Advertisement

ನೆರಳು ಪರದೆ ಸೌಲಭ್ಯದಲ್ಲೂ ಹಣ ಲೂಟಿ: ಗುರುಮಠ 

04:21 PM Sep 12, 2018 | |

ಹಾವೇರಿ: ಕೃಷಿಭಾಗ್ಯ ಯೋಜನೆಯಡಿ ರೈತರಿಗೆ ಪಾಲಿಹೌಸ್‌ (ನೆರಳು ಮನೆ) ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳಿಂದ ಕೋಟ್ಯಂತರ ರೂ. ಲೂಟಿ ಹೊಡೆಯಲಾಗಿದ್ದು, ಈ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕು ಎಂದು ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಿವಾನಂದ ಗುರುಮಠ ಆಗ್ರಹಿಸಿದರು.

Advertisement

ನಗರದ ಪ್ರವಾಸಿ ಗೃಹದಲ್ಲಿ ಮಂಗಳವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಈ ಅಕ್ರಮದ ಕುರಿತು ಮಾಹಿತಿ ನೀಡಿದರು. ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರ ಅನುಕೂಲಕ್ಕಾಗಿ ಏನೆಲ್ಲ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ, ವಾಸ್ತವವಾಗಿ ಅದರ ಲಾಭ ಆ ಸಮುದಾಯದವರಿಗೆ ದಕ್ಕದೇ ಅಧಿಕಾರಿಗಳೇ ರೈತರ ಹೆಸರಲ್ಲಿ ಲೂಟಿ ಹೊಡೆಯುತ್ತಾರೆ ಎಂಬುದಕ್ಕೆ ತಾಲೂಕಿನಲ್ಲಿ 2015-16ನೇ ಸಾಲಿನಲ್ಲಿ ನೆರಳುಪರದೆ ಯೋಜನೆ ಅನುಷ್ಠಾನವೊಂದೇ ಸಾಕ್ಷಿ ಸಾಕು ಎಂದರು.

2015-16ನೇ ಸಾಲಿನಲ್ಲಿ ತಾಲೂಕಿಗೆ 3,36,60,000ರೂ. ನೆರಳು ಪರದೆ ಸೌಲಭ್ಯ ಕಲ್ಪಿಸಲು ಸರ್ಕಾರದಿಂದ ಮಂಜೂರಾಗಿದೆ. ಪ್ರತಿಯೊಬ್ಬ ರೈತನಿಗೆ 15.30 ಲಕ್ಷ ರೂ. ಸಹಾಯಧನ ಕೊಟ್ಟು ನೆರಳುಪರದೆ ಹಾಕಿಕೊಳ್ಳಲು ಅಧಿ ಕಾರಿಗಳು ಹಾವೇರಿ ತಾಲೂಕಿನ ಭರಡಿ ಒಂದೇ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲಿ 22 ರೈತರಿಗೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿ, ಕಳಪೆ ಗುಣಮಟ್ಟದ ವಸ್ತುಗಳನ್ನು ಹಾಕಿ ಅಂದಾಜು 2.25 ಲಕ್ಷ ರೂ.ಗಳಲ್ಲಿ ಪಾಲಿಹೌಸ್‌ ನಿರ್ಮಿಸಿ ಸರ್ಕಾರದ ಕೋಟ್ಯಂತರ ರೂ.ಗಳನ್ನು ಲೂಟಿ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ರೈತರಿಗೆ ಒಂದಿಷ್ಟು ಹಣದ ಆಮಿಷಯೊಡ್ಡಿ, ಅವರ ಹೊಲದಲ್ಲಿ ನೆರಳುಪರದೆ ಹಾಕಿ, ಇದರ ಜತೆಗೆ ಹನಿ ನೀರಾವರಿ ಯೋಜನೆ ಮಾಡಲಾಗಿದೆ ಎಂದು ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಹಾಕಿ ಪ್ರತಿಯೊಬ್ಬ ರೈತನಿಗೆ 16ರಿಂದ 17 ಲಕ್ಷ ರೂ. ಖರ್ಚು ಹಾಕಿದ್ದಾರೆ. ಫೋಟೋ ತೆಗೆದು, ಹಣ ಸಂದಾಯವಾದ ಬಳಿಕ ಕೆಲವು ಸಾಮಗ್ರಿಗಳನ್ನು ಕಿತ್ತುಕೊಂಡು ಬೇರೆ ಹೊಲದಲ್ಲಿ ಹಾಕಿ, ಅಲ್ಲಿಂದ ಮತ್ತೆ ಬೇರೆ ಕಡೆ ಹಾಕುತ್ತಾರೆ. ಹೀಗಾಗಿ ಕೇವಲ ಒಂದೇ ವರ್ಷದಲ್ಲಿ ಯೋಜನೆಯಡಿ ವ್ಯಯಿಸಿ ಲಕ್ಷಾಂತರ ರೂ. ಮೌಲ್ಯದ ಸಾಮಗ್ರಿಗಳಲ್ಲಿ ಒಂದೇ ಒಂದು ಅವಶೇಷವೂ ಈಗ ಹೊಲದಲ್ಲಿ ಉಳಿದಿಲ್ಲ ಎಂದರು.

ಅಧಿಕಾರಿಗಳು, ರಾಜಕಾರಣಿಗಳು ಶಾಮೀಲಾಗಿ ಪ್ರತಿ ವರ್ಷ ಸರ್ಕಾರದಿಂದ ಬರುವ ಹಣ ನುಂಗುತ್ತಿದ್ದು, ಅವರಿಗೆ ಯಾರ ಹೆದರಿಕೆಯೂ ಇಲ್ಲದಂತಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಂದ ಬಡ್ಡಿ ಸಹಿತ ಹಣ ವಸೂಲಿ ಮಾಡಿ ಅವರನ್ನು ನೌಕರಿಯಿಂದ ವಜಾಗೊಳಿಸಬೇಕೆಂದು ಅವರು ಒತ್ತಾಯಿಸಿದರು.

Advertisement

ಸರ್ಕಾರ ಪ್ರತಿವರ್ಷ ರೈತರಿಗಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತಿದ್ದರೂ ಲಂಚಬಡುಕ ಅಧಿಕಾರಿಗಳು ಲಕ್ಷಾಂತರ ರೂ. ಸಂಬಳ ಪಡೆದು ಜತೆಗೆ ರೈತರ ಹೆಸರಲ್ಲಿಯೂ ಲೂಟಿ ಹೊಡೆಯುತ್ತಿದ್ದಾರೆ. ಇಂಥ ಸಾವಿರಾರು ಯೋಜನೆಗಳು ಇದ್ದರೂ ಹಿಂದುಳಿದವರನ್ನು ಮೇಲೆತ್ತಲು ಸಾಧ್ಯವಾಗುವುದಿಲ್ಲ. ಸರ್ಕಾರಗಳು ಶಾಶ್ವತ ಯೋಜನೆಗಳನ್ನು ರೂಪಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಇದೇ ರೀತಿ ಸರ್ಕಾರದ ಹಣ ದುರುಪಯೋಗವಾಗುತ್ತಲೇ ಇರುತ್ತದೆ ಎಂದರು.

ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಎಷ್ಟು ಖರ್ಚು ಮಾಡಿದೆ. ಅದರ ಪ್ರಯೋಜನ ಪಡೆದು ಎಷ್ಟು ಜನ ಬದುಕು ಕಟ್ಟಿಕೊಂಡಿದ್ದಾರೆ. ಎಷ್ಟು ಹಣ ದುರುಪಯೋಗವಾಗಿದೆ ಎಂಬುದನ್ನು ಸರ್ಕಾರ ತನಿಖೆ ಮಾಡಬೇಕು ಎಂದು ಶಿವಾನಂದ ಗುರುಮಠ ಆಗ್ರಹಿಸಿದರು.

ಸಂಘಟನೆಯ ಉಪಾಧ್ಯಕ್ಷ ಶಿವಯೋಗಿ ಬೆನ್ನೂರು ಮಾತನಾಡಿ, ಪಶು ಇಲಾಖೆಯಿಂದ ಶೇ.50ರ ಸಹಾಯಧನದಲ್ಲಿ 14,500ರೂ. ಕೊಟ್ಟು ಮೇವು ಕತ್ತರಿಸುವ ಯಂತ್ರ ಸ್ವತಃ ಪಡೆದುಕೊಂಡಿದ್ದೆ. ಆ ಯಂತ್ರ ಕೇವಲ ಅರ್ಧ ದಿನ ಮಾತ್ರ ಕೆಲಸ ಸರಿಯಿತ್ತು. ಬಳಿಕ ಕೆಟ್ಟಿದೆ. ಇದು ಸರ್ಕಾರದಿಂದ ಪೂರೈಸುವ ಸಾಮಗ್ರಿಗಳ ಕಳಪೆ ಗುಣಮಟ್ಟಕ್ಕೆ ತಾಜಾ ಉದಾಹರಣೆ ಎಂದರು. ರೈತ ಪ್ರಮುಖರಾದ ಬಿ.ಎಂ. ಕುಲಕರ್ಣಿ, ರಮೇಶ ಶಂಕ್ರಪ್ಪನವರ, ಎಸ್‌.ಎಂ. ಚಿಗೌಡ್ರ ಸುದ್ದಿಗೋಷ್ಠಿಯಲ್ಲಿದ್ದರು.

ಎಸಿಬಿಗೆ ದೂರು
ಪಾಲಿಹೌಸ್‌ ನಿರ್ಮಾಣದ ಅಕ್ರಮ ಕುರಿತು ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಪಡೆದುಕೊಂಡಿದ್ದು ಈ ಕುರಿತು ಭ್ರಷ್ಟಾಚಾರ ನಿಗ್ರಹದಳಕ್ಕೆ ದೂರು ನೀಡಿ, ಸಮಗ್ರ ತನಿಖೆ ನಡೆಸಲು ಒತ್ತಾಯಿಸಲಾಗುವುದು. ಒಂದು ವೇಳೆ ತನಿಖಾ ಸಂಸ್ಥೆಯಿಂದಲೂ ಅಧಿಕಾರಿಗಳ ಪರ ವರದಿ ಬಂದರೆ ನ್ಯಾಯಾಲಯದ ಮೆಟ್ಟಿಲು ಸಹ ಏರಲಾಗುವುದು. ಇದರಲ್ಲಿ ಯಾವುದೇ ರಾಜೀ ಇಲ್ಲ ಎಂದು ಶಿವಾನಂದ ಗುರುಮಠ ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next