Advertisement

ಮೋದಿ 2.0: ಜಾಗತಿಕ ಸ್ತರದಲ್ಲಿ ಚತುರ ಹೆಜ್ಜೆ ; ವಿದೇಶಾಂಗ ನೀತಿಗಳಲ್ಲಿ ವಿಜಯ ಪತಾಕೆ

08:17 AM May 30, 2020 | Hari Prasad |

ಹಲವು ಗುರಿಗಳೊಂದಿಗೆ ಮುನ್ನುಗ್ಗುತ್ತಿರುವ ಮೋದಿ 2.0 ಸರ್ಕಾರಕ್ಕೆ ಈ ಒಂದು ವರ್ಷದಲ್ಲಿ,  ಹಲವಾರು ಅಡ್ಡಿ- ಆತಂಕಗಳು ಎದುರಾದರೂ ಇವೆಲ್ಲದರ ನಡುವೆಯೇ ಗಮನಾರ್ಹ ಹೆಜ್ಜೆಗಳನ್ನೂ ಅದು ಇಟ್ಟಿದೆ. ಅದರಲ್ಲೂ ಭಾರತದ ಚತುರ ವಿದೇಶಾಂಗ ನೀತಿಗಳು, ಅಂತಾರಾಷ್ಟ್ರೀಯ ಸಂಬಂಧಗಳನ್ನು ಪಾಲಿಸುವ ವಿಚಾರದಲ್ಲಿ ಅದು ತೋರಿಸುತ್ತಿರುವ ಪರಿಶ್ರಮ ಫ‌ಲ ನೀಡುತ್ತಿದೆ. ಇದೆಲ್ಲದರಿಂದಾಗಿ, ಈಗ ಜಾಗತಿಕ ವೇದಿಕೆಯಲ್ಲಿ ಭಾರತದ ಪರ ಧ್ವನಿಗಳು ಹೆಚ್ಚಾಗುತ್ತಿದ್ದು, ಪಾಕಿಸ್ತಾನ-ಚೀನಾಕ್ಕೆ ಈ ಬದಲಾವಣೆ ನುಂಗಲಾರದ ತುತ್ತಾಗುತ್ತಿದೆ…

Advertisement

ವಿಶ್ವಸಂಸ್ಥೆಯಲ್ಲಿ ಚೀನಕ್ಕೆ ಮುಖಭಂಗ
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಪ್ರಾಬಲ್ಯ ಮೆರೆಯುತ್ತಾ ಬಂದಿದ್ದ ಚೀನಕ್ಕೆ ಭಾರತವು ಹಿಂದೆಂದೂ ಕಂಡುಕೇಳರಿಯದ ಮಾದರಿಯಲ್ಲಿ ಇರಿಸುಮುರುಸು ಉಂಟುಮಾಡಿದ್ದು ಕೂಡ ಮೋದಿ ಸರ್ಕಾರದ 2ನೇ ಅವಧಿಯ ಸಾಧನೆ ಎನ್ನಬಹುದು.

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಭೆಯ ವೇಳೆ, ಕಾಶ್ಮೀರದ ವಿಚಾರ ಹಾಗೂ 370ನೇ ವಿಧಿ ರದ್ದು ನಿರ್ಧಾರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸಿ ಭಾರತಕ್ಕೆ ಮುಖಭಂಗ ಮಾಡಬೇಕು ಎಂಬ ಪಾಕಿಸ್ತಾನದ ಮಹದಾಸೆಯನ್ನು ಈಡೇರಿಸಲು ಮುಂದಾದ ಚೀನಕ್ಕೆ ಭಾರತ ಖಡಕ್‌ ಎಚ್ಚರಿಕೆಯನ್ನು ನೀಡಿದ್ದು, ಸದಸ್ಯ ರಾಷ್ಟ್ರಗಳನ್ನೇ ಅಚ್ಚರಿಗೆ ನೂಕಿತು. ಯುಎನ್‌ಎಸ್‌ಸಿಯಲ್ಲಿ ಭಾರತಕ್ಕೆ ಬುದ್ಧಿ ಹೇಳಲು ಬಂದ ಚೀನ, ಕೊನೆಗೆ ತಾನೇ ಬುದ್ಧಿಮಾತು ಹೇಳಿಸಿಕೊಳ್ಳಬೇಕಾದ ಸ್ಥಿತಿಗೆ ತಲುಪಿತು.

“ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ನಮ್ಮ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಅಧಿಕಾರ ಯಾರಿಗೂ ಇಲ್ಲ’ ಎಂದು ಹೇಳಿತಲ್ಲದೇ, ನೀವು ಮೊದಲು ಗಡಿಯಾಚೆಗಿನ ಭಯೋತ್ಪಾದನೆಯನ್ನು ಖಂಡಿಸುವ ಕೆಲಸ ಮಾಡಿ ಎಂದು ಚೀನಕ್ಕೆ  ಖಡಕ್‌ ಎಚ್ಚರಿಕೆಯನ್ನು ನೀಡಿತು.

ಭಾರತದಿಂದ ಇಂಥ ಪ್ರತಿಕ್ರಿಯೆಯನ್ನು ನಿರೀಕ್ಷಿಸದೇ ಇದ್ದ ಚೀನ, ಸದಸ್ಯ ರಾಷ್ಟ್ರಗಳ ಮುಂದೆ ತೀವ್ರ ಮುಖಭಂಗ ಅನುಭವಿಸಬೇಕಾಯಿತು. ಅಷ್ಟೇ ಅಲ್ಲ, ಕಳೆದ ಡಿಸೆಂಬರ್‌ನಲ್ಲಿ ಯುಎನ್‌ಎಸ್‌ಸಿಯಲ್ಲಿ ಮತ್ತೂಮ್ಮೆ ಕಾಶ್ಮೀರ ವಿಚಾರ ಪ್ರಸ್ತಾವಿಸಲು ಚೀನ ಮುಂದಾಯಿತಾದರೂ ಯಾವ ದೇಶ ಕೂಡ ಅದಕ್ಕೆ ಸೊಪ್ಪು ಹಾಕದ್ದು ಭಾರತಕ್ಕೆ ಸಿಕ್ಕ ರಾಜತಾಂತ್ರಿಕ ಜಯ ಎಂದೇ ಹೇಳಬಹುದು.

Advertisement

ಹೌಡಿ ಮೋದಿ-ನಮಸ್ತೆ ಟ್ರಂಪ್‌
ಪ್ರಧಾನಿ ಮೋದಿ ಮೊದಲ 5 ವರ್ಷಗಳ ಆಡಳಿತಾವಧಿಯ ಮಾದರಿಯಲ್ಲೇ ಎರಡನೇ ಅವಧಿಯ ಮೊದಲ ವರ್ಷವೇ ಪಾಶ್ಚಿಮಾತ್ಯ ದೇಶಗಳೊಂದಿಗೆ ಅದರಲ್ಲೂ ವಿಶೇಷವಾಗಿ ಅಮೆರಿಕದೊಂದಿಗೆ ಭಾರತದ ಸಂಬಂಧವನ್ನು ಗಟ್ಟಿಗೊಳಿಸುವ ಮೂಲಕ, ಏಷ್ಯಾದಲ್ಲಿ ಚೀನಾದ ಪ್ರಭಾವ ತಗ್ಗಿಸುವ ಯತ್ನದಲ್ಲಿ ಯಶಸ್ಸು ಕಂಡರು. ಎರಡನೇ ಇನ್ನಿಂಗ್ಸ್ ನಲ್ಲೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಸ್ನೇಹ ಸಂಪಾದಿಸಿಕೊಂಡು, ಭಾರತವು ರಷ್ಯಾದ ಮಿತ್ರರಾಷ್ಟ್ರ ಎಂಬ ಹಿಂದಿನ ಹಣೆಪಟ್ಟಿಯನ್ನು ಸಡಿಲಿಸಿ, ಅಮೆರಿಕದೊಂದಿಗೆ ಹಿಂದೆಂದಿಗಿಂತಲೂ ಗಾಢ ಸಂಬಂಧ ಹೊಂದಿದರು.

ಒಂದೇ ವರ್ಷದಲ್ಲಿ ಅಮೆರಿಕದ ಜತೆ ಹಲವು ವ್ಯಾಪಾರ ಮತ್ತು ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಮೋದಿ ಅವರು ಅಮೆರಿಕಕ್ಕೆ ತೆರಳಿ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಭಾಗಿಯಾದರು. ಅದೇ ರೀತಿ, ಮೊದಲ ಬಾರಿಗೆ ಭಾರತಕ್ಕೆ ಟ್ರಂಪ್‌ ಅವರನ್ನು ಕರೆಸಿಕೊಂಡು, ‘ನಮಸ್ತೆ ಟ್ರಂಪ್‌’ ಕಾರ್ಯಕ್ರಮದ ಮೂಲಕ ಅಭೂತಪೂರ್ವ ಸ್ವಾಗತ ಕೋರಲಾಯಿತು.

ಆರ್‌ಸಿಇಪಿ-ರಾಷ್ಟ್ರೀಯ ಹಿತಾಸಕ್ತಿಯ ರಕ್ಷಣೆ
ಆಗ್ನೇಯ ಏಷಿಯಾ ರಾಷ್ಟ್ರಗಳ ಸಂಘಟನೆಯ (ಆಸಿಯಾನ್‌) ರಾಷ್ಟ್ರಗಳ ನಡುವೆ ಮುಕ್ತ ವ್ಯಾಪಾರಕ್ಕೆ ಅನುವು ಮಾಡಿಕೊಡುವ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ(ಆರ್‌ಸಿಇಪಿ) ವಿಚಾರದಲ್ಲಿ ಪ್ರಧಾನಿ ಮೋದಿ ಕೈಗೊಂಡ ನಿಲುವು ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಯಿತು. ಈ ಒಪ್ಪಂದದ ಮೂಲಕ ವ್ಯಾಪಾರ-ವಹಿವಾಟಿನಲ್ಲಿ ಪಾರುಪತ್ಯ ಸಾಧಿಸಲು ಚೀನಾ ಹೆಣೆದಿದ್ದ ಯೋಜನೆಯು ಭಾರತದ ನಿರ್ಧಾರದಿಂದಾಗಿ ನೆಲಕಚ್ಚಿತು.

ಭಾರತದ ಪೆಟ್ಟಿಗೆ ಒಂಟಿಯಾದ ಪಾಕ್‌!
ಹಿಂದಿನಿಂದಲೂ ಭಾರತದ ಮಣ್ಣಲ್ಲಿ ರಕ್ತ ಹರಿಸುತ್ತಾ, ತನಗೇನೂ ಗೊತ್ತೇ ಇಲ್ಲ ಎಂಬಂತೆ ನುಣುಚಿಕೊಳ್ಳುತ್ತಿದ್ದ ಪಾಕಿಸ್ತಾನವನ್ನು ಮೋದಿ ಸರ್ಕಾರದ 2ನೇ ಅವಧಿಯ ಆರಂಭದಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆತ್ತಲಾಗಿಸಲಾಯಿತು. ಪುಲ್ವಾಮಾ ಹಾಗೂ ತದನಂತರದ ಉಗ್ರರ ದಾಳಿಗೆ ಸಂಬಂಧಿಸಿ ಪಾಕ್‌ ವಿರುದ್ಧ ಜಾಗತಿಕ ಖಂಡನೆ ವ್ಯಕ್ತವಾಗುವಂತೆ ಮಾಡುವಲ್ಲಿ ಭಾರತ ಯಶಸ್ವಿಯಾಯಿತು. ಈ ಆಕ್ರೋಶವು ಅಂತಾರಾಷ್ಟ್ರೀಯ ಹಣಕಾಸು ಕಾರ್ಯಪಡೆಯ ಸಭೆಗಳಲ್ಲೂ ಪ್ರತಿಫ‌ಲಿಸಿತು. ಉಗ್ರರಿಗೆ ಹಣಕಾಸು ನೆರವು ಒದಗಿಸುವುದನ್ನು ತಡೆಹಿಡಿಯುವಲ್ಲಿ ವಿಫ‌ಲವಾದ ಪಾಕಿಸ್ತಾನವನ್ನು ಈ ಕಾರ್ಯಪಡೆಯು ಬೂದು ಬಣ್ಣದ ಪಟ್ಟಿಯಲ್ಲೇ ಮುಂದುವರಿಸಿತು.

ಕಾಶ್ಮೀರ ವಿಚಾರ, 370ನೇ ವಿಧಿ ತಿದ್ದುಪಡಿ, ಎನ್‌ಆರ್‌ಸಿ, ರಾಷ್ಟ್ರೀಯ ಪೌರತ್ವ ಕಾಯ್ದೆ ವಿಚಾರದಲ್ಲಿ ಮೂಗು ತೂರಿಸಲು ಬಂದ ಪಾಕಿಸ್ತಾನಕ್ಕೆ ಆರಂಭದಲ್ಲೇ ಪೆಟ್ಟು ಕೊಟ್ಟಿತು ಭಾರತ. ನೆರೆರಾಷ್ಟ್ರದ ಪ್ರತಿ ಪ್ರಯತ್ನಕ್ಕೂ ತಕ್ಕ ಪ್ರತ್ಯುತ್ತರ ನೀಡುವ ಮೂಲಕ ಪ್ರತಿಯೊಂದು ಅಂತಾರಾಷ್ಟ್ರೀಯ ವೇದಿಕೆಯಲ್ಲೂ ಆ ದೇಶವನ್ನು ಏಕಾಂಗಿಯಾಗಿಸಲಾಯಿತು. ಪಾಕಿಸ್ತಾನದ ಯಾವ ವಾದಕ್ಕೂ ಯಾವ ದೇಶವೂ ಸೊಪ್ಪು ಹಾಕದಂತೆ ಮಾಡಿದ್ದು ಮೋದಿ ನೇತೃತ್ವದ ಸರ್ಕಾರದ ಅತಿದೊಡ್ಡ ಯಶಸ್ಸು ಎಂದೇ ಹೇಳಬಹುದು.

ಇಸ್ಲಾಮೋಫೋಬಿಯಾ ಕುತಂತ್ರದ ವಿರುದ್ಧ ಹೋರಾಟ
ಕಳೆದ 6 ವರ್ಷಗಳಿಂದ ಮೋದಿ ನೇತೃತ್ವದ ಸರ್ಕಾರವು ಅತ್ಯಂತ ಜಾಗರೂಕತೆಯಿಂದ ಹೆಣೆದಿದ್ದ ಗಲ್ಫ್ ನೀತಿ ಹಾಗೂ ಕೊಲ್ಲಿ ರಾಷ್ಟ್ರಗಳೊಂದಿಗಿನ ಭಾರತದ ಬಾಂಧವ್ಯಕ್ಕೆ ಹುಳಿ ಹಿಂಡುವ ಕೆಲಸ ಇತ್ತೀಚೆಗೆ ನಡೆಯಿತು. ಭಾರತದಲ್ಲಿ ಅನೇಕ ನಾಯಕರು ಮುಸ್ಲಿಮರ ವಿರುದ್ಧ ದ್ವೇಷಪೂರಿತ ಮಾತುಗಳನ್ನು ಆಡುತ್ತಿದ್ದಾರೆ ಎಂದು ಇಸ್ಲಾಮಿಕ್‌ ಸಹಕಾರ ಸಂಘ (ಒಐಸಿ), ಕುವೈಟ್‌ ಸರ್ಕಾರ, ಯುಎಇ ರಾಜಕುಮಾರಿ, ಅರಬ್‌ನ ಪ್ರಮುಖರು ತೀವ್ರ ಅಸಮಾಧಾನ ಹೊರಹಾಕಿದ್ದರು.

ಜತೆಗೆ, ಅರಬ್‌ ಮಹಿಳೆಯರ ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈ ಹಿಂದೆ ಮಾಡಿದ್ದ ಟ್ವೀಟ್‌ ಬಗ್ಗೆಯೂ ಪ್ರಸ್ತಾಪಿಸಿ, ಭಾರತದಲ್ಲಿ ಇಸ್ಲಾಮೋಫೋಬಿಯಾ ಸೃಷ್ಟಿಸಲಾಗಿದೆ ಎಂದು ಕಿಡಿಕಾರಿದ್ದರು. ಈ ಬೆಳವಣಿಗೆಗಳು, ಗಲ್ಫ್ ರಾಷ್ಟ್ರಗಳು ಹಾಗೂ ಭಾರತದ ನಡುವಿನ ಸಂಬಂಧಕ್ಕೆ ಧಕ್ಕೆ ತರಲಿವೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತ್ತು. ಆದರೆ, ಸರ್ಕಾರವು ಎಚ್ಚರಿಕೆಯ ಹಾಗೂ ಜಾಣ್ಮೆಯ ಹೆಜ್ಜೆಯಿಡುವ ಮೂಲಕ ಈ ಬಾಂಧವ್ಯವನ್ನು ಉಳಿಸಿಕೊಂಡಿತು.

ವಿವಾದ ಉಂಟಾಗುತ್ತಿದ್ದಂತೆಯೇ ಜಾಗೃತರಾದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಗಲ್ಫ್ ರಾಷ್ಟ್ರಗಳ ಪ್ರಮುಖರನ್ನು ಸಂಪರ್ಕಿಸಿ ಮಾತುಕತೆ ನಡೆಸಿದರು. ಇದೇ ವೇಳೆಗಾಗಲೇ, ಭಾರತದ ಮೇಲೆ ಇಂಥದ್ದೊಂದು ಆರೋಪ ಕೇಳಿಬರುವ ಹಿಂದೆಯೂ ಪಾಕಿಸ್ತಾನದ ಕೈವಾಡವಿರುವುದನ್ನು ಭದ್ರತಾ ಸಂಸ್ಥೆಗಳು ಪತ್ತೆಹಚ್ಚಿದವು. ಭಾರತ ಇಸ್ಲಾಮೋಫೋಬಿಯಾ ವಿವಾದದಲ್ಲಿ ಪಾಕ್‌ ಕೈವಾಡವನ್ನು ಬಯಲು ಮಾಡುವ ಮೂಲಕ ಗಲ್ಫ್ ರಾಷ್ಟ್ರಗಳಲ್ಲಿ ಮೂಡಿದ್ದ ತಪ್ಪು ಅಭಿಪ್ರಾಯವನ್ನು ಸರ್ಕಾರ ಸರಿಪಡಿಸಿತು. ಜತೆಗೆ, ಸಂಸದರು ಮಾಡಿದ್ದ ವಿವಾದಾತ್ಮಕ ಟ್ವೀಟ್‌ ಅನ್ನು ಡಿಲೀಟ್‌ ಮಾಡುವಂತೆ ಸರ್ಕಾರವೇ ಟ್ವಿಟರ್‌ ಸಂಸ್ಥೆಗೆ ಮನವಿ ಮಾಡಿತು.

ಕೋವಿಡ್ ಸಮಯದಲ್ಲಿ ಚೀನ ಕುತಂತ್ರಕ್ಕೆ ಬ್ರೇಕ್‌
ಅವಕಾಶವಾದಿ ರಾಷ್ಟ್ರವಾದ ಚೀನವನ್ನು ಬಗ್ಗುಬಡಿಯುವುದು ಸುಲಭದ ಮಾತಲ್ಲ. ಅದರಲ್ಲೂ ಕೋವಿಡ್ ಸೋಂಕಿನ ಈ ಕಾಲಘಟ್ಟದಲ್ಲಿ ಉದ್ದಿಮೆಗಳು ಅನುಭವಿಸುತ್ತಿರುವ ಬಿಕ್ಕಟ್ಟನ್ನು ತನ್ನ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದ್ದ ಚೀನಾವನ್ನು ಕೇಂದ್ರ ಸರ್ಕಾರ ಕಟ್ಟಿಹಾಕಿತು. ಷೇರು ಮೌಲ್ಯಗಳು ಕುಸಿದಿದ್ದ ಕಂಪನಿಗಳನ್ನು ತನ್ನ ತೆಕ್ಕೆಗೆ ಪಡೆಯಲು ಹವಣಿಸಿದ್ದ ಚೀನಾಗೆ ಸರ್ಕಾರ ಆಘಾತ ನೀಡಿತು.

ಭಾರತದೊಂದಿಗೆ ಗಡಿ ಹಂಚಿಕೊಂಡಿರುವ ದೇಶಗಳು ಭಾರತದಲ್ಲಿ ಹೂಡಿಕೆ ಮಾಡಬೇಕೆಂದರೆ (ಪರೋಕ್ಷ ಸೇರಿದಂತೆ) ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ ಎಂಬ ನಿಯಮವನ್ನು ಜಾರಿ ಮಾಡಿತು. ಪರಿಸ್ಥಿತಿಯ ಲಾಭ ಪಡೆಯಲು ಹೊರಟಿದ್ದ ಚೀನಾಗೆ ಇದರಿಂದ ಅತಿದೊಡ್ಡ ಹಿನ್ನಡೆ ಉಂಟಾಯಿತು.

ಅಷ್ಟೇ ಅಲ್ಲ, ಆರಂಭದಲ್ಲಿ ಚೀನಾದಿಂದ ಪಿಪಿಇ, ಮಾಸ್ಕ್ ಸೇರಿದಂತೆ ಹಲವು ಉತ್ಪನ್ನಗಳನ್ನು ಖರೀದಿಸಿದ್ದ ಕೇಂದ್ರ ಸರ್ಕಾರ, ನಂತರ ಅವುಗಳಲ್ಲಿನ ಲೋಪಗಳನ್ನು ಮನಗಂಡು, ಖರೀದಿಯನ್ನೇ ಸ್ಥಗಿತಗೊಳಿಸಿತು. ಜತೆಗೆ, ಭಾರತದಲ್ಲೇ ಪಿಪಿಇ ಹಾಗೂ ಮಾಸ್ಕ್ ತಯಾರಿಕೆಯನ್ನು ಸಮರೋಪಾದಿಯಲ್ಲಿ ಆರಂಭಿಸುವ ಮೂಲಕ ಆತ್ಮನಿರ್ಭರ ಭಾರತದ (ಸ್ವಾವಲಂಬಿ ಭಾರತ) ಆಶಯವನ್ನು ಈಡೇರಿಸುವತ್ತ ಹೆಜ್ಜೆಯಿಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next