Advertisement

Moodbidri: ಸರಕಾರಿ ಜಾಗದಲ್ಲಿ ಫಲವೀವ ಮರಗಿಡ ಸರ್ವ ನಾಶ!

11:42 AM Dec 04, 2023 | Team Udayavani |

ಮೂಡುಬಿದಿರೆ: ಸರಕಾರಿ ಜಾಗದಲ್ಲಿ ನೆಟ್ಟ, ಬೆಳೆಸಿದ ಫಲವೀವ ಗಿಡ ಮರಗಳನ್ನು ನಾಶ ಮಾಡಿದ ಪರಿಸರ ವಿರೋಧಿ, ಅಮಾನವೀಯ ಕೃತ್ಯ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ನಡೆದಿದೆ. ಈ ಕೃತ್ಯ ಗೈದವರಾರೆಂಬುದು ಇನ್ನೂ ರಹಸ್ಯವಾಗಿದೆ.

Advertisement

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 60 ವರ್ಷಗಳು ಸಂದ ಸವಿನೆನಪಿಗೆ 2007ರ ಆಗಸ್ಟ್‌ ತಿಂಗಳಲ್ಲಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದ ಅನತಿ ದೂರದಲ್ಲಿ ವಾಸವಾಗಿರುವ ಪರಿಸರ ಪ್ರೇಮಿಯೊಬ್ಬರು ಮೈದಾನವನ್ನು ಆವರಿಸಿಕೊಂಡು ಸಾಗುವ ರಸ್ತೆಯುದ್ದಕ್ಕೂ 60 ಪೇರಳೆ ಗಿಡಗಳನ್ನು ನೆಟ್ಟಿದ್ದರು. ಗಿಡಗಳನ್ನು ಸಿದ್ಧಪಡಿಸಿದ್ದೂ ಅವರೇ, 60 ಹೊಂಡಗಳನ್ನು ನಿರ್ಮಿಸಿದ್ದೂ ಅವರೇ.

ಜಾನುವಾರುಗಳ ಕಾಟವಿಲ್ಲದೆ ಬೆಳೆಸಬಹುದಾದ ಪೇರಳೆ ಗಿಡ ಬಿಡುವ ಕಾಯಿ, ಹಣ್ಣು ದೇಶದ ಎಲ್ಲ ಹಣ್ಣುಗಳಿಗಿಂತ ಮಿಗಿಲಾದ ಪೌಷ್ಟಿಕಾಂಶ ಹೊಂದಿರುವುದು ಗಮನಾರ್ಹ ಎಂದು ಕೃಷಿ ಋಷಿ ಡಾ| ಎಲ್‌.ಸಿ. ಸೋನ್ಸರೂ ಈ ಪರಿ(ಯ)ಸರ ಪ್ರೇಮವನ್ನು ಶ್ಲಾಘಿಸಿದ್ದರು. ಈ ಮಧ್ಯೆ ಸಾಮಾಜಿಕ ಅರಣ್ಯ ವಿಭಾಗದವರೂ ರೆಂಜೆ, ಹಲಸು ಮೊದಲಾದ ಗಿಡಗಳನ್ನು ನೆಟ್ಟು ಬೆಳೆಸಿದರು.

ಈ ಗಿಡಗಳು ಬೆಳೆಯುತ್ತಿದ್ದಂತೆ ಕೆಲವು ಪ್ರಾಕೃತಿಕವಾಗಿ, ಕೆಲವು ಕುಚೇಷ್ಟೆಯ, ವಿಘ್ನಸಂತೋಷಿಗಳಿಂದಾಗಿ ನಾಶವಾದವು. ಮೈದಾನ ವಿಸ್ತರಣೆಯಾಗುವಾಗ ಇನ್ನೂ ಕೆಲವು ಗಿಡಗಳು ತಮ್ಮ ಅಸ್ತಿತ್ವವನ್ನೇ ತ್ಯಾಗಮಾಡಿ ಕೊಳ್ಳಬೇಕಾಗಿ ಬಂದಿತು. ಅಂತೂ ಇಂತೂ ದಶಕ ಕಳೆಯು ವಾಗ ಕೆಲವಾದರೂ ಗಿಡಗಳು ಫಲಬಿಡ ತೊಡಗಿ ದವು. ಪುರಸಭೆಯ ಕಡೆಯಿಂದ ಗ್ರಾಸ್‌ ಕಟ್ಟಿಂಗ್‌ ಕಾರ್ಯ ವರ್ಷಂಪ್ರತಿ ನಡೆದಾಗಲೂ ಅದೆಷ್ಟೋ ಪೇರಳೆ ಗಿಡಗಳು ಅಸುನೀಗಿದವು.

Advertisement

ನ. 30 ರಂದೇನಾಯಿತು?

ನವೆಂಬರ್‌ 30ರಂದು ಈ ಹಾದಿಯಲ್ಲಿ ಜೆಸಿಬಿಯೊಂದು ಆಗಮಿಸಿ 16 ವರ್ಷ ಪ್ರಾಯದ, ಕಾಯಿ ಬಿಡುತ್ತಲಿದ್ದ ಪೇರಳೆ ಗಿಡಗಳನ್ನು, ಸಾಮಾಜಿಕ ಅರಣ್ಯ ಇಲಾಖೆ ಯವರು ನೆಟ್ಟು ಬೆಳೆಸಿದ್ದ, ಸಾಧಾರಣ 15-16 ವರ್ಷಗಳ ಹರೆಯದ ಹಲಸು, ಹೆಬ್ಬಲಸು ಗಿಡಗಳನ್ನು ಸಮೂಲ ಮಗುಚಿ ಹಾಕಿ ಬದಿಗೆ ದೂಡಿ ಹಾಕುವ, ಕಾನೂನು ಭಂಜಕ ಕಾರ್ಯ ನಡೆದೇ ಹೋಯಿತು.

ಪರಿಶೀಲಿಸಿದಾಗ ತಿಳಿದುಬಂದದ್ದು

ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ಕ್ರೀಡಾಕೂಟ ನ. 28 ರಿಂದ 30ರ ವರೆಗೆ ನಡೆದ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ ಕ್ರೀಡಾ ಕೂಟದವರು ಈ ಕೃತ್ಯ ಮಾಡಿಲ್ಲ.

ಡಿ. 1ರಂದು ಇದೇ ಮೈದಾನದಲ್ಲಿ ನಡೆದ, ಮಂಗಳೂರು ವೃತ್ತ ಅರಣ್ಯ ಇಲಾ ಖೆಯ ಕ್ರೀಡಾಕೂಟದವರ ಕೆಲಸವಂತೂ ಅಲ್ಲ. ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ಅವರು ಹೇಳುವ ಪ್ರಕಾರ, “ಪುರಸಭೆಯ ಜೆಸಿಬಿಯ ಮೂಲಕ ಗುರುವಾರ ಯಾವುದೇ ಕೆಲಸ ಮಾಡಿಸಿಲ್ಲ’. ಹಾಗಾದರೆ ಇದನ್ನು ಯಾರು ಮಾಡಿದ್ದು ಎಂಬುದೇ ರಹಸ್ಯ.

ಪರಿಶೀಲಿಸಿ ಕ್ರಮ:

ಗಿಡ ತೆರವು ಬಗ್ಗೆ ಕೆಲಸದ ಒತ್ತಡದ ಕಾರಣ ಕಳೆದೆರಡು ದಿನಗಳಿಂದ ಸ್ಥಳ ಪರಿಶೀಲನೆ ನಡೆಸಲಾಗಿಲ್ಲ. ಸೋಮವಾರ ಪರಿಶೀಲನೆ ನಡೆಸಲಾಗುವುದು. ಬಳಿಕ ಮುಂದಿನ ಅಗತ್ಯ ಕ್ರಮದ ಬಗ್ಗೆ ಚಿಂತಿಸಲಾಗುವುದು. -ಇಂದು ಎಂ.,

ಮುಖ್ಯಾಧಿಕಾರಿ,

ಮೂಡುಬಿದಿರೆ ಪುರಸಭೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next