Advertisement

ಅಂಕ ಗಳಿಕೆಗೆ ಮಕ್ಕಳ ಮೇಲೆ ಒತ್ತಡ ಹೇರಬೇಡಿ: ಕೂಚಬಾಳ

06:32 PM Feb 12, 2020 | Naveen |

ಮುದ್ದೇಬಿಹಾಳ: ಭವ್ಯ ಭಾರತದ ಭವಿಷ್ಯವಾಗಿರುವ ಮಕ್ಕಳಿಗೆ ಪಾಲಕರು, ಶಿಕ್ಷಕರು ಅಂಕ ಗಳಿಸುವ ಒತ್ತಡ ಹೇರುವುದಕ್ಕಿಂತ ಅವರಲ್ಲಿರುವ ಸುಪ್ತ ಪ್ರತಿಭೆ ಹೊರತರುವ, ಅವರಿಷ್ಟದ ಸಾಧನೆಗೆ ಅವಕಾಶ ಮಾಡಿಕೊಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌. ಪಾಟೀಲ ಕೂಚಬಾಳ ಹೇಳಿದ್ದಾರೆ.

Advertisement

ಮುದ್ದೇಬಿಹಾಳ ತಾಲೂಕು ಹುಲ್ಲೂರ ಗ್ರಾಮದಲ್ಲಿರುವ ಅಭಿನವ ಕುಮಾರೇಶ್ವರ ವಿದ್ಯಾವರ್ಧಕ ಸಂಸ್ಥೆಯ ಸಿಬಿಎಸ್‌ ಶಾಲೆಯ 8ನೇ ವಾರ್ಷಿಕೋತ್ಸವ, 2020ನೇ ಸಾಲಿನ ರಾಜ್ಯಮಟ್ಟದ ಚನ್ನಬಸವಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ಅಗಾಧ ಪ್ರತಿಭೆ ಅಡಗಿದೆ. ಶಾಲೆಯಲ್ಲಿ ಸಂಘಟಿಸುವ ಸಾಂಸ್ಕೃತಿಕ, ಕ್ರಿಡಾ ಚಟುವಟಿಕೆಗಳು ಅವರ ಪ್ರತಿಭೆ ಅನಾವರಣಕ್ಕೆ ವೇದಿಕೆ ಆಗುತ್ತವೆ. ಪ್ರತಿಯೊಬ್ಬ ಮಗುವಿನ ಪ್ರತಿಭೆಗೆ ತಕ್ಕ ಪ್ರೋತ್ಸಾಹ ನೀಡುವುದು ಅವರ ಭವಿಷ್ಯದ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ ಎನ್ನುವುದನ್ನು ಪಾಲಕರು ತಿಳಿದುಕೊಳ್ಳಬೇಕು ಎಂದರು.

ಬಾಲತಪಸ್ವಿ ಸೋಮಲಿಂಗ ಮಹಾರಾಜರು ಆಶೀರ್ವಚನ ನೀಡಿ, ಮಕ್ಕಳಲ್ಲಿ ಭಗವಂತ ನೆಲೆ ನಿಂತಿರುತ್ತಾನೆ. ಮಕ್ಕಳ ಬುದ್ಧಿಮಟ್ಟ ಅತ್ಯುನ್ನತವಾಗಿದ್ದು ಎಲ್ಲವನ್ನೂ ತಿಳಿದುಕೊಳ್ಳುವ ಹುಮ್ಮಸ್ಸು ಇರುತ್ತದೆ. ಇಂಥ ಮಕ್ಕಳ ಆಸಕ್ತಿಗೆ ಅನುಗುಣವಾಗಿ ಶಿಕ್ಷಣ ಒದಗಿಸುವುದು ಉತ್ತಮ ಮಾರ್ಗ. ಮಕ್ಕಳ ಅಧ್ಯಯನ ಸಮಯದಲ್ಲಿ ಪಾಲಕರು ಟಿವಿ ಧಾರಾವಾಹಿಗೆ ಮೊರೆ ಹೋಗದೆ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವ ಗುಣ ಮೈಗೂಡಿಸಿಕೊಳ್ಳಬೇಕು. ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಿಕೊಡಬೇಕು ಎಂದರು.

ಇಳಕಲ್ಲ ಡೈಟ್‌ನ ಉಪನ್ಯಾಸಕ ಎಂ.ಎಂ. ಬೆಳಗಲ್‌ ಮಕ್ಕಳ ಶೈಕ್ಷಣಿಕ ಪ್ರಗತಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಆರೂಢ ಶ್ರೀ ಸಾನ್ನಿಧ್ಯ ವಹಿಸಿದ್ದರು. ಪ್ರಭಾರ ಬಿಇಒ ರೇಣುಕಾ ಕಲಬುರ್ಗಿ, ಸಂಸ್ಥೆ ಅಧ್ಯಕ್ಷ ಮಹಾದೇವ ಪವಾರ, ನಿವೃತ್ತ ಜಲಾಯನ ಅಧಿಕಾರಿ ಎಚ್‌. ಎಚ್‌. ಬೊಮ್ಮಣಗಿ, ಚಿಂತಕ ಅಶೋಕ ಹಂಚಲಿ, ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್‌.ಎಲ್‌. ಕರಡ್ಡಿ, ಬಿಆರ್‌ಪಿ ಎಸ್‌.ಪಿ. ರಾಠೊಡ, ಹುಲ್ಲೂರ ಪಿಕೆಪಿಎಸ್‌ ಅಧ್ಯಕ್ಷ ಮುತ್ತಣ್ಣ ಹುಗ್ಗಿ, ಸುರೇಶ ಹಳೇಮನಿ, ಶ್ರೀಶೈಲ ಕಡಿ, ಎಸ್‌. ಎಸ್‌.ಪಾಟೀಲ, ಗ್ರಾಪಂ ಸದಸ್ಯರಾದ ಸುಭಾಷ್‌ ಓಲೇಕಾರ, ತಾವರಪ್ಪ ಜಾಧವ, ಭೀಮನಗೌಢ ಸಂಕಪ್ಪನವರ, ಶಿವಕುಮಾರ ಅಂಗಡಿ, ಕೃಷ್ಣಾಜಿ ಬಂಡಿವಡ್ಡರ, ಬಾಬು ನಾಯ್ಕೋಡಿ, ಮುಖ್ಯಾಧ್ಯಾಪಕ ಯಲಗೂರೇಶ ಬಳಬಟ್ಟಿ ವೇದಿಕೆಯಲ್ಲಿದ್ದರು.

Advertisement

ಉಚಿತ ಆರೋಗ್ಯ ಶಿಬಿರ ಆಯೋಜಿಸುವ ಮೂಲಕ ಬಡರೋಗಿಗಳಿಗೆ ನೆರವು ನೀಡುತ್ತಿರುವ ಬೆಂಗಳೂರಿನ ನ್ಯಾಷನಲ್‌ ಸೇವಾ ಡಾಕ್ಟರ್‌ ಅಸೋಸಿಯೇಷನ್‌ನ ಸದಸ್ಯರಾದ ಮಕ್ಕಳ ತಜ್ಞ ಡಾ| ಹರೀಶಕುಮಾರ ಎಚ್‌, ಡಾ| ಮಂಜುನಾಥ ನಾಯಕ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ 2020ನೇ ಸಾಲಿನ ರಾಜ್ಯಮಟ್ಟದ ಚನ್ನಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತರ ಪರವಾಗಿ ಡಾ| ಹರೀಶಕುಮಾರ ಮಾತನಾಡಿ, ಮಕ್ಕಳ ಆರೋಗ್ಯದ ಬಗ್ಗೆ ಪಾಲಕರು ಹೆಚ್ಚು ಗಮನ ಹರಿಸಬೇಕು. ಮೊಬೈಲ್‌ ಸಾಮಾಜಿಕ ಜಾಲತಾಣ ಬಳಕೆ ಮೇಲೆ ನಿಗಾ ಇರಿಸಬೇಕು ಮತ್ತು ರಾಸಾಯನಿಕ ಮಿಶ್ರಿತ ಆಹಾರ ಕೊಡಕೂಡದು ಎಂದರು.

ಇದೇ ವೇಳೆ ಶಾಲೆಯಲ್ಲಿ ವಿದ್ಯಾರ್ಥಿಗಳ ಕಲಿಕಾ ಚಟುವಟಿಕೆಗೋಸ್ಕರ ಅಳವಡಿಸಲಾದ ಪ್ರೋಜೆಕ್ಟರ್‌ ಅನ್ನು
ಕೆಸರಟ್ಟಿ ಶ್ರೀ ಉದ್ಘಾಟಿಸಿದರು. ಅರವಿಂದ ಪಾಸೋಡಿ ಸ್ವಾಗತಿಸಿದರು. ಭೀಮನಗೌಡ ಕೊಡಗಾನೂರ ನಿರೂಪಿಸಿದರು. ಬಿ.ಎಚ್‌. ಬಳಬಟ್ಟಿ ವಂದಿಸಿದರು. ಕಾರ್ಯಕ್ರಮದ ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿದರು.

Advertisement

Udayavani is now on Telegram. Click here to join our channel and stay updated with the latest news.

Next