಲ್ಲಿ 7 ಸದಸ್ಯ ಬಲದ ಈ ಸದಸ್ಯರಲ್ಲಿ ನಮ್ಮ ಸದಸ್ಯರಿಗೆ ಅಧ್ಯಕ್ಷ ಸ್ಥಾನ ಕೊಡುವಂತೆ ಕಾಂಗ್ರೆಸ್‌ ಸದಸ್ಯರಾದ ವಿಮಲಾ ಪೂಜಾರಿ, ಯೋಗೀಶ್‌ ಕೋಟ್ಯಾನ್‌, ಪುತ್ತು ಬಾವಾ, ಮಂಜುನಾಥ ಕಂಬಾರ ಮೊದಲಾದವರು ಸಭೆಯಲ್ಲಿ ಒತ್ತಾಯಿಸಿದರು.

Advertisement

7 ಸದಸ್ಯ ಸ್ಥಾನ ದಲ್ಲಿ ಆರು ಸ್ಥಾನಗಳಿಗೆ ಕಾಂಗ್ರೆಸ್‌ನಿಂದ ಯೋಗೀಶ್‌ ಕೋಟ್ಯಾನ್‌, ಬಾಲಚಂದ್ರ ಕಾಮತ್‌, ಮಂಜುನಾಥ ಕಂಬಾರ ಹಾಗೂ ಬಿಜೆಪಿಯಿಂದ ಶೈಲೇಶ್‌ ಕುಮಾರ್‌, ಶಾಂತಾ ಕಿರೋಡಿಯನ್‌ ಹಾಗೂ ಜೆಡಿಎಸ್‌ನ ಲಕ್ಷ್ಮೀ ಅವರು ಆಯ್ಕೆಯಾದರು. ಉಳಿದ ಒಂದು ಸದಸ್ಯ ಸ್ಥಾನಕ್ಕೆ ಬಿಜೆಪಿಯಿಂದ ಹರ್ಷ ರಾಜ್‌ ಶೆಟ್ಟಿ ಜಿ.ಎಂ. ಮತ್ತು ಕಾಂಗ್ರೆಸ್‌ನಿಂದ ಮಹೇಶ್‌ ಅವರ ಹೆಸರು ಚೀಟಿ ಎತ್ತಿದಾಗ ಹರ್ಷರಾಜ್‌ ಅವರಿಗೆ ಸ್ಥಾಯೀ ಸಮಿತಿಗೆ ಆಯ್ಕೆ ಅದೃಷ್ಟ ಒಲಿಯಿತು.

ಸದಸ್ಯರಾದ ಪುತ್ತು ಬಾವಾ, ವಿಮಲಾ ಪೂಜಾರಿ, ರಾಧಿಕಾ ಯಾದವ ಕೋಟ್ಯಾನ್‌, ಹರ್ಷರಾಜ್‌ ಶೆಟ್ಟಿ, ವಂದನಾ ಕಾಮತ್‌, ಶಾಂತಾ ಕಿರೋಡಿಯನ್‌, ಮಹೇಶ್‌, ಸಂದೀಪ್‌, ಲಕ್ಷ್ಮೀ, ದಾವೂದ್‌ ಹಕೀಮ್‌, ದಯಾವತಿ ಅಂಚನ್‌ ಮತ್ತಿತರರು ಸಭೆಯ ಚರ್ಚೆಯಲ್ಲಿ ಮಾತನಾಡಿದರು. ನಗರ ಪ್ರಮುಖ ರಸ್ತೆಗಳಿಗೆ ಗಣ್ಯರ ಹೆಸರನ್ನು ಇಡುವ ಪ್ರಸ್ತಾವದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಇದಕ್ಕೆ ಕಾಂಗ್ರೆಸ್‌ನಿಂದ ವಿರೋಧ ವ್ಯಕ್ತವಾಗಿ ಬಳಿಕ ಮುಂದಿನ ಸಭೆಯಲ್ಲಿ ಪ್ರಸ್ತಾವ ತರುವಂತೆ ಸೂಚಿಸಲಾಯಿತು.

ರಾಜ ಕಾಲುವೆ ಒತ್ತುವರಿ ಕ್ರಮಕ್ಕೆ ಆಗ್ರಹ
ನಗರದ ನನ್ನ ವಾರ್ಡ್ನಲ್ಲಿ ಸರಕಾರಿ ಜಾಗವನ್ನು ರಾಜ ಕಾಲುವೆಯನ್ನು ಒತ್ತುವರಿ ಮಾಡಲಾಗುತ್ತಿದೆ. ಸರಕಾರದ ಗಮನ ಸೆಳೆದು ಕ್ರಮ ತಗೆದುಕೊಳ್ಳಲು ಸದಸ್ಯ ಹರ್ಷರಾಜ್‌ ಶೆಟ್ಟಿ ಸಭೆಯಲ್ಲಿ ಆಗ್ರಹಿಸಿದರು.

ಆಸ್ತಿ ತೆರಿಗೆ ಹೆಚ್ಚಳ
ಸಭೆಯಲ್ಲಿ ಆಸ್ತಿ ತೆರಿಗೆ ಮತ್ತು ಪರವಾನಿಗೆ ದರದಲ್ಲಿ ಸ್ವಲ್ಪ ಪ್ರಮಾಣದ ಹೆಚ್ಚಿಗೆ ಮಾಡುವುದು ಸರಕಾರದ ಆದೇಶದಂತೆ ಅಗತ್ಯವೆಂದು ಪರಿಗಣಿಸಿ ಪರವಾನಿಗೆಗೆ ಶೇ.10ರ ಹೆಚ್ಚು ದರ ಹಾಗೂ ಆಸ್ತಿ ತೆರಿಗೆಗೂ ಹೆಚ್ಚಿಸಲು ಸಭೆ ಅನುಮತಿ ನೀಡಿತು.
ಹೆದ್ದಾರಿ ಗ್ಯಾಸ್‌ ಸರಬರಾಜು ಕೊಳವೆ ಕಾಮಗಾರಿಗೆ ಅನುಮತಿ ಕೇಳಲಾಗಿದ್ದು, ಇದಕ್ಕೆ ಕೆಲವೊಂದು ಷರತ್ತುಗಳಿಗೆ ಅನುಗುಣವಾಗಿ ಅನು ಮತಿ ಕೊಡಲು ಸಭೆ ತೀರ್ಮಾನಿಸಿದೆ. ನಗರ ಪಂಚಾಯತ್‌ ಉಪಾಧ್ಯಕ್ಷ ಸತೀಶ್‌ ಅಂಚನ್‌, ನ.ಪಂ.ನ ಅಧಿಕಾರಿ ಗಳಾದ ಹಿರಿಯ ಕಂದಾಯಾಧಿಕಾರಿ ಅಶೋಕ್‌, ಹಿರಿಯ ಆರೋಗ್ಯ ನಿರೀಕ್ಷಕಿ ಲಿಲ್ಲಿ ನಾಯರ್‌, ಸಮುದಾಯ ಸಂಘಟನಾಧಿಕಾರಿ ಮತ್ತಾಡಿ, ಎಂಜಿನಿಯರ್‌ ಆರತಿ ಮೊದಲಾದವರು ಉಪಸ್ಥಿತರಿದ್ದರು.

ಟೋಲ್‌ ವಿರೋಧಿಸಿ ಸರಕಾರಕ್ಕೆ ಪತ್ರ; ತೀರ್ಮಾನ
ಹೆದ್ದಾರಿ ಪ್ರಾಧಿಕಾರ ಮತ್ತು ಹೆಜಮಾಡಿ ಟೋಲ್‌ ಸಂಗ್ರಹವಿರುವ ಪಂಚಾಯತ್‌ನಲ್ಲಿ ದೂರು ಪ್ರಸ್ತಾವಿಸಿ ಸದಸ್ಯ ಯೋಗೀಶ್‌ ಕೋಟ್ಯಾನ್‌ ಮಾತನಾಡಿ, ಸರ್ವೀಸ್‌ ರಸ್ತೆ, ದಾರಿ ದೀಪ ಮಾತ್ರವಲ್ಲದೆ ಕಳಪೆ ರಸ್ತೆಯನ್ನು ನಿರ್ಮಿಸಿರುವ ಹೆದ್ದಾರಿ ಗುತ್ತಿಗೆದಾರರು ಹಾಗೂ ಟೋಲ್‌ ಗುತ್ತಿಗೆದಾರರು ಮೂಲ್ಕಿಯ ಜನರನ್ನು ಲೂಟಿ ಮಾಡುತ್ತಿದ್ದಾರೆ. ಯಾವುದೇ ಕೆಲಸವನ್ನು ಪೂರ್ಣ ಮಾಡದೆ ಮೂಲ್ಕಿಯ ಜನರಿಂದ ಟೋಲ್‌ ಹೆಸರಲ್ಲಿ ಲೂಟಿ ಆರಂಭಿಸಿದ್ದಾರೆ ಎಂದು ದೂರಿದರು. ನಗರ ಪಂಚಾಯತ್‌ನ ಬಹುತೇಕ ಸದಸ್ಯರು ಇದಕ್ಕೆ ಧ್ವನಿಗೂಡಿಸಿದರು. ಅನಂತರ ಟೋಲ್‌ ಸಂಗ್ರಹವನ್ನು ವಿರೋಧಿಸಿ ಸರಕಾರಕ್ಕೆ ಪತ್ರ ಬರೆಯುವುದಾಗಿ ತೀರ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next