Advertisement

ಹಿಜಾಬ್‌ ಸಮಸ್ಯೆ ಸೌರ್ಹಾದತೆಯಿಂದ ಬಗೆಹರಿಸಲು ರಂಭಾಪುರಿ ಶ್ರೀ ಸಲಹೆ

06:05 PM Feb 06, 2022 | Team Udayavani |

ಸುರಪುರ: ಹಿಜಾಬ್‌ ಕುರಿತು ಅನಗತ್ಯವಾಗಿ ಚರ್ಚಿಸಿ ರಬ್ಬರ್‌ ನಂತೆ ಎಳೆಯುವುದು ಯಾವೊಬ್ಬ ರಾಜಕಾರಣಿಗೂ ಶೋಭೆ ತರುವಂತಹದ್ದಲ್ಲ. ಸಂಬಂಧಪಟ್ಟವರು ಈ ಸಮಸ್ಯೆಯನ್ನು ಸೌರ್ಹಾದದಿಂದ ಬಗೆಹರಿಸಬೇಕು ಎಂದು ರಂಭಾಪುರಿ ಜಗದ್ಗುರು ಡಾ| ಪ್ರಸನ್ನ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

Advertisement

ದೇವಾಪುರ ಗ್ರಾಮದಲ್ಲಿ ಶನಿವಾರ ಧರ್ಮಸಭೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ ಕೆಲ ಶಾಲಾ-ಕಾಲೇಜುಗಳು ವಿದ್ಯಾರ್ಥಿಗಳ ಪ್ರವೇಶ ನಿರಾಕರಣೆ ಮಾಡಿರುವುದು ಸರಿಯಲ್ಲ. ಕೆಲವರು ಇದನ್ನೇ ದಾಳವಾಗಿ ಬಳಸಿಕೊಂಡು ಅನಗತ್ಯವಾಗಿ ರಾಜಕೀಯಕ್ಕೆ ಎಳೆದು ತರುತ್ತಿದ್ದಾರೆ. ನಾನು ಯಾವ ಪಕ್ಷದವರನ್ನೂ ದೂರಲ್ಲ. ಎಲ್ಲರೂ ಸೇರಿ ಶಿಕ್ಷಣ ಕ್ಷೇತ್ರವನ್ನು ಗೊಂದಲದ ಗೂಡಾಗಿ ಮಾಡಿದ್ದಾರೆ. ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿರುವುದು ವಿಷಾದನೀಯ ಎಂದರು.

ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು, ಮಕ್ಕಳಲ್ಲಿ ಸಾಮರಸ್ಯ ಹಾಳಾಗುತ್ತಿದೆ. ಕೋಮು ಸಂಘರ್ಷಕ್ಕೆ ಕಾರಣವಾಗುತ್ತದೆ. ರಾಜಕಾರಣಿಗಳು ಎಚ್ಚರ ವಹಿಸಿ ಸಮಸ್ಯೆಯನ್ನು ಸೌರ್ಹಾದಯುತವಾಗಿ ಬಗೆಹರಿಸಿ ಕಲಿಕಾ ವಾತಾವರಣ ಸೃಷ್ಟಿಸಬೇಕು. ಮಕ್ಕಳಲ್ಲಿ ಶೈಕ್ಷಣಿಕ ಭಾವನೆ, ದೇಶಭಕ್ತಿ ಮೂಡಿಸುವ ಕೆಲಸ ಮಾಡಬೇಕು. ನ್ಯಾಯಾಲಯ ಸೂಕ್ತ ನ್ಯಾಯ ನೀಡುತ್ತದೆ ಎಂಬ ವಿಶ್ವಾಸವಿದೆ. ವೋಟ್‌ ಬ್ಯಾಂಕ್‌ಗಾಗಿ ಜನರ ಭಾವನೆ ಕೆರಳಸಬೇಡಿ. ಅನಗತ್ಯ ಚರ್ಚೆ ಬಿಟ್ಟು ದುರ್ಬಲರನ್ನು ಮೇಲೆತ್ತುವ ಕೆಲಸ ಮಾಡಬೇಕು. ಪ್ರತಿಭಾ ಸಂಪನ್ನರನ್ನು ಬೆಳೆಸುವ ಮೂಲಕ ದೇಶ-ರಾಜ್ಯದಲ್ಲಿ ನಾವೆಲ್ಲರೂ ಒಂದೇ ಎಂಬ ಭಾವೈಕ್ಯ ಭಾವ ಬೆಳೆಸಲು ಶ್ರಮಿಸಬೇಕೆಂದು ಸಲಹೆ ನೀಡಿದರು.

ಶಾಸಕ ರಾಜುಗೌಡ ಮಾತನಾಡಿ, ಹಿಜಾಬ್‌ ವಿಷಯದಲ್ಲಿ ರಾಜ್ಯಕ್ಕೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ. ಕಾಂಗ್ರೆಸ್‌ -ಬಿಜೆಪಿ-ಜೆಡಿಎಸ್‌ ಸೇರಿದಂತೆ ದಿನಕೊಬ್ಬರು ಏನೇನೋ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಸಮವಸ್ತ್ರ ಕುರಿತು ಕೆಲವರು ಮನಸ್ಸಿಗೆ ಬಂದಂತೆ ಹೇಳಿಕೆ ಕೊಟ್ಟು ಹೀರೋ ಆಗಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ರಾಜಕಾರಣಿಗಳು ಇದಕ್ಕೆ ಸಂಬಂಧಪಟ್ಟಂತೆ ಹೇಳಿಕೆ ನೀಡಬಾರದು. ಸಮಸ್ತ್ರ ಕುರಿತು ಆಯಾ ಶಾಲೆಯ ಆಡಳಿತ ಮಂಡಳಿ ಮತ್ತು ಎಸ್‌ಡಿಎಂಸಿಯವರ ನಿರ್ಧಾರಕ್ಕೆ ಬಿಟ್ಟ ವಿಚಾರ. ಅನಗತ್ಯವಾಗಿ ಹೇಳಿಕೆ ನೀಡಿ ಮಕ್ಕಳಲ್ಲಿ ಕೋಮುಭಾವನೆ ಕೆರಳಿಸಬಾರದು. ಜಾತಿ ಧರ್ಮದ ಸಂಘರ್ಷ ಉಂಟು ಮಾಡಬಾರದು. ಆಯಾ ಶಾಲೆಗಳ ನಿರ್ಧಾರದಂತೆ ಬಟ್ಟೆ ಧರಿಸುತ್ತಾರೆ. ಇದು ಆಯಾ ಶಾಲಾ ಸಮಿತಿಗೆ ಬಿಟ್ಟ ವಿಚಾರ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next