ಮುದ್ದೇಬಿಹಾಳ: ಪಟ್ಟಣದ ಹೃದಯ ಭಾಗದಲ್ಲಿನ ಪುರಸಭೆ ಅಧಿನದ 65 ವರ್ಷಗಳಷ್ಟು ಹಳೆಯದಾದ ಕಾಯಿಪಲ್ಲೆ, ಕಿರಾಣಿ ಮಾರುಕಟ್ಟೆ ಸಂಪೂರ್ಣ ಜೀರ್ಣಾವಸ್ಥೆಗೆ ತಲುಪಿದ್ದು ಈಗಲೋ ಆಗಲೂ ಕುಸಿದು ಬಿದ್ದು ಭಾರಿ ಸಾವು ನೋವು ಸಂಭವಿಸುವ ಆತಂಕ ಅಲ್ಲಿರುವ ಕೆಲ ವ್ಯಾಪಾರಸ್ಥರು, ಜನತೆಯನ್ನು ಕಾಡುತ್ತಿದೆ.
Advertisement
ಈ ಹಿಂದೆ ಹಲವು ಬಾರಿ ಮಾರುಕಟ್ಟೆಯ ಒಳಗಿನ ಅಂಗಡಿಗಳ, ಮಾರುಕಟ್ಟೆ ಪ್ರವೇಶಿಸುವ ದ್ವಾರದ ಮೇಲ್ಛಾವಣಿಯ ಸಿಮೆಂಟ್ ಕಾಂಕ್ರೀಟ್ ಪದರು ಉದುರಿ ಬಿದ್ದು ವ್ಯಾಪಾರಸ್ಥರು ಸೇರಿ ದಂತೆ ಹಲವು ಜನರು ಗಾಯಗೊಂಡಿರುವ ಘಟನೆಗಳು ನಡೆದಿರುವುದು ಈ ಆತಂಕಕ್ಕೆ ಕಾರಣವಾಗಿದೆ.
Related Articles
Advertisement
ಕೆಲ ಅಂಗಡಿಗಳ ಗೋಡೆಗಳಲ್ಲಿ ಬಿರುಕು ಕಂಡು ಬಂದಿದ್ದರೆ, ಮತ್ತೇ ಕೆಲ ಅಂಗಡಿಗಳ ಒಳಭಾಗದಲ್ಲಿ ಆಹಾರ ಅರಸಿ ಬರುವ ಇಲಿ, ಹೆಗ್ಗಣಗಳು ದೊಡ್ಡ ಗುದ್ದು ಹಾಕಿ ಕಟ್ಟಡದ ಅಡಿಪಾಯವನ್ನೇ ಅಪಾಯಕಾರಿಯನ್ನಾಗಿಸಿವೆ. ಮೇಲ್ಛಾವಣಿಯಂತೂ ಈಗಲೇ ಆಗಲೋ ಕುಸಿದು ಬೀಳುವಷ್ಟು ಕೃಷವಾಗಿದೆ. ಹಲವು ಅಂಗಡಿಗಳ ಮೇಲ್ಛಾವಣಿ ಮೇಲೆ ತಗಡು ಹಾಕಿ ಮಳೆ ನೀರು ಸೋರದಂತೆ ನೋಡಿಕೊಳ್ಳಲಾಗಿದೆ. ಸಣ್ಣ ಪ್ರಮಾಣದ ಭೂಕಂಪ ತಡೆಗುಕೊಳ್ಳುವ ಶಕ್ತಿಯೂ ಇದಕ್ಕಿಲ್ಲದಾಗಿದೆ.
ಅಕಸ್ಮಾತ್ ಭೂಕಂಪ ಸಂಭವಿಸಿದಲ್ಲಿ ಇಡಿ ಕಟ್ಟಡ ನೆಲಸಮಗೊಳ್ಳುವುದು ಖಚಿತ. ಈ ಹಿಂದೆ ಸಂಭವಿಸಿದ ಭೂಕಂಪಗಳಿಂದ ಮಾರುಕಟ್ಟೆ ಕಟ್ಟಡದ ಕೆಲ ಭಾಗದಲ್ಲಿ ಬಿರುಕು ಕಂಡು ಬಂದಿದ್ದು ಇದಕ್ಕೆ ಸಾಕ್ಷಿ. ಮಾರುಕಟ್ಟೆ ಸಂಪೂರ್ಣ ಶಿಥಿಲಗೊಂಡಿರುವುದು ವ್ಯಾಪಾರಸ್ಥರಿಗೆ ಗೊತ್ತಿದೆ. ಆದರೆ ಪರ್ಯಾಯ ವ್ಯವಸ್ಥೆ ಇಲ್ಲದ್ದರಿಂದ, ಎಲ್ಲರಿಗೂ ಹತ್ತಿರ ಆಗುವುದರಿಂದ ಅನಿವಾರ್ಯವಾಗಿ ಅಪಾಯದ ಸ್ಥಿತಿಗೆ ಒಗ್ಗಿಕೊಂಡಿದ್ದಾರೆ.
ತಲೆ ಮೇಲೆ ಛಾವಣಿ ಕುಸಿದು ಬೀಳುತ್ತದೆ ಎಂದು ಗೊತ್ತಿದ್ದರೂ ತಮ್ಮನ್ನು ನಂಬಿದ ಕುಟುಂಬದ ಹೊಟ್ಟೆ ತುಂಬಿಸಲು, ಜನರಿಗೆ ಅನುಕೂಲ ಮಾಡಿಕೊಡಲು ಅಪಾಯ ಲೆಕ್ಕಿಸದೆ ವ್ಯಾಪಾರ ನಡೆಸುತ್ತಿದ್ದಾರೆ. ಕಾಯಿಪಲ್ಲೆ ಮಾರಾಟಗಾರರು ಹೊಸ ಮಾರುಕಟ್ಟೆಗೆ ಹೋಗಲು ನಿರಾಕರಿಸಿ ಇಲ್ಲೇ ವ್ಯಾಪಾರ ಮುಂದುವರಿಸಿದ್ದಾರೆ.
ಒಟ್ಟಾರೆ ಹೇಳುವುದಾದರೆ ಇಲ್ಲಿನ ಅಂಗಡಿಕಾರರು ಮಾರುಕಟ್ಟೆ ದುರಸ್ತಿಪಡಿಸಿಕೊಡಲು ಒತ್ತಾಯಿಸುತ್ತಾರೆಯೇ ಹೊರತು ಹೊಸ ಮಾರುಕಟ್ಟೆ ನಿರ್ಮಾಣಕ್ಕೆ ಸುತಾರಾಂ ಒಪ್ಪುತ್ತಿಲ್ಲ. ಇದಕ್ಕೆ ಏನೇನೋ ಕಾರಣಗಳಿರಬಹುದು. ಆದರೆ ವ್ಯಾಪಾರಸ್ಥರು, ಜನರ ಪ್ರಾಣ ಮುಖ್ಯ ಎನ್ನುವುದನ್ನು ಪುರಸಭೆ ಆಡಳಿತ, ಜನಪ್ರತಿನಿಧಿಗಳು ಅರಿತುಕೊಂಡಿದ್ದು ಹೊಸ ಮಾರುಕಟ್ಟೆ ಕಟ್ಟಲು ಮನವೊಲಿಸುವ ಪ್ರಯತ್ನಗಳು ನಿರಂತರ ನಡೆದಿವೆ.
ಸಂಭವನೀಯ ಪ್ರಾಣಾಪಾಯ ತಪ್ಪಿಸಲು ಪ್ರಾಣಘಾತುಕ ಆಗಲಿರುವ ಈ ಮಾರುಕಟ್ಟೆ ಕೆಡವಿ ಹೊಸದಾಗಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಿಸಬೇಕು. ಕೆಳಗೆ ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಕಲ್ಪಿಸುವುದರಿಂದ ಬಜಾರ್ನಲ್ಲಿ ಸಂಚಾರ ಒತ್ತಡ, ಪಾರ್ಕಿಂಗ್ ಸಮಸ್ಯೆ ನಿವಾರಿಸಬಹುದು. ಪುರಸಭೆಗೂ ಆದಾಯ ಹೆಚ್ಚುತ್ತದೆ. ವ್ಯಾಪಾರಸ್ಥರು, ಸಾರ್ವಜನಿಕರು ಆತಂಕ ಇಲ್ಲದೆ ನೆಮ್ಮದಿಯಿಂದ ನಿತ್ಯದ ಚಟುವಟಿಕೆ ನಡೆಸಬಹುದು. ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಇದಕ್ಕಾಗಿ ಮಾರುಕಟ್ಟೆಯನ್ನು ಸಂಪೂರ್ಣ ನೆಲಸಮಗೊಳಿಸಿ ಹೊಸದಾಗಿ ಕಾಂಪ್ಲೆಕ್ಸ್ ಕಟ್ಟಬೇಕು ಅನ್ನೋದು ಜನರ ಅಪೇಕ್ಷೆ, ಬೇಡಿಕೆ. ಜನಪ್ರತಿನಿಧಿಗಳು, ಪುರಸಭೆ ಆಡಳಿತ ಕ್ರಿಯಾಶೀಲಗೊಂಡು ಜನರ ಅಪೇಕ್ಷೆ ಅರಿತು ಅಭಿವೃದ್ಧಿಗೆ ಮುಂದಾಗಬೇಕಿದೆ.