Advertisement

ಇನ್ನಷ್ಟು ಕಠಿನ ಕ್ರಮ ಅಗತ್ಯವಿದೆ 

01:00 AM Feb 18, 2019 | Team Udayavani |

ಪುಲ್ವಾಮ ದಾಳಿಯ ಬಳಿಕ ಕೆಲವು ಕಠಿಣ ಕ್ರಮಗಳ ಸೂಚನೆ ನೀಡಿದ್ದ ಸರಕಾರ ಅದನ್ನೀಗ ಕಾರ್ಯಗತಗೊಳಿಸುತ್ತಿದೆ. ಕಾಶ್ಮೀರದ ಪ್ರತ್ಯೇಕವಾದಿಗಳಿಗೆ ನೀಡಿದ್ದ ಭದ್ರತೆ ಮತ್ತು ಎಲ್ಲ ಸರಕಾರಿ ಸೌಲಭ್ಯಗಳನ್ನು ಹಿಂದೆಗೆದುಕೊಂಡಿರುವುದು ಇಂಥ ಕ್ರಮಗಳಲ್ಲೊಂದು. ರವಿವಾರ ಜಮ್ಮು-ಕಾಶ್ಮೀರ ಸರಕಾರ ಪ್ರತ್ಯೇಕತಾವಾದಿಗಳಾದ ಮಿರ್ವೈಜ್‌ ಉಮರ್‌ ಫಾರೂಕ್‌, ಅಬ್ದುಲ್‌ ಗನಿ ಭಟ್‌, ಬಿಲಾಲ್‌ ಲೋನ್‌, ಹಾಶೀಂ ಖುರೇಶಿ ಮತ್ತು ಶಬೀರ್‌ ಶಾ ಎಂಬ ಐವರು ಪ್ರತ್ಯೇಕತಾವಾದಿಗಳಿಗೆ ನೀಡಿರುವ ಸಶಸ್ತ್ರ ಭದ್ರತೆ, ಸರಕಾರಿ ಕಾರು ಹಾಗೂ ಇತರ ಸೌಲಭ್ಯಗಳನ್ನು ಹಿಂದೆಗೆದುಕೊಳ್ಳುವ ಆದೇಶ ಹೊರಡಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಸರಕಾರ ಕೈಗೊಂಡಿರುವ ಸಮುಚಿತ ಕ್ರಮವೆಂದೇ ಹೇಳಬಹುದು. 

Advertisement

ಕಾಶ್ಮೀರದ ಸಮಸ್ಯೆ ಇಷ್ಟು ಬಿಗಡಾಯಿಸುವಲ್ಲಿ ಪ್ರತ್ಯೇಕತಾವಾದಿಗಳ ಸಕ್ರಿಯ ಪಾತ್ರವಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಸರಕಾರದ ಎಲ್ಲ ಸೌಲಭ್ಯಗಳನ್ನು ಅನುಭವಿಸುತ್ತಾ ಅವರು ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸುವ ಹೋರಾಟವನ್ನು ನಡೆಸುತ್ತಿದ್ದರು. ಪ್ರತ್ಯೇಕತಾವಾದಿಗಳಿಗೆ ಪಾಕಿಸ್ಥಾನ ಸರಕಾರ ಮತ್ತು ಗುಪ್ತಚರ ಪಡೆ ಐಎಸ್‌ಐ ಜತೆಗೆ ಹಾಗೂ ಜೈಶ್‌-ಇ-ಮೊಹಮ್ಮದ್‌ ಸೇರಿದಂತೆ ಪಾಕ್‌ ಪ್ರಾಯೋಜಿತ ಭಯೋತ್ಪಾದಕ ಪಡೆಗಳ ಜತೆಗೆ ನಂಟಿರುವ ಸಂಗತಿಯೂ ರಹಸ್ಯವಲ್ಲ. ಇತ್ತ ಭಾರತದ ಎಲ್ಲ ಸೌಲಭ್ಯಗಳನ್ನು ಅನುಭವಿಸುತ್ತಲೇ ಈ ಪ್ರತ್ಯೇಕತಾವಾದಿಗಳು ಪಾಕ್‌ ನೀಡುವ ಕಾಣಿಕೆಗಳನ್ನೂ ಸ್ವೀಕರಿಸುತ್ತಿದ್ದರು. ಈ ಪೈಕಿ ಹಲವು ಪ್ರತ್ಯೇಕತಾವಾದಿಗಳಿಗೆ ಐಎಸ್‌ಐ ನಿಯಮಿತವಾಗಿ ಹಣ ಸಂದಾಯ ಮಾಡುತ್ತಿದೆ ಎಂಬ ಗುಮಾನಿಯೂ ಇದೆ. 

ಕಣಿವೆ ರಾಜ್ಯದಲ್ಲಿ ಸಮಸ್ಯೆಯನ್ನು ಜೀವಂತವಾಗಿಡುವುದೇ ಈ ಪ್ರತ್ಯೇಕತಾವಾದಿಗಳ ಮುಖ್ಯ ಕೆಲಸ. ಪ್ರತ್ಯೇಕತಾವಾದಿಗಳ ಪೈಕಿ ಕೆಲವರು ಕಾಶ್ಮೀರ ಪಾಕಿಸ್ಥಾನಕ್ಕೆ ಸೇರಬೇಕೆಂದು ಬಹಿರಂಗವಾಗಿಯೇ ಪ್ರತಿಪಾದಿಸುತ್ತಿ ದ್ದಾರೆ. ಕೆಲವರು ಕಾಶ್ಮೀರ ಸ್ವತಂತ್ರವಾಗಬೇಕೆಂದು ಹೇಳುತ್ತಿದ್ದರೂ ಅವರ ಗೂಢ ಉದ್ದೇಶ ಪಾಕ್‌ ಜತೆಗೆ ಸೇರಿಸುವುದೇ ಆಗಿದೆ. ಪ್ರತ್ಯೇಕತಾವಾದಿಗಳಿಗೆ ಪಾಕಿಸ್ಥಾನಕ್ಕೆ ಹೋಗಿ ಬರುವುದೆಂದರೆ ಪಕ್ಕದ ಮನೆಗೆ ಹೋಗಿ ಬಂದಷ್ಟೇ ಸಲೀಸು. ಒಬ್ಬೊಬ್ಬ ಪ್ರತ್ಯೇಕತಾವಾದಿ ಒಂದೊಂದು ಗುಂಪಿನ ನೇತೃತ್ವ ವಹಿಸಿಕೊಂಡಿದ್ದು, ಈ ಎಲ್ಲ ಗುಂಪುಗಳು ಒಟ್ಟಾಗಿ ಆಲ್‌ ಪಾರ್ಟಿ ಹುರಿಯತ್‌ ಕಾನ್ಫರೆನ್ಸ್‌ ಎಂಬ ಸಂಘಟನೆಯನ್ನು ರಚಿಸಿಕೊಂಡಿವೆ. ಭಾರತ ವಿರೋಧಿ ದಂಗೆಗಳಿಗೆ ಪ್ರಚೋದನೆ ನೀಡುವುದು, ಸ್ಥಳೀಯ ಯುವಕರ ಬ್ರೈನ್‌ವಾಶ್‌ ಮಾಡಿ ಭಾರತ ವಿರೋಧಿ ಭಾವನೆ ತುಂಬಿಸುವುದು ಇತ್ಯಾದಿ ಕುಕೃತ್ಯಗಳನ್ನು ಈ ಪ್ರತ್ಯೇಕತಾವಾದಿ ಸಂಘಟನೆಗಳು ಮಾಡುತ್ತಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಸರಕಾರ ಅಸಹಾಯಕತನ ಪ್ರದರ್ಶಿ ಸುತ್ತಿತ್ತು. ಕೆಲವು ಪ್ರತ್ಯೇಕ ತಾವಾದಿ ನಾಯಕರನ್ನು ಪಾಕ್‌ ರಾಯಭಾರಿಗಳು ಪ್ರಬಲ ವಿರೋಧವನ್ನು ಲೆಕ್ಕಿಸದೆ ಮಾತುಕತೆಗೆ ಆಹ್ವಾನಿಸಿದ್ದೂ ಇದೆ.

ಪಾಕಿಸ್ಥಾನ್‌ ದಿನಾಚರಣೆಯಂಥ ಕಾರ್ಯಕ್ರಮಗಳಿಗೆ ಪ್ರತ್ಯೇಕತಾವಾದಿಗಳಿಗೆ ವಿಶೇಷ ಆಹ್ವಾನ ಇರುತ್ತಿತ್ತು. ಓರ್ವ ಪ್ರತ್ಯೇಕತಾವಾದಿ ಉಗ್ರ ಹಾಫೀಜ್‌ ಸಯೀದ್‌ ಜತೆಗೆ ರ್ಯಾಲಿಯೊಂ ದರಲ್ಲಿ ವೇದಿಕೆ ಹಂಚಿಕೊಂಡಿದ್ದ. ಆಸಿಯಾ ಅಂದ್ರಾಬಿ ಎಂಬ ಮಹಿಳಾ ಪ್ರತ್ಯೇಕತಾವಾದಿ ಬಹಿರಂಗವಾಗಿಯೇ ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದಳು. ಇಷ್ಟೆಲ್ಲ ದೇಶದ್ರೋಹದ ಕೆಲಸ ಮಾಡುತ್ತಿದ್ದರೂ ಹೆಚ್ಚೆಂದರೆ ಅವರಿಗೆ ಗೃಹಬಂಧನ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು. ಗೃಹಬಂಧನದಲ್ಲಿದ್ದರೂ ಅವರ ಚಟುವಟಿಕೆಗಳಿಗೇನೂ ಭಂಗ ಬರುತ್ತಿರಲಿಲ್ಲ. ಅಕ್ರಮ ಹಣ ವರ್ಗಾ ವಣೆಯಂಥ ಕೃತ್ಯಗಳಲ್ಲಿ ತೊಡಗಿರುವ ಪ್ರತ್ಯೇಕತಾವಾದಿಗೂ ಇದ್ದಾರೆ. 

ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಕೆಲ ಸಮಯದ ಹಿಂದೆ ಪ್ರತ್ಯೇಕತಾವಾದಿಗಳದ್ದು ಅನುಕೂಲಾವದವೇ ಹೊರತು ನೈಜ ಉದ್ದೇಶವಲ್ಲ ಎಂದು ವಿಶ್ಲೇಷಿಸಿದ್ದರು. ಕಾಶ್ಮೀರದ ಯುವಕರು ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕೆಂದು ಕರೆಕೊಡುತ್ತಿದ್ದ ಪ್ರತ್ಯೇಕತಾವಾದಿಗಳ ಮಕ್ಕಳು ಮಾತ್ರ ವಿದೇಶಗಳಲ್ಲಿ ಕಲಿಯುತ್ತಿದ್ದಾರೆ. ಹೋರಾಟಗಾರ ಪಕ್ಕದ ಮನೆಯಲ್ಲಿ ಹುಟ್ಟಬೇಕೆಂಬ ಧೋರಣೆ ಅವರದ್ದು. 

Advertisement

ಕಾಶ್ಮೀರವನ್ನು ನಿತ್ಯ ಕುದಿಯುವ ದಾವಾನಲವಾಗಿ ಮಾಡಿರುವ, ಯೋಧರ ನೆತ್ತರು ಹರಿಯಲು ಪರೋಕ್ಷವಾಗಿ ನೆರವಾಗುತ್ತಿರುವ ಪ್ರತ್ಯೇಕತಾವಾದಿಗಳಿಗೇಕೆ ವಿಶೇಷ ಸರಕಾರಿ ಸೌಲಭ್ಯ? ಅವರನ್ನೇಕೆ ಭಾರತ ಕಾಪಾಡಬೇಕು ಎಂಬ ಕೂಗುಗಳು ಆಗಾಗ ಕೇಳಿ ಬರುತ್ತಿದ್ದವು. ಇದೀಗ ಈ ಪ್ರಶ್ನೆಗಳಿಗೆ ಉತ್ತರವೋ ಎಂಬಂತೆ ಸರಕಾರ ವಿಶೇಷ ಸೌಲಭ್ಯಗಳನ್ನು ಹಿಂದೆಗೆದುಕೊಂಡಿದೆ. ಇಂಥ ಕಠಿಣ ನಡೆಗಳು ಇಲ್ಲಿಗೆ ನಿಲ್ಲಬಾರದು.ಕಾಶ್ಮೀರ ಸಮಸ್ಯೆಯನ್ನು ಮೂಲೋತ್ಪಾಟನೆ ಮಾಡುವ ನಿಟ್ಟಿನಲ್ಲಿ ಮೊದಲು ನಮ್ಮೊಳಗೆ ಇರುವ ಶತ್ರುಗಳನ್ನು ಮಟ್ಟ ಹಾಕುವ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕು.

Advertisement

Udayavani is now on Telegram. Click here to join our channel and stay updated with the latest news.

Next