Advertisement

ಮೂಡುಬಿದಿರೆ ವ್ಯಾಪ್ತಿಯಲ್ಲಿ ಭತ್ತದ ಬೆಳೆಗೆ ರಸ ಹೀರುವ ಕೀಟ ಬಾಧೆ 

12:16 PM Dec 06, 2018 | |

ಮೂಡುಬಿದಿರೆ: ಬೆಳುವಾಯಿ, ದರೆಗುಡ್ಡೆ, ಕೆಲ್ಲಪುತ್ತಿಗೆಯಿಂದ ತೊಡಗಿ ನೆರೆಯ ಬೆಳ್ತಂಗಡಿ ತಾಲೂಕಿನ ಕಾಶಿ ಪಟ್ಣದವರೆಗಿನ ಸುಗ್ಗಿ ಭತ್ತದ ಬೆಳೆ ಶೈವಾ ವಸ್ಥೆಯಲ್ಲೇ ನೆಲಕಚ್ಚತೊಡಗಿದೆ. ಇದಕ್ಕೆಲ್ಲ ಕಾರಣ ರಸ ಹೀರುವ ಕೀಟ ಬಾಧೆ.

Advertisement

ನೂರಾರು ಎಕ್ರೆ ಭೂಮಿಯಲ್ಲಿ ಈಗಾಗಲೇ ನಾಟಿ ಮಾಡಲಾಗಿರುವ, ಬಿತ್ತನೆ ನಡೆಸಿರುವ ಗದ್ದೆಗಳಲ್ಲಿ ಈ ರಸ ಹೀರುವ ಕೀಟಗಳು ಎಳೆಯ ಎಲೆಗಳ ರಸವನ್ನೇ ಹೀರಿದ ಪರಿಣಾಮ ಸಸಿಗಳೆಲ್ಲ ಸಾಯತೊಡಗಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

ದರೆಗುಡ್ಡೆಯ ರಾಜವರ್ಮ ಬೈಲಂಗಡಿ, ಪಡುಬೆಟ್ಟು ಅರಮನೆ ಬೈಲು ಪ್ರದೇಶ, ಬಳಿಯ ಸದಾಶಿವ ಶೆಟ್ಟಿ, ಕರಿಯ ಪೂಜಾರಿ, ಜೆರಾಲ್ಡ್‌ ಲೋಬೋ, ಭರತೇಶ, ಫೆಡ್ರಿಕ್‌ ರೋಡ್ರಿಗಸ್‌, ಕೆ.ಕೆ. ತಂತ್ರಿ, ಕೆಲ್ಲಪುತ್ತಿಗೆ ವಜ್ರನಾಭ ಹೆಗ್ಡೆ, ಕಾಶಿಪಟ್ಣದ ಪ್ರಗತಿಪರ ರೈತ ಪಿ.ಕೆ. ರಾಜು ಪೂಜಾರಿ ಸಹಿತ ಇನ್ನೂ ಹಲವರು ಕೃಷಿ ಭೂ ಮಿಗೆ ಈ ಸಮಸ್ಯೆ ಬಂದಿದೆ. ಕಷ್ಟಪಟ್ಟು ಮಾಡಿರುವ ಸುಗ್ಗಿ ಬೆಳೆ ಮಕಾಡೆ ಮಲಗಿದೆ. ಇವರಲ್ಲಿ ದೇಶೀಯ ತಳಿಗಳನ್ನು ಬಳಸಿದವರೂ ಇದ್ದಾರೆ, ಹೈಬ್ರಿಡ್‌ ತಳಿಗಳನ್ನು ಬಳಸಿದವರೂ ಇದ್ದಾರೆ. ಸಾಕಷ್ಟು ಬಗೆಯ ಕೀಟನಾಶಕಗಳನ್ನು ಸಿಂಪಡಿಸಿ ಆಗಿದೆ. ಪ್ರಯೋಜನವಾಗಿಲ್ಲ. ಎರಡು ವಾರದಿಂದ ತೊಡಗಿ ನಾಲ್ಕುವಾರಗಳವರೆಗಿನ ಸಸಿಗಳು ನಿರ್ಣಾಮವಾಗುತ್ತಿವೆ.

ದರೆಗುಡ್ಡೆ ಕೀಟ ಬಾಧಿತ ಸಸ್ಯಗಳ ಪರಿಶೀಲನೆ
ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ತಾಂತ್ರಿಕ ಅಧಿಕಾರಿ ಪ್ರದೀಪ ಎಂ. ಅವರು ಮಂಗಳವಾರ ದರೆಗುಡ್ಡೆಗೆ ಆಗಮಿಸಿ ಕೀಟ ಬಾಧಿತ ಸಸ್ಯಗಳನ್ನು ಪರಿಶೀಲಿಸಿ ಪರಿಹಾರ ಮಾರ್ಗಗಳನ್ನು ಸೂಚಿಸಿದರು.

ಕೆಲವು ದಿನಗಳ ಹಿಂದೆ ಬಿದ್ದ ಮಳೆಯಿಂದಾಗಿ ಈ ಕೀಟಗಳು ಕಾಣಿಸಿಕೊಂಡು ತೊಂದರೆಯಾಗಿದೆ. ಬ್ರೌನ್‌ ಪ್ಲಾಂಟ್‌ ಹೋಪರ್‌ ಎಂಬ ಈ ಕೀಟಗಳು ಒಂದು ಗಿಡದ ಎಲೆಯ ರಸವನ್ನು ಹೀರುತ್ತಲೇ ಆ ಎಲೆ ಹಸಿರು ಬಣ್ಣದಿಂದ ಕಂದು ಬಣ್ಣಕ್ಕೆ ತಿರುಗತೊಡಗುತ್ತದೆ. ಅಲ್ಲಿ ಹರಿತ್ತು ಉತ್ಪಾದನೆಯಾಗುವುದಿಲ್ಲ. ಮುಂದೆ ಈ ಎಲೆ ಸಾಯತೊಡಗಿದಂತೆ ಬೇರುಗಳೂ ಕಳಚಿಕೊಳ್ಳುತ್ತವೆ. ಕೊನೆಗೆ ಗಿಡ ಸಾಯುತ್ತದೆ.

Advertisement

ಔಷಧ ಸಿಂಪಡಿಸಿದರೂ ಪ್ರಯೋಜನವಿಲ್ಲ
ಇದಕ್ಕೆ ರೈತರು ತಮಗೆ ತೋಚಿದ ಔಷಧಗಳನ್ನು ಈಗಾಗಲೇ ಸಿಂಪಡಿಸಿದ್ದಾರೆ. ಆದರೆ ಫಲವಿಲ್ಲ. ಜತೆಗೆ ಅವರು ಸುಗ್ಗಿ ಬೆಳೆ ಚೆನ್ನಾಗಿ ಬೆಳೆಯಲಿ ಎಂದು ಹಟ್ಟಿ ಗೊಬ್ಬರದೊಂದಿಗೆ ಯೂರಿಯಾ, ನೈಟ್ರೋಜನ್‌ ಸಂಯಕ್ತ ಒಳಗೊಂಡ ರಸಗೊಬ್ಬರಗಳನ್ನೂ ಹಾಕಿದ್ದಾರೆ. ಈ ರಸಗೊಬ್ಬರಗಳಲ್ಲಿರುವ ನೈಟ್ರೋಜನ್‌ನಿಂದ ಕೀಟಗಳು ಇನ್ನಷ್ಟು ಬಲಶಾಲಿಯಾಗಿ ನೆಟ್ಟ ನೇಜಿಗಳಿಗೆ, ಬಿತ್ತನೆಯ ಸಸಿಗಳಿಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ. 25 ಡಿಗ್ರಿ ಸೆಂ. ಉಷ್ಣಾಂಶವೂ ಈ ಕೀಟಗಳ ವೃದ್ಧಿಗೆ ಕಾರಣವಾಗಿದೆ ಎಂದರು. 

ಪ್ರದೀಪ್‌ ಅವರು ಈಗಾಗಲೇ ಕಾರ್ಕಳ ಪರಿಸರದಲ್ಲಿ ಕಾಣಿಸಿಕೊಂಡಿರುವ ಇಂಥದ್ದೇ ಕೀಟ ಬಾಧೆಗೆ ಶಿಫಾರಸು ಮಾಡಿ ಸಿಂಪಡಿಸಲಾಗಿರುವ ಅಸಿಫಾಟ್‌ ಮತ್ತು ಡಿಡಿವಿಪಿ ಮಿಶ್ರಣವನ್ನು ಇಲ್ಲಿಯೂ ಬಳಸಲು ಸೂಚನೆ ನೀಡಿದರು.

ಈ ಔಷಧ ವಿಷಕಾರಿ ಅಲ್ಲ
ಇನ್ನು, ಕೆಲವಡೆ ಅಲ್ವ ಸ್ವಲ್ಪ ಪ್ರಮಾಣದಲ್ಲಿ ಕಾಣಿಸಿಕೊಂಡಿರುವ ಬೆಂಕಿ ರೋಗಕ್ಕೆ ಟಿಲ್ಟ್, ಬೀಮ್‌ ದ್ರಾವಣ (ಸೂಚಿತ ಪ್ರಮಾಣದಲ್ಲಿ ) ಸಿಂಪಡಿಸಬೇಕು. ಒಂದು ಲೀಟರ್‌ ನೀರಿಗೆ 0.5 ಗ್ರಾಂ ಟ್ರೈಸೈಕ್ಲೋಝೋಲ್‌ ಬೆರೆಸಿಯೂ ಸಿಂಪಡಿಸಬಹುದು ಎಂದು ಅವರು ವಿವರಿಸಿದರು.

ಎರಡನೇ ಬೆಳೆಯಾಗಿ ಸಾಧ್ಯವಿರುವೆಡೆಗಳಲ್ಲಿ ದ್ವಿದಳ ಧಾನ್ಯಗಳನ್ನು ಬೆಳೆಸುವ ಮೂಲಕವೂ ಇಂಥ ಕೀಟ ಬಾಧೆಯನ್ನು ನಿವಾರಿಸಲು ಸಾಧ್ಯವಿದೆ ಎಂದರು. ಮೂಡುಬಿದಿರೆ ಕೃಷಿ ವಿಚಾರವಿನಿಮಯ ಕೇಂದ್ರದ ಮಾಜಿ ಅಧ್ಯಕ್ಷ ರಾಜವರ್ಮ ಬೈಲಂಗಡಿ, ಹಾಲಿ ಅಧ್ಯಕ್ಷ ಸುಭಾಶ್ಚಂದ್ರ ಚೌಟ, ಕಾಶಿಪಟ್ಣದ ಪಿ.ಕೆ. ರಾಜು ಪೂಜಾರಿ ಉಪಸ್ಥಿತರಿದ್ದು, ಸರಕಾರ ಇತ್ತ ಗಮನ ಹರಿಸಿ ಸೂಕ್ತ ಪರಿಹಾರ ಒದಗಿಸಬೇಕಾಗಿದೆ ಎಂದು ಆಗ್ರಹಿಸಿದರು.

ಹೇಗೆ ನಿವಾರಣೆ?
ಗದ್ದೆಯಲ್ಲಿರುವ ನೀರನ್ನು ಹೊರಗೆ ಹರಿಯಿಸಬೇಕು. ಅಸಿಫಾಟ್‌ ಪೌಡರ್‌ 1ರಿಂದ 2 ಗ್ರಾಂ.ನಷ್ಟನ್ನು ಒಂದು ಲೀ. ನೀರಲ್ಲಿ ಕಲಸಬೇಕು. ಡಿಡಿವಿಪಿ ಅರ್ಧ ಎಂ. ಎಲ್‌. ದ್ರಾವಣವನ್ನು ಒಂದು ಲೀಟರ್‌ ನೀರಲ್ಲಿ ಕಲಸಬೇಕು. ಈ ಎರಡನ್ನೂ ಬೆರೆಸಿ ರೋಗಪೀಡಿತ ಸಸಿಗಳಿಗೆ ಸಿಂಪಡಿಸಬೇಕು. ಮತ್ತೆ ನೀರು ಕಟ್ಟಬೇಕು. ಮುಂದೆ 15 ದಿನಗಳಿಗೊಮ್ಮೆ ಇದೇ ಮದ್ದು ಸಿಂಪಡಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next