Advertisement

ಆದರ್ಶ ಗ್ರಾಮದಲ್ಲಿ ಅಭಿವೃದ್ಧಿ ಮರೀಚಿಕೆ!

12:58 PM Dec 29, 2019 | Naveen |

ಸುಧೀರ್‌ ಬಿ.ಟಿ.
ಮೂಡಿಗೆರೆ:
ಎಲ್ಲ ಗ್ರಾಮಗಳಲ್ಲಿ ಇರುವಂತೆ ಈ ಗ್ರಾಮದಲ್ಲೂ ಸಮಸ್ಯೆಗಳಿವೆ. ಆದರೆ ಆದರ್ಶ ಗ್ರಾಮ ಯೋಜನೆಯಿಂದ ಎಲ್ಲ ಸಮಸ್ಯೆಗಳು ದೂರಾಗಿ ಇದೊಂದು ಮಾದರಿ ಗ್ರಾಮವಾಗಲಿದೆ ಎಂದು ಇಲ್ಲಿಯ ಜನ ಕಂಡ ಕನಸು ಇನ್ನೂ ನನಸಾಗಿಲ್ಲ.

Advertisement

ಇದು 2015-16 ನೇ ಸಾಲಿನಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಯಾದ ತಾಲೂಕಿನ ದಾರದಹಳ್ಳಿ ಗ್ರಾಮದ ಕಥೆ. ಯೋಜನೆಯಡಿ ಗ್ರಾಮವೇನೋ ಆಯ್ಕೆಯಾಗಿತ್ತು. ಆದರೆ ಹೇಳಿಕೊಳ್ಳುವಂತಹ ಯಾವುದೇ ಕಾರ್ಯಗಳೂ ಗ್ರಾಮದಲ್ಲಿ ಆಗಿಲ್ಲ ಎಂಬುದು ಜನರ ಮಾತು.

ಸಂಸದೆ ಶೋಭಾ ಕಂರಂದ್ಲಾಜೆಯವರ ನಿರ್ಲಕ್ಷ್ಯದಿಂದ ಈ ಯೋಜನೆ ನನೆಗುದಿಗೆ ಬಿದ್ದಿದೆ ಎಂದು ಪ್ರತಿಪಕ್ಷಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ, ಸಂಸದರು ನಿರ್ಲಕ್ಷ್ಯ ತೋರಿಲ್ಲ. ಯೋಜನೆಯಡಿ ಅನುದಾನ ಬಿಡುಗಡೆ ಆಗಿದೆ. ಕೆಲಸವೂ ನಡೆಯುತ್ತಿದೆ ಎಂಬುದು ಆಡಳಿತ ಪಕ್ಷದ ಮುಖಂಡರ ಮಾತು.

ಏನಿದು ಸಂಸದ ಆದರ್ಶ ಯೋಜನೆ ?: ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯ ಅಡಿ ಗ್ರಾಮಗಳನ್ನು ದತ್ತು ಪಡೆದು ಸರ್ವಾಂಗೀಣ ಅಭಿವೃದ್ಧಿಪಡಿಸುವುದು ಈಯೋಜನೆಯ ಉದ್ದೇಶ. 2014ಅಕ್ಟೋಬರ್‌ 11ರಂದು ಕೇಂದ್ರ ಸರಕಾರ ಈ ಆದರ್ಶ ಗ್ರಾಮ ಯೋಜನೆ ಜಾರಿಗೊಳಿಸಿದೆ. ಗ್ರಾಮೀಣ ಜನರ ಆರೋಗ್ಯ, ಆರ್ಥಿಕ ಪ್ರಗತಿ, ಸಾಮಾಜಿಕ ಬೆಳವಣಿಗೆ, ಭದ್ರತೆ, ಪರಿಸರ ಅಭಿವೃದ್ಧಿ, ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಹಾಗೂ ನಿರ್ವಹಣೆ, ಹಳ್ಳಿಗೆ ಬೇಕಾದ ಮೂಲ ಸೌಕರ್ಯ ಹಾಗೂ ಸೇವೆಗಳು ಸೇರಿದಂತೆ ಹಲವು ಆಯಾಮಗಳಲ್ಲಿ ಗ್ರಾಮವನ್ನು ಅಭಿವೃದ್ಧಿಗೊಳಿಸಿ ಆದರ್ಶ ಗ್ರಾಮವನ್ನಾಗಿಸೋದು ಯೋಜನೆಯ ಮೂಲ ಉದ್ದೇಶ. ಆದರೆ ದಾರದಹಳ್ಳಿಯಲ್ಲಿ ಯೋಜನೆ ಅನುಷ್ಠಾನದಲ್ಲಿ ಮುತುವರ್ಜಿ ವಹಿಸದ ಕಾರಣ ವಿದ್ಯುತ್‌, ಕುಡಿಯುವ ನೀರು, ಆಸ್ಪತ್ರೆ, ಚರಂಡಿ ವ್ಯವಸ್ಥೆ, ಪಶು ಆಸ್ಪತ್ರೆ, ಗ್ರಾಮಕ್ಕೆ ಉತ್ತಮ ರಸ್ತೆಗಳು ಸೇರಿದಂತೆ ಹಲವು ಮೂಲ ಸೌಕರ್ಯಗಳು ಇಂದಿಗೂ ಮರೀಚಿಕೆಯಾಗಿವೆ.

ಈ ಬಗ್ಗೆ “ಉದಯವಾಣಿ’ಯೊಂದಿಗೆ ಮಾತನಾಡಿದ ಕಿಸಾನ್‌ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಬ್ರಿಜೇಶ್‌ ಕಡಿದಾಳ್‌ ಅವರು, ಡಿ.ಕೆ.ತಾರಾದೇವಿ ಅವರು ಕೇಂದ್ರ ಸಚಿವರಾಗಿದ್ದಾಗ ದಾರದಹಳ್ಳಿಯಲ್ಲಿ 10 ಹಾಸಿಗೆಯುಳ್ಳ ಹೆರಿಗೆ ಆಸ್ಪತ್ರೆ ನಿರ್ಮಾಣ
ಮಾಡಿಸಿದ್ದರು. ದಿನಕಳೆದಂತೆ ಇಲ್ಲಿನ ಆಸ್ಪತ್ರೆ ಶೋಚನೀಯ ಸ್ಥಿತಿ ತಲುಪಿದ್ದು, ಸೂಕ್ತ ನಿರ್ವಹಣೆಯ ಕೊರತೆಯಿಂದ ಕಟ್ಟಡ ಬೀಳುವ ಸ್ಥಿತಿಯಲ್ಲಿದೆ.

Advertisement

ಇಲ್ಲಿನ ಆಸ್ಪತ್ರೆಗೆ ಯಾವುದೇ ವೈದ್ಯಾ ಧಿಕಾರಿಗಳ ಹಾಗೂ ಸಿಬ್ಬಂದಿ ನೇಮಕ ಆಗಿಲ್ಲ. ಆಸ್ಪತ್ರೆ ಸಿಬ್ಬಂದಿಗೆ ನಿರ್ಮಾಣ ಮಾಡಿರುವ ವಸತಿ ಗೃಹಗಳು ಕೂಡ ಸ್ಟೋರ್‌ ರೂಂಗಳಾಗಿ ಪರಿವರ್ತನೆಯಾಗಿವೆ ಎಂದು ದೂರಿದರು.

ಹಲವು ಬಾರಿ ಇಲ್ಲಿನ ವಸತಿ ಗೃಹಗಳ ಮರು ನವೀಕರಣ ಮಾಡುವ ಪ್ರಹಸನ ನಡೆದಿದ್ದು, ಹಲವು ಕಟ್ಟಡಗಳಿಗೆ ಮೇಲ್ಛಾವಣಿಯೇ ಇಲ್ಲದಂತಾಗಿದೆ. ಆದರೆ ಗುತ್ತಿಗೆದಾರರು ಮಾತ್ರ ಬಿಲ್‌ ಪಾಸ್‌ ಮಾಡಿಕೊಂಡು ದುಡ್ಡು ಮಾಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೇ ಇರುವುದರಿಂದ ಯಾವ ಸಿಬ್ಬಂದಿಯೂ ಕಾರ್ಯ ನಿರ್ವಹಿಸಲು ಬರುತ್ತಿಲ್ಲ. ಅಲ್ಲದೇ, ಗ್ರಾಮಕ್ಕೆ ಅಗತ್ಯವಾದ ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್‌, ಶಾಲೆಗಳು ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳು ಇಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ ಆರೋಪಿಸಿದರು.

ಬ್ಲಾಕ್‌ ಕಾಂಗ್ರೆಸ್‌ ವಕ್ತಾರ ಎಂ.ಎಸ್‌.ಅನಂತ್‌ ಅವರು ಹೇಳುವಂತೆ, ಮೋಟಮ್ಮ ಅವರು ಮಲೆನಾಡು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದಾಗ ದಾರದಹಳ್ಳಿ ರಸ್ತೆ ಡಾಂಬರೀಕರಣ ಮಾಡಿಸಿದ್ದು ಬಿಟ್ಟರೆ ಇಲ್ಲಿಯವರೆಗೂ ಇಲ್ಲಿನ ರಸ್ತೆಗಳು ಡಾಂಬರು ಕಂಡಿಲ್ಲ. ವಾಹನಗಳು ಓಡಾಡುವುದು ಇರಲಿ, ಜನರು ನಡೆದುಕೊಂಡು ತಿರುಗಾಡಲೂ ಕೂಡ ಕಷ್ಟಕರವಾಗಿದೆ. ಕಡಿದಾಳು, ಕೋಣಗೆರೆ ಸೇರಿದಂತೆ ಹಲವು ಗ್ರಾಮಗಳಿಗೆ ಬರಿಗಾಲಿನಲ್ಲಿ ನಡೆದಾಡಲು
ಯೋಚಿಸುವಂತಹ ಸ್ಥಿತಿ ಎದುರಾಗಿದೆ.

ಉತ್ತಮ ಬಸ್‌ ಸೌಕರ್ಯ ಇಲ್ಲದಿರುವ ಕಾರಣ ದಾರದಹಳ್ಳಿಯಲ್ಲಿ ಇರುವ ಸರಕಾರಿ ಕಚೇರಿಗೆ ಸಿಬ್ಬಂದಿ ತಡವಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಇನ್ನು ಪಟ್ಟಣ ಪ್ರದೇಶಕ್ಕೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ್ಥಿಗಳ ಪಾಡು ದೇವರಿಗೇ ಪ್ರೀತಿ.
ಇದರ ಜೊತೆಗೆ ದಾರದಹಳ್ಳಿ ಗ್ರಾಮ ಪಂಚಾಯತಿ ಕಟ್ಟಡ ಬೀಳುವ ಸ್ಥಿತಿಯಲ್ಲಿದ್ದು, ಸಿಬ್ಬಂದಿ ಆತಂಕದಿಂದ ಕೆಲಸ ಮಾಡುವಂತಾಗಿದೆ. ಕನಿಷ್ಠ ಸೌಜನ್ಯಕ್ಕಾದರೂ ಸಂಸದರು ಗ್ರಾಮದ ಕಡೆ ಮುಖ ಮಾಡದಿರುವುದು ಗ್ರಾಮದ ಜನರಿಗೆ ಬೇಸರ ಉಂಟು ಮಾಡಿದೆ ಎಂದು ಆರೋಪಿಸಿದರು.

ಸಂಸದರ ಆದರ್ಶ ಗ್ರಾಮ ಯೋಜನೆಯ ಬಗ್ಗೆ ಸ್ವ ಪಕ್ಷದ ಸಂಸದರೇ ನಿರಾಸಕ್ತಿ ತೋರುತ್ತಿರುವುದು ಸ್ಥಳೀಯ ನಾಯಕರಿಗೆ ತೀವ್ರ ಮುಜಗರ ಉಂಟು ಮಾಡುತ್ತಿದೆ. ಸಂಸದರು ಇನ್ನಾದರೂ ಕ್ಷೇತ್ರದ ಕಡೆ ಗಮನ ಹರಿಸಬೇಕೆಂಬುದು ಹಲವರ ಅಭಿಪ್ರಾಯ ಹಾಗೂ ಆಗ್ರಹವಾಗಿದೆ .

ಚುನಾವಣೆ ಸಂದರ್ಭದಲ್ಲಿ ದಾರದಹಳ್ಳಿ ಗ್ರಾಮವನ್ನು ಡಿಜಿಟಲ್‌ ಗ್ರಾಮ ಮಾಡುವುದಾಗಿ ಸಂಸದರು ಗ್ರಾಮಸ್ಥರಿಗೆ ಭರವಸೆ ನೀಡಿದ್ದರು. ಡಿಜಿಟಲ್‌ ಗ್ರಾಮ ಮಾಡುವುದು ಇರಲಿ, ಇರುವ ಒಂದು ದೂರವಾಣಿ ಕೇಂದ್ರವನ್ನೇ ಸರಿಯಾಗಿ ನಿಭಾಯಿಸದೆ ಬಾಗಿಲು ಮುಚ್ಚಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಯ ಲಭ್ಯತೆ ಅರಿತು ಆಯ್ಕೆ ಮಾಡದೆ ರಾಷ್ಟ್ರಮಟ್ಟದ ನಾಯಕರನ್ನು ಮುಂದಿಟ್ಟುಕೊಂಡು ಆಯ್ಕೆ ಮಾಡಿದ್ದರ ಪರಿಣಾಮ ಸಂಸದರು ಕ್ಷೇತ್ರದಲ್ಲಿ ಕಾಣಸಿಗುತ್ತಿಲ್ಲ.
ನಯನಾ ಮೋಟಮ್ಮ,
ಕಾಂಗ್ರೆಸ್‌ ವಕ್ತಾರರು

ವಿರೋಧ ಪಕ್ಷಗಳ ಆರೋಪದಲ್ಲಿ ಹುರುಳಿಲ್ಲ. ಆದರ್ಶ ಗ್ರಾಮ ಯೋಜನೆ ಜಾರಿಗೆ ತರುವುದರಲ್ಲಿ ವಿಳಂಬವಾಗಿದೆ ನಿಜ. ಆದರೆ, ಎಲ್ಲವೂ ಸತ್ಯವಲ್ಲ. ಹಲವು ಆಡಳಿತಾತ್ಮಕ ಅಡಚಣೆಗಳ ನಡುವೆಯೂ ದಾರದಹಳ್ಳಿ ಗ್ರಾಮಕ್ಕೆ 1.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿಕೊಂಡು ಕಾಂಕ್ರೀಟ್‌ ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಕೆಲಸ ಆರಂಭವಾಗಲಿದೆ. ಇನ್ನು ಉಳಿದ ಮೂಲಭೂತ ಸೌಕರ್ಯಗಳಿಗೆ ಹಂತಹಂತವಾಗಿ ಅನುದಾನ ಬಿಡುಗಡೆ ಮಾಡಿಸಿ ಕೆಲಸ ಪೂರ್ಣಗೊಳಿಸಲಾಗುವುದು. ಸಂಸದರು ಕ್ಷೇತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎನ್ನುವುದು ವಿರೋಧ ಪಕ್ಷಗಳ ಆರೋಪವಷ್ಟೇ.
ಕೆ.ಸಿ.ರತನ್‌,
ತಾಪಂ ಅಧ್ಯಕ್ಷರು, ಮೂಡಿಗೆರೆ

Advertisement

Udayavani is now on Telegram. Click here to join our channel and stay updated with the latest news.

Next