Advertisement

ಸ್ವಚ್ಛತೆಗೆ ವಿನೂತನ ಯೋಜನೆ ಜಾರಿ

04:20 PM Dec 09, 2019 | Naveen |

ಡಿ.ಬಿ. ವಡವಡಗಿ
ಮುದ್ದೇಬಿಹಾಳ:
ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಎಲ್ಲೆಂದರಲ್ಲಿ ಬಿಸಾಡಿ ಪರಿಸರ ಮಲೀನಗೊಳಿಸುವ ಪದ್ಧತಿಗೆ ಕಡಿವಾಣ ಬೀಳಬೇಕು. ಊರು ಸ್ವಚ್ಛವಾಗಿ, ಆರೋಗ್ಯಕರವಾಗಿ ಇರಬೇಕಾದರೆ ಉತ್ಪತ್ತಿಯಾಗುವ ಕಸವನ್ನು ಸುರಕ್ಷಿತವಾಗಿ, ಸುರಕ್ಷಿತ ಸ್ಥಳಕ್ಕೆ ವಿಲೇವಾರಿ ಮಾಡುವ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿರಬೇಕು. ಮನೆ ಮನೆಗೆ ತೆರಳಿ ಜನಪ್ರೀಯ ಹಾಡುಗಳ ಮೂಲಕ ಜನರ ಸೆಳೆದು ಕಸ ಸಂಗ್ರಹಿಸುವ ಪರಿಣಾಮಕಾರಿ ಯೋಜನೆ ಮುದ್ದೇಬಿಹಾಳ ಪಟ್ಟಣದಲ್ಲಿ ಯಶಸ್ಸಿನತ್ತ ದಾಪುಗಾಲು ಹಾಕುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

Advertisement

ಹೇಗಿದೆ ವಿಲೇವಾರಿ ವ್ಯವಸ್ಥೆ?: ಪಟ್ಟಣದ 23 ವಾರ್ಡ್ ನಲ್ಲಿ ಅಂದಾಜು 10,000 ಕುಟುಂಬ, 40,000 ಆಸುಪಾಸು ಜನವಸತಿ ಇದ್ದು ನಿತ್ಯ ಅಂದಾಜು 25-30 ಸಾವಿರ ಜನ ಬಂದು ಹೋಗುತ್ತಾರೆ. ನಿತ್ಯ ಅಂದಾಜು 10 ಟನ್‌ ಕಸ ಉತ್ಪತ್ತಿ ಆಗುತ್ತದೆ. ಇದನ್ನು ಮನೆ ಕಸ, ಅಂಗಡಿ ಕಸ, ಬೀದಿ ಕಸ ಎಂದು ವಿಂಗಡಿಸಿ ವಿಲೇವಾರಿ, ಸ್ವತ್ಛತಾ ಕಾರ್ಯಕ್ಕೆ ಪೌರ ಕಾರ್ಮಿಕರನ್ನು ನಿಯೋಜಿಸಲಾಗಿದೆ. ಕಸವನ್ನು ಸರೂರ ಬಳಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಲು 2 ಟ್ರ್ಯಾಕ್ಟರ್‌, 4 ಟಾಟಾ ಏಸ್‌ ಮಿನಿ ವಾಹನ, ಒಂದು ಟ್ರಕ್‌, ಅಗತ್ಯವಿದ್ದಲ್ಲಿ ಜೆಸಿಬಿ ಬಳಕೆ, ಶೌಚಾಲಯ ತ್ಯಾಜ್ಯ ವಿಲೇವಾರಿಗೆ ಒಂದು ಸಕ್ಕಿಂಗ್‌ ಮತ್ತು ಜಟ್ಟಿಂಗ್‌ ಯಂತ್ರ, ಸೊಳ್ಳೆ ನಿವಾರಣೆಗೆ ಒಂದು ಫಾಗಿಂಗ್‌ ಯಂತ್ರ ಇರುವ ಆಟೋ ಸೌಲಭ್ಯ ಒದಗಿಸಲಾಗಿದೆ.

ಹೆಚ್ಚುತ್ತಿರುವ ಜನಸಂಖ್ಯೆ, ವಿಸ್ತಾರಕ್ಕೆ ಈ ಸೌಲಭ್ಯ ಕಡಿಮೆ ಎನ್ನಿಸಿದ್ದು ಹೆಚ್ಚುವರಿ ವಾಹನ, ಯಂತ್ರ ಖರೀದಿಯತ್ತ, ಪೌರ ಕಾರ್ಮಿಕರ ನೇಮಕಕ್ಕೆ ಚುನಾಯಿತ ಪ್ರತಿನಿಧಿಗಳ ಆಡಳಿತ ಮಂಡಳಿ ರಚನೆಗೆ ಕಾಯಲಾಗುತ್ತಿದೆ. ಓರ್ವ ಚಾಲಕ ಸೇರಿ 30 ಕಾಯಂ, ಕ್ಷೇಮಾಭಿವೃದ್ಧಿಯ 4, ಹೊರಗುತ್ತಿಗೆಯ 25 ಸೇರಿ ಒಟ್ಟು 58 ಪೌರ ಕಾರ್ಮಿಕರು ಕಸ ಸಂಗ್ರಹ, ಸ್ವಚ್ಛತೆ ಕಾರ್ಯ ನಡೆಸುತ್ತಿದ್ದಾರೆ. ಇವರ ಸಂಖ್ಯೆ ಇನ್ನೂ ಹೆಚ್ಚಬೇಕು ಎನ್ನುವ ಬೇಡಿಕೆ ಇದೆ.

ಜನಾಕರ್ಷಕ ಹಾಡುಗಳು: ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ 4 ಮಿನಿ ವಾಹನಗಳಿಗೆ ಧ್ವನಿವರ್ಧಕ ಅಳವಡಿಸಿ 2-3 ನಿಮಿಷ ಅವಧಿಯ ಜಾನಪದ, ಚಲನಚಿತ್ರಗಳ ಜನಪ್ರಿಯ ಹಾಡುಗಳ ಸಾಹಿತ್ಯ ಪರಿವರ್ತಿಸಿ ಕಸ ಸಂಗ್ರಹಣೆಗೆ ಬಳಸಿಕೊಳ್ಳಲಾಗುತ್ತಿದೆ. ಬೆಳಗ್ಗೆ ಒಂದು ಸಾರಿ ಬಡಾವಣೆಯ ರಸ್ತೆಯಲ್ಲಿ ಬಂದು ಹೋಗುವ ಈ ವಾಹನದಿಂದ ಜನಪ್ರೀಯ ಹಾಡುಗಳು ಜೋರಾಗಿ ಬರುತ್ತಿರುವುದನ್ನು ಆಲಿಸಿ ಕೆಲಸದಲ್ಲಿ ತಲ್ಲಿನರಾಗಿರುವ ಮಹಿಳೆಯರು, ಪುರುಷರು ಕಸದ ವಾಹನ ಬಂತು ಎಂದು ಧಾವಿಸಿ ಮನೆಯಿಂದ ಹೊರಗೆ ಬಂದು ತಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಒಣ ಕಸ, ಹಸಿ ಕಸ ಬೇರ್ಪಡಿಸಿ ವಾಹನದಲ್ಲಿನ ಪೌರ ಕಾರ್ಮಿಕರಿಗೆ ಹಸ್ತಾಂತರಿಸುತ್ತಾರೆ. ಇದರಿಂದ ಮನೆಗಳ ಮುಂದೆ ಎಲ್ಲೆಂದರಲ್ಲಿ ಕಸ ಬಿಸಾಕುವ ಪದ್ಧತಿಗೆ ಕಡಿವಾಣ ಬಿದ್ದಂತಾಗಿದೆ.

ಹಿಂದಿನ ಪದ್ಧತಿ ಬಂದ್‌: ಕೆಲ ವರ್ಷಗಳ ಹಿಂದೆ ಪಟ್ಟಣದಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಲು ಸ್ಥಳೀಯ ಸ್ವಸಹಾಯ ಗುಂಪುಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಅವರು ಮನೆ ಮನೆಯಿಂದ ಶುಲ್ಕ ಸಂಗ್ರಹಿಸಿ ಕಸ ವಿಲೇವಾರಿ ಮಾಡುತ್ತಿದ್ದರು. ಕಾಲಾಂತರದಲ್ಲಿ ಇದಕ್ಕೆ ಪ್ರೋತ್ಸಾಹ ದೊರಕಲಿಲ್ಲ. ಹೀಗಾಗಿ ಆ ವ್ಯವಸ್ಥೆ ಬಂದ್‌ ಆಯಿತು. ಈಗ ಪೌರ ಕಾರ್ಮಿಕರೇ ಕಸ ಸಂಗ್ರಹಿ ವಿಲೇವಾರಿ ಮಾಡುತ್ತಿದ್ದಾರೆ. ಇದಕ್ಕೆ ತಗಲುವ ಶುಲ್ಕವನ್ನು ವಾರ್ಷಿಕ ತೆರಿಗೆಯಲ್ಲೇ ಸಾರ್ವಜನಿಕರಿಂದ ವಸೂಲಿ ಮಾಡುವ ವ್ಯವಸ್ಥೆ ಜಾರಿಯಲ್ಲಿದೆ. ಒಟ್ಟಾರೆ ಹೇಳುವುದಾದರೆ ಜನ ಜಾಗೃತರಾಗಿ ಕಸವನ್ನು ತಮ್ಮ ಮನೆಯಲ್ಲಿ ವಿಂಗಡಿಸಿ ಕಸ ಸಂಗ್ರಹಿಸುವ ವಾಹನಗಳಿಗೆ ಪೂರೈಸಿದಲ್ಲಿ ತಮ್ಮ ಸುತ್ತಲಿನ ಪರಿಸರವನ್ನಾದರೂ ಸ್ವತ್ಛವಾಗಿರಿಸಿಕೊಳ್ಳುವುದು ಸಾಧ್ಯವಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next