Advertisement

ಕೊಡಗಿನ ಹಳ್ಳಿಗಳಿಗೆ ಸಂಚಾರಿ ಆರೋಗ್ಯ ಸೇವೆ

06:00 AM Aug 24, 2018 | Team Udayavani |

ಮಡಿಕೇರಿ: ಜಿಲ್ಲೆಯ ಜನರಿಗೆ ಜ್ವರ, ನೆಗಡಿ, ಕೆಮ್ಮು, ವಾಂತಿ ಸೇರಿದಂತೆ ದಿಢೀರ್‌ ಅಸ್ವಸ್ಥತೆ ಅಥವಾ ಹೃದಯಾಘಾತ ಮೊದಲಾದ ತೀವ್ರ ರೀತಿಯ ಸಮಸ್ಯೆ ಕಂಡುಬಂದಲ್ಲಿ ತಕ್ಷಣವೇ ಚಿಕಿತ್ಸೆ ನೀಡಲು ಸಂಚಾರಿ ಆರೋಗ್ಯ ಕೇಂದ್ರ ಪ್ರತಿ ಹಳ್ಳಿಗೆ ಸಂಚಾರ ಮಾಡಲಿದೆ.

Advertisement

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರುವ ಎಲ್ಲ ಸೌಲಭ್ಯಗಳು ಮೊಬೈಲ್‌ ಆರೋಗ್ಯ ಕೇಂದ್ರದಲ್ಲಿ ಇರಲಿದೆ. ಒಂದೊಂದು ಮೊಬೈಲ್‌ ಆರೋಗ್ಯ ಕೇಂದ್ರದಲ್ಲಿ ಒಬ್ಬರು ವೈದ್ಯರು ಹಾಗೂ ಇಬ್ಬರು ದಾದಿಯರು ಇರುತ್ತಾರೆ. ರಾಜ್ಯದ ವಿವಿಧ ಭಾಗದಿಂದ ಬಂದಿರುವ ವೈದ್ಯರನ್ನು ಹಾಗೂ ದಾದಿಯರಿಗೆ ಸೂಕ್ತ ರೀತಿಯಲ್ಲಿ ಸೇವೆ ಸಲ್ಲಿಸಲು ಅಗತ್ಯವಾಗುವಂತೆ ಕಾರ್ಯಯೋಜನೆ ರೂಪಿಸಲಾಗಿದೆ.

ಹತ್ತು ಸಂಚಾರಿ ಆರೋಗ್ಯ ಕೇಂದ್ರಗಳು ಎರಡು ದಿನದಲ್ಲಿ ಸೇವೆ ಆರಂಭಿಸಲಿದೆ. ಒಂದೊಂದು ಮೊಬೈಲ್‌ ಕೇಂದ್ರ ಪ್ರತಿದಿನ ಎರಡು ಹಳ್ಳಿಯಂತೆ ದಿನಕ್ಕೆ 20 ಹಳ್ಳಿಯಲ್ಲಿ ಚಿಕಿತ್ಸೆ ನೀಡಲು ಬೇಕಾದ ವ್ಯವಸ್ಥೆ ಆರೋಗ್ಯ ಇಲಾಖೆಯಿಂದ ಮಾಡಲಾಗುತ್ತಿದೆ. ಯಾವ ಹಳ್ಳಿಗೆ ಯಾವ ತಂಡ ಹೋಗಲಿದೆ ಎಂಬುದನ್ನು ಜಿಲ್ಲೆಯ ಹಿರಿಯ ಅಧಿಕಾರಿಗಳ ತಂಡ ನಿರ್ಧರಿಸಲಿದೆ ಎಂದು ಆರೋಗ್ಯಾಧಿಕಾರಿ ಡಾ.ರಾಜೇಶ್‌ ಮಾಹಿತಿ ನೀಡಿದರು.

ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಒಂದು ಹಳ್ಳಿಯಲ್ಲಿದ್ದು, ಮಧ್ಯಾಹ್ನದಿಂದ ಸಂಜೆಯ ವರೆಗೆ ಇನ್ನೊಂದು ಹಳ್ಳಿಯ ಜನರಿಗೆ ಮೊಬೈಲ್‌ ಆರೋಗ್ಯ ಕೇಂದ್ರದ ಸೌಲಭ್ಯ ದೊರೆಯಲಿದೆ. ಜನರ ಬಳಿಗೆ ವೈದ್ಯರು ಹೋಗುವುದರಿಂದ ಮುಕ್ತವಾಗಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅನುವಾಗುತ್ತದೆ. ಅನೇಕ ಭಾಗದಲ್ಲಿ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ ಇಲ್ಲದೇ ಇರುವುದರಿಂದ ಮೊಬೈಲ್‌ ಆರೋಗ್ಯ ಕೇಂದ್ರದಿಂದ ಗ್ರಾಮೀಣ ಭಾಗದ ಜನರಿಗೆ ಹೆಚ್ಚು ಉಪಯೋಗವಾಗಲಿದೆ ಎಂದು ವಿವರಿಸಿದರು.

ನೀರು ಶುದ್ಧಿಗೆ ಮಾತ್ರೆ
ಜಿಲ್ಲೆಯ ಎಲ್ಲರಿಗೂ ಶುದ್ಧ ಕುಡಿಯವ ನೀರು ಒದಗಿಸುವುದು ಜಿಲ್ಲಾಡಳಿತ ಮೊದಲ ಆದ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ನೀರು ಶುದ್ಧೀಕರಿಸುವ ಮಾತ್ರೆಗೆ ಬೇಡಿಕೆ ಇಡಲಾಗಿದೆ. ಒಂದು ಲೀಟರ್‌ ನೀರಿಗೆ ಒಂದು ಮಾತ್ರೆಯಂತೆ ಸುಮಾರು 2 ಲಕ್ಷ ಮಾತ್ರೆಗೆ ಪ್ರಸ್ತಾವನೆಯನ್ನು ಕೇಂದ್ರ ಕಚೇರಿಗೆ ಸಲ್ಲಿಸಿದ್ದೇವೆ. ಶುಕ್ರವಾರ ಅಥವಾ ಶನಿವಾರ ಮಾತ್ರೆ ಬರಲಿದೆ. ಕುಡಿಯುವ  ನೀರಿಗೆ ಈ ಮಾತ್ರೆ ಹಾಕುವುದರಿಂದ ನೀರು ಶುದ್ಧವಾಗುತ್ತದೆ. ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮ ಇಲ್ಲ ಎಂದರು.

Advertisement

ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು:
51 ನಿರಾಶ್ರಿತರ ಶಿಬಿರದಲ್ಲಿ ಆರೋಗ್ಯ ಇಲಾಖೆಯ ಮಾಹಿತಿ ಮತ್ತು ಶಿಕ್ಷಣ ಅಧಿಕಾರಿಗಳು ಸಾಂಕ್ರಾಮಿಕ ರೋಗಗಳ ಬಗ್ಗೆ ಕೇಂದ್ರದಲ್ಲಿರುವ ನಿರಾಶ್ರಿತರಿಗೆ ಅರಿವು ಮೂಡಿಸುವ ಕಾರ್ಯ ನಡೆಸುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳು ಬಾರದಂತೆ ತಡೆಗಟ್ಟುವ ವಿಧಾನ ಹಾಗೂ ಅದರಿಂದ ಆಗಬಹುದಾದ ದುಷ್ಪರಿಣಾಮದ ಬಗ್ಗೆಯೂ ಎಚ್ಚರಿಕೆಯ ಸಂದೇಶ ನೀಡುತ್ತಿದ್ದಾರೆ ಎಂದು ಡಾ.ರಾಜೇಶ್‌ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next