Advertisement

ಡಿಕೆಸು ಚನ್ನಪಟ್ಟಣ ಕಾಂಗ್ರೆಸ್‌ ಅಭ್ಯರ್ಥಿ!

11:04 AM Feb 12, 2023 | Team Udayavani |

ಚನ್ನಪಟ್ಟಣ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರವು ಒಕ್ಕಲಿಗರ ಬಾಹುಳ್ಯವುಳ್ಳ ಕ್ಷೇತ್ರವಾಗಿದ್ದು, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಬಲವು ಹೆಚ್ಚಿರುವ ಕ್ಷೇತ್ರ. ಅವರೇ ಶಾಸಕರಾಗಿರುವ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್‌ ಕೂಡ ತಾವೇನು ಕಮ್ಮಿ ಇಲ್ಲ ಎಂಬ ಸಂದೇಶ ನೀಡಲು ಸ್ವಾಭಿಮಾನ ಸಂಕಲ್ಪ ನಡಿಗೆ ಹೆಸರಲ್ಲಿ ಊರೂರು, ಮನೆ, ಮನೆ ಸುತ್ತುತ್ತಿದ್ದಾರೆ. ಇದರ ನಡುವೆ ಇದೀಗ ದಿಢೀರ್‌ ಅಂತ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಖಾಸಾ ಸಹೋದರ, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್‌ ಅವರೇ ಕಾಂಗ್ರೆಸ್‌ ಹುರಿಯಾಳಾಗಿ ಸ್ವತಃ ಕಣಕ್ಕೆ ಧುಮುಕಲಿದ್ದಾರೆ ಎಂಬ ಮಾತು ಚನ್ನಪಟ್ಟಣ ತಾಲೂಕಾದ್ಯಂತ ಕಾಂಗ್ರೆಸ್‌ ವಲಯದಲ್ಲೇ ಕೇಳಿಬರುತ್ತಿದೆ.

Advertisement

ಕುಮಾರಸ್ವಾಮಿಗೂ ಮುನ್ನ ಸಿ.ಪಿ.ಯೋಗೇಶ್ವರ್‌ ಚನ್ನಪಟ್ಟಣದ ಶಾಸಕರಾಗಿದ್ದರು. ಆದರೆ, ಕಾಂಗ್ರೆಸ್‌ ನಿಂದ ದೂರವೇ ಉಳಿದಿರುವ ಈ ಕ್ಷೇತ್ರದಲ್ಲಿ ತನ್ನ ಶಕ್ತಿ ವೃದ್ಧಿಸಿಕೊಳ್ಳಲು ಹೊಸಬರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ಪಕ್ಷದ ನಾಯಕರು ಚಿಂತನೆ ನಡೆಸಿದ್ದರು. ಚುನಾವಣೆಗೆ ಒಂದು ವರ್ಷ ಇರುವಾಗಲೇ, ಕೈ ಪಡೆ ಪರೋಕ್ಷವಾಗಿ ಉದ್ಯಮಿ ಪ್ರಸನ್ನ ಗೌಡ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡುವ ಮೂಲಕ ಚುನಾವಣೆ ತಯಾರಿ ನಡೆಸಿತ್ತು. ಆದರೆ, ಕಳೆದ ಆರು ತಿಂಗಳಲ್ಲಿ ಚನ್ನಪಟ್ಟಣ ಕಾಂಗ್ರೆಸ್‌ ಘಟಕದಲ್ಲಿ ಹಲವಾರು ಪರ-ವಿರೋಧ ಚರ್ಚೆಗಳ ಜೊತೆಗೆ, ಒಟ್ಟು ಎಂಟು ಮಂದಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಿರುವುದು ಕೆಪಿಸಿಸಿ ಅಧಿನಾಯಕ ಡಿ.ಕೆ.ಶಿವಕುಮಾರ್‌ ಅವರಿಗೆ ತವರು ಜಿಲ್ಲೆಯಲ್ಲೇ ಕಾಂಗ್ರೆಸ್‌ ಮೇಲೆ ಹಿಡಿತವಿಲ್ಲ ಎಂಬ ಮಾತುಗಳು ಅಲ್ಲಲ್ಲಿ ಕೇಳಿಬಂದಿದ್ದವು.

ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಹಿತೈಷಿಗಳು ಹಾಗೂ ಈ ಹಿಂದೆ ಸಾತನೂರು ವಿಧಾನಸಭಾ ಕ್ಷೇತ್ರ ಇದ್ದಾಗ ಚನ್ನಪಟ್ಟಣ ತಾಲೂಕಿನ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಡಿಕೆಎಸ್‌ ಚಾರಿಟಬಲ್‌ ಟ್ರಸ್ಟ್‌ ಪದಾಧಿಕಾರಿಗಳೊಡನೆ ಇರುವ ಅನುಬಂಧ ಹಾಗೂ ಒಡನಾಟ ಸ್ವತಃ ಡಿ.ಕೆ.ಸುರೇಶ್‌ ಅವರೇ ಹೈಕಮಾಂಡ್‌ ಒಪ್ಪಿಗೆ ನೀಡಿದ್ದಲ್ಲಿ ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿಯಾಗಲು ಸಿದ್ದ ಎಂಬ ಮಾತನ್ನು ಆಪ್ತವಲಯದಲ್ಲಿ ಹೇಳಿಕೊಂಡಿರುವ ಬಗ್ಗೆ ಇದೀಗ ಎಲ್ಲೆಡೆ ಚರ್ಚೆ ನಡೆಯುತ್ತಿದೆ.

ಸಿದ್ದು ತಂತ್ರ- ಹಿತೈಷಿಗಳ ಮಂತ್ರ!: ಮಾಜಿ ಮುಖ್ಯಮಂತ್ರಿ, ಹಾಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಬದ್ಧ ರಾಜಕೀಯ ವೈರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಸ್ವಕ್ಷೇತ್ರದಲ್ಲಿ ಕಟ್ಟಿಹಾಕಬೇಕು ಎನ್ನುವ ದೂರಾಲೋಚನೆ ಇರುವುದು ಒಂದೆಡೆಯಾದರೆ, ದಶಕಗಳಿಂದ ಚನ್ನಪಟ್ಟಣದಲ್ಲಿ ಸತತ ಹಿನ್ನಡೆ ಕಾಣುತ್ತಿರುವ ಕಾಂಗ್ರೆಸ್‌ ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ಚೈತನ್ಯ ತುಂಬಬೇಕು ಎನ್ನುವ ಕೂಗು ಕೂಡ ಇದರ ಹಿಂದೆ ಇದೆ ಎನ್ನುವುದನ್ನು ಸ್ವತಃ ಕಾಂಗ್ರೆಸ್‌ ಕಾರ್ಯಕರ್ತರೇ ಒಪ್ಪಿಕೊಳ್ಳುತ್ತಿದ್ದಾರೆ. ಮತ್ತೂಂದೆಡೆ ಸಿ.ಪಿ.ಯೋಗೇಶ್ವರ್‌ ಸಹ ಕ್ಷೇತ್ರದಲ್ಲಿ ಓಡಾಡುವ ಮೂಲಕ ಮತದಾರರ ಓಲೈಕೆಗೆ ಕಸರತ್ತು ಆರಂಭಿಸಿದ್ದಾರೆ. ಎಚ್‌ಡಿಕೆ ನಾನು ಯಾವುದೇ ಕಾರಣಕ್ಕೂ ಸೋಲುವುದಿಲ್ಲ, ಕ್ಷೇತ್ರದ ಜನರೇ ನನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ.

ಪ್ರಸನ್ನಗೌಡ ಗತಿ ಏನು?: ಚನ್ನಪಟ್ಟಣದಲ್ಲಿ ಕಾಂಗ್ರೆಸ್‌ ನಿಂದ ಕಣಕ್ಕಿಳಿಯಲು ಸಕಲ ಸಿದ್ಧತೆ ನಡೆಸಿದ್ದ ಉದ್ಯಮಿ ಪ್ರಸನ್ನ ಪಿ.ಗೌಡ ಅವರಿಗೆ ಕಾಂಗ್ರೆಸ್‌ ಸರ್ಕಾರ ಬಂದಲ್ಲಿ ಅವರಿಗೊಂದು ಆಯಕಟ್ಟಿನ ಹುದ್ದೆ ನೀಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದ್ದು, ಡಿ.ಕೆ. ಸುರೇಶ್‌ ಅವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಲ್ಲಿ ಅವರ ಗೆಲುವಿಗಾಗಿ ಕಾಯಾ ವಾಚ ಮನಸಾ ಬದ್ಧತೆಯಿಂದ ಕೆಲಸ ಮಾಡಬೇಕು ಎಂಬ ಮೌಖೀಕ ಸೂಚನೆ ನೀಡಲಾಗಿದೆ ಎಂಬ ಊಹಾ ಪೋಹ ಬೊಂಬೆನಗರಿಯಲ್ಲಿ ಹರಿದಾಡುತ್ತಿದೆ.

Advertisement

ಡಿ.ಕೆ.ಸುರೇಶ್‌ ಏಕೆ?: ಕಾಂಗ್ರೆಸ್‌ನಿಂದ ಚನ್ನಪಟ್ಟಣ ದಲ್ಲಿ ಸ್ಪರ್ಧಿಸಲು ಸಮರ್ಥ ಅಭ್ಯರ್ಥಿ ಇಲ್ಲ. 2018ರಲ್ಲಿ ಮಾಗಡಿಯಿಂದ ಎಚ್‌. ಎಂ. ರೇವಣ್ಣ ಅವರನ್ನು ಚನ್ನಪಟ್ಟಣಕ್ಕೆ ಕರೆಸಲಾಗಿತ್ತು. ಇಲ್ಲಿ ಎಚ್‌ ಡಿ. ಕುಮಾರಸ್ವಾಮಿ ಹಾಗೂ ಸಿ. ಪಿ. ಯೋಗೇಶ್ವರ್‌ರನ್ನು ಮಣಿಸಲು ಹಳೆ ಮುಖಗಳು ಮನಸ್ಸು ಮಾಡುವುದೇ ಸಂದೇಹ. ಗೆಲ್ಲುವ ಕ್ಷೇತ್ರಕ್ಕಾಗಿ ಕೈ ನಾಯಕರು ಹುಡುಕಾಟ ನಡೆಸುವುದು ಸರ್ವೆ ಸಾಮಾನ್ಯ. ಹೀಗಾಗಿ, ಡಿ.ಕೆ.ಸುರೇಶ್‌ ಅವರಿಗೆ ಅವಕಾಶ ನೀಡಿ ಕ್ಷೇತ್ರದಲ್ಲಿ ವರ್ಚಸ್ಸು ಹೆಚ್ಚಿಸಿಕೊಳ್ಳಲು ಹೈಕಮಾಂಡ್‌ ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಚನ್ನಪಟ್ಟಣ ಕ್ಷೇತ್ರ ಒಕ್ಕಲಿಗರ ಭದ್ರಕೋಟೆ. ಇದರೊಂದಿಗೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ಬಲವು ಹೆಚ್ಚಿರುವ ಕ್ಷೇತ್ರ. ಅವರೇ ಶಾಸಕರಾಗಿ ರುವ ಕ್ಷೇತ್ರದಲ್ಲಿ ಬಿಜೆಪಿಯಿಂದ ಸಿ.ಪಿ. ಯೋಗೇಶ್ವರ್‌ ಸಹ ಪೈಪೋಟಿ ನೀಡುತ್ತಿದ್ದಾರೆ. ಕುಮಾರಸ್ವಾಮಿಗೂ ಮುನ್ನ ಸಿಪಿವೈ ಶಾಸಕರಾಗಿದ್ದರು. ಆದರೆ, ಕಾಂಗ್ರೆಸ್‌ ನಿಂದ ದೂರವೇ ಉಳಿದಿರುವ ಈ ಕ್ಷೇತ್ರದಲ್ಲಿ ತನ್ನ ಶಕ್ತಿ ವೃದ್ಧಿಸಿಕೊಳ್ಳಲು ಡಿ.ಕೆ.ಸುರೇಶ್‌ ಸ್ಪರ್ಧೆ ಅನಿವಾರ್ಯ ಎಂಬ ಮಾತುಗಳು ಚರ್ಚೆಯಾಗುತ್ತಿವೆ.

ದಳಪತಿಗೆ ದಿಗಿಲು ಮೂಡಿಸುವ ಸುರೇಶ್‌ ಸ್ಪರ್ಧೆ: ಚನ್ನಪಟ್ಟಣ ಕ್ಷೇತ್ರದ ಅಖಾಡ ಬಿರುಸುಗೊಳ್ಳುತ್ತಿದೆ. ದಳಪತಿಯ ಭದ್ರ ಕೋಟೆ ಭೇದಿಸಲು ಕೈ ನಾಯಕರು ತಯಾರಿ ನಡೆಸಿದ್ದು, ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಡಿ.ಕೆ.ಸುರೇಶ್‌ ಅವರೇ ಸೂಕ್ತ ಎಂಬ ಅಭಿಪ್ರಾಯ ಕಾರ್ಯಕರ್ತರ ವಲಯದಲ್ಲೂ ಕೇಳಿ ಬರುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯ ಕಾಂಗ್ರೆಸ್‌ ನಾಯಕರು ಹಾಗೂ ಹೈಕಮಾಂಡ್‌ ಸುರೇಶ್‌ ಅವರ ಸ್ಪರ್ಧೆಗೆ ಹಸಿರು ನಿಶಾನೆ ತೋರಲಿದೆ ಎಂಬ ವಿಶ್ವಾಸವನ್ನು ಕಾಂಗ್ರೆಸ್‌ ಕಾರ್ಯಕರ್ತರೇ ವ್ಯಕ್ತಪಡಿಸುತ್ತಿದ್ದಾರೆ.

ಕುತೂಹಲ ಮೂಡಿಸಿದ್ದ ಸಂಸದ ಸುರೇಶ್‌ ಎಂಎಲ್‌ಸಿ ಸಿ.ಪಿ. ಯೋಗೇಶ್ವರ್‌ ಮಾತುಕತೆ : ತಿಂಗಳ ಹಿಂದೆ ರಾಮನಗರದಲ್ಲಿ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಕೇಂದ್ರ ಸಚಿವರನ್ನು ಬರಮಾಡಿಕೊಳ್ಳಲು ಬಂದಿದ್ದ ಸಂಸದ ಡಿ.ಕೆ.ಸುರೇಶ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ನಡುವಿನ ಆಪ್ತ ಮಾತುಕತೆ ಕುತೂಹಲ ಮೂಡಿಸಿತ್ತು. ಇಬ್ಬರೂ ಪಕ್ಕದಲ್ಲೇ ನಿಂತು ನಗುತ್ತಲೇ ಹರಟೆ ಹೊಡೆದರು. “ಕಳೆದ ಬಾರಿ ಬ್ರದರ್‌? ಸಿಸ್ಟರ್‌ ಎಂದು ಹೋಗಿದ್ದೀರಿ? ಏನಾಯಿತು ದೋಸ್ತಿ?’ ಎಂದು ಸಿಪಿವೈ ನಗುತ್ತಲೇ ಕಾಲೆಳೆದರು. ಈ ಸಂದರ್ಭ ಮಾತನಾಡಿದ ಇಬ್ಬರೂ “ನಾವಿಬ್ಬರೂ ಮೂವತ್ತು ವರ್ಷದ ಸ್ನೇಹಿತರು. ರಾಜಕಾರಣ ಬೇರೆ. ಇಂದಿನದ್ದು ಬರೀ ವಿಶ್ವಾಸದ ಮಾತುಕತೆ ಅಷ್ಟೇ’ ಎಂದು ಸಮಜಾಯಿಷಿಯನ್ನೂ ನೀಡಿದರು. ಚನ್ನಪಟ್ಟಣದಲ್ಲಿ ಈ ಬಾರಿ ಬಿಜೆಪಿಯಿಂದ ಯೋಗೇಶ್ವರ್‌ ಹಾಗೂ ಜೆಡಿಎಸ್‌ನಿಂದ ಎಚ್‌.ಡಿ. ಕುಮಾರಸ್ವಾಮಿ ಸ್ಪರ್ಧೆ ಖಚಿತವಾಗಿದೆ. ಕಾಂಗ್ರೆಸ್‌ ಮಾತ್ರ ಇನ್ನೂ ಅಭ್ಯರ್ಥಿ ಹಾಕಿಲ್ಲ. ಈ ನಡುವೆಯೇ ಈ ಇಬ್ಬರ ಸಾಮೀಪ್ಯ ಹಲವು ಕುತೂಹಲಗಳಿಗೆ ಕಾರಣವಾಗಿದೆ.

ಚುನಾವಣೆಯಲ್ಲಿ ಡಿಕೆಸು- ಶರತ್‌ಚಂದ್ರ ಮುಖಾಮುಖಿ! : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಸಂಸದ ಡಿ.ಕೆ. ಸುರೇಶ್‌ ಅವರ ಖಾಸ ಭಾವ ಶರತ್‌ಚಂದ್ರ ಅವರು ಈಗಾಗಲೇ ಕಾಂಗ್ರೆಸ್‌ ತೊರೆದು ಎಎಪಿ ಪಕ್ಷವನ್ನು ಸೇರಿದ್ದು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಆಪ್‌ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಬಹುತೇಕ ಖಚಿತ ಎಂಬ ಮಾತು ಕೂಡ ಚಾಲ್ತಿಯಲ್ಲಿ ಇದೆ. ಈ ನಿಟ್ಟಿನಲ್ಲಿ ಎಚ್ಡಿಕೆ- ಸಿಪಿವೈ ನಡುವಿನ ಜಿದ್ದಾಜಿದ್ದಿನ ಹಣಾಹಣಿ ನಡುವೆ ಸಂಬಂಧಿಗಳಾದ ಡಿ.ಕೆ. ಸುರೇಶ್‌- ಶರತ್‌ ಚಂದ್ರ ಅವರ ಮುಖಾಮುಖೀಯೂ ರಾಜ್ಯ ಮಾತ್ರವಲ್ಲ, ದೇಶದಲ್ಲೇ ಹೈವೋಲ್ಟೆàಜ್‌ ಕ್ಷೇತ್ರವಾಗಿ ಚನ್ನಪಟ್ಟಣ ಗಮನ ಸೆಳೆಯಲಿದೆ ಎಂಬ ವಿಶ್ಲೇಷಣೆ ಕೂಡ ನಡೆದಿದೆ.

ಚಂದ್ರಸಾಗರ್‌ ಕಾಂಗ್ರೆಸ್‌ ಟಿಕೆಟ್‌ ಪ್ರಬಲ ಆಕಾಂಕ್ಷಿ! : ವಿಶೇಷವೆಂದರೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ದಲ್ಲಿ ಕಾಂಗ್ರೆಸ್‌ ಉಮೇದುವಾರರಾಗಲು ಹಲ ವಾರು ಮುಖಂಡರು, ಯುವ ಮುಖಂಡರು ತುದಿಗಾಲಲ್ಲಿ ನಿಂತಿದ್ದಾರೆ. ಇದೀಗ ಕಾಂಗ್ರೆಸ್‌ ಯುವ ಮುಖಂಡ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಚಂದ್ರು ಅವರ ಪುತ್ರ ಸಿ.ವಿ.ಚಂದ್ರಸಾಗರ್‌ ಹೈಕಮಾಂಡ್‌ ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿ ದ್ದಲ್ಲಿ, ಎಲ್ಲಾ ಹಿರಿಯ, ಕಿರಿಯ ಯುವ ಕಾಂಗ್ರೆಸ್‌ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರ ಅಖಂಡ ಬೆಂಬಲದೊಂದಿಗೆ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ತೋರುತ್ತೇನೆ ಎಂಬ ಸಂದೇಶವನ್ನು ರವಾನಿಸಿದ್ದಾರೆ ಎಂಬ ಮಾತು ಕೂಡ ಬೊಂಬೆನ ಗರಿಯಲ್ಲಿ ಕೇಳಿಬರುತ್ತಿದೆ. ಅಂತಿಮವಾಗಿ ಕಾಂಗ್ರೆಸ್‌ ಪಕ್ಷ ಯಾರ ಸ್ಪರ್ಧೆಗೆ ಹಸಿರು ನಿಶಾನೆ ತೋರಲಿದೆ ಎಂದು ಕಾದು ನೋಡಬೇಕಾಗಿದೆ.

 ಎಂ.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next