Advertisement

ಕೋವಿಡ್‌ ಮುಕ್ತ ಗ್ರಾ.ಪಂ.ಗಳಿಗೆ ಹೆಚ್ಚಿನ ಅನುದಾನ : ಸಚಿವ ಕೋಟ

08:13 PM May 29, 2021 | Team Udayavani |

ಉಡುಪಿ: ಜಿಲ್ಲೆಯ ಗ್ರಾ.ಪಂ.ಗಳಲ್ಲಿ ಕೋವಿಡ್‌ನ್ನು ಸಂಪೂರ್ಣವಾಗಿ ಮುಕ್ತಗೊಳಿಸಿದಲ್ಲಿ ಅಂತಹ ಗ್ರಾ.ಪಂ.ಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಹೆಚ್ಚಿನ ಅನುದಾನವನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಬಿಡುಗಡೆ ಮಾಡಿಸಲಾಗುವುದು ಎಂದು ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಅವರು ಶನಿವಾರ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೋವಿಡ್‌ ನಿಯಂತ್ರಣ ಕುರಿತು ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಗ್ರಾಮ ಮಟ್ಟದ ಟಾಸ್ಕ್ಫೋರ್ಸ್‌ ಸಮಿತಿ ಸದಸ್ಯರುಗಳೊಂದಿಗೆ ವೀಡಿಯೋ ಕಾನ್ಫರೆನ್ಸ್‌ ಸಂವಾದದ ಮೂಲಕ ಪ್ರಗತಿ ಪರಿಶೀಲನೆ ನಡೆಸಿದರು.

ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ಎಲ್ಲಾ 36 ಗ್ರಾ.ಪಂ.ಗಳ ಕಾರ್ಯಪಡೆಯ ಸದಸ್ಯರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದರೊಂದಿಗೆ ಕೊರೋನಾ ನಿಯಂತ್ರಣಕ್ಕೆ ತರಲು ಮುಂದಾಗಬೇಕು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪ್ರತಿದಿನ ಸೋಂಕಿತರ ಮನೆಗಳಿಗೆ ಬೇಟಿ ನೀಡಿ, ಪಲ್ಸ್‌ ಆಕ್ಸಿಮೀಟರ್‌ ಮೂಲಕ ಅಕ್ಸಿಜಿನ್‌ ಪ್ರಮಾಣವನ್ನು ಪತ್ತೆ ಮಾಡುವುದರ ಜತೆಗೆ ಅವರ ಆರೋಗ್ಯ ಕ್ಷೇಮವನ್ನು ವಿಚಾರಿಸಬೇಕು ಎಂದರು.

ತೀವ್ರತರದ ರೋಗ ಲಕ್ಷಣಗಳು ಕಂಡುಬಂದ ಕರೋನಾ ಪೀಡಿತರನ್ನು ತುರ್ತಾಗಿ ಆಸ್ಪತ್ರೆಗಳಿಗೆ ದಾಖಲಿಸುವ ಕಾರ್ಯವನ್ನು ಟಾಸ್ಕ್ಫೋರ್ಸ್‌ ಸದಸ್ಯರು ಮಾಡಬೇಕೆಂದು ಸೂಚನೆ ನೀಡಿದರು.

ಇದನ್ನೂ ಓದಿ :ಎಂಟು‌ ಸಾವಿರ ಶಿಕ್ಷಕರಿಗೆ ಹಿಂಬಡ್ತಿ: ಯಾವುದೇ ಶಿಕ್ಷಕರು‌ ಆತಂಕ ಪಡಬೇಕಿಲ್ಲ :ಸುರೇಶ್ ಕುಮಾರ್

Advertisement

ಪ್ರಧಾನಮಂತ್ರಿಗಳ ಆಶಯ ಹಾಗೂ ಮುಖ್ಯಮಂತ್ರಿಗಳ ಅಭಿಲಾಷೆಯಂತೆ ಗ್ರಾಮೀಣ ಪ್ರದೇಶಗಳಲ್ಲಿ ಕೊರೋನ ನಿಯಂತ್ರಿಸಲು ಟಾಸ್ಕ್ ಫೋರ್ಸ್‌ ಗಳಿಂದ ಸಾಧ್ಯ. ಕೊರೋನಾ ನಿಯಂತ್ರಣಕ್ಕೆ ಕಠಿನ ಕ್ರಮ ಕೈಗೊಂಡು, ಸೋಂಕು ನಿಯಂತ್ರಿಸುವ ಗೌರವಕ್ಕೆ ಪಾತ್ರವಾಗುವ ಪಂಚಾಯತ್‌ಗಳಿಗೆ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿಸಲಾಗುವುದು ಎಂದರು.

ಗ್ರಾಮೀಣ ಪ್ರದೇಶದಲ್ಲಿ ಸೋಂಕು ಕಂಡುಬರುವ ಮನೆಗಳನ್ನು ಸೀಲ್‌ಡೌನ್‌ ಮಾಡಬೇಕು ಎಂದ ಅವರು, ಸೋಂಕಿತರು ಮನೆಯಿಂದ ಹೊರಬಂದು ಸಾರ್ವಜನಿಕ ಸ್ಥಳ ಸೇರಿದಂತೆ ವಾಣಿಜ್ಯ ಕೇಂದ್ರಗಳಲ್ಲಿ ಸುತ್ತಾಡುವುದನ್ನು ನಿಯಂತ್ರಿಸಲು ವ್ಯಕ್ತಿಯ ಗುರುತಿಗೆ ಕೈಗೆ ಸೀಲ್‌ ಹಾಕುವಂತೆ ಸೂಚನೆ ನೀಡಿದರು.

ಕಾರ್ಕಳ ಶಾಸಕ ಸುನೀಲ್‌ ಕುಮಾರ್‌ ಬೆಂಗಳೂರಿನ ತಮ್ಮ ಕಚೇರಿಯಿಂದ ವೀಡಿಯೋ ಸಂವಾದದಲ್ಲಿ ಭಾಗವಹಿಸಿ ಎಲ್ಲ ಗ್ರಾ.ಪಂ.ಗಳಿಗೆ ತಮ್ಮ ಶಾಸಕರ ಅನುದಾನದಿಂದ ಕಿಟ್‌ ಹಾಗೂ ಪಲ್ಸ್‌ ಆಕ್ಸಿಮೀಟರ್‌ಗಳನ್ನು ನೀಡಲಾಗುತ್ತಿದ್ದು ಇದರ ಸಮರ್ಪಕ ಬಳಕೆ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಜಿ.ಜಗದೀಶ್‌ ಮಾತನಾಡಿ, ಕೊರೋನಾ ನಿಯಂತ್ರಣಕ್ಕೆ ಅನೇಕ ಮಾಹಿತಿಯನ್ನು ಒದಗಿಸುವುದರ ಜತೆಗೆ, ಕೋವಿಡ್‌ ನಿಯಂತ್ರಣಕ್ಕೆ ಸಂಬಂದಿಸಿದಂತೆ ಮಿಯಾರು ಗ್ರಾ.ಪಂ. ನಲ್ಲಿ ಕೈಗೊಂಡಿರುವ ಕ್ರಮಗಳು ಅತ್ಯುತ್ತಮವಾಗಿದ್ದು, ಇದು ಎಲ್ಲ ಪಂಚಾಯತ್‌ ಗಳಿಗೆ ಮಾದರಿಯಾಗಿದೆ. ಇದನ್ನು ಎಲ್ಲ ಗ್ರಾ.ಪಂ.ಗಳು ಪಾಲಿಸಬೇಕು ಎಂದರು.

ಜಿ.ಪಂ. ಸಿಇಒ ಡಾ| ನವೀನ್‌ ಭಟ್‌ ಮಾತನಾಡಿ, ಚುಚ್ಚುಮದ್ದು ನೀಡುವ ಕೇಂದ್ರಗಳಲ್ಲಿ ಜಾಗೃತಿ ವಹಿಸಿ, ಜನಜಂಗುಳಿ ಆಗದಂತೆ ನೋಡಿಕೊಳ್ಳಬೇಕು. ಯಾವುದೇ ಸಮಸ್ಯೆ ಉಂಟಾದಲ್ಲಿ ತಮ್ಮ ಅಥವಾ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದರು.
ಜಿ.ಪಂ. ಉಪ ಕಾರ್ಯದರ್ಶಿ ಕಿರಣ್‌ ಫ‌ಡೆ°àಕರ್‌, ಕಾರ್ಕಳ ಮತ್ತು ಹೆಬ್ರಿ ಗ್ರಾ.ಪಂ.ನ ಅಧ್ಯಕ್ಷರು, ಉಪಾಧ್ಯಕ್ಷರು, ಪಿ.ಡಿ.ಓಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next