Advertisement

ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ

12:23 PM Mar 31, 2019 | Team Udayavani |

ಬೆಂಗಳೂರು: ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದ ಗೃಹಿಣಿ, ತನ್ನ ಇಬ್ಬರು ಮಕ್ಕಳಿಗೆ ವಿಷವುಣಿಸಿ ತಾನೂ ವಿಷ ಸೇವಿಸಿ ಮೃತಪಟ್ಟ ಘಟನೆ ರಾಮಮೂರ್ತಿನಗರದಲ್ಲಿ ನಡೆದಿದೆ.

Advertisement

ಜಯಂತಿನಗರದ ನಿವಾಸಿ ಮೀನಾ (24) ಆಕೆಯ ಮಗು ಸುಗುಣ (3) ಮೃತಪಟ್ಟಿದ್ದು, ಚರಣ್‌ (7) ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಕುರಿತು ರಾಮಮೂರ್ತಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ಮೀನಾ ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಆದರೆ, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡು ಮೂಲದ, ಗಾರೆ ಕೆಲಸಗಾರ ಕುಮಾರೇಶನ್‌ ಹಾಗೂ ಮೀನಾ ದಂಪತಿ ಮಕ್ಕಳ ಜತೆ ಜಯಂತಿನಗರದಲ್ಲಿ ಹಲವು ವರ್ಷಗಳಿಂದ ವಾಸವಿದ್ದಾರೆ. ಶುಕ್ರವಾರ (ಮಾ.29) ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಹೋಗಿದ್ದ ಕುಮಾರೇಶನ್‌, ಮಧ್ಯಾಹ್ನ 1 ಗಂಟೆ ಸುಮಾರಿಗೆ ಊಟ ಮಾಡಲು ಮನೆಗೆ ಬಂದಿದ್ದಾರೆ.

ಕೆಲ ಹೊತ್ತು ಬಾಗಿಲು ಬಡಿದರೂ ತೆಗೆಯದಿದ್ದಾಗ ಅನುಮಾನಗೊಂಡು ಬಾಗಿಲು ಮುರಿದು ನೋಡಿದಾಗ ಪತ್ನಿ ಹಾಗೂ ಮಕ್ಕಳಿಬ್ಬರ ಬಾಯಲ್ಲಿ ನೊರೆ ಬಂದು, ಪ್ರಜ್ಞಾಹೀನರಾಗಿ ಬಿದ್ದಿದ್ದರು. ಇದನ್ನು ಕಂಡು ಕುಮಾರೇಶನ್‌ ಕೂಗಿಕೊಂಡಿದ್ದಾರೆ.

Advertisement

ಕೂಡಲೇ ಅಕ್ಕಪಕ್ಕದ ಮನೆಗಳವರು ನೆರವಿಗೆ ಬಂದು, ಮೂವರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಮೀನಾ ಹಾಗೂ ಸುಗುಣ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಬಳಿಕ ಚಿಂತಾಜನಕ ಸ್ಥಿತಿಯಲ್ಲಿದ್ದ ಚರಣ್‌ಗೆ ಚಿಕಿತ್ಸೆ ನೀಡಿದ್ದಾರೆ.

ಮೀನಾ ಹಾಗೂ ಸುಗುಣಳ ಮೃತದೇಹಗಳ ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿ ಸಂಬಂಧಿಕರಿಗೆ ಒಪ್ಪಿಸಿದ್ದು, ಅಂತ್ಯಕ್ರಿಯೆಗೆ ತಮಿಳುನಾಡಿಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ವಿವರಿಸಿದರು.

ಮೃತ ಮೀನಾ ಅವರ ಪೋಷಕರು ಯಾರ ಮೇಲೂ ಅನುಮಾನ ವ್ಯಕ್ತಪಡಿಸಿಲ್ಲ. 2011ರಲ್ಲಿ ಕುಮಾರೇಶನ್‌ ಹಾಗೂ ಮೀನಾ ವಿವಾಹವಾಗಿದ್ದು, ದಂಪತಿ ಅನೂನ್ಯವಾಗಿದ್ದರು. ಮೀನಾಳದ್ದು ಅತ್ಯಂತ ಮೌನ ಸ್ವಭಾವ, ಯಾರೊಂದಿಗೂ ಮುಕ್ತವಾಗಿ ಬೆರೆಯುತ್ತಿರಲಿಲ್ಲ.

ಘಟನೆ ನಡೆಯುವ ಹಿಂದಿನ ದಿನ ಕುಮಾರೇಶನ್‌, ಪತ್ನಿ ಹಾಗೂ ಮಕ್ಕಳನ್ನು ಹೊರಗಡೆ ಊಟಕ್ಕೆ ಕರೆದೊಯ್ದಿದ್ದರು ಎಂದು ಮೀನಾಳ ಪೋಷಕರಾದ ಪನ್ನೀರಸೆಲ್ವಂ ಹಾಗೂ ರಾಧಾ ಹೇಳಿಕೆ ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ವಾರ ಹಿಂದಷ್ಟೇ ಇಂಥದ್ದೇ ಘಟನೆ: ಕಳೆದ ಒಂದು ವಾರದ ಹಿಂದಷ್ಟೇ ಚಂದ್ರಲೇಔಟ್‌ ಸಮೀಪದ ಕಲ್ಯಾಣನಗರದಲ್ಲಿ ಗೃಹಿಣಿಯೊಬ್ಬರು ಎರಡೂವರೆ ವರ್ಷದ ಮಗನನ್ನು ನೇಣುಬಿಗಿದು ಕೊಲೆಗೈದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದರು.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಡೆತ್‌ನೋಟ್‌ ಬರೆದಿಟ್ಟಿದ್ದ ಮಂಗಳೂರು ಮೂಲದ ಪ್ರತಿಮಾ ಮಂಗಲೋರರ್‌, ಪುತ್ರ ಸಾತ್ವಿಕ್‌ನನ್ನು ನೇಣುಬಿಗಿದು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next