Advertisement

ಮಾತೃ ಭಾಷೆ ಕೊಡುವಷ್ಟು ಖುಷಿ ಅನ್ಯ ಭಾಷೆ ಕೊಡದು : ಡಾ|ನಾ.ಮೊಗಸಾಲೆ

06:45 AM Apr 01, 2018 | |

ಮುಳ್ಳೇರಿಯ: ಭಾಷೆ ಎನ್ನುವುದು ಮನುಷ್ಯನ ಜೊತೆ ಹುಟ್ಟಿ ಅದು ಅವರ ಭಾವಾಭಿವ್ಯಕ್ತಿಗೆ ಮತ್ತು ಅವರ ಜ್ಞಾನವೃದ್ಧಿಗೆ ಒಂದು ಮಾಧ್ಯಮವಾಗಿದೆ. ಮಾತೃ ಭಾಷೆಯ ಬಗ್ಗೆ ಕಾಳಜಿ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದ ಕಳವಳಕಾರಿ. 

Advertisement

ಮಾತೃ ಭಾಷೆಯ ಮೂಲಕ ನಾವು ಪಡೆಯುವ ನಮ್ಮ ಅನುಭವ, ನಮ್ಮ “ಅನುಭಾವ’ವಾಗಿಯೇ ಇರುವುದರಿಂದ ಅದು ನಮಗೆ ಕೊಡುವಷ್ಟು ಖುಷಿಯನ್ನು ನಮ್ಮದಲ್ಲದ ಇನ್ನೊಂದು ಭಾಷೆಯಿಂದ ಪಡೆಯಲು ಸಾಧ್ಯವಾಗದು ಎಂದು ಖ್ಯಾತ ಸಾಹಿತಿ, ವೈದ್ಯ, ಸಂಘಟಕ, ಕನ್ನಡಪರ ಚಿಂತಕ ಡಾ|ನಾ.ಮೊಗಸಾಲೆ ಅವರು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಮುಳ್ಳೇರಿಯಾದ ವಿದ್ಯಾಶ್ರೀ ಶಿಕ್ಷಣ ಕೇಂದ್ರ(ಗಣೇಶ ಮಂದಿರ)ದಲ್ಲಿ ಆಯೋಜಿಸಿದ ಕಾಸರಗೋಡು ಜಿಲ್ಲಾ 11 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾವು ಪಡೆಯುವ ಎಲ್ಲಾ ಜ್ಞಾನವೂ ಅನುಭವವಾಗಬೇಕಾದರೆ ಯಾರು ಯಾವ ಭಾಷೆಯನ್ನು ಆಡುತ್ತಾರೋ ಆ ಭಾಷೆಯ ಮೂಲಕವೇ ಅದು ಅವರಿಗೆ ಬರಬೇಕು. ಇದರರ್ಥ ಬೇರೆ ಬೇರೆ ಭಾಷೆಗಳಿಂದ ಜ್ಞಾನವೃದ್ಧಿಯಾಗುವುದಿಲ್ಲ ಎಂದು ಅರ್ಥವಲ್ಲ. ಖಂಡಿತ ಅದು ಸಾಧ್ಯವಾಗುತ್ತದಾದರೂ, ಇಂಗ್ಲೀಷಿನಲ್ಲಿ ಯೋಚಿಸಿ ಕನ್ನಡದಲ್ಲಿ ಬರೆದ ಹಾಗೆ ಅಥವಾ ಕನ್ನಡದಲ್ಲಿ ಯೋಚಿಸಿ ಇಂಗ್ಲೀಷ್‌ನಲ್ಲಿ ಬರೆದ ಹಾಗೆ ಅದು ಆಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಹಿತಿ ಎಂದರೆ ಹಿಂದೆಲ್ಲ ದೈವಾಂಶ ಸಂಭೂತರೇ ಎಂಬ ಕಲ್ಪನೆಯಿತ್ತು. ಆದರೆ ಬರಬರುತ್ತಾ ಇಂದು ಸಾಹಿತಿಗಳಲ್ಲಿ ಸಂಕುಚಿತ ಭಾವನೆ ಬೆಳೆದುಕೊಂಡಿದೆ. ಇತ್ತೀಚೆಗೆ ರಾಜಕಾರಣಿಗಳು ಸಾಹಿತಿಗಳನ್ನು ಬಳಸಿಕೊಂಡು ದುರುಪಯೋಗಪಡಿಸುತ್ತಿದ್ದಾರೆ ಎಂದ ಅವರು ಸಮ್ಮಾನಗಳೆಲ್ಲ ನಾಚಿಕೆ ಪಡುವ ಸ್ಥಿತಿಗೆ ತಲುಪಿದೆ. ಶಬ್ದಗಳನ್ನು ಮರೆತು ದೊಡ್ಡ ಅನ್ಯಾಯ ಮಾಡುತ್ತಿದ್ದೇವೆ. ಹೀಗಿರುವಂತೆ ಭಾಷೆ ಉಳಿಸಿ ಎನ್ನುತ್ತಿದ್ದೇವೆ. ಎಂತಹ ವಿಪರ್ಯಾಸ ಇದು. ವೇದ, ಉಪನಿಷತ್ತು, ಗೀತೆ ನಮ್ಮದು ಎಂದು ಹೇಳಿಕೊಳ್ಳ ಬೇಕಾದರೆ ಅದರ ಅರಿವು ನಮಗಿರಬೇಕು. ಆದರೆ ಅಂತಹ ಅರಿವು ನಮ್ಮಲ್ಲಿಲ್ಲ ಎಂದರು.

Advertisement

ಸಮ್ಮೇಳನಗಳು ಹೇಗಿರಬೇಕು? ಮತ್ತು ಹೇಗಿರಬಾರದು? ಎನ್ನುವುದು. ಈ ಪ್ರಶ್ನೆ ತಾಲೂಕು ಸಮ್ಮೇಳನಗಳಿಂದ ತೊಡಗಿ ರಾಜ್ಯ ಸಮ್ಮೇಳನಗಳು ನಡೆಯುವ ಸಂದರ್ಭಗಳಲ್ಲೂ ನಮ್ಮನ್ನು ಕಾಡುತ್ತಲೇ ಇರುತ್ತದೆ. ಇಂಥ ಸಮ್ಮೇಳನಗಳು ಹೇಗಿರಬೇಕು ಅಥವಾ ಹೇಗಿರಬಾರದು ಎಂಬ ಅಭಿಪ್ರಾಯಗಳು ಈಚೆಗಿನ ದಿನಗಳಲ್ಲಿ ಅಸಹಿಷ್ಣುತೆ ಎಂಬ ಠಂಕಿತ ಶಬ್ದವು ಸಾಹಿತ್ಯ ಕ್ಷೇತ್ರದ ಒಂದು ಭಾಗವೇ ಆಗಿ ವಿಜೃಂಭಿಸುತ್ತಿರುವುದರಿಂದ ಸಹಿಷ್ಣುತೆ ಅಸಹಿಷ್ಣುತೆಗಳ ನಡುವೆ ಒಂದು ತೆಳುವಾದ ರೇಖೆ ಮಾತ್ರ ಇರುವುದು ಮತ್ತು ಅದನ್ನು ಎರಡೂ ಕಡೆಯ ಮಂದಿ ಆಗಾಗ ಉಲ್ಲಂಘಿಸುತ್ತಲೇ ಇರುವುದರಿಂದ ಇವು ನಮ್ಮನ್ನು ಹೆಚ್ಚು ಗೊಂದಲದಲ್ಲಿ ಕೆಡವುತ್ತವೆ. ಈ ಗೊಂದಲದ ನಡುವೆಯೂ ಸಾಹಿತ್ಯ ಸಮ್ಮೇಳನಗಳು ಜಾತ್ರೆಯ ಸ್ವರೂಪದಲ್ಲೇ ನಡೆಯಬೇಕು ಎಂದರೆ ಅದು ಪೂರ್ತಿ ತಪ್ಪಲ್ಲ. ನಡೆಯಬಾರದು ಎಂದರೂ ಪೂರ್ತಿ ಅವಾಸ್ತವವಲ್ಲ.

ಹನ್ನೆರಡನೇ ಶತಮಾನದಲ್ಲಿ ಚಳುವಳಿಯ ಸ್ವರೂಪದಲ್ಲಿ ರೂಪುಗೊಂಡ ಈ ದೇಸೀಯತೆಯ ಪರಿಕಲ್ಪನೆ ಮುಂದುವರಿಯುತ್ತಾ ಬಂದು, ಕನ್ನಡವೆನ್ನುವುದು ಸಂಸ್ಕೃತದ ಎಲ್ಲಾ ಜ್ಞಾನವೂ ತನ್ನದೇ ಎನ್ನುವಷ್ಟು ಶ್ರೀಮಂತವಾಯಿತು. ಕುಮಾರವ್ಯಾಸ, ಲಕ್ಷಿ$¾àಶನಂಥ ಕವಿಗಳೂ, ಕನಕ, ಪುರಂದರರಂಥ ದಾಸರ ಪಾತ್ರ ಇದರಲ್ಲಿ ಮಹತ್ವದ್ದು. ಇಪ್ಪತ್ತನೆಯ ಶತಮಾನದಲ್ಲಂತೂ ಇಂಗ್ಲೀಷ್‌ ಭಾಷೆಯಿಂದ ಕನ್ನಡವು ಸಾಕಷ್ಟು ಶ್ರೀಮಂತಿಕೆಯನ್ನು ಪಡೆಯಿತಾದರೂ ಆ ಶ್ರೀಮಂತಿಕೆಯು ಈ ಮಣ್ಣಿನ ಸತ್ವದಿಂದ ಕನ್ನಡದ್ದೇ ಎಂಬಂತಾಯಿತು. 

ಇಂದು ಕನ್ನಡದ ಬಹುಮುಖ್ಯವೆನ್ನಿಸಬಹುದಾದ ಕೃತಿಗಳು ಜಗತ್ತಿನ ಯಾವುದೇ ಭಾಷೆಯ ಮಹತ್ವದ ಕೃತಿಗಳಿಗೆ ಸಮಾನವಾಗಿ ನಿಲ್ಲಬಲ್ಲವೆಂಬಂತೆ ಸಂರಚನೆಗೊಂಡಿದೆ. ಆದರೆ ಇಪ್ಪತ್ತೂಂದನೇ ಶತಮಾನದ ಈ ಎರಡನೇ ದಶಕದಲ್ಲಿ ಇರುವ ನಮಗೆ ನಮ್ಮ ಭಾಷೆಯ ಅಗತ್ಯವಿಲ್ಲ ಎಂಬಂಥ ಮನೋಸ್ಥಿತಿ ಬಂದಿದೆ. ಇಂಗ್ಲೀಷ್‌ ಭಾಷೆ ಎನ್ನುವುದು ಅನ್ನ ಕೊಡುವ ಭಾಷೆ ಎನ್ನುವ ಭ್ರಮೆಯೂ ಇದಕ್ಕೆ ಕಾರಣವಾಗಿದೆ. ಪಾಶ್ಚಾತ್ಯ ಜೀವನ ಪದ್ಧತಿಯ ಆಕರ್ಷಣೆ ಮತ್ತು ನಮ್ಮ ಪಠ್ಯಗಳಲ್ಲಿ ಈ ನೆಲದ ಅಂದರೆ ನಮ್ಮ ಸಂಸ್ಕೃತಿಯ ಅರಿವನ್ನು ನಾವು ಎಷ್ಟು ಮೂಡಿಸಬೇಕೋ ಆ ಪ್ರಮಾಣದಲ್ಲಿ ಮೂಡಿಸದಿರುವುದೂ ಇನ್ನೊಂದು ಕಾರಣವಾಗಿದೆ ಎಂದವರುಅಭಿಪ್ರಾ ಯಪಟ್ಟವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುತ್ವದ ಪರಿಕಲ್ಪನೆ ಎನ್ನುವುದೇ ಬಹುಮುಖ್ಯವಾದದ್ದು. ಏಕತೆಯಲ್ಲಿ ಅನೇಕತೆ ಎನ್ನುವುದೇ ನಮ್ಮ ಸಂವಿಧಾನದ ಹೆಗ್ಗಳಿಕೆ. ಹಾಗಾಗಿ ನಾವು ನಮ್ಮ ಆಡು ಭಾಷೆಗಳಿಗೆ ಹೆಚ್ಚು ಒತ್ತು ಕೊಡುತ್ತಲೇ ಹೋಗಬೇಕಾಗಿದೆ. 

ವಿಶ್ವದ ಆರು ಸಾವಿರ ಭಾಷೆಗಳಲ್ಲಿ ತಾಳಿಕೆಯ ದೃಷ್ಟಿಯಿಂದ ಕನ್ನಡಕ್ಕೆ 19 ನೇ ಸ್ಥಾನ ಇದೆ ಎಂದು ಹೇಳಲಾಗಿದೆ. ಸಾವಿರ ವರ್ಷಗಳ ಹಿಂದಿನ ಭಾಷೆಗಳಲ್ಲಿ ಇಂದಿಗೂ ಉಳಿದಿರುವ ಮೊದಲ 12 ಭಾಷೆಗಳಲ್ಲಿ ಕನ್ನಡವೂ ಒಂದು ಎಂಬ ಮಾಹಿತಿಯೂ ಇದೆ. ಇದನ್ನು ಕೇಳಿ ನಾವು ಭುಜ ಕುಣಿಸಿದರೆ ಸಾಲದು. 

ನಮ್ಮ ಸಂವೇದನೆಗಳನ್ನು ನಾವು ಮಕ್ಕಳಲ್ಲಿ ಮತ್ತು ಸಂಪರ್ಕಕ್ಕೆ ಬರುವವರಲ್ಲಿ ಹಂಚಿಕೊಳ್ಳುವಾಗ, ಕನ್ನಡವನ್ನೇ ಮುಂದಿಟ್ಟುಕೊಂಡರೆ ಭಾಷೆ ನಾಶವಾಗುವುದನ್ನು ಒಂದು ಮಿತಿಯಲ್ಲಿ ನಾವು ತಡೆಯಬಹುದು. ಹಾಗೆಯೇ ಹಿಂದಿ, ಇಂಗ್ಲೀಷ್‌ನಂಥ ಭಾಷೆಯಲ್ಲಿನ ಅನಿವಾರ್ಯ ಶಬ್ದಗಳನ್ನು ಅವಶ್ಯವಿದ್ದರೆ ಕನ್ನಡೀಕರಿಸಿಕೊಳ್ಳಬಹುದು. ಇದು ಗೋವಿಂದ ಪೈಗಳು “ಇಸು’ ಪ್ರತ್ಯಯವನ್ನು ಉಪಯೋಗಿಸಿ ಕ್ರಿಯಾಪದವನ್ನು ಸೃಷ್ಟಿಸಿದ ಹಾಗೆ ಆದರೂ ತಪ್ಪಲ್ಲ ಎಂದು ಮೊಗಸಾಲೆ ತಿಳಸಿದರು.

Advertisement

Udayavani is now on Telegram. Click here to join our channel and stay updated with the latest news.

Next