ಮೂಡುಬಿದಿರೆ: ರವಿವಾರ ಅಪರಾಹ್ನ 4 ಗಂಟೆ ಸುಮಾರಿಗೆ ಸುರಿದ ಭಾರೀ ಗಾಳಿ ಮಳೆಗೆ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಸ್ವರಾಜ್ಯ ಮೈದಾನದ ತಗ್ಗು ಪ್ರದೇಶ, ಒಂಟಿಕಟ್ಟೆ, ಮಾಸ್ತಿಕಟ್ಟೆ ಪ್ರದೇಶಗಳಲ್ಲಿ ಹಲವಾರು ಮನೆಗಳಿಗೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. 15ಕ್ಕೂ ಅಧಿಕ ವಿದ್ಯುತ್ ಕಂಬಗಳು ಬಿದ್ದಿವೆ.
ಸ್ವರಾಜ್ಯ ಮೈದಾನದ ಬಳಿ ಧನಂಜಯ ಅವರ ಮನೆಯ ಮೇಲಂತಸ್ತಿನ ಛಾವಣಿಗೆ ಹಾನಿಯಾಗಿದೆ. ಒಳಸುತ್ತಿನಲ್ಲಿ ಪುಟ್ಟ ಅಂಗಳವಿರುವ ಪರಂಪರೆಯ ಶೈಲಿಯ ಈ ಪುರಾತನ ಮನೆ ಅಪಾಯದಲ್ಲಿದೆ.
ಪಕ್ಕದ ಪ್ರಶಾಂತ ಅವರ ಮನೆ ಮತ್ತು ಕಾರಿಗೆ ಮರ ಬಿದ್ದು ಹಾನಿಯಾಗಿದೆ. ಇದೇ ಪರಿಸರದ ಲಕ್ಷಿ$¾à ಬೋವಿ, ರಮೇಶ ಬೋವಿ, ತೇಜಸ್, ಮಹೇಶ್ ಅವರ ಮನೆಗಳಿಗೂ ಹಾನಿಯಾಗಿದೆ. ಈ ಪರಿಸರದಲ್ಲಿ ಹಲವು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಮಹೇಶ್ ಅವರ ಮನೆಯ ಹಿಂಬದಿಯಲ್ಲಿದ್ದ ತೆಂಗಿನಮರವೊಂದು ಬುಡ ಸಮೇತ ಬಿದ್ದಿದೆ. ಮಾಸ್ತಿಕಟ್ಟೆಯ ಅಚ್ಚಣ್ಣ ಸಹಿತ ಮೂವರ ಮನೆಗಳಿಗೂ ಹಾನಿಯಾಗಿದೆ.
ಪೇಪರ್ಮಿಲ್ ಸನಿಹ ಟ್ರಾನ್ಸ್ ಫಾರ್ಮರ್ ಡಿ.ಪಿ. ಉರುಳಿ ಬಿದ್ದಿದೆ. ಒಂಟಿಕಟ್ಟೆಯಲ್ಲಿ ಶುಭಕರ, ಪದ್ಮನಾಭ ಅವರ ಮನೆಗೂ ಹಾನಿಯಾಗಿದೆ. ಈ ಪರಿಸರದಲ್ಲೂ ಹಲವು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.
ಮಾಜಿ ಸಚಿವ ಕೆ. ಅಭಯಚಂದ್ರ , ಪುರಸಭಾ ಮುಖ್ಯಾಧಿಕಾರಿ ಇಂದು ಎಂ., ಕಂದಾಯ ಮತ್ತು ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.