Advertisement

Mr. Corrupt; ಸಿದ್ದರಾಮಯ್ಯ ಮಿಸ್ಟರ್‌ ಕ್ಲೀನ್‌ ಅಲ್ಲ: ಸಿ.ಟಿ. ರವಿ

12:42 AM Oct 19, 2024 | Team Udayavani |

ಬೆಳ್ತಂಗಡಿ: ಮೂಡ ಹಗರಣದ ಮೂಲಕ ರಾಜ್ಯದಲ್ಲಿ ಸಿದ್ದರಾಮಯ್ಯ ಮಿಸ್ಟರ್‌ ಕ್ಲೀನ್‌ ಅಲ್ಲ, ಮಿಸ್ಟರ್‌ ಕರಪ್ಟ್ ಎಂಬುದು ದಾಖಲೆ ಸಮೇತ ಬಹಿರಂಗವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

Advertisement

ಉಜಿರೆಯಲ್ಲಿ ಅ.18ರಂದು ನಡೆದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಭ್ರಷ್ಟಾಚಾರ ಮತ್ತು ಮತಾಂಧ‌ನ್ನು ಓಲೈಸುವ ಸರಕಾರವಾಗಿದೆ. ಮುಡಾ ಹಗರಣದಲ್ಲಿ ಕಾನೂನು ಕುಣಿಕೆ ಬಿಗಿಯಾಗುತ್ತಿದೆ ಎಂದು ಅರಿತು ಅಲ್ಲಿಂದ ಪಾರಾಗಲು ಯೋಚನೆ ಮಾಡಿ ಸಿದ್ದರಾಮಯ್ಯ ತಮ್ಮ ಪತ್ನಿ ಹೆಸರಲ್ಲಿದ್ದ ಸೈಟನ್ನು ಹಿಂದಿರುಗಿಸಿದ್ದಾರೆ. ಸರಕಾರ ಎಲ್ಲ ರಂಗದಲ್ಲೂ ವಿಫ‌ಲವಾಗುತ್ತಿದ್ದು, ಈಗ ಬಿಪಿಎಲ್‌ ಕಾರ್ಡ್‌ ರದ್ದು ಮಾಡಲು ಹೊರಟಿದೆ ಎಂದರು.

ನಮ್ಮ ಅಭ್ಯರ್ಥಿ ಗೆಲುವು ನಿಶ್ಚಿತ
ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಕಿಶೋರ್‌ ಕುಮಾರ್‌ 2 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುವ ವಿಶ್ವಾಸವಿದೆ. ಎರಡು ಜಿಲ್ಲೆಯಲ್ಲಿ ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹೆಚ್ಚಿನ ಗ್ರಾ.ಪಂ. ಸದಸ್ಯರನ್ನು ಹೊಂದಿಲ್ಲ. ವಾಸ್ತವವಾಗಿ ಅವಿರೋಧ ಆಯ್ಕೆಗೆ ಅವಕಾಶ ಕೊಡಬೇಕಿತ್ತು ಎಂದರು.

ಸರಕಾರದ ವಿರುದ್ಧ ಹುಬ್ಬಳಿ ಚಲೋ ಹೋರಾಟ
ರಾಜ್ಯ ಸರಕಾರ ಮತಾಂಧರನ್ನು ಮತ್ತು ಪಾತಕಿಗಳನ್ನು ಬೆಂಬಲಿಸುವ ಸರಕಾರವಾಗಿದೆ. 8 ವರ್ಷಗಳ ಹಿಂದೆ ಪಿಎಫ್‌ಐ ಮತ್ತು ಎಸ್‌ಡಿಪಿಐ ಮೇಲಿನ 2000 ಹೆಚ್ಚು ಮೊಕದ್ದಮೆಗಳನ್ನ ಹಿಂಪಡೆದ ಪರಿಣಾಮ ರಾಜ್ಯದಲ್ಲಿ 21 ಹಿಂದೂ ಕಾರ್ಯಕರ್ತರ ಹತ್ಯೆಗೆ ಕಾರಣವಾಯಿತು. ಈಗ ಹುಬ್ಬಳ್ಳಿ ಪೊಲೀಸ್‌ ಠಾಣೆ ದಾಳಿ ಪ್ರಕರಣವನ್ನೂ ಹಿಂಪಡೆಯುವ ಕೆಟ್ಟ ಕೆಲಸವನ್ನು ಈ ಸರಕಾರ ಮಾಡಲು ಹೊರಟಿದೆ. ಇದರ ವಿರುದ್ಧ ಚುನಾವಣೆ ಮುಗಿದ ಕೂಡಲೇ ಹುಬ್ಬಳಿ ಚಲೋ ನಡೆಸಲಿದ್ದೇವೆ, ಜತೆಗೆ ನ್ಯಾಯಾಲಯದಲ್ಲೂ ಪ್ರಶ್ನೆ ಮಾಡಲಿದ್ದೇವೆ ಎಂದು ಹೇಳಿದರು.
ಚನ್ನಪಟ್ಟಣ ಅಭ್ಯರ್ಥಿ ವಿಚಾರ ಪ್ರಶ್ನೆಗೆ ಉತ್ತರಿಸಿದ ಅವರು ನಮ್ಮ ಪಕ್ಷದಿಂದ ಸಿ.ಪಿ.ಯೋಗೇಶ್ವರ್‌ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಶಿಗ್ಗಾವಿಯಲ್ಲಿ 16ಕ್ಕೂ ಹೆಚ್ಚು ಹಾಗೂ ಸಂಡೂರಿನಲ್ಲಿ ಐವರು ಆಕಾಂಕ್ಷಿಗಳಿದ್ದಾರೆ. ಕೇಂದ್ರ ಸಚಿವರು, ಜೆಡಿಎಸ್‌ ವರಿಷ್ಠ ನಾಯಕರಾದ ಎಚ್‌.ಡಿ.ಕುಮಾರ ಸ್ವಾಮಿ, ದೇವೇಗೌಡರೊಂದಿಗೆ ಚರ್ಚಿಸಿ ಕೇಂದ್ರದ ನಾಯಕರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.

ಸಂಸದ ಬ್ರಿಜೇಶ್‌ ಚೌಟ, ಬಿಜೆಪಿ ಅಭ್ಯರ್ಥಿ ಕಿಶೋರ್‌ ಕುಮಾರ್‌, ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಶಾಸಕ ಹರೀಶ್‌ ಪೂಂಜ ಸಹಿತ ಜಿಲ್ಲೆ, ತಾಲೂಕಿನ ಸ್ಥಳೀಯ ಪ್ರಮುಖ ನಾಯಕರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next